ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನದಿಂದ ರಾಜ್ಯಪಾಲರ ವಜಾ, ಮಸೂದೆ ಅಂಗೀಕರಿಸಿದ ಕೇರಳ ವಿಧಾನಸಭೆ!
ಕೇರಳ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಕುಲಪತಿಗಳ ಸ್ಥಾನದಿಂದ ರಾಜ್ಯಪಾಲವನ್ನು ತೆಗೆದುಹಾಕುವ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈ ಮಸೂದೆಯನ್ನು ವಿರೋಧಿಸುವುದಿಲ್ಲ ಎಂದು ಹೇಳಿದ ಬಳಿಕ ನಡೆದ ಸಾಕಷ್ಟು ಚರ್ಚೆಯ ಬೆನ್ನಲ್ಲಿಯೇ ಇದನ್ನು ಅಂಗೀಕರಿಸಲಾಗಿದೆ.
ತಿರುವನಂತಪುರ (ಡಿ.13): ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳ ಕುಲಪತಿಯ ಸ್ಥಾನದಿಂದ ರಾಜ್ಯಪಾಲರನ್ನು ತೆಗೆದುಹಾಕುವುದಲ್ಲದೆ, ಉನ್ನತ ಹುದ್ದೆಯಲ್ಲಿ ಖ್ಯಾತ ಶಿಕ್ಷಣ ತಜ್ಞರನ್ನು ನೇಮಕ ಮಾಡುವ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಕೇರಳ ವಿಧಾನಸಭೆ ಮಂಗಳವಾರ ಅಂಗೀಕರಿಸಿತು, ಆದರೆ ಪ್ರತಿಪಕ್ಷ ಯುಡಿಎಫ್ ಮಸೂದೆಗೆ ಸಂಬಂಧಿಸಿದಂತೆ ತನ್ನ ಸಲಹೆಗಳನ್ನು ಸ್ವೀಕರಿಸದ ಕಾರಣ ಸದನವನ್ನು ಬಹಿಷ್ಕರಿಸಿತು. ಮಸೂದೆ ಅಂಗೀಕಾರವಾಗಿದೆ ಎಂದು ಸ್ಪೀಕರ್ ಎಎನ್ ಶಂಸೀರ್ ಚರ್ಚೆಯ ಬಳಿಕ ಹೇಳಿದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗವರ್ನರ್ ಅವರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕುವುದನ್ನು ವಿರೋಧಿಸುವುದಿಲ್ಲ ಎಂದು ಹೇಳಿದ ಬಳಿಕ, ಗಂಟೆಗಳ ಸುದೀರ್ಘ ಚರ್ಚೆಯ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು, ಆದರೆ ಈ ಸ್ಥಾನಕ್ಕೆ ನೇಮಕವಾಗುವವರನ್ನು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಮಾಜಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಆಯ್ಕೆ ಮಾಡಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಪ್ರತಿ ವಿಶ್ವವಿದ್ಯಾನಿಲಯಗಳಿಗೆ ವಿಭಿನ್ನ ಕುಲಪತಿಗಳು ಇರಬೇಕಾಗಿಲ್ಲ ಮತ್ತು ಆಯ್ಕೆ ಸಮಿತಿಯು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ (ಎಲ್ಒಪಿ) ಮತ್ತು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಿರಬೇಕು ಎಂದು ವಿರೋಧ ಪಕ್ಷ ಹೇಳಿದೆ. ಆದರೆ, ನ್ಯಾಯಾಧೀಶರು ಆಯ್ಕೆ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ ಮತ್ತು ಸ್ಪೀಕರ್ ಉತ್ತಮ ಆಯ್ಕೆಯಾಗುತ್ತಾರೆ ಎಂದು ರಾಜ್ಯ ಕಾನೂನು ಸಚಿವ ಪಿ.ರಾಜೀವ್ ಹೇಳಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಎನ್ನುವ ಏಕೈಕ ಕಾರಣಕ್ಕೆ ಯಾರೇ ಆಗಲಿ ವಿಶ್ವವಿದ್ಯಾಲಯಗಳ ಕುಲಪತಿಗಳಾಗಳು ಮಾನದಂಡವಾಗಿರುವುದಿಲ್ಲ ಎಂದು ಸಚಿವರು ಹೇಳಿದ್ದಾರೆ. ಸರ್ಕಾರದ ನಿಲುವನ್ನು ಗಮನದಲ್ಲಿಟ್ಟುಕೊಂಡು, ಕೇರಳದ ವಿಶ್ವವಿದ್ಯಾಲಯಗಳನ್ನು ಕಮ್ಯುನಿಸ್ಟ್ ಅಥವಾ ಮಾರ್ಕ್ಸ್ವಾದಿ ಕೇಂದ್ರಗಳಾಗಿ ಪರಿವರ್ತಿಸಲು ರಾಜ್ಯ ಸರ್ಕಾರವು ತಮ್ಮ ನೆಚ್ಚಿನವರನ್ನು ನೇಮಿಸುವ ಇರಾದೆಯಲ್ಲಿರಬಹುದು ಎನ್ನುವ ಕಾರಣಕ್ಕೆ ಸದನದ ಕಲಾಪಗಳನ್ನು ಬಹಿಷ್ಕರಿಸುತ್ತಿರುವುದಾಗಿ ಪ್ರತಿಪಕ್ಷಗಳು ತಿಳಿಸಿವೆ.
ವಿದೇಶಿ ಕಮ್ಯುನಿಸಂ ಒಪ್ಪುವುದಾದರೆ, ಭಾರತದ ಆರ್ಎಸ್ಎಸ್ ಒಪ್ಪುವುದರಲ್ಲಿ ತಪ್ಪೇನಿದೆ? ರಾಜ್ಯಪಾಲರ ಖಡಕ್ ಪ್ರಶ್ನೆ!
ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಪಿಣರಾಯಿ ವಿಜಯನ್ ಸರ್ಕಾರದ ನಡುವಿನ ತಿಕ್ಕಾಟದ ನಡುವೆಯೇ ಮಸೂದೆಯನ್ನು ಸದನದಲ್ಲಿ ಮಂಡಿಸಲಾಯಿತು.
ವಿದೇಶದ ಕಮ್ಯುನಿಸಂನ ಒಪ್ಕೋತೀರಿ, ಆರೆಸ್ಸೆಸ್ ಸಿದ್ಧಾಂತ ಯಾಕೆ ಬೇಡ: ಕೇರಳ ರಾಜ್ಯಪಾಲ ಅರಿಫ್ ಮೊಹಮದ್ ಪ್ರಶ್ನೆ!
ಕಾನೂನು ಸಚಿವ ಪಿ ರಾಜೀವ್ ಅವರು ಮಂಡಿಸಿದ ಮಸೂದೆಯು ಈ ಕೆಳಗಿನ ಕಾಯಿದೆಗಳನ್ನು ತಿದ್ದುಪಡಿ ಮಾಡುತ್ತದೆ: (i) ಕೇರಳ ಕೃಷಿ ವಿಶ್ವವಿದ್ಯಾಲಯ ಕಾಯಿದೆ, 1971, (ii) ಕೇರಳ ವಿಶ್ವವಿದ್ಯಾಲಯ ಕಾಯಿದೆ 1974, (iii) ಕ್ಯಾಲಿಕಟ್ ವಿಶ್ವವಿದ್ಯಾಲಯ ಕಾಯಿದೆ, 1975, (iv) ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಕಾಯಿದೆ, 1985, (v) ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ ಕಾಯಿದೆ, 1994, (vi) ಕಣ್ಣೂರು ವಿಶ್ವವಿದ್ಯಾನಿಲಯ ಕಾಯಿದೆ, 1996, (vii) ಕೇರಳ ವೆಟರ್ನರಿ ಮತ್ತು ಅನಿಮಲ್ ಸೈನ್ಸಸ್ ವಿಶ್ವವಿದ್ಯಾಲಯ ಕಾಯಿದೆ, 2010, ಮತ್ತು (viii) ಕೇರಳ ಆರೋಗ್ಯ ವಿಶ್ವವಿದ್ಯಾಲಯ ವಿಜ್ಞಾನ ಕಾಯಿದೆ, 2010 ಇದರ ತಿದ್ದುಪಡಿ ಮಾಡುತ್ತದೆ.
ನಿವೃತ್ತ ನ್ಯಾಯಾಧೀಶರೊಬ್ಬರನ್ನು ಕುಲಪತಿಯನ್ನಾಗಿ ನೇಮಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಸಭಾತ್ಯಾಗ ಮಾಡಿದ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ ಮಸೂದೆ ಅಂಗೀಕಾರವಾಯಿತು. ಆಯ್ಕೆ ಸಮಿತಿಯು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ (ಎಲ್ಒಪಿ) ಮತ್ತು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಿರಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.