ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ, ಕಾಶ್ಮೀರಿಗಳು 1947 ರಲ್ಲೇ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಜಮ್ಮುಕಾಶ್ಮೀರ: ನಾವು ಎರಡು ದೇಶ ನೀತಿಯನ್ನು ಎಂದೋ ದೂರ ಎಸೆದಿದ್ದೇವೆ ಎಂದು ಹೇಳುವ ಮೂಲಕ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ಕಠಿಣ ಸಂದೇಶ ನೀಡಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ ಜಮ್ಮುಕಾಶ್ಮೀರ ನಮ್ಮ ಕಂಠದ ರಕ್ತನಾಳವಿದ್ದಂತೆ, ಅದು ಮುಂದೆಯೂ ಹೀಗೆಯೇ ಇರುತ್ತದೆ. ಅದು ಎಂದಿಗೂ ಪಾಕಿಸ್ತಾನಕ್ಕೆ ಸೇರುತ್ತದೆ ಎಂಬ ಹೇಳಿಕೆಯನ್ನು ಪಹಲ್ಗಾಮ್ ದಾಳಿ ನಡೆಯುವುದಕ್ಕೂ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಇದಾದ ನಂತರ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದು 26 ಪ್ರವಾಸಿಗರು ಬಲಿಯಾಗಿದ್ದರು. 

Add Asianetnews Kannada as a Preferred SourcegooglePreferred

ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಮಾತನಾಡಿರುವ ಪಾಕಿಸ್ತಾನ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಕಾಶ್ಮೀರಿಗಳು ಎರಡು ದೇಶದ ನಿಯಮವನ್ನು 1947ರಲ್ಲೇ ನೀರಿಗೆ ಎಸೆದಿದ್ದಾರೆ ಎಂದು ಹೇಳುವ ಮೂಲಕ ಈ ಪ್ರದೇಶ ಎಂದಿಗೂ ಪಾಕಿಸ್ತಾನಕ್ಕೆ ಸೇರುವುದಿಲ್ಲ ಎಂಬುದನ್ನು ಪ್ರತಿಪಾದಿಸಿದ್ದಾರೆ. ಪಾಕಿಸ್ತಾನದೊಂದಿಗಿನ ಮಾತುಕತೆಗೆ ತಾವು ಪ್ರತಿ ಬಾರಿ ಬೆಂಬಲ ನೀಡುತ್ತಿದ್ದೆವು, ಆದರೆ ಈಗ ಕೇಂದ್ರ ಸರ್ಕಾರವು ಇಂತಹ ದಾಳಿಗಳು ಮತ್ತೆಂದೂ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ. 

ಇದನ್ನೂ ಓದಿ:ಅಫ್ರಿದಿ ಮೇಲೆ ತಿರುಗಿಬಿದ್ದ ಅಸಾದುದ್ದೀನ್ ಒವೈಸಿ! ಅವನೊಬ್ಬ ಜೋಕರ್ ಎಂದ AIMIM ಮುಖ್ಯಸ್ಥ

ನಾನು ಪ್ರತಿ ಬಾರಿಯೂ ಪಾಕಿಸ್ತಾನದೊಂದಿಗೆ ಭಾರತದ ಮಾತುಕತೆಗೆ ಒಲವು ತೋರುತ್ತಿದ್ದೆ, ಆದರೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಾವು ಹೇಗೆ ಉತ್ತರಿಸುವುದು? ನಾವು ನ್ಯಾಯ ನೀಡುತ್ತಿದ್ದೇವೆಯೇ? ಇದು ಬಾಲಕೋಟ್ ಅಲ್ಲ. ಇಂದು ಈ ರೀತಿಯ ದಾಳಿಗಳು ಮುಂದೆಂದೂ ಸಂಭವಿಸದಂತಹ ಕ್ರಮ ತೆಗೆದುಕೊಳ್ಳಬೇಕೆಂದು ರಾಷ್ಟ್ರ ಬಯಸುತ್ತದೆ ಎಂದು ಅವರು ಹೇಳಿದ್ದಾರೆ. ಎರಡು ರಾಷ್ಟ್ರ ಸಿದ್ಧಾಂತದ ಬಗ್ಗೆ ಮಾತನಾಡಿದ ಅವರು ಜಮ್ಮು ಮತ್ತು ಕಾಶ್ಮೀರದ ಜನರು 1947 ರಲ್ಲಿಯೇ ಈ ಸಿದ್ಧಾಂತವನ್ನು ತಿರಸ್ಕರಿಸಿದರು ಮತ್ತು ಇಂದಿಗೂ ಅದನ್ನು ಅವರು ಸ್ವೀಕರಿಸಲು ಸಿದ್ಧರಿಲ್ಲ ಎಂದು ಹೇಳಿದರು.

ನಮ್ಮ ನೆರೆ ದೇಶ ಇಂದು ಮಾನವೀಯತೆಯನ್ನೇ ಅವರು ಕೊಂದಿದ್ದಾರೆ ಎಂದು ಅರ್ಥಮಾಡಿಕೊಳ್ಳದಿರುವುದು ಬಹಳ ವಿಷಾದದ ವಿಚಾರ. ಹೀಗೆ ಮಾಡುವುದರಿಂದ ನಾವು ಪಾಕಿಸ್ತಾನದೊಂದಿಗೆ ಹೋಗುತ್ತೇವೆ ಎಂದು ಅವರು ಭಾವಿಸಿದರೆ ಅದು ಅವರ ತಪ್ಪು ತಿಳುವಳಿಕೆ ನಾವು ಅವರ ಈ ತಪ್ಪು ತಿಳುವಳಿಕೆಯನ್ನು ನಿವಾರಿಸಬೇಕು. 1947 ರಲ್ಲಿಯೇ ನಾವು ಅವರೊಂದಿಗೆ ಹೋಗಲಿಲ್ಲ, ಹೀಗಿರುವಾಗ ಇಂದು ನಾವು ಏಕೆ ಹೋಗುತ್ತೇವೆ? ಆ ಸಮಯದಲ್ಲಿಯೇ ನಾವು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ನೀರಿಗೆ ಎಸೆದಿದ್ದೇವೆ. ಇಂದು, ನಾವು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಸ್ವೀಕರಿಸಲು ಸಿದ್ಧರಿಲ್ಲ. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ನಾವೆಲ್ಲರೂ ಒಂದೇ. ನಾವು ಅವರಿಗೆ ಸೂಕ್ತ ಉತ್ತರವನ್ನು ನೀಡುತ್ತೇವೆ ಎಂದು ಅಬ್ದುಲ್ಲಾ ಹೇಳಿದ್ದಾರೆ. 

ಇದನ್ನೂ ಓದಿ:ಮುಂಬೈ ದಾಳಿ ಭಯೋತ್ಪಾದಕ ತಹವ್ವೂರ್ ರಾಣಾ ಕಸ್ಟಡಿ ಮತ್ತೆ 12 ದಿನ ವಿಸ್ತರಣೆ

ಏಪ್ರಿಲ್ 16 ರ ಬುಧವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಸಾಗರೋತ್ತರ ಪಾಕಿಸ್ತಾನಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್, ಭಾರತೀಯರ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ಕಾಶ್ಮೀರಿ ಜನರೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದರು. ಜಮ್ಮು ಕಾಶ್ಮೀರ ನಮ್ಮ ಕಂಠನಾಳವಾಗಿತ್ತು, ಹಾಗೂ ಅದೂ ಮುಂದೆಯೂ ಹಾಗೆಯೇ ಆಗಲಿದೆ ಈ ಕತೆಯನ್ನು ನೀವು ನಿಮ್ಮ ಮಕ್ಕಳಿಗೆ ಹೇಳಿ, ಅವರು ಹಿಂದೂಗಳಿಗಿಂತ ಭಿನ್ನರು ಎಂಬುದನ್ನು ಅವರು ಮರೆಯಬಾರದು ಎಂದು ಅವರು ಹೇಳಿದ್ದರು. ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಸಂಭಾವ್ಯ ಅಂಶದಲ್ಲೂ ನಾವು ಹಿಂದೂಗಳಿಗಿಂತ ಭಿನ್ನರು ಎಂದು ಭಾವಿಸಿದ್ದರು ಎಂಬುದನ್ನು ಅವರು ಮರೆಯದಂತೆ ನೀವು ನಿಮ್ಮ ಮಕ್ಕಳಿಗೆ ಪಾಕಿಸ್ತಾನದ ಕಥೆಯನ್ನು ಹೇಳಬೇಕು ಎಂದಿದ್ದರು. ಇದಾಗಿ ವಾರ ಕಳೆಯುವ ಮೊದಲು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್‌ ಬೆಂಬಲಿತ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಬಲಿಯಾಗಿದ್ದರು.