ರೈಲು ಸೇವೆ ರದ್ದು: ಜೂನ್ 30ರವರೆಗಿನ ಎಲ್ಲಾ ಟಿಕೆಟ್ ಕ್ಯಾನ್ಸಲ್!
ರೈಲು ಸೇವೆ ಸ್ಥಗಿತಗೊಳಿಸಿದ ಭಾರತೀಯ ರೈಲ್ವೇ| ಪ್ರಯಾಣಿಕರು ಕಾಯ್ದಿರಿಸಿದ್ದ ಟಿಕೆಟ್ ಕ್ಯಾನ್ಸಲ್| ಪ್ರಯಾಣಿಕರ ಟಿಕೆಟ್ ಹಣ ಮರು ಪಾವತಿಸುವುದಾಗಿ ಹೇಳಿದ ಭಾರತೀಯ ರೈಲ್ವೆ ಇಲಾಖೆ
ನವದೆಹಲಿ(ಮೇ.14): ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಪ್ರಯಾಣಿಕ ರೈಲು ಸೇವೆಯನ್ನು ಜೂನ್ 30ರವರೆಗೆ ರದ್ದುಗೊಳಿಸಿದೆ. ಇದರ ಅನ್ವಯ ಈಗಾಗಲೇ ಮುಂಗಡವಾಗಿ ಕಾಯ್ದರಿಸಿದ ಎಲ್ಲ ಪ್ರಯಾಣಿಕ ರೈಲು ಟಿಕೆಟ್ಗಳನ್ನು ಇಲಾಖೆ ಕ್ಯಾನ್ಸಲ್ ಮಾಡಿದೆ.
ಈ ಸಂಬಂಧ ಭಾರತೀಯ ರೈಲ್ವೆ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಎಕ್ಸ್ಪ್ರೆಸ್, ಲೋಕಲ್, ಸಬರ್ಬನ್, ಮೇಲ್ ಸೇವೆಗಳು ಸೇರಿದಂತೆ ಪ್ರಯಾಣಿಕರ ರೈಲು ಸಂಚಾರ ಆರಂಭ ಮುಂದೂಡಲಾಗಿದೆ. ಮುಂಗಡ ಟಿಕೆಟ್ ರದ್ದುಗೊಂಡಿರುವ ಎಲ್ಲ ಪ್ರಯಾಣಿಕರಿಗೆ ರಿಫಂಡ್ ಮಾಡಲಾಗುವುದು ಎಂದು ತಿಳಿಸಿದೆ.
ರಾಜ್ಯದ 14 ರೈಲ್ವೆ ಸ್ಟೇಷನಲ್ಲಿ ಸೋಂಕಿತರಿಗೆ ಟ್ರೀಟ್ಮೆಂಟ್: ಎಲ್ಲೆಲ್ಲಿ?
ಹೀಗಿದ್ದರೂ ಲಾಕ್ಡೌನ್ನಿಂದಾಗಿ ದೇಶದ ವಿವಿದೆಡೆ ಸಿಲುಕಿರುವ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕರೆದೊಯ್ಯುವ ಶ್ರಮಿಕ್ ಸ್ಪೆಷಲ್ ರೈಲುಗಳ ಓಡಾಟ ಮುಂದುವರೆಯಲಿದೆ. ಹೀಗಾಗಿ ಕಾರ್ಮಿಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲವೆಂದೂ ಇಲಾಖೆ ತಿಸ್ಪಷ್ಟಪಡಿಸಿದೆ.
ಪಿಟಿಐ ವರದಿ ಅನ್ವಯ ಕಳೆದ ತಿಂಗಳು ಲಾಕ್ಡೌನ್ ಜಾರಿಗೊಳ್ಳುವುದಕ್ಕೂ ಮೊದಲೇ 94 ಲಕ್ಷ ಟಿಕೆಟ್ ಬುಕ್ಕಿಂಗ್ ಮಾಡಲಾಗಿದ್ದು, ಇವೆಲ್ಲವನ್ನೂ ರದ್ದುಗೊಳಿಸಿದ್ದ ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಸುಮಾರು 1,490 ಕೋಟಿ ರೂ. ಮರು ಪಾವತಿಸಿತ್ತು. ಇದಾದ ಬಳಿಕ ಮಾರ್ಚ್ 22ರಿಂದ ಏಪ್ರಿಲ್ 14ರ ನಡುವೆ ಯೋಜಿಸಲಾದ ಪ್ರಯಾಣಕ್ಕಾಗಿ 830 ಕೋಟಿ ರೂ.ಗಳನ್ನು ರಿಫಂಡ್ ಮಾಡಿದೆ.
ಇನ್ನು ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೊಳಿಸುವ ಮೂರು ದಿನನ ಮೊದಲೇ ಅಂದರೆ ಮಾರ್ಚ್ 22ರಂದು ಎಲ್ಲ ಪ್ರಮಾಣಿಕ ರೈಲು ಸೇವೆಗಳನ್ನು ರದ್ದುಗೊಳಿಸಿತ್ತು ಎಂಬುವುದು ಉಲ್ಲೇಖನೀಯ.
ರೈಲು ಸೇವೆ ಪುನರಾರಂಭಿಸುವ ಯೋಜನೆ ಘೋಷಿಸಲಾಗಿತ್ತು
ಇನ್ನು ಮೂರನೇ ಹಂತದ ಲಾಕ್ಡೌನ್ ಅಂತ್ಯಗೊಳ್ಳುತ್ತಿರುವ ಹಿನ್ನೆಲೆ ಭಾನುವಾರ ಪ್ರಯಾಣಿಕ ರೈಲುಗಳನ್ನು ಹಂತ ಹಂತವಾಗಿ ಪುನರಾರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮೂರನೇ ಹಂತದ ಲಾಕ್ಡೌನ್ ಮುಗಿಯುವ ಮೊದಲೇ ನಿರ್ದಿಷ್ಟ ತಾಣಗಳಿಗೆ ಪ್ರಯಾಣಿಕ ರೈಲು ಸೇವೆ ಪ್ರಾರಂಭಿಸಿತ್ತು. ಈ ಮೂಲಕ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಸರಕಾರ ಪ್ರಯತ್ನಿಸಿತ್ತು.
ಪ್ರಯಾಣಿಕರಿಗೆ ನಿಯಮಿತ ರೈಲು ಓಡಾಟ; ಇಲ್ಲಿದೆ ಟ್ರೈನ್ ವೇಳಾಪಟ್ಟಿ ವಿವರ!
ಅಲ್ಲದೇ ವಿಶೇಷ ರೈಲುಗಳು ಮಂಗಳವಾರ ದೇಶದ15 ಪ್ರಮುಖ ನಗರಗಳಿಗೆ ಹೊರಟಿದ್ದವು. ರಾಷ್ಟ್ರ ರಾಜಧಾನಿ ದಿಲ್ಲಿಯಿಂದ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಜಮ್ಮು, ಜಾರ್ಖಂಡ್, ಅಸ್ಸಾಂ, ಬಿಹಾರ, ಒಡಿಶಾ ಮುಂತಾದ ಪ್ರಮುಖ ರಾಜ್ಯಗಳಿಗೆ ಪ್ರಯಾಣಿಕರನ್ನು ಕರೆ ತಂದಿತ್ತು.