- ಪ್ರಜಾಪ್ರಭುತ್ವ, ದೃಢ ನಿಶ್ಚಯಕ್ಕೆ ಜಮ್ಮು-ಕಾಶ್ಮೀರ ಹೊಸ ಉದಾಹರಣೆ- ‘ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನ’ ಅಂಗವಾಗಿ ಪ್ರಧಾನಿ ಮೋದಿ ಭಾಷಣ- ಕೇಂದ್ರದಲ್ಲಿ ಎನ್‌ಡಿಎ ಬಂದ ಬಳಿಕ ಕಣಿವೆ ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಪ್ರಗತಿ

ಪಲ್ಲಿ (ಜಮ್ಮು-ಕಾಶ್ಮೀರ)(ಏ.25): ಕಳೆದ 2-3 ವರ್ಷಗಳಲ್ಲಿ ಕೈಗೊಂಡ ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ಜಮ್ಮು-ಕಾಶ್ಮೀರವು, ಪ್ರಜಾಪ್ರಭುತ್ವ ಮತ್ತು ದೃಢ ನಿಶ್ಚಯಕ್ಕೆ ಹೊಸ ಉದಾಹರಣೆಯಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಯುಗವೇ ಆರಂಭವಾಗಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

‘ಕಳೆದ 2 ವರ್ಷಗಳಲ್ಲಿ ರಾಜ್ಯಕ್ಕೆ 38,000 ಕೋಟಿ ರು.ನಷ್ಟುಖಾಸಗಿ ಬಂಡವಾಳ ಹೂಡಿಕೆಯಾಗಿದೆ, ಜೊತೆಗೆ ಪ್ರವಾಸಿಗರ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ’ ಎಂದೂ ಅವರು ಹರ್ಷಿಸಿದ್ದಾರೆ. ಈ ಮೂಲಕ ಉಗ್ರವಾದದ ಬೀಡಾಗಿದ್ದ ರಾಜ್ಯದಲ್ಲಿ ಈಗ ಪರಿವರ್ತನೆಯ ಶಕೆ ಆರಂಭವಾಗಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ಮೋದಿ ಕಾರ್ಯಕ್ರಮ ನಡೆಯೋ 12 ಕಿ. ಮೀ ದೂರದ ಮೈದಾನದಲ್ಲಿ ಸ್ಫೋಟ!

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದಾದ ನಂತರ ಮೋದಿ ಇದೇ ಮೊದಲ ಬಾರಿಗೆ ಭಾನುವಾರ, ಇಲ್ಲಿಗೆ ಭೇಟಿ ನೀಡಿದರು. ‘ರಾಷ್ಟ್ರೀಯ ಪಂಚಾಯತ್‌ ದಿನ’ದ ಅಂಗವಾಗಿ ಭಾನುವಾರ ಜಮ್ಮವಿನಿಂದ 15 ಕಿ.ಮೀ ದೂರದ ಪಲ್ಲಿಯಲ್ಲಿ ಆಯೋಜಿಸಿದ್ದ ಬೃಹತ್‌ ಕಾರ್ಯಕ್ರಮದ ಮೂಲಕ ದೇಶದ ಎಲ್ಲಾ ಗ್ರಾಮಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ರಾಜ್ಯದ ವಿವಿಧ ಅಭಿವೃದ್ಧಿ ಕಾರ‍್ಯಕ್ರಮಗಳಿಗೆ ಚಾಲನೆ ನೀಡಿದರು.

ವಂಚಿತ ರಾಜ್ಯಕ್ಕೆ ಭಾಗ್ಯದ ಬಾಗಿಲು:
‘ಜಮ್ಮು-ಕಾಶ್ಮೀರವು ಸಂವಿಧಾನದ 370ನೇ ವಿಧಿಗೆ ಒಳಪಟ್ಟಿದ್ದ ವೇಳೆ ದೇಶದ ಇತರೆ ರಾಜ್ಯಗಳಿಗೆ ಸಿಗುತ್ತಿದ್ದ ಹಲವು ಲಾಭದಿಂದ ವಂಚಿತವಾಗಿತ್ತು. ಆ ಲಾಭವು ಸ್ಥಳೀಯರಿಗೆ ಸಿಗಲೆಂದೇ ಕೇಂದ್ರ ಸರ್ಕಾರವು 175 ಕೇಂದ್ರೀಯ ಕಾಯ್ದೆಗಳಿಗೆ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆಗೆ ತಿದ್ದುಪಡಿ ಮಾಡಿದೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಇಲ್ಲಿನ ಜನರಿಗೆ ಪಂಚಾಯತ್‌ ರಾಜ್‌ ವ್ಯವಸ್ಥೆಯ ಲಾಭ ಸಿಕ್ಕಿರಲಿಲ್ಲ. ಆದರೆ ಇದೀಗ ರಾಜ್ಯದ ಜನರು ಅದರ ಲಾಭ ಪಡೆಯುತ್ತಿದ್ದಾರೆ. ಕಳೆದ 2-3 ವರ್ಷಗಳಲ್ಲಿ ರಾಜ್ಯದಲ್ಲಿ ಜಾರಿಯಾದ ಹೊಸ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರಾಜ್ಯವು ಪ್ರಜಾಪ್ರಭುತ್ವ ಮತ್ತು ದೃಢ ನಿಶ್ಚಯಕ್ಕೆ ಹೊಸ ಉದಾಹರಣೆಯಾಗಿ ಹೊರಹೊಮ್ಮಿದೆ’ ಎಂದರು.

‘ಈ ಹಿಂದಿನ ವರ್ಷಗಳಲ್ಲಿ ರಾಜ್ಯದಲ್ಲಿ ಬೇರುಮಟ್ಟದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು 5000 ಕೋಟಿ ರು. ಕೊಟ್ಟಿದ್ದರೆ, ನಮ್ಮ ಸರ್ಕಾರ ಬಂದಮೇಲೆ 220000 ಕೋಟಿ ರು. ಒದಗಿಸಲಾಗಿದೆ. ಅಡುಗೆ ಅನಿಲ, ವಿದ್ಯುತ್‌, ನೀರು, ಶೌಚಾಲಯ ಯೋಜನೆಗಳ ಲಾಭ ತ್ವರಿತವಾಗಿ ರಾಜ್ಯದ ಜನರಿಗೂ ತಲುಪವಂತಾಗಲು ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡಿದೆ. ಕಳೆದ 7 ದಶಕಗಳಲ್ಲಿ ರಾಜ್ಯಕ್ಕೆ ಒಟ್ಟಾರೆ 17000 ಕೋಟಿ ರು.ಖಾಸಗಿ ಬಂಡವಾಳ ಹರಿದುಬಂದಿದ್ದರೆ, ಆ ಪ್ರಮಾಣ ಕಳೆದ 2 ವರ್ಷಗಳಲ್ಲಿ 38000 ಕೋಟಿ ರು. ದಾಟಿದೆ. ಭಾರತದ ಸ್ವಾತಂತ್ರ್ಯದ ಅಮೃತ ಕಾಲವಾಗಿರುವ ಮುಂದಿನ 25 ವರ್ಷಗಳಲ್ಲಿ ರಾಜ್ಯವು ಯಶಸ್ಸಿನ ಹೊಸ ಅಧ್ಯಾಯವನ್ನು ಬರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

The Kashmir Files ಮೆಚ್ಚಿದ PM Modi ರುದ್ರಾಕ್ಷಿ ಮಾಲೆ ಉಡುಗೊರೆ ನೀಡಿದ Anupam Kher

ಜೊತೆಗೆ ವರ್ಷದ ಎಲ್ಲಾ 12 ತಿಂಗಳು ರಾಜ್ಯದಲ್ಲಿ ಸಂಪರ್ಕ ವ್ಯವಸ್ಥೆ ಸಾಧ್ಯವಾಗುವುದನ್ನು ನಾವು ಖಚಿತಪಡಿಸುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.

ಹಳೆಯ ಸಮಸ್ಯೆ ಮರುಕಳಿಸಲ್ಲ:
ರಾಜ್ಯದ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ‘ನಿಮ್ಮ ತಂದೆ, ತಾಯಂದಿರು, ಅಜ್ಜ, ಅಜ್ಜಿಯಂದಿರು ಅನುಭವಿಸಿದ ಸಂಕಷ್ಟಗಳು ನೀವು ಅನುಭವಿಸಬೇಕಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಬಯಸುತ್ತದೆ’ ಎಂದು ಹೇಳಿದರು.

ಇದೇ ವೇಳೆ ನೈಸರ್ಗಿಕ ಕೃಷಿ ಮಾಡುವಂತೆ ಸಲಹೆ ನೀಡಿದ ಮೋದಿ, ಒಣ ಮತ್ತು ಹಸಿ ತ್ಯಾಜ್ಯ ಬೇರ್ಪಡಿಸಲು ಸಹಕಾರ ಬಯಸಿದರು. ಜೊತೆಗೆ ಇಂಗಾಲ ತಟಸ್ಥಕ್ಕೆ ವಾತಾವರಣ ನಿರ್ಮಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ವೈಷ್ಣೋದೇವಿಯೊಂದಿಗೆ ಕನ್ಯಾಕುಮಾರಿ ದೇವಿ ಭೇಟಿ:
ಇದೇ ವೇಳೆ ಏಕ ಭಾರತ ಶ್ರೇಷ್ಠ ಭಾರತ ಯೋಜನೆ ಮೂಲಕ ದೇಶದ ವಿವಿಧ ಭಾಗಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಮೋದಿ, ಕನ್ಯಾಕುಮಾರಿಯ ದೇವಿಯು, ಕಾಶ್ಮೀರದ ವೈಷ್ಣೋದೇವಿಯನ್ನು ಒಂದೇ ರಸ್ತೆಯ ಮೂಲಕ ಭೇಟಿಯಾಗುವ ದಿನಗಳು ದೂರವಿಲ್ಲ ಎಂದರು.