ಆಪರೇಷನ್ ಸಿಂದೂರದಲ್ಲಿ ಭಾರತ ಬಳಸಿದ ನಿಖರ ದಾಳಿ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳು ವಿಶ್ವದ ಗಮನ ಸೆಳೆದಿವೆ. ಈ ಯುದ್ಧದಲ್ಲಿ ಬಳಸಲಾದ ದೇಶೀಯ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳು ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದು ವಿದೇಶಗಳಿಂದ ಬೇಡಿಕೆ ಹೆಚ್ಚಾಗಿದೆ.
ಪಿಟಿಐ ನವದೆಹಲಿ: ಯುದ್ಧೋತ್ಸಾಹದಲ್ಲಿ ಗಡಿಯತ್ತ ಹೆಜ್ಜೆ ಹಾಕಿದ್ದ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವ ರೀತಿ ಪೆಟ್ಟು ಕೊಟ್ಟಿದ್ದೂ ಅಲ್ಲದೆ, ಪಾಕ್ ರಾಜಧಾನಿ, ಸೇನಾ ಕೇಂದ್ರ ಕಚೇರಿಯ ಬಳಿಯೇ ನುಗ್ಗಿ ಹೊಡೆದ ಭಾರತೀಯ ಸೇನಾ ಪಡೆಯ ಶಸ್ತ್ರಾಸ್ತ್ರಗಳು ಈಗ ಇಡೀ ವಿಶ್ವದ ಗಮನ ಸೆಳೆಯುತ್ತಿವೆ.
ಭಾರತದ ನಿಖರ ದಾಳಿ ತಂತ್ರಜ್ಞಾನ ಜಗತ್ತಿಗೇ ದರ್ಶನ!
ಪಾಕಿಸ್ತಾನದ ಮೇಲೆ 'ಆಪರೇಷನ್ ಸಿಂದೂರ' ಹೆಸರಿನಲ್ಲಿ ಭಾರತ ಪ್ರತೀಕಾರವನ್ನೇನೋ ತೀರಿಸಿಕೊಂಡಿದೆ. ಆದರೆ ಈ ಸಮರದಲ್ಲಿ ಅಮೆರಿಕ, ಇಸ್ರೇಲ್ನಂತಹ ಕೆಲವೇ ದೇಶಗಳು ಹೊಂದಿರುವ ನಿಖರ ದಾಳಿ ಮಾಡುವ ಹಾಗೂ ಎದುರಾಳಿಗಳ ಕ್ಷಿಪಣಿ, ಡ್ರೋನ್ ಹೊಡೆದು ಹಾಕುವ ಯುದ್ಧ ತಂತ್ರಜ್ಞಾನವನ್ನು ಭಾರತ ಸಿದ್ಧಿಸಿಕೊಂಡಿದೆ ಎಂಬ ಸಂದೇಶ ವಿಶ್ವಕ್ಕೆ ಪಸರಿಸಿದೆ. ಈ ಯುದ್ಧದಿಂದ ಭಾರತದ ಶಕ್ತಿ ಜಗತ್ತಿನ ಮುಂದೆ ಸಾಬೀತಾಗಿವೆ.
ಪಾಕ್ ಉಗ್ರರ ನೆಲೆಗಳನ್ನು ಅತ್ಯಂತ ನಿಖರ (ಪ್ರಿಸಿಷನ್) ದಾಳಿ ಮೂಲಕ ಭಾರತ ಹೊಡೆದು ಹಾಕಿದೆ. ತಾನು ಎಲ್ಲಿ ದಾಳಿ ಮಾಡಬೇಕಿತ್ತೋ ಅಲ್ಲೇ ದಾಳಿ ಮಾಡಿದೆ. ಗೊತ್ತು ಗುರಿ ಇಲ್ಲದೆ ಬಾಂಬ್ ಗಳ ಸುರಿಮಳೆಗೈದಿಲ್ಲ. ಎಲ್ಲ ದೇಶಗಳ ಬಳಿಯೂ ಇಂತಹ ತಂತ್ರಜ್ಞಾನ ಇಲ್ಲ. ಭಾರತದ ಬಳಿ ಇದೆ. ಎಂದು ಬಹುತೇಕರಿಗೆ ಗೊತ್ತೇ ಇರಲಿಲ್ಲ.
ಈ ನಿಖರತೆ ಪಾಕಿಸ್ತಾನದ ಏರ್ ಬೇಸ್ಗಳ ಮೇಲಿನ ದಾಳಿ ಗಮನಿಸಿದರೆ ತಿಳಿಯುತ್ತದೆ. ವಾಯುನೆಲೆಗಳ ರನ್ ವೇಯ ಮೂರನೇ ಒಂದು ಭಾಗವನ್ನು ನಿಖರವಾಗಿ ಗುರುತಿಸಿ ದಾಳಿ ಮಾಡಿದರೆ ಅಲ್ಲಿ ವಿಮಾನ ಟೇಕಾಫ್, ಲ್ಯಾಂಡಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ದಾಳಿಯನ್ನು ಭಾರತ ಮಾಡಿ ತೋರಿಸಿದೆ. ಎಲ್ಲೋ ಒಂದು ಕಡೆ ಬಾಂಬ್ ಹಾಕಿದ್ದರೆ ವಿಮಾನ ಇಳಿಸಲು, ಹಾರಿಸಲು ಪಾಕ್ಗೆ ಸಮಸ್ಯೆಯೇ ಆಗುತ್ತಿರಲಿಲ್ಲ.
ಹಮಾಸ್ ಉಗ್ರರು ರಾಕೆಟ್, ಕ್ಲಿಪಣಿ ದಾಳಿ ನಡೆಸಿದಾಗ ಎಲ್ಲವನ್ನೂ ಹೊಡೆದು ಹಾಕಿ ಇಡೀ ವಿಶ್ವವನ್ನೇ ಇಸ್ರೇಲ್ ಚಿಕಿತಗೊಳಿಸಿತ್ತು. ಆದರೆ ಈಗ ಇಸ್ರೇಲ್ ಗಿಂತ ಅತ್ಯಂತ ಕರಾರುವಾಕ್ಕಾದ ವಾಯು ರಕ್ಷಣಾ ವ್ಯವಸ್ಥೆ ಭಾರತದ ಬಳಿ ಇದೆ. ಪಾಕಿಸ್ತಾನ 700 ಡ್ರೋನ್, ಕ್ಷಿಪಣಿ ಹಾರಿಸಿದರೂ ಒಂದರಿಂದಲೂ ಭಾರತಕ್ಕೆ ಘೋರ ಹಾನಿಯಾಗಿಯೇ ಇಲ್ಲ ಎಂಬುದು ಇದನ್ನು ನಿರೂಪಿಸುತ್ತದೆ.
ಭಾರತದ ಬಳಿ ಇರುವ ಬ್ರಹ್ಮೋಸ್ ಸೂಪರ್ಸಾನಿಕ್ ಅಸ್ತ್ರ ಪಾಕಿಸ್ತಾನದ ನೆಲೆಗಳಿಗೆ ನುಗ್ಗಿ ಹೊಡೆದಿದೆ. ಒಮ್ಮೆ ಉಡಾವಣೆಯಾದರೆ ಇದನ್ನು ಪಾಕಿಸ್ತಾನ ಬಿಡಿ, ವಿಶ್ವದ ಯಾವ ದೇಶವೂ ತಡೆಯಲು ಆಗದು.
ಕೇವಲ ಮೂರೇ ದಿನಗಳಲ್ಲಿ ಕದನ ವಿರಾಮ ಕೋರಿ ಜಾಗತಿಕ ಸಮುದಾಯ ಮತ್ತು ಭಾರತದ ಮುಂದೆ ಪಾಕ್ ಅಂಗಲಾಚುವಂತೆ ಮಾಡಿದ ಭಾರತೀಯ ಸೇನೆಯ ಪರಾಕ್ರಮ ಮತ್ತು ಅದಕ್ಕೆ ಕಾರಣವಾದ ಅದರ ಶಸ್ತ್ರಾಸ್ತ್ರದ ಬಲದ ಕುರಿತು ಈಗ ಎಲ್ಲೆಡೆ ಚರ್ಚೆ ಆರಂಭವಾಗಿದೆ. ಜೊತೆಗೆ ಇದುವರೆಗೂ ತಮ್ಮ ಶಸ್ತ್ರಾಸ್ತ್ರ ಬೇಡಿಕೆಗಳಿಗಾಗಿ ಅಮೆರಿಕ, ರಷ್ಯಾ, ಇಸ್ರೇಲ್, ಚೀನಾಗಳತ್ತ ಮುಖ ಮಾಡುತ್ತಿದ್ದ ಜಾಗತಿಕ ಸಮುದಾಯ ಇದೀಗ ಭಾರತದ ರಕ್ಷಣಾ ವಲಯದಲ್ಲಿ ಗಮನ ಹರಿಸಿವೆ ಎನ್ನಲಾಗಿದೆ.
ಈ ಹಿಂದೆ ಪಾಕಿಸ್ತಾನದ ವಿರುದ್ದ ಭಾರತ ಹಲವು ಭಾರಿ ಯುದ್ಧ ಮಾಡಿತ್ತಾದರೂ, ಆಗ ಬಹುತೇಕ ವಿದೇಶಿ ನಿರ್ಮಿತ ಅಸ್ತ್ರಗಳ ಬಳಕೆ ಮಾಡಿತ್ತು. ಆದರೆ ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ಉಗ್ರ ನೆಲೆಗಳು ಮತ್ತು ಪಾಕ್ ಸೇನಾನೆಲೆಗಳನ್ನು ಗುರಿಯಾಗಿ ನಡೆಸಿದ ದಾಳಿಗೆ ಮತ್ತು ಪಾಕ್ ದಾಳಿ ತಡೆಯಲು ಭಾರತೀಯ ಸೇನೆ ಬಹುತೇಕ ದೇಶೀಯ ಶಸ್ತ್ರಾಸ್ತ್ರಗಳನ್ನೇ ಬಳಸಿದೆ.
ಒಂದೆಡೆ ಪಾಕಿಸ್ತಾನ ಭಾರತದತ್ತ ಹಾರಿಬಿಟ್ಟ ಕ್ಷಿಪಣಿ, ಡ್ರೋನ್ಗಳನ್ನು ಸ್ವದೇಶಿ ವಾಯು ರಕ್ಷಣಾ ವ್ಯವಸ್ಥೆಯಾದ ಆಕಾಶ್ ತಡೆ ಹಿಡಿದು ಗಡಿಯಲ್ಲೇ ಹೊಡೆದುರುಳಿಸಿದರೆ, ಮತ್ತೊಂದೆಡೆ ಸ್ಕೈ ಸ್ಟೈಕರ್, ನೇತ್ರ ಇತ್ಯಾದಿ ಡ್ರೋನ್ಗಳು ವೈರಿದೇಶದೊಳಗೆ ನುಗ್ಗಿ ವಿಧ್ವಂಸ ಸೃಷ್ಟಿಸುತ್ತಿವೆ. ಇದರಿಂದ, ಇಷ್ಟು ವರ್ಷ ಶಸ್ತ್ರಾಸ್ತ್ರಗಳಿಗಾಗಿ ಅಮೆರಿಕ, ಚೀನಾ, ರಷ್ಯಾ, ಇಸ್ರೇಲ್ನಂತಹ ದೇಶಗಳತ್ತ ನೋಡುತ್ತಿದ್ದ ಕೆಲ ದೇಶಗಳು ಇದೀಗ ಭಾರತದ ಕಡೆ ಮುಖ ಮಾಡತೊಡಗಿವೆ.
ಈ ಬಗ್ಗೆ ಮಾತನಾಡಿರುವ ಡ್ರೋನ್ ಉತ್ಪಾದಕ ಐಡಿಯಾ ರ್ಫೋರ್ಜ್ ಟೆಕ್ನಾಲಜಿಯ ಉಪಾಧ್ಯಕ್ಷ ವಿಶಾಲ್ ಸಕ್ಷೇನಾ, 'ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಒಂದೆರಡು ದಿನಗಳಲ್ಲಿ ಸಾಧ್ಯವಿಲ್ಲ. ಇಂದಿನ ಸ್ಥಿತಿಯಲ್ಲಿ, ವಿದೇಶಿ ತಂತ್ರಜ್ಞಾನದ ಮೇಲೆ ಅವಲಂಬಿತ ರಾಗುವುದು ದುರ್ಬಲತೆಯಾಗಿದೆ. ಗುಪ್ತಚರ ಮಾಹಿತಿ, ಕಣ್ಗಾವಲಿಗಾಗಿ ಇರುವ ನಮ್ಮ ಡ್ರೋನ್ಗಳನ್ನು ಆಪರೇಷನ್ ಸಿಂದೂರದಲ್ಲಿ ಬಳಸಲಾಗುತ್ತಿದೆ. ಅವುಗಳ ಅಗತ್ಯತೆಯನ್ನು ಪೂರೈಸಲು ಉತ್ಪಾದನೆ ಹೆಚ್ಚಿಸಲಾಗಿದೆ' ಎಂದು ಹೇಳಿದ್ದಾರೆ.


