ಭಾರತದ ಏಕತೆ ಭಂಗ ಯಾರಿಂದಲೂ ಆಗದು: ವಿದೇಶೀಯರ ಹೇಳಿಕೆಗೆ ಶಾ ಕಿಡಿ!
ಭಾರತದ ಏಕತೆ ಭಂಗ ಯಾರಿಂದಲೂ ಆಗದು| ಕೃಷಿ ಕಾಯ್ದೆ ವಿರುದ್ಧ ವಿದೇಶೀಯರ ಹೇಳಿಕೆಗೆ ಶಾ ಕಿಡಿ
ನವದೆಹಲಿ(ಫೆ.04): ಭಾರತ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ವಿದೇಶೀ ನಟರು, ವಿದೇಶೀ ಸೆಲೆಬ್ರಿಟಿಗಳು ಹಾಗೂ ವಿವಿಧ ದೇಶಗಳ ಗಣ್ಯರು ಬೆಂಬಲ ಸೂಚಿಸುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೌನ ಮುರಿದಿದ್ದಾರೆ.‘ಭಾರತದ ಏಕತೆಯನ್ನು ಯಾರಿಂದಲೂ ಭಂಗಗೊಳಿಸಲು ಸಾಧ್ಯವಿಲ್ಲ’ ಎಂದು ಗುಡುಗಿದ್ದಾರೆ.
ಬುಧವಾರ ಸಂಜೆ ಟ್ವೀಟ್ ಮಾಡಿರುವ ಅವರು, ‘ಯಾವುದೇ ಅಪಪ್ರಚಾರಕ್ಕೂ ಭಾರತದ ಏಕತೆಗೆ ಭಂಗ ತರಲು ಆಗದು. ಭಾರತವು ಎತ್ತರೆತ್ತರಕ್ಕೆ ಬೆಳೆಯುವುದನ್ನು ಯಾರಿಂದಲೂ ತಡೆಯಲು ಆಗದು. ಭಾರತದ ಹಣೆಬರಹವನ್ನು ಅಪಪ್ರಚಾರ ಮಾಡಿ ಬದಲಿಸಲು ಆಗದು.
ಭಾರತದ ಹಣೆಬರಹ ಬದಲಿಸುವುದು ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಭಾರತ ಒಗ್ಗಟ್ಟಾಗಿರಲಿದೆ. ಎಲ್ಲರೂ ಒಗ್ಗೂಡಿ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತೇವೆ’ ಎಂದಿದ್ದಾರೆ.