ಪಾಕ್ ಕಣ್ಣೆದುರೇ 105 ಅಡಿ ಎತ್ತರದಲ್ಲಿ ಹಾರಾಡಿದ ಭಾರತದ ತ್ರಿವರ್ಣ ಧ್ವಜ; ಸಲಾಂ ಹೇಳಿದ ಜನ, ಶತ್ರುಗಳ ನಿಗಾ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲೇ ಈ ಧ್ವಜ ಹಾರಾಡುತ್ತಿದೆ. ಇದರ ಹಿಂದಿನ ಶಕ್ತಿ ಯಾರು? 

ಜಮ್ಮು ಮತ್ತು ಕಾಶ್ಮೀರ (ಫೆ.23) : ಭಾರತ ಗಡಿಯಲ್ಲಿ ಹದ್ದಿನ ಕಣ್ಮಿಟ್ಟಿದೆ. ಶತ್ರುಗಳ ಚಲನವಲನ ಎಲ್ಲವನ್ನೂ ನಿಗಾ ಇಡುತ್ತಿದೆ. ಆಪರೇಶನ್ ಸಿಂದೂರ್ ಬಳಿಕ ಪಾಕಸ್ತಾನ ಕೊತ ಕೊತ ಕುದಿಯುತ್ತಿದ್ದರೂ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಇದೀಗ ಪಾಕಿಸ್ತಾನ ಮನೋಭಲವನ್ನು ಕುಗ್ಗಿಸುವಂತೆ, ಭಾರತದ ಧೈರ್ಯ, ಶೌರ್ಯವನ್ನು ಜಗತ್ತಿಗೆ ಸಾರುವಂತ ತ್ರಿವರ್ಣ ಧ್ವಜವೊಂದು ಹಾರಾಡುತ್ತಿದೆ. ಪಾಕಿಸ್ತಾನದ ಕಣ್ಣೆದುರೇ ಭಾರತದ ತ್ರಿವರ್ಣ ಧ್ವಜ 105 ಅಡಿ ಎತ್ತರದಲ್ಲಿ ಗರ್ವದಿಂದ ಹಾರಾಡುತ್ತಿದೆ. ಗಡಿ ನಿಯಂತ್ರಣ ರೇಖೆಯಿಂದ (LoC) ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಪೂಂಚ್ ಗಡಿಯ ಬನ್ವತ್ ಏಕತಾ ಸ್ಥಳದಲ್ಲಿ ಭಾರತೀಯ ಸೇನೆ ಈ ಬೃಹತ್ ಧ್ವಜವನ್ನು ಸ್ಥಾಪಿಸಿದೆ. ವಿಶೇಷವೆಂದರೆ, ಈ ಪ್ರದೇಶವು ಶತ್ರುಗಳ ನಿಗಾ ವ್ಯಾಪ್ತಿಯಲ್ಲೇ ಇದೆ.

ಏಕತೆಯ, ಧೈರ್ಯದ ಸಂಕೇತ

ಹಿಂದೆ 'ಆಪರೇಷನ್ ಸಿಂಧೂರ್' ವೇಳೆ ಪಾಕಿಸ್ತಾನ ಇದೇ ಗಡಿ ವ್ಯಾಪ್ತಿಯಲ್ಲಿ ನಡೆಸಿದ ಅತಿಕ್ರಮಣಕ್ಕೆ ಭಾರತ ತಕ್ಕ ಉತ್ತರ ನೀಡಿತ್ತು. ಇದೀಗ ಇದೇ ಜಾಗದಲ್ಲಿ ಹಾರಾಡುತ್ತಿರುವ ತ್ರಿವರ್ಣ ಧ್ವಜವು ದೇಶದ ಅಚಲ ಮನೋಭಾವ ಮತ್ತು ಗಡಿ ಜನರ ಧೈರ್ಯವನ್ನು ಜಗತ್ತಿಗೆ ಸಾರುತ್ತಿದೆ. ಇದರ ಜೊತೆಗೆ, ಧಾರ್ಮಿಕ ಸೌಹಾರ್ದತೆ ಮತ್ತು ಏಕತೆಯ ಸಂದೇಶ ಸಾರಲು 'ಏಕತಾ ಸ್ಥಳ'ವನ್ನು ನಿರ್ಮಿಸಲಾಗಿದೆ. ಇಲ್ಲಿ ಸರ್ವಧರ್ಮಗಳ ಚಿಹ್ನೆಗಳನ್ನು ಒಂದೆಡೆ ಸೇರಿಸಲಾಗಿದೆ. ಮಕ್ಕಳಿಗಾಗಿ ಸುಂದರವಾದ ಪಾರ್ಕ್ ಮತ್ತು ಏಕತಾ ಮಂಟಪವನ್ನೂ ಇಲ್ಲಿ ನಿರ್ಮಿಸಲಾಗಿದೆ.

ಈ ಪ್ರದೇಶದಲ್ಲಿ ಗಡಿ ಪ್ರವಾಸೋದ್ಯಮವನ್ನು (Border Tourism) ಉತ್ತೇಜಿಸುವ ಉದ್ದೇಶವನ್ನೂ ಸೇನೆ ಹೊಂದಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಬೆಟಾಲಿಯನ್ ನೇತೃತ್ವವನ್ನು ಕೇರಳದ ಕೊಲ್ಲಂ ಜಿಲ್ಲೆಯ ಕುಂದರಾ ಮೂಲದ ಕರ್ನಲ್ ಜೇಕಬ್ ಪಣಿಕರ್ ವಹಿಸಿದ್ದಾರೆ. ಕರ್ನಲ್ ಪಣಿಕರ್ ಅವರ ನಾಯಕತ್ವದಲ್ಲಿ ಗಡಿಭಾಗದಲ್ಲಿ ಕೈಗೊಂಡಿರುವ ಈ ಉಪಕ್ರಮವು ರಾಷ್ಟ್ರೀಯ ಏಕತೆಗೆ ಒಂದು ಬಲವಾದ ಉದಾಹರಣೆಯಾಗಿದೆ. ಈ ಯೋಜನೆಯ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ, ಗಡಿಭಾಗದ ಜನರ ಜೀವನಮಟ್ಟವನ್ನು ಸುಧಾರಿಸುವುದು ಭಾರತೀಯ ಸೇನೆಯ ಗುರಿಯಾಗಿದೆ.