ಪ್ರತಿಷ್ಠಿತ ವರ್ಧಮಾನ್ ಗ್ರೂಪ್ ಆಫ್ ಸ್ಕೂಲ್ಸ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದ ಮೇಲೆ ನಡೆದ ಈ ಶೋಧ ಕಾರ್ಯಾಚರಣೆಯಲ್ಲಿ, ಶಾಲೆಯ ಕಚೇರಿಯಿಂದ ಕೋಟ್ಯಾಂತರ ರೂಪಾಯಿ ನಗದು ಮತ್ತು ರಿಯಲ್ ಎಸ್ಟೇಟ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜಸ್ಥಾನದ ಪ್ರತಿಷ್ಠಿತ ಶಾಲೆಯೊಂದರ ಮೇಲೆ ಐಟಿ ದಾಳಿ ನಡೆದಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ರಾಜಸ್ಥಾನ ಜೈಪುರದ ವರ್ಧಮಾನ್ ಗ್ರೂಪ್ ಆಫ್ ಸ್ಕೂಲ್ಸ್‌ಗೆ ಸಂಬಂಧಿಸಿದಂತೆ ಐಟಿ ದಾಳಿ ನಡೆದಿದ್ದು, ಒಟ್ಟು ಶಾಲೆಗೆ ಸೇರಿದ ಆರು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಜೈಪುರದ ವರ್ಧಮಾನ್ ಗ್ರೂಪ್‌ಗೆ ಸಂಬಂಧಿಸಿದ ಆರಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು,ಈ ವರ್ಧಮಾನ್ ಗ್ರೂಪ್ ಸಂಸ್ಥೆಯೂ ರಿಯಲ್ ಎಸ್ಟೇಟ್ ಮತ್ತು ಶಿಕ್ಷಣ ಸಂಸ್ಥೆಗಳ ವ್ಯವಹಾರ ನಡೆಸುತ್ತಿದೆ. ಇಂದು ಮುಂಜಾನೆ ಐಟಿ ಅಧಿಕಾರಿಗಳು ಮಾನಸಸರೋವರದಲ್ಲಿರುವ ವರ್ಧಮಾನ್ ಅಂತರರಾಷ್ಟ್ರೀಯ ಶಾಲಾ ಆವರಣದಲ್ಲಿರುವ ಈ ವರ್ಧಮಾನ್ ಗ್ರೂಪ್‌ನ ಮುಖ್ಯ ಕಚೇರಿಯಲ್ಲಿ ಶೋಧ ನೆಡೆಸಿದ್ದು, ಈ ವೇಳೆ ಕೋಟ್ಯಂತರ ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿ ಸಿಕ್ಕ ಹಣವನ್ನು ಎಣಿಸುವುದಕ್ಕೆ ನೋಟುಗಳನ್ನು ಎಣಿಕೆ ಮಾಡುವ ಯಂತ್ರವನ್ನು ತರಿಸಲಾಯ್ತು ಎಂದು ವರದಿಯಾಗಿದೆ.

ವರ್ಧಮಾನ್ ಗ್ರೂಪ್ ಆಪ್‌ಲೈನ್‌ನಲ್ಲಿ ನಗದು ವಹಿವಾಟು ನಡೆಸುತ್ತಿದೆ ಮತ್ತು ತೆರಿಗೆ ತಪ್ಪಿಸುತ್ತಿದೆ ಎಂಬ ಆರೋಪ ಬಂದ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಸಂಸ್ಥೆಗೆ ಸಂಬಂಧಿಸಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದೆ. ವರ್ಧಮಾನ್ ಗ್ರೂಪ್‌ಗೆ ಸೇರಿದ ಮುಖ್ಯ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಶೋಧಿಸಿದ್ದಾರೆ. ಜೊತೆಗೆ ಅಧಿಕಾರಿಗಳು ಅಲ್ಲಿರುವ ಡಿಜಿಟಲ್ ಸಾಧನಗಳಿಂದ ಸಂಸ್ಥೆಯ ಪ್ರಮುಖ ಅಧಿಕಾರಿಗಳ ಬ್ಯಾಂಕ್ ಖಾತೆಗಳು, ಆಸ್ತಿಗಳು ಪರಿಶೀಲಿಸುತ್ತಿದ್ದಾರೆ. ಈ ವರ್ಧಮಾನ್ ಗ್ರೂಪ್‌ಗೆ ಸಂಬಂಧಿಸಿದಂತೆ ಇತರ ಸ್ಥಳಗಳಲ್ಲೂ ಶೋಧ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ

ಇದಕ್ಕೂ ಮೊದಲು ಆದಾಯ ತೆರಿಗೆ ಇಲಾಖೆಯ ತಂಡಗಳು ನಿನ್ನೆ ವರ್ಧಮಾನ್ ಗ್ರೂಪ್ ಮತ್ತು ಎಸ್‌ಕೆಐಟಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪರಿಶೀಲನೆ ನಡೆಸಿದ್ದವು. ಈ ಪರಿಶೀಲನೆಯ ನಂತರ ವರ್ಧಮಾನ್ ಗ್ರೂಪ್‌ಗೆ ಸೇರಿದ ಮುಖ್ಯ ಕಚೇರಿಗಳಲ್ಲಿ ಪರಿಶೀಲನೆ ನಡೆದಿದೆ. ಇಂದು ಐಟಿ ಅಧಿಕಾರಿಗಳು ಶ್ಯಾಮ್ ನಗರದಲ್ಲಿರುವ ಗ್ರೂಪ್‌ನ ಕಚೇರಿ ಮತ್ತು ಮಾನಸರೋವರ್ ಶಾಲೆಗೆ ಭೇಟಿ ನೀಡಿ, ಫ್ಲಾಟ್ ಮತ್ತು ಭೂ ವ್ಯವಹಾರಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು, ಶಾಲೆಯೊಳಗಿನ ಕಚೇರಿಯಿಂದ ನಗದು ಮತ್ತು ರಿಯಲ್ ಎಸ್ಟೇಟ್ ದಾಖಲೆಗಳನ್ನು ವಶಪಡಿಸಿಕೊಂಡರು ಎಂದು ವರದಿಯಾಗಿದೆ. ಭಾರಿ ಮೊತ್ತದ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಎಷ್ಟು ಎಂಬ ವಿವರ ಇನ್ನಷ್ಟೇ ತಿಳಿಬೇಕಾಗಿದೆ.

ಇದನ್ನೂ ಓದಿ: ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು