ಕರ್ನಾಟಕದಲ್ಲಿ ಪಡಿತರ ಚೀಟಿಗೆ ಜಾತಿ ಪ್ರಮಾಣಪತ್ರವನ್ನು ಲಿಂಕ್ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದು. ಇದು ಕಾನೂನುಬಾಹಿರ ಎಂದಿದ್ದಾರೆ ಅಲ್ಲದೇ ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಏನಿದು ಜಾತಿ ಲಿಂಕ್ ವಿವಾದ ?

ಏನಿದು ಜಾತಿ ವಿವಾದ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
  • ಆಹಾರ ಭದ್ರತಾ ಕಾಯ್ದೆಯಡಿ ದೇಶವ್ಯಾಪಿ ಅರ್ಹರಿಗೆ ಸ್ಥಿತಿ ಗಮನಿಸಿ ಪಡಿತರ ಹಂಚಿಕೆ
  • ಆದರೆ ಕರ್ನಾಟಕ ಸರ್ಕಾರದಿಂದ ಫಲಾನುಭವಿಗಳ ಬಳಿ ಜಾತಿ ಪ್ರಮಾಣ ಪತ್ರ ಲಿಂಕ್‌
  • ಆಧಾರ್, ಬಯೋಮೆಟ್ರಿಕ್ ದೃಢೀಕರಣ ಬಳಿಕವೂ ಜಾತಿ ಕೇಳುವ ಉದ್ದೇಶವೇನು?
  • ಈ ಬಗ್ಗೆ ಸಂಪೂರ್ಣ ವಿವರ ನೀಡಿ: ಅಧಿಕಾರಿಗಳಿಗೆ ಕೇಂದ್ರ ಸಚಿವ ಜೋಶಿ ಆದೇಶ

ನವದೆಹಲಿ )ಜೂ.21): ಕರ್ನಾಟಕ ಸರ್ಕಾರ ಪಡಿತರಕ್ಕೆ ‘ಜಾತಿ ಪ್ರಮಾಣ ಪತ್ರ’ ಲಿಂಕ್‌ ಮಾಡುವುದು ಕಾನೂನು ಬಾಹಿರ ಕ್ರಮವಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿರುವುದಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಆಹಾರ ಭದ್ರತೆ ಒದಗಿಸುವಲ್ಲಿ ಯಾವುದೇ ಜಾತಿ ಲಿಂಕ್ ಮಾಡಲು ಸಾಧ್ಯವಿಲ್ಲ ಎಂದಿರುವ ಸಚಿವರು, ಕರ್ನಾಟಕ ಸರ್ಕಾರ ಪಡಿತರಕ್ಕೆ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಪಡೆಯುವ ಫಲಾನುಭವಿಗಳಿಂದ ರಾಜ್ಯದಲ್ಲಿ ಜಾತಿ ಪ್ರಮಾಣ ಪತ್ರ ಕೇಳಲಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವಲ್ಲಿ ಬದ್ಧತೆ ತೋರಿದೆ. ಯಾವುದೇ ಜಾತಿ, ಜನಾಂಗವೆಂದೆಣಿಸುತ್ತಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಪಡಿತರ ಪಡೆಯಲು ರಾಜ್ಯ ಸರ್ಕಾರ ಜಾತಿ ಪ್ರಮಾಣ ಪತ್ರ ಕಡ್ಡಾಯಗೊಳಿಸಿರುವುದು ನಿಜಕ್ಕೂ ದುರಂತವೇ ಸರಿ ಎಂದು ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

ಸಲ್ಲದ ನೀತಿ-ನಿಯಮ ಹೇರುವುದರ ಉದ್ದೇಶವೇನು?

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಅರ್ಹ ಫಲಾನುಭವಿಗಳಿಗೆ ಅವರ ಆರ್ಥಿಕ ಸ್ಥಿತಿ ಮತ್ತು ಅರ್ಹತೆ ಆಧಾರದ ಮೇಲೆ ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಆಧಾರ್, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಗಳ ಯಶಸ್ವಿ ಏಕೀಕರಣದ ಹೊರತಾಗಿಯೂ ಜಾತಿ ಪ್ರಮಾಣ ಪತ್ರ ಕಡ್ಡಾಯಗೊಳಿಸುವುದರ ಹಿಂದಿನ ಉದ್ದೇಶವೇನು? ಎಂದು ಸಚಿವರು ಪ್ರಶ್ನಿಸಿದ್ದಾರೆ.

ದೇಶದ ಯಾವುದೇ ಭಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಸಬ್ಸಿಡಿ ಆಹಾರ ಧಾನ್ಯ ಸುಲಭವಾಗಿ ಲಭ್ಯವಾಗುವಂತೆ ಕೇಂದ್ರ ಸರ್ಕಾರ ಈಗಾಗಲೇ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಉಪಕ್ರಮವನ್ನು ಪರಿಚಯಿಸಿದೆ. ಹೀಗಿರುವಾಗ ಸ್ಥಳೀಯವಾಗಿ ಸಲ್ಲದ ನೀತಿ ನಿಯಮ ಹೇರುವುದು ಕಡುಬಡವರು ಪಡಿತರ ಪಡೆಯುವ ಆಶಯಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಹಾರಧಾನ್ಯಕ್ಕೆ ಆಡಳಿತಾತ್ಮಕ ಕ್ರಮ ಅಡ್ಡಿಯಾಗಬಾರದು:

ದೇಶವಾಸಿಗಳಿಗೆ, ಅರ್ಹ ಫಲಾನುಭವಿಗಳಿಗೆ ಯಾವುದೇ ಅಡೆತಡೆ ಇಲ್ಲದಂತೆ ಆಹಾರ ಭದ್ರತೆ ಪ್ರಯೋಜನ ಕಲ್ಪಿಸುವುದು ಎಲ್ಲಾ ಸರ್ಕಾರಗಳ ಪ್ರಥಮ ಆದ್ಯತೆಯಾಗಿರಬೇಕು ಎಂದಿರುವ ಸಚಿವ ಜೋಶಿ, ಸಮಾಜದ ಬಡ ಮತ್ತು ಅರ್ಹ ವರ್ಗಗಳಿಗೆ ಆಹಾರ ಧಾನ್ಯ ತಲುಪುವಲ್ಲಿ ಯಾವುದೇ ಆಡಳಿತಾತ್ಮಕ ಕ್ರಮಗಳು ಅಡ್ಡಿಯಾಗಬಾರದು ಎಂದು ರಾಜ್ಯ ಸರ್ಕಾರಕ್ಕೆ ಸೂಚ್ಯವಾಗಿ ಚಾಟಿ ಬೀಸಿದ್ದಾರೆ.

ಕರ್ನಾಟಕದಲ್ಲಿ ಪಡಿತರ ಯೋಜನೆಗೆ ಜಾತಿ ಲಿಂಕ್‌ ಮಾಡುತ್ತಿರುವ ಬಗ್ಗೆ ಸಂಪೂರ್ಣ ವಿವರ ಪಡೆಯಲು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆಯಲು ಕಚೇರಿ ಉನ್ನತ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಪಿಡಿಎಸ್‌ನಲ್ಲಿ ಜಾತಿ ಪ್ರಮಾಣಪತ್ರ ಪಡೆಯುವುದು ಕಾನೂನುಬಾಹಿರ. ಮತ್ತಿದು ಸ್ಥಾಪಿತ ಮಾರ್ಗಸೂಚಿಗಳು ಮತ್ತು ಎಸ್‌ಒಪಿಗಳಿಗೆ ವಿರುದ್ಧವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.