Kerala Teenage boy died in Dubai:  ದುಬೈನ ಗಗನಚುಂಬಿ ಕಟ್ಟಡದಿಂದ ಕೆಳಗೆ ಬಿದ್ದು, ಕೇರಳದ 19 ವರ್ಷದ ತರುಣನೋರ್ವ ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ದುಬೈನಲ್ಲಿ ನಡೆದಿದೆ. ಯುಎಇಗೆ ಪ್ರವಾಸಕ್ಕೆಂದು ಭೇಟಿ ನೀಡಿದ ಈ ಬಾಲಕ ಕೇರಳದ ಕೋಯಿಕೋಡ್ ನಿವಾಸಿಯಾಗಿದ್ದಾನೆ.

ಕೇರಳದ 19ರ ಹರೆಯದ ಹುಡುಗ ದುಬೈನಲ್ಲಿ ಕಟ್ಟಡದಿಂದ ಬಿದ್ದು ಸಾವು

ದುಬೈನ ಗಗನಚುಂಬಿ ಕಟ್ಟಡದಿಂದ ಕೆಳಗೆ ಬಿದ್ದು, ಕೇರಳದ 19 ವರ್ಷದ ತರುಣನೋರ್ವ ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ದುಬೈನಲ್ಲಿ ನಡೆದಿದೆ. ಯುಎಇಗೆ ಪ್ರವಾಸಕ್ಕೆಂದು ಭೇಟಿ ನೀಡಿದ ಈ ಬಾಲಕ ಕೇರಳದ ಕೋಯಿಕೋಡ್ ನಿವಾಸಿಯಾಗಿದ್ದಾನೆ. ಮೊಹಮ್ಮದ್ ಮಿಶಾಲ್ ಮೃತಪಟ್ಟ ಬಾಲಕ. ದುಬೈನ ಡೇರಾದಲ್ಲಿ ಗಗನಚುಂಬಿ ಕಟ್ಟಡದಿಂದ ಕೆಳಗೆ ಬಿದ್ದು, 19ರ ಹರೆಯದ ಮೊಹಮ್ಮದ್ ಮಿಶಾಲ್ ಸಾವನ್ನಪ್ಪಿದ್ದಾನೆ. ಕೆಲ ವರದಿಗಳ ಪ್ರಕಾರ ಈ ತರುಣ ಈ ಗಗನಚುಂಬಿ ಕಟ್ಟಡದ ತುತ್ತತುದಿಯಲ್ಲಿ ನಿಂತು ಮೇಲೆ ಹಾರುತ್ತಿದ್ದ ವಿಮಾನವೊಂದರ ಅತೀ ಸಮೀಪದ ಕ್ಲೋಸಪ್ ಫೋಟೋ ತೆಗೆಯುವುದಕ್ಕೆ ಮುಂದಾದ ವೇಳೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾನೆ ಎಂದು ವರದಿಯಾಗಿದೆ.

ಗಗನಚುಂಬಿ ಕಟ್ಟಡದಲ್ಲಿ ನಿಂತು ವಿಮಾನದ ಕ್ಲೋಸಪ್‌ ಫೋಟೋ ತೆಗೆಯಲು ಹೋದಾಗ ದುರಂತ

ಮೃತ ಮೊಹಮ್ಮದ್ ಮಿಶಾಲ್ ಕೇವಲ 15 ದಿನಗಳ ಹಿಂದಷ್ಟೇ ತನ್ನ ಸೋದರ ಸಂಬಂಧಿಗಳನ್ನು ಭೇಟಿಯಾಗುವುದಕ್ಕಾಗಿ ದುಬೈಗೆ ಹೋಗಿದ್ದ. ಮಿಶಾಲ್‌ಗೆ ಫೋಟೋಗ್ರಾಫಿ ಹುಚ್ಚು ತುಂಬಾ ಇತ್ತು. ಇದೇ ಕಾರಣಕ್ಕೆ ಈ ಹುಡುಗ ಈ ಕಟ್ಟಡದ ತುತ್ತತುದಿಗೆ ಹೋಗಿ ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ತನ್ನ ಕ್ಯಾಮರಾದಲ್ಲಿ ಹತ್ತಿರದಿಂದ ತೆಗೆಯುವುದಕ್ಕೆ ಮುಂದಾದ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಮೊಹಮ್ಮದ್ ಮಿಶಾಲ್ ಪೋಷಕರು ಕೇರಳದ ಕೋಯಿಕೋಡ್‌ನಲ್ಲೇ ಇದ್ದಾರೆ. ಈತ ಮಾತ್ರ ದುಬೈನಲ್ಲಿರುವ ಸೋದರ ಸಂಬಂಧಿಗಳ ಭೇಟಿಯಾಗುವುದಕ್ಕೆ ದುಬೈಗೆ ಬಂದಿದ್ದಎಂದು ಮೊಹಮ್ಮದ್ ಮಿಶಾಲ್ ಅವರ ಕುಟುಂಬ ಸ್ನೇಹಿತರೊಬ್ಬರು ಹೇಳಿದ್ದಾರೆ.

ಮೊಹಮ್ಮದ್ ಮಿಶಾಲ್‌ಗೆ ಇದ್ದ ಫೋಟೋಗ್ರಾಫಿ ಹುಚ್ಚೇ ಸಾವು ಆಹ್ವಾನಿಸಿತು

ಘಟನೆ ನಡೆದ ಕಟ್ಟಡಗಳ ಸಮೀಪವೇ ಏರ್‌ಪೋರ್ಟ್‌ ಇತ್ತು. ಹೀಗಾಗಿ ವಿಮಾನಗಳು ಸ್ವಲ್ಪ ಕೆಳಭಾಗದಲ್ಲೇ ಸಂಚರಿಸುವಂತೆ ಕಾಣಿಸುತ್ತಿತ್ತು. ಇದರ ಜೊತೆಗೆ ಈ ಮೊಹಮ್ಮದ್ ಮಿಶಾಲ್‌ಗೆ ಫೋಟೋಗ್ರಾಫಿ ಹುಚ್ಚಿತ್ತು. ಹೀಗಾಗಿ ವಿಮಾನಗಳ ಕ್ಲೋಸಪ್‌ ಫೋಟೋ ತೆಗೆಯಲು ಯತ್ನಿಸಿದಾಗ ಎರಡು ಪೈಪ್‌ಗಳ ಮಧ್ಯೆ ಈತನ ಕಾಲು ಸಿಲುಕಿಕೊಂಡು ಬ್ಯಾಲೆನ್ಸ್ ತಪ್ಪಿ ಆತ ಕೆಳಗೆ ಬಿದ್ದಿದ್ದಾನೆ ಎಂದು ಹನೀಫ್ ಅವರು ಹೇಳಿದ್ದಾರೆ. ಮಿಶಾಲ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ. ಈತನಿಗೆ ದೇಹದ ಒಳಭಾಗದಲ್ಲಿ ಸಾಕಷ್ಟು ಗಾಯಗಳಾಗಿದ್ದವು. ಆಸ್ಪತ್ರೆಗೆ ತಲುಪುವವರೆಗೂ ಆತ ಜೀವಂತವಿದ್ದ. ಆದರೆ ಸ್ವಲ್ಪ ಹೊತ್ತಿನಲ್ಲಿ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದ ಮಿಶಾಲ್ ಪೋಷಕರ ಏಕೈಕ ಪುತ್ರ

ಕೋಯಿಕೋಡ್‌ನ ಕಾಲೇಜೊಂದರಲ್ಲಿ ಮಿಶಾಲ್ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದ. ಈತ ಕೋಜಿಕೋಡ್‌ನ ಮುನೀರ್ ಹಾಗೂ ಆಯೇಷಾ ಎಂಬುವವರ ಪುತ್ರ, ಮಿಶಾಲ್ ಇಬ್ಬರು ಸೋದರಿಯರು ಹಾಗೂ ಪೋಷಕರನ್ನು ಆಗಲಿದ್ದು, ಏಕೈಕ ಮಗನ ಹಠಾತ್ ಸಾವಿನಿಂದ ಮನೆಯಲ್ಲಿ ಶೋಕ ಆವರಿಸಿದೆ. ಮಿಶಾಲ್ ತಂದೆ ಕೋಝಿಕೋಡ್‌ನಲ್ಲಿ ಹೊಟೇಲೊಂದನ್ನು ನಡೆಸುತ್ತಿದ್ದಾರೆ. ಇದೊಂದು ಭಯಾನಕ ದುರಂತ ದುಬೈನಲ್ಲಿ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಆತನ ಶವವನ್ನು ಭಾರತಕ್ಕೆ ತರಲಾಗುವುದು ಎಂದು ಹನೀಫ್ ಹೇಳಿದ್ದಾರೆ. ಸ್ವಂತ ಉದ್ಯಮದಲ್ಲಿ ಬಹಳ ಆಸಕ್ತಿ ಇದ್ದ ಮಿಶಾಲ್ ಮುಂದೆ ಉದ್ಯಮಿಯಾಗುವ ಆಸೆ ಹೊಂದಿದ್ದ. ಆದರೆ ಕನಸು ನನಸಾಗುವ ಮೊದಲೇ ಅಚಾನಕ್ ಎದುರಾದ ವಿಧಿಯಾಟಕ್ಕೆ ಬಾರದ ಲೋಕ ಸೇರಿದ್ದು,ಏಕೈಕ ಪುತ್ರನ ಕಳೆದುಕೊಂಡ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ದುಬೈನ ಖಲೀಜಾ ಟೈಮ್ಸ್ ವರದಿ ಪ್ರಕಾರ, ಇದು ಯುಎಇನಲ್ಲಿ ಈ ವರ್ಷ ನಡೆದಂತಹ ಇಂತಹ 2ನೇ ದುರಂತ ಇದಾಗಿದೆ. ಕಳೆದ ಏಪ್ರಿಲ್‌ನಲ್ಲಿ 17 ವರ್ಷದ ಅಲೆಕ್ಸ್ ಬಿನೋಯ್ ಎಂಬ ಹುಡುಗ ಅಬುಧಾಬಿಯಲ್ಲಿ ಕಟ್ಟಡವೊಂದರಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದ.

ಇದನ್ನೂ ಓದಿ: 15 ವರ್ಷಗಳ ಹಿಂದಿನ ಡಿವೋರ್ಸ್‌ ಪ್ರಕರಣ: ಪತ್ನಿಗೆ 664 ಕೋಟಿ ರೂ ಪರಿಹಾರ ನೀಡುವಂತೆ ಉದ್ಯಮಿಗೆ ಕೋರ್ಟ್ ಆದೇಶ

ಇದನ್ನೂ ಓದಿ: ವಿಂಡ್‌ಶೀಲ್ಡ್‌ನಲ್ಲಿ ಬಿರುಕು: ರನ್‌ವೇಯಾಗಿ ಬದಲಾದ ಹೈವೇ: ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡಿಂಗ್