ದೇಶಕ್ಕೆ ಮೋದಿ ಹೆಸರು ಇಡುವ ದಿನ ದೂರ ಇಲ್ಲ: ಮಮತಾ ಕಿಡಿ
ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಸೇರಿಸಿರುವುದಕ್ಕೆ ಆಕ್ಷೇಪ| ದೇಶಕ್ಕೆ ಮೋದಿ ಹೆಸರು ಇಡುವ ದಿನ ದೂರ ಇಲ್ಲ: ಮಮತಾ ಕಿಡಿ
ಕೋಲ್ಕತಾ(ಮಾ.09): ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಸೇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೇಶಕ್ಕೆ ಮೋದಿ ಹೆಸರನ್ನು ಇಡುವ ದಿನ ದೂರ ಇಲ್ಲ ಎಂದು ವ್ಯಂಗ್ಯವಾಗಿದ್ದಾರೆ.
ಚುನಾವಣಾ ರಾರಯಲಿಯ ವೇಳೆ ಮಾತನಾಡಿದ ಮಮತಾ, ಕ್ರಿಕೆಟ್ ಮೈದಾನಕ್ಕೆ ಮೋದಿ ಅವರ ಹೆಸರನ್ನು ಇಡಲಾಗಿದೆ. ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲೂ ಮೋದಿ ತಮ್ಮ ಫೋಟೋವನ್ನು ಹಾಕಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ಇದೇ ವೇಳೆ ತಮ್ಮ ಸರ್ಕಾರದ ವಿರುದ್ಧ ಮೋದಿ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ.
ಮತದಾರರು ಈ ಬಾರಿ ಪಶ್ಚಿಮ ಬಂಗಾಳದ ಎಲ್ಲಾ 294 ಕ್ಷೇತ್ರಗಳಲ್ಲಿಯೂ ಬಿಜೆಪಿ ಮತ್ತು ದೀದಿಯ ವಿರುದ್ಧದ ಹೋರಾಟಕ್ಕೆ ಸಾಕ್ಷಿ ಆಗಲಿದ್ದಾರೆ. ನಾವು 3ನೇ ಬಾರಿಯೂ ಅಧಿಕಾರಕ್ಕೆ ಏರಲಿದ್ದೇವೆ ಎಂದು ಹೇಳಿದರು.
ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ!
ಚುನಾವಣೆ ನಿರತ ಪಶ್ಚಿಮ ಬಂಗಾಳದಲ್ಲಿ ಶಾಸಕರ ವಲಸೆ ಮುಂದುವರಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿರುವ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ನ ಐವರು ಶಾಸಕರು ಪಕ್ಷ ತೊರೆದು ಸೋಮವಾರ ಬಿಜೆಪಿಗೆ ಸೆರ್ಪಡೆ ಆಗಿದ್ದಾರೆ.
ಈ ಮೂಲಕ ಮಾಲ್ಡಾ ಜಿಲ್ಲಾ ಪರಿಷದ್ನಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿರುವ ಸೊನಾಲಿ ಗುಹಾ, ಸಿಂಗೂರು ಚಳವಳಿಯ ಪ್ರಮುಖ ಮುಖವಾಗಿದ್ದ ರಬೀಂದ್ರನಾಥ್ ಬಟ್ಟಾಚಾರ್ಯ, 4 ಬಾರಿ ಶಾಸಕರಾಗಿರುವ ಜತು ಲಾಹಿರಿ, ಮಾಜಿ ಫುಟ್ಬಾಲ್ ಆಟಗಾರ ದಿಪೇಂದು ಬಿಸ್ವಾಸ್ ಹಾಗೂ ಶಾಸಕ ಸಿತಾಲ್ ಸರ್ದಾರ್ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.