Asianet Suvarna News Asianet Suvarna News

ಕೊರೊನಾ ಸಂಕಷ್ಟದಲ್ಲಿ ಸ್ವಾವಲಂಬಿ ಭಾರತದ ಹೊಸ ಮಂತ್ರ ಪಠಿಸಿದ ಮೋದಿ

ಮೋದಿಯವರ ದಿಟ್ಟಮತ್ತು ದೃಢ ನಾಯಕತ್ವದಿಂದ, ರಾಜ್ಯ ಸರ್ಕಾರಗಳು ಒಂದು ತಂಡವಾಗಿ ಕೆಲಸ ಮಾಡುತ್ತಿರುವುದರಿಂದ ಕೊರೋನಾ ಬಿಕ್ಕಟ್ಟನ್ನು ವಿಶ್ವದ ಇತರ ದೇಶಗಳಿಗಿಂತ ಭಾರತವು ಉತ್ತಮವಾಗಿ ನಿಭಾಯಿಸಿದೆ. ಮೋದಿ ಸರ್ಕಾರ ತೋರಿಸಿರುವ ಧೈರ್ಯ ಮತ್ತು ಸಹಾನುಭೂತಿ ಖಂಡಿತವಾಗಿಯೂ ಈ ಬಿಕ್ಕಟ್ಟನಿಂದ ಹೊರಬರಲು ನಮಗೆ ಸಹಾಯ ಮಾಡುತ್ತದೆ.

Interview with Union Minister Ravishankar Prasad on PM Narendra Modi govt 2 completing year
Author
Bengaluru, First Published May 30, 2020, 3:24 PM IST

ನರೇಂದ್ರ ಮೋದಿಯವರು ಜಾಗತಿಕ ಮಟ್ಟದಲ್ಲಿ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವುದು ಭಾರತದ ಪ್ರಜಾಸತ್ತೆಯಲ್ಲಿ ಮಹತ್ವದ ಮೈಲಿಗಲ್ಲು. 2014ರಲ್ಲಿ ಅವರ ನೇತೃತ್ವದಲ್ಲಿ ಸ್ವತಃ ಬಿಜೆಪಿಯೇ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತು ಎನ್‌ಡಿಎ ಭಾರಿ ಬಹುಮತ ಪಡೆದವು. ಭಾರತದಲ್ಲಿ ಇಂತಹ ಒಂದು ಗೆಲುವು 30 ವರ್ಷಗಳ ನಂತರ ಬಂದಿತು.

ನಮ್ಮ ಸರ್ಕಾರದ ಮೊದಲ ಅವಧಿಯು ಸುಧಾರಣೆ, ಸಾಧನೆ ಮತ್ತು ರೂಪಾಂತರಕ್ಕಾಗಿ ಕೆಲವು ದೂರದೃಷ್ಟಿಯ ಕ್ರಮಗಳನ್ನು ಜಾರಿ ಮಾಡಿತು. ಜನಸಾಮಾನ್ಯರ ಸೇರ್ಪಡೆ ಮತ್ತು ಸಬಲೀಕರಣ ಅದರಲ್ಲಿ ಬಹುಮುಖ್ಯವಾಗಿತ್ತು. ಅದು ಡಿಜಿಟಲ್ ಇಂಡಿಯಾ ಮೂಲಕ ತಂತ್ರಜ್ಞಾನವನ್ನು ಬಳಕೆ ಮಾಡುವುದಿರಬಹುದು, JAM  ಟ್ರಿನಿಟಿ ಮೂಲಕ ಹಣಕಾಸು ಸೇರ್ಪಡೆಯ ಪ್ರಯತ್ನಗಳಿರಬಹುದು, ಸ್ವಚ್ಛ ಭಾರತ ಅಭಿಯಾನದ ಮೂಲಕ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಸುಧಾರಿಸುವ ಜನಾಂದೋಲನವಾಗಿರಬಹದು ಮತ್ತು ಆಯುಷ್ಮಾನ್‌ ಭಾರತದಂತಹ ಕಾರ್ಯಕ್ರಮಗಳ ಮೂಲಕ ಆರೋಗ್ಯ ಸೇವೆಗಳ ಸುಧಾರಣೆಯಾಗಿರಬಹುದು. ಭಾರತದ ಕಾರ್ಯತಂತ್ರ ಮತ್ತು ಭದ್ರತೆಯ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಮೋದಿ ದಿಟ್ಟತನದ ಮತ್ತು ಸಂಕಲ್ಪದ ನಾಯಕರಾಗಿ ಹೊರಹೊಮ್ಮಿದರು. ಪರಿಣಾಮ, ಭಾರತವು ಜಾಗತಿಕವಾಗಿ ಗಟ್ಟಿತನವಿರುವ ದೇಶವೆಂದು ಪರಿಗಣಿಸಲ್ಪಟ್ಟಿತು.

ಜಗತ್ತೇ ಮೆಚ್ಚುವಂತೆ ದೇಶ ಮುನ್ನಡೆಸುತ್ತಿರುವ ಮೋದಿ: ಪ್ರಧಾನಿ ಬಗ್ಗೆ ಮುನಿಸ್ವಾಮಿ ಮಾತು

2019ರ ಚುನಾವಣೆಯಲ್ಲಿ ವಿರೋಧಿಗಳ ನಿಂದನೆಗಳ ಹೊರತಾಗಿಯೂ ಬಿಜೆಪಿಗೆ ಬಹು ದೊಡ್ಡ ಬಹುಮತ ನೀಡುವ ಮೂಲಕ ಭಾರತದ ಜನತೆ ಮತ್ತೊಮ್ಮೆ ಮೋದಿಯವರಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಆಧಾರದ ಮೇಲೆ ಇಷ್ಟುದೊಡ್ಡ ಮಟ್ಟದಲ್ಲಿ ಮರು ಆಯ್ಕೆಯಾದ ವಿದ್ಯಮಾನ ಕಳೆದ ಅರವತ್ತು ವರ್ಷಗಳಲ್ಲಿ ನಡೆದಿರಲಿಲ್ಲ.

1 ವರ್ಷದ ಮಹತ್ವದ ಕೊಡುಗೆಗಳು

ಈ ಹೊಸ ಮತ್ತು ಬೃಹತ್‌ ಜನಾದೇಶದೊಂದಿಗೆ ಮೋದಿಯವರ ವರ್ಚಸ್ವಿ ನಾಯಕತ್ವದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮತ್ತಷ್ಟುದಿಟ್ಟಸುಧಾರಣೆಗಳು ಮತ್ತು ಬಡವರ ಪರವಾದ ಯೋಜನೆಗಳನ್ನು ಕೈಗೊಂಡಿತು. ಪ್ರತಿ ವರ್ಷ 6,000 ರು.ಗಳನ್ನು ನೀಡುವ ಪಿಎಂ ಕಿಸಾನ್‌ ಯೋಜನೆಯನ್ನು ಎಲ್ಲಾ ವರ್ಗದ ರೈತರಿಗೆ ವಿಸ್ತರಿಸಲಾಯಿತು. ರೈತರು, ಕಾರ್ಮಿಕರು, ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಲು ಪಿಂಚಣಿ ಯೋಜನೆಗಳನ್ನು ಸಹ ಪ್ರಾರಂಭಿಸಲಾಯಿತು.

ಭಾರತದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್‌ ನೀಡಿರುವುದು, 8 ಕೋಟಿ ಕುಟುಂಬಗಳಿಗೆ ಸಬ್ಸಿಡಿ ಎಲ್ಪಿಜಿ ಸಂಪರ್ಕವನ್ನು ಒದಗಿಸಿರುವುದು ಮತ್ತು ಎಲ್ಲರ ಸೇರ್ಪಡೆಗಾಗಿ ಡಿಜಿಟಲ… ಇಂಡಿಯಾ ಕಾರ್ಯಕ್ರಮ ನಮ್ಮ ಸರ್ಕಾರದ ಕೆಲವು ಪ್ರಮುಖ ಸಾಧನೆಗಳು.  ಟ್ರಿನಿಟಿ- ಜನಧನ್‌ ಆಧಾರ್‌ ಮೊಬೈಲ್ ಮತ್ತು ನೇರ ನಗದು ವರ್ಗಾವಣೆ ವೇದಿಕೆಗಳು ನಿಜವಾಗಿಯೂ ಪ್ರಯೋಜನಗಳನ್ನು ಬಡವರಿಗೆ ವರ್ಗಾಯಿಸುವ ವಿಧಾನವನ್ನು ಸುಧಾರಿಸಿವೆ. 435 ಯೋಜನೆಗಳಲ್ಲಿ 11 ಲಕ್ಷ ಕೋಟಿ ರು.ಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದರಿಂದ ಮಧ್ಯವರ್ತಿಗಳು ಮತ್ತು ನಕಲಿ ಬಳಕೆದಾರರ ಜೇಬಿಗೆ ಹೋಗುತ್ತಿದ್ದ 1.70 ಲಕ್ಷ ಕೋಟಿ ರು.ಗಳನ್ನು ಉಳಿತಾಯ ಮಾಡಲಾಗಿದೆ.

ಸಂಸದರ ಜತೆಗೆ ಮೋದಿ ಒಡನಾಟ ಬೆಸ್ಟ್‌, ಖುದ್ದು ಭೇಟಿ ಮಾಡ್ಬೇಕಂದ್ರೆ ಮನೆಗೇ ಕರೀತಾರೆ ಪ್ರಧಾನಿ

370ನೇ ವಿಧಿಯ ರದ್ದತಿ, ತ್ರಿವಳಿ ತಲಾಖ್‌ ನಿಷೇಧ ಹಾಗೂ ದಂಡನಾರ್ಹ ಕಾನೂನಿನ ಅಂಗೀಕಾರ ಮತ್ತು ನೆರೆಯ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾನೂನುಗಳು ಐತಿಹಾಸಿಕ ಕ್ರಮಗಳಾಗಿವೆ. ಆರ್ಥಿಕತೆಯ ದೃಷ್ಟಿಯಿಂದ ಭಾರತವು ವಿದೇಶಿ ನೇರ ಹೂಡಿಕೆದಾರರಿಗೆ ನೆಚ್ಚಿನ ತಾಣವಾಯಿತು. ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌ ಸೂಚ್ಯಂಕದಲ್ಲಿ 2014ರಲ್ಲಿದ್ದ 142ನೇ ಸ್ಥಾನದಿಂದ 2019ರಲ್ಲಿ 63 ನೇ ಸ್ಥಾನಕ್ಕೆ ತನ್ನ ಶ್ರೇಯಾಂಕವನ್ನು ಗಮನಾರ್ಹವಾಗಿ ಸುಧಾರಿಸಿಕೊಂಡಿತು. ವಿಶ್ವದ ಎರಡನೇ ಅತಿದೊಡ್ಡ ಮೊಬೈಲ… ಫೋನ್‌ ತಯಾರಕ ರಾಷ್ಟ್ರವಾಗುವ ಮೂಲಕ ಪ್ರಮುಖ ಎಲೆಕ್ಟ್ರಾನಿಕ್ಸ್‌ ತಯಾರಕ ದೇಶವಾಗಿ ಹೊರಹೊಮ್ಮಿತು.

ಕೊರೋನಾ ಸವಾಲಿಗೆ ದಿಟ್ಟಉತ್ತರ

ನಂತರ ಕೋವಿಡ್‌-19 ರೂಪದಲ್ಲಿ ಅತ್ಯಂತ ಸವಾಲಿನ ಸಂದರ್ಭ ಎದುರಾಯಿತು. ಈ ಸಂದರ್ಭದಲ್ಲಿ ಮೋದಿ ಅನುಕರಣೀಯವಾದ ಧೈರ್ಯ, ಸಹಾನುಭೂತಿ ಮತ್ತು ಬದ್ಧತೆಯನ್ನು ತೋರಿಸಿದರು. ಈ ಸಾಂಕ್ರಾಮಿಕ ರೋಗಕ್ಕೆ ಇದುವರೆಗೆ ಯಾವುದೇ ಲಸಿಕೆ ಲಭ್ಯವಿಲ್ಲ. ಆದ್ದರಿಂದ ಅದರ ಹರಡುವಿಕೆಯನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ಲಾಕ್ಡೌನ್‌. ಕೋವಿಡ್‌-19ರಿಂದ ಬಾಧಿತವಾದ ಹದಿನೈದು ಪ್ರಮುಖ ದೇಶಗಳ (ಚೀನಾ ಹೊರತುಪಡಿಸಿ) ಜನಸಂಖ್ಯೆ 142 ಕೋಟಿ ಮತ್ತು ಈ ದೇಶಗಳಲ್ಲಿ ಸಾವಿನ ಸಂಖ್ಯೆ 3.07 ಲಕ್ಷಕ್ಕಿಂತ ಹೆಚ್ಚಿದ್ದರೆ, ಭಾರತದ ಜನಸಂಖ್ಯೆ 137 ಕೋಟಿ ಮತ್ತು ಸಾವಿನ ಸಂಖ್ಯೆ 4,534 ಎಂಬುದು ಗಮನಾರ್ಹವಾದುದು.

ಭಾರತದಲ್ಲಿ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಆರಂಭಿಕ ಹಂತಗಳಲ್ಲಿಯೇ ಪ್ರಧಾನಿಯೇ ಸ್ವತಃ ಮೂರು ತಿಂಗಳವರೆಗೆ 80 ಕೋಟಿ ಜನರಿಗೆ ಉಚಿತ ಪಡಿತರ, ಜನಧನ್‌ ಖಾತೆ ಹೊಂದಿರುವ 20 ಕೋಟಿ ಮಹಿಳೆಯರಿಗೆ ಹಣಕಾಸು ನೆರವು ಸೇರಿದಂತೆ ಬಡ ಮತ್ತು ಇತರ ದುರ್ಬಲ ಜನರಿಗೆ 1.70 ಲಕ್ಷ ಕೋಟಿ ರು.ಗಳ ಬೃಹತ್‌ ಪರಿಹಾರ ಘೋಷಿಸಿದರು. ನೇರ ನಗದು ವರ್ಗಾವಣೆಯ ಮೂಲಕ ತಲುಪಿಸಿರುವ ಒಟ್ಟು ಮೊತ್ತ 52,606 ಕೋಟಿ ರು.ಗಳಾಗಿದೆ.

ಮೋದಿಯದ್ದು ಜನಮೆಚ್ಚಿದ, ಜಗಮೆಚ್ಚಿದ ಆಡಳಿತ; ಸಂಸದ ನಳಿನ್‌ ಕುಮಾರ್‌ ಕಟೀಲ್

ಸ್ವಾವಲಂಬಿ ಭಾರತದ ಹೊಸ ಮಂತ್ರ

ನಂತರ ಪ್ರಧಾನಿ ಆತ್ಮನಿರ್ಭರ ಭಾರತ್‌ ಅಥವಾ ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ರು.ಗಳ ಬೃಹತ್‌ ಉತ್ತೇಜನಾ ಪ್ಯಾಕೇಜ್‌ ಘೋಷಿಸಿದರು. ಇದರಲ್ಲಿ ಸುಮಾರು 5.94 ಲಕ್ಷ ಕೋಟಿ ರು.ಗಳನ್ನು ಜನರಿಗೆ ಹೆಚ್ಚು ಉದ್ಯೋಗ ಒದಗಿಸುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ), ರಿಯಲ್ ಎಸ್ಟೇಟ್‌ ವಲಯ ಮತ್ತು ವಿದ್ಯುತ್‌ ವಿತರಣಾ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. ಅಲ್ಲದೆ, ಹೆಚ್ಚಿನ ಉದ್ಯಮಗಳಿಗೆ ಪ್ರಯೋಜನಗಳನ್ನು ವಿಸ್ತರಿಸಲು ಎಂಎಸ್‌ಎಂಇಗಳ ವ್ಯಾಖ್ಯಾನವನ್ನು ಪರಿಷ್ಕರಿಸಲಾಗಿದೆ.

3.16 ಲಕ್ಷ ಕೋಟಿ ರು.ಗಳನ್ನು ರೈತರು, ಗ್ರಾಮೀಣ ಆರ್ಥಿಕತೆ, ವಲಸೆ ಕಾರ್ಮಿಕರು, ನಗರಗಳ ಬಡವರು ಮತ್ತು ಮಧ್ಯಮ ವರ್ಗದ ಮನೆ ಖರೀದಿದಾರರಿಗೆ ಮೀಸಲಿಡಲಾಗಿದೆ. ಮುಂದಿನ ಎರಡು ತಿಂಗಳು ಬಡ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ 10,000 ರು. ಸುಲಭ ಸಾಲ ಇದರಲ್ಲಿ ಸೇರಿದೆ. ಇದಲ್ಲದೆ, ನಗರ ಮತ್ತು ಗ್ರಾಮೀಣ ಬಡವರ ಸಮಸ್ಯೆಗಳನ್ನು ವಿಶೇಷವಾಗಿ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹೆಚ್ಚುವರಿಯಾಗಿ 40,000 ಕೋಟಿ ರು.ಗಳನ್ನು ಒದಗಿಸಲಾಗಿದೆ.

ಕೃಷಿ ವಲಯಕ್ಕಾಗಿ ಸರ್ಕಾರವು ಫಾರ್ಮ್ ಗೇಟ್‌ ಕೃಷಿ ಮೂಲಸೌಕರ್ಯಕ್ಕಾಗಿ 1.63 ಲಕ್ಷ ಕೋಟಿ ರು.ಗಳನ್ನು ಘೋಷಿಸಿದೆ. ಇದಲ್ಲದೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ದೇಶಾದ್ಯಂತ ಎಲ್ಲಿಯಾದರೂ, ಯಾರಿಗಾದರೂ ಮಾರಾಟ ಮಾಡಲು ಅನುಮತಿ ನೀಡುವ, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಕಲ್ಪಿಸುವ ಸುಧಾರಣೆಗಳನ್ನು ತರಲಾಗಿದೆ.

'ಮೋದಿಜಿ ಬರೀ ವ್ಯಕ್ತಿಯಲ್ಲ; ದೊಡ್ಡ ಶಕ್ತಿ; ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಹರಿಕಾರ'

ಭಾರತೀಯ ಸೃಜನಶೀಲ ಮತ್ತು ಉದ್ಯಮಶೀಲತಾ ಸಾಮರ್ಥ್ಯಗಳನ್ನು ವೃದ್ಧಿಸಲು, ಆತ್ಮನಿರ್ಭರ ಚಳವಳಿಯನ್ನು ಪರಿಣಾಮಕಾರಿಯಾಗಿಸಲು ಮತ್ತು ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ದೀರ್ಘಕಾಲದಿಂದ ಬಾಕಿ ಇದ್ದ ಸುಧಾರಣೆಗಳನ್ನು ಪರಿಹರಿಸಲು ಕೋವಿಡ್‌-19ರ ಸವಾಲನ್ನು ಪ್ರಧಾನಿ ಬಳಸಿಕೊಂಡರು. ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿನ ದಿಟ್ಟಸುಧಾರಣೆಗಳು, ಭಾರತವನ್ನು ವಿಮಾನ ನಿರ್ವಹಣೆ ಮತ್ತು ಕೂಲಂಕಷ ಪರೀಕ್ಷಾ ಕೇಂದ್ರವನ್ನಾಗಿ ಮಾಡುವ ಮತ್ತು ರಕ್ಷಣಾ ಉತ್ಪಾದನೆಯಲ್ಲಿನ ಸುಧಾರಣೆಗಳು ಮತ್ತು ದೇಶೀಕರಣ ಇದರಲ್ಲಿ ಸೇರಿವೆ. ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗಾಗಿ ಎಲೆಕ್ಟ್ರಾನಿಕ್ಸ್‌ ತಯಾರಿಕಾ ಕ್ಷೇತ್ರಕ್ಕೆ ಈ ಹಿಂದೆ ಘೋಷಿಸಲಾದ 50,000 ಕೋಟಿ ರು. ಸಹ ಅದೇ ಉಪಕ್ರಮದ ಒಂದು ಭಾಗವಾಗಿದೆ.

ಸಂಕಷ್ಟದಲ್ಲಿ ನೂತನ ಆವಿಷ್ಕಾರಗಳು

ಕೋವಿಡ್‌-19 ಕುರಿತಂತೆಯೂ ಹೊಸ ಆವಿಷ್ಕಾರಗಳಲ್ಲಿ ದೊಡ್ಡ ಪ್ರಗತಿಯನ್ನು ಸಾಧಿಸಲಾಗಿದೆ. ರೋಗಪೀಡಿತ ವ್ಯಕ್ತಿಗಳ ಬಗ್ಗೆ ಎಚ್ಚರಿಸುವ ಮತ್ತು ಪತ್ತೆಹಚ್ಚುವ ಆರೋಗ್ಯ ಸೇತುವಿನಂತಹ ಪ್ಲಾಟ್‌ಫಾಮ್‌ರ್‍ಗಳು, ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿ ನೂತನ ಭಾರತೀಯ ಉತ್ಪನ್ನಗಳು ತಯಾರಾಗುತ್ತಿವೆ. ಮನೆಯಿಂದ ಕೆಲಸ ಮತ್ತು ಟೀವಿ ಚಾನೆಲ್‌ಗಳಲ್ಲೂ ಸೇರಿದಂತೆ ಡಿಜಿಟಲ್ ಶಿಕ್ಷಣವನ್ನು ಸಾಮಾನ್ಯ ಭಾರತೀಯರಿಗೆ ಅವಕಾಶಗಳನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ.

ಆಧಾರ್‌ ಆಧಾರಿತ ಪಾವತಿ ವ್ಯವಸ್ಥೆ ಬಳಸಿಕೊಂಡು ಎಟಿಎಂ ಅಥವಾ ಬ್ಯಾಂಕ್‌ ಶಾಖೆಗೆ ಭೇಟಿ ನೀಡದೆ ನಗದು ಹಿಂಪಡೆಯಲು ಭಾರತೀಯ ಅಂಚೆ ಇಲಾಖೆಯು ನೆರವಾಗಿದೆ. 92.81 ಲಕ್ಷ ವಹಿವಾಟುಗಳ ಮೂಲಕ 1,675 ಕೋಟಿ ರು.ಗಳ ನಗದು ಹಿಂಪಡೆಯುವಿಕೆಯನ್ನು ಅಂಚೆ ಇಲಾಖೆಯು ಜನರಿಗೆ ಕಲ್ಪಿಸಿದೆ.

ದೇಶಕ್ಕೆ ಕೂಡಿಬಂದಿದೆ ಹೊಸ ಕಾಲ

ನಿಜ, ವಲಸೆ ಕಾರ್ಮಿಕರ ಅವಸ್ಥೆ ನಿಜಕ್ಕೂ ತುಂಬಾ ನೋವಿನದಾಗಿದೆ. ಈ ನೋವನ್ನು ತಗ್ಗಿಸಲು ನಾವೆಲ್ಲರೂ ನಮ್ಮ ಕೈಲಾದಷ್ಟುಪ್ರಯತ್ನ ಮಾಡಬೇಕಾಗಿದೆ. ಉದ್ಯೋಗ ಖಾತ್ರಿ ನಿಧಿಗೆ ಹೆಚ್ಚಿನ ಹಂಚಿಕೆ, ಸುಮಾರು 3,500 ಶ್ರಮಿಕ್‌ ವಿಶೇಷ ರೈಲುಗಳನ್ನು ಅವರ ಸಂಚಾರಕ್ಕೆ ಒದಗಿಸಿರುವುದು, ಅವರ ತಪಾಸಣೆಗೆ ಮಾನವೀಯ ಅವಕಾಶಗಳು, ಕ್ವಾರಂಟೈನ್‌ ಸೌಲಭ್ಯಗಳು ಮತ್ತು ಉಚಿತ ಪಡಿತರವನ್ನು ಒದಗಿಸಲು ರಾಜ್ಯ ಸರ್ಕಾರಗಳಿಗೆ ಬೆಂಬಲ ನೀಡುವಂತಹ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೋವಿಡ್‌-19, ಕಳೆದ ಕಳೆದ ಹಲವು ವರ್ಷಗಳಲ್ಲಿ ಅನುಭವಿಸಿರದ ಹಿಮಾಲಯ ಪರ್ವತ ಸದೃಶ ಸಮಸ್ಯೆಗಳನ್ನು ತಂದೊಡ್ಡಿದೆ. ಮೋದಿಯವರ ದಿಟ್ಟಮತ್ತು ದೃಢ ನಾಯಕತ್ವದಿಂದ, ರಾಜ್ಯ ಸರ್ಕಾರಗಳು ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ಈ ಬಿಕ್ಕಟ್ಟನ್ನು ವಿಶ್ವದ ಇತರ ದೇಶಗಳಿಗಿಂತ ಭಾರತವು ಉತ್ತಮವಾಗಿ ನಿಭಾಯಿಸಿದೆ. ನರೇಂದ್ರ ಮೋದಿ ಸರ್ಕಾರ ತೋರಿಸಿರುವ ಧೈರ್ಯ ಮತ್ತು ಸಹಾನುಭೂತಿ ಖಂಡಿತವಾಗಿಯೂ ಈ ಬಿಕ್ಕಟ್ಟನಿಂದ ಹೊರಬರಲು ನಮಗೆ ಸಹಾಯ ಮಾಡುತ್ತದೆ. ಈ ಸವಾಲು ದೇಶಕ್ಕೆ ದೊಡ್ಡ ಅವಕಾಶವನ್ನೂ ಸೃಷ್ಟಿಸುವ ಭರವಸೆ ನಮಗೆ ಇದೆ. ಭಾರತಕ್ಕೆ ಮಹತ್ವದ ಕಾಲ ಕೂಡಿ ಬಂದಿದೆ.

- ರವಿಶಂಕರ್‌ ಪ್ರಸಾದ್‌

ಕೇಂದ್ರ ಸಚಿವ, ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ಸ್‌, ಐಟಿ ಮತ್ತು ಸಂಪರ್ಕ

Follow Us:
Download App:
  • android
  • ios