Asianet Suvarna News Asianet Suvarna News

ಭಾರತದ ಅನ್ನ ತಿಂದವರು, ನೀರು ಕುಡಿದವರೆಲ್ಲರೂ ಹಿಂದುಗಳೇ, ನಾನೂ ಕೂಡ ಹಿಂದು: ಆರಿಫ್‌ ಮೊಹಮದ್‌!

ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌ ಖಾನ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಯಾರೆಲ್ಲಾ ಹುಟ್ಟಿದ್ದಾರೋ, ಯಾರೆಲ್ಲಾ ಭಾರತದ ಅನ್ನ ತಿಂದಿದ್ದಾರೋ, ಭಾರತದ ನದಿಗಳ ನೀರು ಕುಡಿದಿದ್ದಾರೋ ಅವರೆಲ್ಲೂ ಹಿಂದುಗಳೇ. ಹಾಗಾಗಿ ನೀವು ನನ್ನನ್ನು ಹಿಂದು ಎಂದೇ ಗುರುತಿಸಬೇಕು ಎಂದು ಹೇಳಿದ್ದಾರೆ.
 

Kerala Governor Arif Mohammad Khan says you should call me a Hindu san
Author
First Published Jan 28, 2023, 9:26 PM IST

ತಿರುವನಂತಪುರ (ಜ.28): ತಮ್ಮ ಹೇಳಿಕೆಗಳ ಕಾರಣದಿಂದಾಗಿಯೇ ಸದಾಕಾಲ ಸುದ್ದಿಯಲ್ಲಿರುವ ಕೇರಳ ರಾಜ್ಯ ಪಾಲ ಆರಿಫ್‌ ಮೊಹಮದ್‌ ಖಾನ್‌ ಶನಿವಾರ ತಿರುವನಂತಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಕೊಡುಗೆಯನ್ನು ಗೌರವಿಸಿದ ಆರ್ಯ ಸಮಾಜ ನನಗೆ ನೀಡಿರುವ ಸ್ವಾಗತಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದರು. ಆದರೆ, ಅದಕ್ಕಿಂತ ಮುಂಚೆ ತಮಗೊಂದು ದೂರು ಇದೆ ಎಂದು ಹೇಳಿದ ಅವರು, 'ನನ್ನನ್ನು ನೀವು ಯಾಕೆ ಹಿಂದು ಅನ್ನೋದಿಲ್ಲ' ಎಂದು  ಕೇಳಿದರು. 'ನಾನು ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದೆನೆ. ಹಿಂದು ಎನ್ನುವುದು ಧಾರ್ಮಿಕ ಪದವಲ್ಲ. ಯಾವುದೋ ಧರ್ಮವನ್ನು ಸೂಚಿಸುವ ಪದವಲ್ಲ. ಬದಲಿಗೆ ಅದು ಭೌಗೋಳಿಕ ಪದ. ಭಾರತದಲ್ಲಿ ಹುಟ್ಟಿದವರು, ಭಾರತದಲ್ಲಿ ಬೆಳೆಯುವ ಆಹಾರವನ್ನು ಸೇವಿಸುವವರು, ಭಾರತದ ನದಿಗಳ ನೀರನ್ನು ಕುಡಿದವರೆಲ್ಲರೂ ಹಿಂದುಗಳೇ. ಹಾಗಾಗಿ ನೀವು ನನ್ನನ್ನು ಕೂಡ ಹಿಂದು ಎಂದು ಕರೆಯಬೇಕು ಎಂದು ಹೇಳಿದರು. ಇದೇ ವೇಳೆ ಹಿಂದೂ ಸಮ್ಮೇಳನದಲ್ಲಿ ಸರ್ ಸೈಯದ್ ಅಹ್ಮದ್ ಖಾನ್ ಮಾತನಾಡಿದ್ದನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಸರ್ ಸೈಯದ್ ಅಹ್ಮದ್ ಖಾನ್ ಒಬ್ಬ ಸುಧಾರಕ ಮತ್ತು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕ ಎಂದು ಅವರು ಹೇಳಿದರು.

ಇದರೊಂದಿಗೆ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆಯೂ ಕೇರಳದ ರಾಜ್ಯಪಾಲರು ಮಾತನಾಡಿದ್ದಾರೆ. ಭಾರತದಲ್ಲಿ ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದಾಗ ಆದ ವಿಚಾರಗಳ ಬಗ್ಗೆ ಏಕೆ ಸಾಕ್ಷ್ಯಚಿತ್ರ ಮಾಡೋದಿಲ್ಲ. ಕಲಾವಿದನ ಕೈ ಕತ್ತರಿಸಿದಾಗ ನೀವು ಏಕೆ ಸಾಕ್ಷ್ಯಚಿತ್ರ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ. ಭಾರತ ಮತ್ತೆ ಒಡೆದುಹೋಗುತ್ತದೆ. ಆಂತರಿಕವಾಗಿ ಘರ್ಷಣೆ ಮಾಡಿಕೊಳ್ಳುತ್ತದೆ ಎಂದು ಭವಿಷ್ಯ ನುಡಿದವರಿಗೆ ಬಹಳ ನಿರಾಸೆಯಾಗಿರಬೇಕು. ಯಾಕೆಂದರೆ, ಭಾರತ ಉತ್ತಮ ರೀತಿಯಲ್ಲಿ ಪ್ರಗತಿಯಾಗುತ್ತಿರುವುದನ್ನು ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಕಲಾಮಂಡಲಂ ವಿವಿ ಕುಲಾಧಿಪತಿ ಹುದ್ದೆಯಿಂದ ಕೇರಳ ರಾಜ್ಯಪಾಲರ ವಜಾ

ವಿಶ್ವದಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದೆ, ಹೀಗಾಗಿ ಈ ಜನರಿಗೆ ನಿರಾಸೆಯಾಗಿದೆ ಎಂದು ಆರಿಫ್‌ ಮೊಹಮದ್‌ ಖಾನ್‌ ಹೇಳಿದ್ದಾರೆ. ಅವರಿಗೆ ನನ್ನ ಒಂದೇ ಪ್ರಶ್ನೆ ಭಾರತದಲ್ಲಿ ಬ್ರಿಟಿಷರು ಮಾಡಿದ ದೌರ್ಜನ್ಯದ ಬಗ್ಗೆ ನೀವೇಕೆ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡೋದಿಲ್ಲ. ಇನ್ನೂ ಒಂದು ಆಘಾತಕಾರಿ ವಿಚಾರವೆಂದರೆ ನಮ್ಮದೇ ದೇಶದ ಕೆಲವು ಜನ ನಮ್ಮ ನ್ಯಾಯಾಂಗ ವ್ಯವಸ್ಥೆ ನೀಡಿದ್ದ ತೀರ್ಪನ್ನೇ ಒಪ್ಪೋದಿಲ್ಲ. ಆದರೆ, ಯಾವುದೋ ಸಾಕ್ಷ್ಯಚಿತ್ರದ ಚಿತ್ರಣವನ್ನು ಅಪ್ಪಿಕೊಳ್ಳುತ್ತಾರೆ ಎಂದರು.

ಕೇರಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು, ಸಚಿವರ ಮೇಲಿನ ಗೌರವ ನಷ್ಟ, ಸಂಪುಟದಿಂದ ಕಿತ್ತೆಸೆಯುವಂತೆ ರಾಜ್ಯಪಾಲ ಪತ್ರ!

ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಸಮಯ ಬಂದಿರುವುದು ಖುಷಿಯ ವಿಚಾರ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಜಿ20ಯ ಸಮಯವನ್ನೇ ಸಾಕ್ಷ್ಯಚಿತ್ರಕ್ಕಾಗಿ ಯಾಕೆ ಆಯ್ಕೆ ಮಾಡಲಾಗಿದೆ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.ಭಾರತವು ತನ್ನ ಸ್ವಾತಂತ್ರ್ಯ ಮತ್ತು ಅದರ ಪ್ರಜಾಪ್ರಭುತ್ವಕ್ಕೆ ಸಮರ್ಥವಾಗಿ ನಿಭಾಯಿಸೋದಿಲ್ಲ ಎಂದು ಹೇಳಿದ್ದ ಜನರಿಂದ ಈ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

Follow Us:
Download App:
  • android
  • ios