Asianet Suvarna News Asianet Suvarna News

ಕಾಂಗ್ರೆಸ್‌ಗೆ ಭಾರಿ ಹಿನ್ನಡೆ, ಮಾಜಿ ಉಪ ಮುಖ್ಯಮಂತ್ರಿ ಸೇರಿ 50 ಹಿರಿಯ ನಾಯಕರು ರಾಜೀನಾಮೆ!

ಗುಲಾಮ್ ನಬಿ ಆಜಾದ್ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಒಂದರ ಮೇಲೊಂದರಂತೆ ಹಿನ್ನಡೆ ಅನುಭವಿಸುತ್ತಿದೆ. ಒಂದೆಡೆ ಭಿನ್ನಮತ ಸ್ಫೋಟಗೊಂಡಿದ್ದರೆ, ಇತ್ತ ಮತ್ತಷ್ಟು ರಾಜೀನಾಮೆ ತಡೆಯಲು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಿದೆ. ಆದರೆ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ನಿಂತಿಲ್ಲ. ಇದೀಗ ಮಾಜಿ ಉಪ ಮುಖ್ಯಮಂತ್ರಿ 50 ಹಿರಿಯ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿದ್ದಾರೆ.
 

Jammu and Kashmir Politics 64 congress leaders resign from party to support Ghulam Nabi Azad ckm
Author
First Published Aug 30, 2022, 3:47 PM IST

ಶ್ರೀನಗರ(ಆ.30): ಮುಂಬರುವ ಲೋಕಸಭೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಭಾರಿ ಕಸರತ್ತು ನಡೆಸುತ್ತಿದೆ. ಭಾರತ್  ಜೋಡೋ ಯಾತ್ರೆ, ರಾಜ್ಯದಲ್ಲಿ ಸ್ವಾತಂತ್ರ್ಯ ನಡಿಗೆ, ಚಲೋ, ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್‌ಗೆ ಒಂದರ ಮೇಲೊಂದರಂತೆ ಹೊಡೆತ ಸಿಗುತ್ತಿದೆ. ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಕಾಂಗ್ರೆಸ್‌ಗೆ ರಾಜೀನಾಮೆ ಭಾರಿ ಸಂಚಲನ ಸೃಷ್ಟಿಸಿದೆ. ನಬಿ ರಾಜೀನಾಮೆಯನ್ನೇ ಕಾಂಗ್ರೆಸ್ ಟೀಕಿಸಿದೆ. ಇದರ ಬೆನ್ನಲ್ಲೇ ಗುಲಾಮ್ ನಬಿ ಆಜಾದ್ ಬೆಂಬಲಿಸಿ ಜಮ್ಮು ಮತ್ತು ಕಾಶ್ಮೀರದ 50ಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜ್ಯ ಮಾಜಿ ಉಪ ಮುಖ್ಯಮಂತ್ರಿ ಸೇರಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕರು, ಮಾಜಿ ಸಚಿವರು, ಶಾಸಕರು ಸೇರಿದಂತೆ ಹಲವು ನಾಯಕರು ಪಕ್ಷ ತೊರೆದಿದ್ದಾರೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷವೇ ಖಾಲಿಯಾಗಿದೆ. ಹಾಲಿ ಶಾಸಕರಾಗಿರುವ ಹಾಗೂ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕೆಲ ನಾಯಕರನ್ನು ಹೊರತುಪಡಿಸಿದರೆ ಇನ್ನುಳಿದ ಬಹುತೇಕ ನಾಯಕರು ರಾಜೀನಾಮೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವ ಅಬ್ದುಲ್ ಮಜೀದ್ ವಾನಿ, ಮನೋಹರ್ ಲಾಲ್ ಶರ್ಮಾ, ಘಾರು ರಾಮ್, ಮಾಜಿ ಶಾಸಕ ಬಲ್ವನ್ ಸಿಂಗ್ ಸೇರಿದಂತೆ ಒಟ್ಟು 64 ಹಿರಿಯ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ.

ಯಾರೇ ಅಧ್ಯಕ್ಷರಾದರೂ ರಾಹುಲ್‌ಗೆ ಗುಲಾಮನಂತೆ ಇರಬೇಕು: ಆಜಾದ್‌ ಕಿಡಿ

ಕಾಂಗ್ರೆಸ್‌ನಲ್ಲಿ ಗುಲಾಮರಂತೆ ಇರಲು ಸಾಧ್ಯವಿಲ್ಲ. ಗುಲಾಮ್ ನಬಿ ಅಜಾದ್ ನಮ್ಮ ಧ್ವನಿಯಾಗಿದ್ದಾರೆ. ಅವರನ್ನು ನಾವು ಹಿಂಬಾಲಿಸುತ್ತೇವೆ. ಗುಲಾಮ್ ನಬಿ ಆಜಾದ್‌ಗೆ ಬೆಂಬಲ ನೀಡಲು ರಾಜೀನಾಮೆ ನೀಡಿದ್ದೇವೆ ಎಂದು ಹಿರಿಯ ನಾಯಕ ಹೇಳಿದ್ದಾರೆ. 64 ನಾಯಕರು ರಾಜೀನಾಮೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಅಧಪತನದತ್ತ ಸಾಗಿದೆ. ಇತರ ಪಕ್ಷಗಳಿಂದ ಮುಳುಗುತ್ತಿರುವ ಕಾಂಗ್ರೆಸ್‌ಗೆ ಯಾರೂ ಆಗಮಿಸುತ್ತಿಲ್ಲ. ಇರುವ ನಾಯಕರು ಇತರ ಪಕ್ಷ ಸೇರಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ಬುಡವನ್ನೇ ಅಲುಗಾಡಿಸುತ್ತಿದೆ.

ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಪಕ್ಷದೊಳಗಿನ ರಾಜಕೀಯ, ರಾಹುಲ್ ಗಾಂಧಿ ಅಸಮರ್ಥತೆ ಸೇರಿದಂತೆ ಹಲವು ವಿಚಾರಗಳ ಕುರಿತು ಆಕ್ರೋಶ ಹೊರಹಾಕಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬಳಿಕವೂ ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ತೊರೆದ ಹಿನ್ನೆಲೆಯಲ್ಲಿ ಸುದ್ದಿಗಾರರು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ನೀಡಿದ ಸಂದರ್ಶನದಲ್ಲಿ ಆಜಾದ್‌ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿರುವ ಶೇ.90 ಮಂದಿ ಕಾಂಗ್ರೆಸ್ಸಿ ಅಲ್ಲ. ಕಾಲೇಜಿನಲ್ಲಿರುವವರು, ಸಿಎಂಗಳ ಗುಮಾಸ್ತರನ್ನು ಆರಿಸಿ ಹುದ್ದೆ ನೀಡಲಾಗುತ್ತಿದೆ. ತಮ್ಮ ಇತಿಹಾಸವೇ ಗೊತ್ತಿಲ್ಲದ ವ್ಯಕ್ತಿಗಳ ಜತೆ ವಾದಕ್ಕಿಳಿಯಲು ನಾನು ಸಿದ್ಧನಿಲ್ಲ ಎಂದಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ನಬಿ ನಡೆಯನ್ನು ಪ್ರಶ್ನಿಸಿದ್ದಾರೆ. 

 

ಪ್ರಧಾನಿ ಮೋದಿ ಬಗ್ಗೆ ತಪ್ಪು ಗ್ರಹಿಕೆ ಹೊಂದಿದ್ದೆ; ಅವರು ಮಾನವೀಯತೆ ತೋರಿದ್ದಾರೆ: ಆಜಾದ್‌
 

Follow Us:
Download App:
  • android
  • ios