ಸತ್ಯ ಬಯಲಾಗುವ ಮೊದಲೇ ಸಂಭ್ರಮಿಸಿ ಪೇಚಿಗೆ ಸಿಲುಕಿದ ಊರ ಜನ: ಆಗಿದ್ದೇನು?
ಯುವಕನೋರ್ವ ತಾನು ಐಎಎಸ್ ಪಾಸಾಗಿದ್ದೇನೆ ಎಂದು ಹೇಳಿಕೊಂಡು ಊರ ತುಂಬೆಲ್ಲಾ ಜನರಿಂದ ಸನ್ಮಾನ ಮಾಡಿಸಿಕೊಂಡ ಘಟನೆ ನಡೆದಿದೆ. ಆದರೆ ನಂತರ ಸುಳ್ಳು ಹೇಳಿರುವುದು ಗೊತ್ತಾಗಿ ಜನ ಬೆಸ್ತು ಬಿದ್ದಿದ್ದಾರೆ. ಬಿಹಾರದ ಶೇಖ್ಪುರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.ಡಿಟೇಲ್ ಸ್ಟೋರಿ ಇಲ್ಲಿದೆ.

ಬಿಹಾರ: ಯುವಕನೋರ್ವ ತಾನು ಐಎಎಸ್ ಪಾಸಾಗಿದ್ದೇನೆ ಎಂದು ಹೇಳಿಕೊಂಡು ಊರ ತುಂಬೆಲ್ಲಾ ಜನರಿಂದ ಸನ್ಮಾನ ಮಾಡಿಸಿಕೊಂಡ ಘಟನೆ ನಡೆದಿದೆ. ಆದರೆ ನಂತರ ಸುಳ್ಳು ಹೇಳಿರುವುದು ಗೊತ್ತಾಗಿ ಜನ ಬೆಸ್ತು ಬಿದ್ದಿದ್ದಾರೆ. ಬಿಹಾರದ ಶೇಖ್ಪುರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಭಾರತೀಯ ಲೋಕಸೇವಾ ಆಯೋಗದ 2025ರ ಪರೀಕ್ಷಾ ಫಲಿತಾಂಶ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಪರೀಕ್ಷೆಯಲ್ಲಿ ತಾನು ಪಾಸಾಗಿದ್ದೇನೆ ಎಂದು ಅರಿಯಾರಿ ಬ್ಲಾಕ್ನ ಫತೇಪುರ್ ಗ್ರಾಮದ ನಿವಾಸಿ ರಂಜೀತ್ ಕುಮಾರ್ ಎಂಬಾತ ಗ್ರಾಮಸ್ಥರ ಬಳಿ ಹೇಳಿಕೊಂಡು ಬಂದಿದ್ದಾನೆ. ತಾನು ಯುಪಿಎಸ್ ಪರೀಕ್ಷೆ ಪಾಸು ಮಾಡಿದ್ದು, ಐಎಎಸ್ ಅಧಿಕಾರಿಯಾಗಿದ್ದಾನೆ ಎಂದು ಆತ ಹೇಳಿಕೊಂಡಿದ್ದು, ಇದು ಶೀಘ್ರದಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಊರ ಜನರು ತಾವೇ ಐಎಎಸ್ ಪಾಸು ಮಾಡಿದಂತೆ ಊರಲ್ಲಿ ಸಂಭ್ರಮಾಚರಣೆ ಮಾಡಿ ಆತನಿಗೆ ಹಾರ ತುರಾಯಿ ಶಾಲು ಹಾಕಿ ಸನ್ಮಾನಿಸಿದ್ದಾರೆ.
ಈ ಸುದ್ದಿ ಮತ್ತಷ್ಟು ವೈರಲ್ ಆಗ್ತಿದ್ದಂತೆ, ಶೇಖ್ಪುರದ ಮಾಜಿ ಆರ್ಜೆಡಿ ಶಾಸಕ ವಿಜಯ್ ಸಾಮ್ರಾಟ್ ಅವರು ಬೆಂಬಲಿಗರೊಂದಿಗೆ ರಂಜೀತ್ ಅವರ ಮನೆಗೆ ಭೇಟಿ ನೀಡಿ, ಅವರ ಕುತ್ತಿಗೆಗೆ ಹಾರ ಹಾಕಿ, ಹೂಗುಚ್ಛ ನೀಡಿ ಮತ್ತು ಬ್ರೀಫ್ಕೇಸ್ ಉಡುಗೊರೆಯಾಗಿ ನೀಡಿ ಗೌರವಿಸಿದರು. ರಂಜೀತ್ ಐಎಎಸ್ ಪಾಸಾಗಿದ್ದಾನೆ ಎಂದು ಅರಿತ ಜನರು ಹಾಗೂ ಮನೆಯವರು ಗ್ರಾಮದಲ್ಲಿ ಸಿಹಿತಿಂಡಿಗಳನ್ನು ಹಂಚಿದರು. ಕುಟುಂಬದವರು ಕೂಡ ತಮ್ಮ ಮಗ ಏನು ಮಹತ್ತರವಾದುದನ್ನು ಸಾಧಿಸಿದ್ದಾನೆ ಎಂದು ಹೆಮ್ಮೆಯಿಂದ ಬೀಗತೊಡಗಿದ್ದರು. ಈ ಸಂಭ್ರಮಚರಣೆ ವಿಚಾರ ಶೀಘ್ರದಲ್ಲೇ ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೂ ಬಂದಿದ್ದು, ಮಹುಲಿ ಪೊಲೀಸ್ ಠಾಣೆಯ ಠಾಣಾ ಅಧಿಕಾರಿ ರಾಮಪ್ರವೇಶ್ ಭಾರ್ತಿ ಅವರು ರಂಜೀತ್ ಅವರನ್ನು ಪೊಲೀಸ್ ಠಾಣೆಗೆ ಆಹ್ವಾನಿಸಿ, ಅಲ್ಲಿ ಅವರಿಗೆ ಹಾರ ಹಾಕಿ ಲಡ್ಡೂ ನೀಡಿ ಅವರ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು. ಆದರೆ ಈ ಖುಷಿಯ ವಿಚಾರ ಬಹಳ ಕಾಲ ಉಳಿಯಲಿಲ್ಲ.
ಹಳ್ಳಿಯ ಕೆಲವು ಯುವಕರು ಫಲಿತಾಂಶವನ್ನು ನಿಜವಾಗಿ ಪರಿಶೀಲಿಸಲು ನಿರ್ಧರಿಸಿದರು ಮತ್ತು ಅಧಿಕೃತ ಯುಪಿಎಸ್ ಫಲಿತಾಂಶ ಪಟ್ಟಿಯನ್ನು ಪರಿಶೀಲಿಸಿದರು. ಆಗಲೇ ನೋಡಿ ಈ ರಂಜೀತ್ಕುಮಾರ್ನ ಅಸಲಿಯತ್ತು ಬೆಳಕಿಗೆ ಬಂದಿರೋದು. ವಾಸ್ತವವಾಗಿ ಅಖಿಲ ಭಾರತ ಮಟ್ಟದಲ್ಲಿ 440 ರ್ಯಾಂಕ್ ಪಡೆದ ಅಭ್ಯರ್ಥಿ ಹೆಸರು ರಂಜೀತ್ಕುಮಾರ್ ಆಗಿದ್ದರೂ ಕೂಡ ಅವರು ಬಿಹಾರದ ರಂಜೀತ್ಕುಮಾರ್ ಆಗಿರಲಿಲ್ಲ, ಕರ್ನಾಟಕದ ಚಿಕ್ಕಬಳ್ಳಾಪುರದ ರಂಜಿತ್ ಕುಮಾರ್ ಆರ್ ಎಂಬುವವರು ಈ 440ನೇ ರ್ಯಾಂಕ್ ಪಡೆದಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.
ಮಾರ್ಚ್ 6 ರಂದು ಯುಪಿಎಸ್ಸಿ ಫಲಿತಾಂಶ ಪ್ರಕಟವಾಗಿತ್ತು. ಪಟ್ಟಿಯಲ್ಲಿ ಕರ್ನಾಟಕದ ರಂಜಿತ್ ಕುಮಾರ್ ಆರ್ 440 ನೇ ರ್ಯಾಂಕ್ ಗಳಿಸಿದ್ದಾರೆ. ರಂಜಿತ್ ಈ ಫಲಿತಾಂಶವನ್ನು ತಮ್ಮದೇ ಎಂದು ಹೇಳಿಕೊಂಡು, ತಾನು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಐಎಎಸ್ ಅಧಿಕಾರಿಯಾಗಿದ್ದೇನೆ ಎಂದು ಜನರಿಗೆ ತಿಳಿಸಿದ್ದರು. ನಂತರ ಪೊಲೀಸರು ದಾಖಲೆಗಳನ್ನು ನೀಡುವಂತೆ ಕೇಳಿಕೊಂಡರು ಎಂದು ಮಾಹುಲಿ ಎಸ್ಎಚ್ಒ ರಾಮಪ್ರವೇಶ ಭಾರ್ತಿ ಹೇಳಿದ್ದಾರೆ.
ಮಾರ್ಚ್ 8 ರಂದು ಫಲಿತಾಂಶಗಳು ಹೊರಬಂದ ನಂತರ ರಂಜೀತ್ ಸ್ವತಃ ನನ್ನನ್ನು ಭೇಟಿ ಮಾಡಲು ಬಂದರು. ಮಾರ್ಚ್ 8 ರಂದು ಒಂದು ದಿನದ ನಂತರ ಸತ್ಯ ಬೆಳಕಿಗೆ ಬಂದಾಗ, ನಾನು ರಂಜೀತ್ಗೆ ಫೋನ್ ಮಾಡಿ ತನ್ನ ಪ್ರವೇಶ ಪತ್ರ ಮತ್ತು ಆಧಾರ್ನೊಂದಿಗೆ ಪೊಲೀಸ್ ಠಾಣೆಗೆ ಬರಲು ಹೇಳಿದೆ. ನಮ್ಮ ಕರೆಯ ನಂತರ ರಂಜೀತ್ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮನೆಯಿಂದ ಓಡಿಹೋದರು. ಇತ್ತ ಅವರ ಮನೆಯವರು ಅವರು ಅವರು ದೆಹಲಿಗೆ ಹೋಗಿದ್ದಾರೆ ಮತ್ತು ನಮ್ಮ ಫೋನ್ಗೆ ಉತ್ತರಿಸುತ್ತಿಲ್ಲ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ ಎಂದು ಭಾರ್ತಿ ಹೇಳಿದರು. ರಂಜೀತ್ ಉದ್ದೇಶಪೂರ್ವಕವಾಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ ಎಂದು ಹೇಳಿದ್ದಾರೋ ಅಥವಾ ತಾನು ಉತ್ತೀರ್ಣನಾಗಿದ್ದೇನೆ ಎಂದು ತಪ್ಪಾಗಿ ನಂಬಿದ್ದಾರೋ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
ವಿಷಯ ಬೆಳಕಿಗೆ ಬಂದ ನಂತರ, ರಂಜೀತ್ ಕುಮಾರ್ಗೆ ಸನ್ಮಾನಿಸಿದ್ದ ಮಾಜಿ ಶಾಸಕ ಸಾಮ್ರಾಟ್ ಅವರು ಸನ್ಮಾನಕ್ಕೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ಪೋಸ್ಟ್ಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಅಳಿಸಿಹಾಕಿದರು. ರಂಜೀತ್ ಅವರ ಹಲವಾರು ಸ್ನೇಹಿತರು ಈ ಹಿಂದೆ ಬಿಹಾರ ಸಾರ್ವಜನಿಕ ಸೇವಾ ಆಯೋಗದ (ಬಿಪಿಎಸ್ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಧಿಕಾರಿಗಳಾಗಿದ್ದಾರೆ ಎಂದು ನಿವಾಸಿಗಳು ತಿಳಿಸಿದ್ದಾರೆ. ರಂಜೀತ್ ಬಡ ಕೃಷಿಕ ಕುಟುಂಬದಿಂದ ಬಂದವರಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ದೆಹಲಿಯ ಮುಖರ್ಜಿ ನಗರದಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಅರ್ಜುನ್ ಯಾದವ್ ಒಬ್ಬ ರೈತ.
ಯುಪಿಎಸ್ಸಿ ಫಲಿತಾಂಶ ಪ್ರಕಟವಾದ ನಂತರ ಇದೇ ರೀತಿಯ ಘಟನೆಗಳು ಬೇರೆಡೆ ಕೂಡ ನಡೆದಿವೆ. ಭೋಜ್ಪುರ ಜಿಲ್ಲೆಯ ನಿವಾಸಿಯೊಬ್ಬರು ಪರೀಕ್ಷೆಯಲ್ಲಿ 301 ನೇ ರ್ಯಾಂಕ್ ಗಳಿಸಿರುವುದಾಗಿ ಹೇಳಿಕೊಂಡರು. ಆದರೆ, ಆ ರ್ಯಾಂಕ್ ಪಡೆದ ನಿಜವಾದ ಅಭ್ಯರ್ಥಿ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಮತ್ತೊಬ್ಬ ವ್ಯಕ್ತಿಯಾಗಿದ್ದು, ಅವರು ಈಗಾಗಲೇ ಸ್ತ್ರೀರೋಗತಜ್ಞರಾಗಿ ಕೆಲಸ ಮಾಡುತ್ತಿದ್ದರು ಎಂದು ಯುಪಿಎಸ್ಸಿ ನಂತರ ಸ್ಪಷ್ಟಪಡಿಸಿತು. ಉತ್ತರ ಪ್ರದೇಶದ ಮತ್ತೊಬ್ಬ ಅಭ್ಯರ್ಥಿಯು ಫಲಿತಾಂಶದ ಪಿಡಿಎಫ್ನಲ್ಲಿ ತನ್ನ ಹೆಸರನ್ನು ಗಮನಿಸಿದ ನಂತರ ತಾನು 113 ನೇ ರ್ಯಾಂಕ್ ಪಡೆದಿದ್ದೇನೆ ಎಂದು ಭಾವಿಸಿದ್ದಳು. ನಂತರ ಪಟ್ಟಿಯಲ್ಲಿ ಉಲ್ಲೇಖಿಸಲಾದ ರೋಲ್ ಸಂಖ್ಯೆ ಇನ್ನೊಬ್ಬ ಅಭ್ಯರ್ಥಿಗೆ ಸೇರಿದ್ದು ಎಂದು ಅರಿತುಕೊಂಡ ನಂತರ ಗೊಂದಲಕ್ಕೆ ಕ್ಷಮೆಯಾಚಿಸಿದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ