ಕಾಂಗ್ರೆಸ್ನತ್ತ ಲಾಲೂ ಸ್ನೇಹಿತ ಕನ್ಹಯ್ಯ..ಬಿಹಾರದಲ್ಲಿ ಹೊಸ ಪ್ರಯೋಗ!
* ಕಾಂಗ್ರೆಸ್ ನತ್ತ ಮುಖ ಮಾಡಿದ ಕನ್ಹಯ್ಯ ಕುಮಾರ್
* ಕನ್ಹಯ್ಯ ಕುಮಾರ್ ಕೈ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧ
* ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ
* ಬಿಹಾರ ರಾಜಕಾರಣದಿಂದ ಹೊಸ ಇನಿಂಗ್ಸ್
ನವದೆಹಲಿ(ಸೆ. 16) ಸಿಪಿಐ ನಾಯಕ, ಜೆಎನ್ಯು ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ ಎಂಬ ಮಾತು ವ್ಯಕ್ತವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕನ್ಹಯ್ಯ ಕುಮಾರ್ ಭೇಟಿ ಮಾಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವೇದಿಕೆ ಸಿದ್ಧ ಮಾಡಿಕೊಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಣೆ ಮೇವಾನಿ ಗೆಲುವಿಗೆ ಕಾಂಗ್ರೆಸ್ ಸಹಾಯ ಮಾಡಿತ್ತು.
ಆದರೆ ಸಿಪಿಐ ಈ ವಿಚಾರವನ್ನು ಅಲ್ಲಗಳೆದಿದ್ದು ಜನರಲ್ ಸಕ್ರೆಟರಿ ಡಿ ರಾಜಾ ಇದೆಲ್ಲ ಊಹಾಪೋಹ ಎಂದಿದ್ದಾರೆ. ಕನ್ಹಯ್ಯ ಕುಮಾರ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.. ದೂರವಾಣಿ ಕರೆಗಳನ್ನು ಸ್ವೀಕಾರ ಮಾಡುತ್ತಿಲ್ಲ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಕನ್ಹಯ್ಯ ಕುಮಾರ್ ಗೆ ದೊಡ್ಡ ಜವಾಬ್ದಾರಿ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಬಿಹಾರದಲ್ಲಿ ಕಾಂಗ್ರೆಸ್ ದಶಕದ ಕಾಲದಿಂದ ತೀವ್ರ ಹಿನ್ನಡೆ ಅನುಭವಿಸಿದ್ದು ಕನ್ಹಯ್ಯ ಕುಮಾರ್ ಮೂಲಕ ಹೊಸ ಮುಖ ಪ್ರಚುರಪಡಿಸಲು ಮುಂದಾಗಿದೆ.
ನನ್ನ ದ್ವೇಷ ನಿತೀಶ್ ವಿರುದ್ಧ ಎಂದ ಕನ್ಹಯ್ಯಾ
ಕಾಂಗ್ರೆಸ್ ಮೂಲಗಳ ಪ್ರಕಾರ, ಕಳೆದ ಲೋಕಸಭೆ ಚುನಾವಣೆ ಬಳಿಕ ಅನೇಕ ಬಾರಿ ರಾಹುಲ್ ಗಾಂಧಿ ಜೊತೆ ಕನ್ಹಯ್ಯ ಮಾತುಕತೆ ನಡೆಸಿದ್ದು, ಬಿಹಾರದಲ್ಲಿ ತನ್ನದೇ ಆದ ತಂಡ ಕಟ್ಟಲು ನೆರವು ಕೋರಿದ್ದರು ಎನ್ನಲಾಗಿದೆ. ಬಿಹಾರದಲ್ಲಿ ಕಾಂಗ್ರೆಸ್ ಬಲಗೊಳಿಸಿದ ಬಳಿಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಕನ್ಹಯ್ಯ ಮುಂದಾಗಿದ್ದಾರೆ ಎಂಬ ಸುದ್ದಿಯಿದೆ
ಇನ್ನೊಂದು ಕಡೆ ರಾಷ್ಟ್ರೀಯ ಜನತಾ ದಳ( ಆರ್ ಜೆ ಡಿ ) ಮುಖಂಡ ತೇಜಸ್ವಿ ಯಾದವ್ ಜೊತೆಗೂ ಕಾಂಗ್ರೆಸ್ ಮಾತುಕತೆ ನಡೆಸಿದ್ದು, ಆರ್ ಜೆಡಿ ದೋಸ್ತಿ ಕಳೆದುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಹಾಗಾಗಿ ಒಂದು ಹಂತದ ಗೊಂದಲ ಹಾಗೆ ಉಳಿದುಕೊಂಡಿದೆ.
2016ರಲ್ಲಿ ಜೆಎನ್ಯುನಲ್ಲಿ ಉಗ್ರ ಅಫ್ಜಲ್ ಗುರು ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಜೆಎನ್ಯು ಮಾಜಿ ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅಖಿಬ್ ಹುಸೇನ್ , ಮುಜೀಬ್ ಹುಸ್ಸೇನ್, ಮುನೀಬ್ ಹುಸ್ಸೇನ್, ಉಮರ್ ಗುಲ್, ರಯೀಬ್, ಬಸೀರ್ ಭಟ್ ಮತ್ತು ಬಶರತ್ ವಿರುದ್ಧ ಪ್ರಕರಣ ದಾಖಲಾಗಿತ್ತು.