ಪಂಜಾಬ್‌ನಲ್ಲಿ ಅಪರಿಚಿತರ ಗುಂಡಿನ ದಾಳಿ ಮುಂದುವರೆದಿದೆ. ಅಮೃತ್‌ಸರದಲ್ಲಿ ಎಎಪಿ ನಾಯಕ ಸರಪಂಚ್ ಜರ್ನೈಲ್ ಸಿಂಗ್ ಅವರನ್ನು ಮದುವೆ ಸಮಾರಂಭದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದೇವಿಂದರ್ ಬಂಬಿಹಾ ಗ್ಯಾಂಗ್ ಈ ಕೃತ್ಯದ ಹೊಣೆ ಹೊತ್ತಿದೆ.

ಪಂಜಾಬ್‌ನ ಅಮೃತ್‌ಸರದಲ್ಲಿ ಎಎಪಿ ನಾಯಕ ಹಾಗೂ ಗ್ರಾಮದ ಸರಪಂಚ್ ಆಗಿದ್ದ ಜರ್ನೈಲ್ ಸಿಂಗ್ ಅವರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿಹತ್ಯೆ ಮಾಡಿದ್ದಾರೆ. ಜರ್ನೈಲ್ ಸಿಂಗ್ ಅವರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೇ ಬಂದೂಕುಧಾರಿಗಳು ಅವರ ಮೇಲೆ ಅತಿಥಿಗಳ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹಠಾತ್ ದಾಳಿಯಿಂದ ಮದುವೆ ಮನೆಯಲ್ಲಿ ಗೊಂದಲ ಆತಂಕ ಭಯದ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸರ ಪ್ರಕಾರ, ಜರ್ನೈಲ್ ಸಿಂಗ್ ಅವರು ತರಣ್ ತರಣ್ ಜಿಲ್ಲೆಯ ವಲ್ಥೋವಾ ಗ್ರಾಮದ ನಿವಾಸಿಯಾಗಿದ್ದು, ಅಮೃತಸರದಲ್ಲಿ ಮದುವೆಯೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ದುರಂತ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಸಮೀಪದಿಂದಲೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಅಪರಿಚಿತರು ಹಾರಿಸಿದ ಗುಂಡು ಜರ್ನೈಲ್ ಸಿಂಗ್ ಅವರ ಹಣೆ ಸೀಳಿದ್ದು, ಕೂಡಲೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ಮಾಡಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಹೊಸವರ್ಷದಂದು ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ: ಬಾಯ್‌ಫ್ರೆಂಡ್ ಭಾರತಕ್ಕೆ ಪರಾರಿ

ಎಎಪಿ ನಾಯಕನ ಸಾವಿನ ಹೊಣೆಯನ್ನು ದೇವಿಂದರ್ ಬಂಬಿಹಾ ಗ್ಯಾಂಗ್ ಹೊತ್ತುಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅದು ಪೋಸ್ಟ್ ಮಾಡಿದೆ. ಇಂದು, ಅಮೃತಸರದ ಮಾರಿಗೋಲ್ಡ್ ರೆಸಾರ್ಟ್‌ನಲ್ಲಿ ಜರ್ನೈಲ್ ಸರ್ಪಂಚ್ (ವಾಲ್ಟೋಹಾ) ಅವರನ್ನು ಹತ್ಯೆ ಮಾಡಲಾಗಿದೆ. ನಾವು, ಡೊನಿ ಬಾಲ್, ಪ್ರಭ್ ದಾಸುವಾಲ್, ಅಫ್ರಿದಿ ಟಟ್, ಮೊಹಬ್ಬತ್ ರಾಂಧವಾ, ಅಮರ್ ಖ್ವಾ ಮತ್ತು ಪವನ್ ಶಕೀನ್ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಅವರು ಪೊಲೀಸರಿಗೆ 35 ಲಕ್ಷ ರೂ.ಗಳನ್ನು ನೀಡಿ ದಾಸುವಾಲ್‌ನಲ್ಲಿರುವ ನನ್ನ ಮನೆಯನ್ನು ಕೆಡವಲು ಅವರೊಂದಿಗೆ ಹೋದರು ಎಂದು ಬರೆಯಲಾಗಿದೆ. ಈ ಕೆಲಸವನ್ನು ನಮ್ಮ ತಮ್ಮ ಗಂಗಾ ಠಾಕರ್‌ಪುರ್ ನಿರ್ವಹಿಸಿದರು. ಪೊಲೀಸರು ಯಾರಿಗೂ ಅಕ್ರಮವಾಗಿ ಕಿರುಕುಳ ನೀಡಬಾರದು. ನಾವೆಲ್ಲರೂ ಅವನ ಮೇಲೆ ಎರಡು ಬಾರಿ ದಾಳಿ ಮಾಡಿದೆವು, ಆದರೆ ಅವನು ತಪ್ಪಿಸಿಕೊಂಡು ನಮಗೆ ಯಾವುದೇ ಸಂಬಂಧವಿಲ್ಲದ ಅಕ್ರಮ ಮನೆಗಳಲ್ಲಿ ವಾಸಿಸುತ್ತಿದ್ದ ಹುಡುಗರ ಮೇಲೆ ಗುಂಡು ಹಾರಿಸಿದ.

ನಾವು ಈಗಾಗಲೇ ಅವರಿಗೆ ಈ ಬಗ್ಗೆ ಪೋಸ್ಟ್ ಮೂಲಕ ತಿಳಿಸಿದ್ದೆವು. ನಾವು ಅವರಿಗೆ ಕರೆ ಮಾಡಿ ವಿವರಿಸಲು ಪ್ರಯತ್ನಿಸಿದೆವು, ಆದರೆ ಅದು ಕೆಲಸ ಮಾಡಲಿಲ್ಲ. ಸಮಿತಿಯಲ್ಲಿ ಅಸಂಬದ್ಧವಾದುದನ್ನು ಹರಡುತ್ತಿರುವ ಇತರರು ನಮ್ಮ ಬಗ್ಗೆ ಗಮನ ಕೊಡಿ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ. ನಮ್ಮೊಂದಿಗೆ ಇರಿ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ದಾಳಿಕೋರರು ಪೂರ್ವಯೋಜಿತ ಉದ್ದೇಶದಿಂದ ಬಂದಿದ್ದರು. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ ದಾಳಿಕೋರರು ತಮ್ಮ ಮುಖಗಳನ್ನು ಮುಚ್ಚಿಕೊಂಡಿರಲಿಲ್ಲ ಮತ್ತು ಘಟನೆಯ ಮೊದಲು ಬಲಿಪಶುವಿನ ಮೇಲೆ ಭಾರೀ ಕಣ್ಗಾವಲು ಇತ್ತು ಎಂದು ನಾವು ಅನುಮಾನಿಸುತ್ತೇವೆ ಎಂದು ಪೊಲೀಸ್ ವಕ್ತಾರರೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ: ಖಾತೆಗೆ ತಪ್ಪಾಗಿ ಬಂದು ಬಿದ್ದ 40 ಕೋಟಿ ಬಳಸಿ 20 ನಿಮಿಷದಲ್ಲಿ 1.75 ಕೋಟಿ ಲಾಭ ಪಡೆದ ಟ್ರೇಡರ್!

ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅವರು ವಾಲ್ಟೋಹಾ ಗ್ರಾಮದ ಎಎಪಿ ನಾಯಕ ಜರ್ನೈಲ್ ಸಿಂಗ್ ಅವರ ಹತ್ಯೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಇದು ಅತ್ಯಂತ ಕಳವಳಕಾರಿ ನಿನ್ನೆ, ಭಿಂದರ್ ಕಲಾನ್ (ಮೊಗಾ) ನಲ್ಲಿ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಯಿತು ಮತ್ತು ಶುಕ್ರವಾರ ಕಪುರ್ತಲಾದಲ್ಲಿ ಮಹಿಳೆಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇದು ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಅಡಿಯಲ್ಲಿ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಬಹಿರಂಗಪಡಿಸುತ್ತದೆ. ಈ ಕಾನೂನುಬಾಹಿರತೆಗೆ ಮುಖ್ಯಮಂತ್ರಿಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಕಾಮೆಂಟ್ ಮಾಡಿದ್ದಾರೆ. ಘಟನೆಯನ್ನು ಪಂಜಾಬ್ ಬಿಜೆಪಿಯೂ ಕೂಡ ಖಂಡಿಸಿದ್ದು, ಮುಖ್ಯಮಂತ್ರಿ ಭಾಗವಂತ್ ಮಾನ್ ಅವರ ರಾಜೀನಾಮೆಗೆ ಆಗ್ರಹಿಸಿದೆ.