Asianet Suvarna News Asianet Suvarna News

ಕೋಟಿ ಕೋಟಿ ಭಗವದ್ಗೀತೆ ಪ್ರತಿ ಮುದ್ರಿಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ: ಕಾಂಗ್ರೆಸ್ ಆಕ್ರೋಶ

ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುವವರಿಗೆ ನೀಡಲಾಗುವ ಗಾಂಧಿ ಶಾಂತಿ ಪ್ರಶಸ್ತಿಯ 2021ನೇ ಸಾಲಿನ ಪುರಸ್ಕಾರವನ್ನು ಗೋರಖಪುರದ ಗೀತಾ ಪ್ರೆಸ್‌ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಆದರೆ ಗೀತಾ ಪ್ರೆಸ್‌ಗೆ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.

Its like giving Godse Savarkar to Peace Prize Congress is angry for giving the award to Geeta press akb
Author
First Published Jun 19, 2023, 4:16 PM IST | Last Updated Jun 19, 2023, 4:35 PM IST

ನವದೆಹಲಿ: ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುವವರಿಗೆ ನೀಡಲಾಗುವ ಗಾಂಧಿ ಶಾಂತಿ ಪ್ರಶಸ್ತಿಯ 2021ನೇ ಸಾಲಿನ ಪುರಸ್ಕಾರವನ್ನು ಗೋರಖಪುರದ ಗೀತಾ ಪ್ರೆಸ್‌ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಪ್ರಶಸ್ತಿ ಪ್ರದಾನ ಸಮಿತಿಯ ಅಧ್ಯಕ್ಷರಾದ ಪ್ರಧಾನಿ ನರೇಂದ್ರ ಮೋದಿ ನೇತೃ​ತ್ವ​ದಲ್ಲಿ ನಡೆದ ಸಭೆ​ಯ​ಲ್ಲಿ ಗೀತಾ ಪ್ರೆಸ್‌ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 

ಸಮಾಜದಲ್ಲಿ ಅಹಿಂಸೆಯ ಮಾರ್ಗದಲ್ಲಿ ಮಾನವೀಯ ಮೌಲ್ಯಗಳ ಮೇಲೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಉನ್ನತಿಗೆ ಕೆಲಸ ಮಾಡಿದ ಗೀತಾ ಪ್ರೆಸ್‌ ಕೊಡುಗೆಯನ್ನು ಸ್ಮರಿಸಿದ ಮೋದಿ, ಪ್ರೆಸ್‌ ಸ್ಥಾಪನೆಯಾಗಿ ಸರಿ​ಯಾಗಿ 100 ವರ್ಷಕ್ಕೆ ಈ ಪ್ರಶಸ್ತಿ ಲಭಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾ​ರೆ. ಗೀತಾ ಪ್ರೆಸ್‌ ಈವರೆಗೂ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದ್ದು, ಅದರಲ್ಲಿ 16.21 ಕೋಟಿ ಭಗವದ್ಗೀತೆ ಪುಸ್ತಕಗ​ಳೇ ಆಗಿ​ವೆ.

'ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಎರಡಕ್ಕೂ ಸಮಾನ ಸ್ಥಾನಮಾನವಿದೆ..' ಹೈಕೋರ್ಟ್‌ ಪ್ರಶ್ನೆಗೆ ಕೇಂದ್ರದ ಉತ್ತರ!

ಆದರೆ ಗೀತಾ ಪ್ರೆಸ್‌ಗೆ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರ ಹಾಕಿದ ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್‌,' ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಅವರ ಪ್ರಕಾಶನದ 2015ರಲ್ಲಿ ಬಿಡಗಡೆಯಾದ ಬಹಳ ಉತ್ತಮ ಜೀವನ ಚರಿತ್ರೆಯಲ್ಲಿ ಮುಕುಲ್ ಅವರು ಮಹಾತ್ಮ ಗಾಂಧಿ ಜೊತೆ ಹೊಂದಿದ್ದ ಕಾದಾಟದ ಸಂಬಂಧದ ಬಗ್ಗೆ ಹಾಗೂ ಅವರ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ವ್ಯವಸ್ಥೆಯಲ್ಲಿ ಅವರೊಂದಿಗೆ ನಡೆಸಿದ ಹೋರಾಟದ ಬಗ್ಗೆ ಬಹಿರಂಗಪಡಿಸಿದ್ದರು. ಹೀಗಿರುವಾಗ ಅಂತವರಿಗೆ ಶಾಂತಿ ಪ್ರಶಸ್ತಿ ನೀಡಿರುವುದು ಹಾಸ್ಯಾಸ್ಪದ ವಿಚಾರವಾಗಿದೆ ಹಾಗೂ ಇದು ಒಂದು ರೀತಿಯಲ್ಲಿ ಸಾರ್ವಕರ್ ಹಾಗೂ ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ ಎಂದು ಜೈ ರಾಮ್ ರಮೇಶ್ ಕಿಡಿಕಾರಿದ್ದಾರೆ. 

Bhagavad Geeta: ಒಳ್ಳೆಯವರ ಜೊತೆ ಒಳ್ಳೆಯವನಾಗು ಆದ್ರೆ ಕೆಟ್ಟವನ ಜೊತೆ…? ಭಗವದ್ಗೀತೆ ಹೇಳೋದೇನು?

ಗಾಂಧಿ ಶಾಂತಿ ಪ್ರಶಸ್ತಿಯು ಮಹಾತ್ಮ ಗಾಂಧಿಯವರ 125 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅವರು ಪ್ರತಿಪಾದಿಸಿದ ಆದರ್ಶಗಳ ಗೌರವಾರ್ಥ 1995 ರಲ್ಲಿ ಭಾರತ ಸರ್ಕಾರವು ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದೆ. ಗೀತಾ ಪ್ರೆಸ್ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ವಿಶ್ವದ ಅತಿದೊಡ್ಡ ಮುದ್ರಕ ಅಥವಾ ಪ್ರಕಾಶಕರರಲ್ಲಿ ಒಬ್ಬರಾದ ಗೀತಾ ಪ್ರೆಸ್ ಕಳೆದ 100 ವರ್ಷಗಳಲ್ಲಿ ಸಾಕಷ್ಟು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯ ಲಭಿಸಿರುವುದಕ್ಕೆ ಅಭಿನಂದನೆಗಳು, ಅವರು ಕಳೆದ 100 ವರ್ಷಗಳಲ್ಲಿ ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳನ್ನು ಹೆಚ್ಚಿಸಲು ಶ್ಲಾಘನೀಯವಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ  ಟ್ವೀಟ್ ಮಾಡಿದ್ದಾರೆ.

ಈ ಪ್ರಶಸ್ತಿಯೂ ಒಂದು ಕೋಟಿ ಬಹುಮಾನ ಮೊತ್ತವನ್ನು ಹೊಂದಿದೆ. ಈ ಪ್ರಶಸ್ತಿ ಸಂಸ್ಥೆಗೆ ಸಿಕ್ಕಿರುವುದು ಅತ್ಯಂತ ದೊಡ್ಡ ಗೌರವ ಎಂದು ಗೀತಾಪ್ರೆಸ್ ಹೇಳಿದೆ.  ಆದರೆ ಈ ಪ್ರಶಸ್ತಿಯ ಮೊತ್ತವನ್ನು ತಮ್ಮ ಸಂಸ್ಥೆ ಸ್ವೀಕರಿಸುವುದಿಲ್ಲ . ಪ್ರಕಾಶಕರು ಯಾವುದೇ ರೀತಿಯ ದೇಣಿಗೆಯನ್ನು ಸ್ವೀಕರಿಸದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿರುವುದರಿಂದ ಕೇವಲ ಪ್ರಶಸ್ತಿ ಮಾತ್ರ ಸ್ವೀಕರಿಸಲಾಗುತ್ತದೆ  ನಗದು ಸ್ವೀಕರಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ.

 

Latest Videos
Follow Us:
Download App:
  • android
  • ios