Asianet Suvarna News Asianet Suvarna News

ಭಾರತ ಎಚ್ಚರಿಕೆಯ ಬಳಿಕ ಸ್ವದೇಶಕ್ಕೆ ತೆರಳಿದ ಕೆನಡಾದ 41 ರಾಯಭಾರಿಗಳು

ಭಾರತದ ಎಚ್ಚರಿಕೆಗೆ ಬೆದರಿರುವ ಕೆನಡಾ ಸರ್ಕಾರ, ಬೆಂಗಳೂರು ಸೇರಿದಂತೆ ಮೂರು ನಗರಗಳಲ್ಲಿನ ದೂತಾವಾಸ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ. ಜೊತೆಗೆ ಹೆಚ್ಚುವರಿಯಾಗಿದ್ದ 41 ರಾಯಭಾರ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರನ್ನು ಕೆನಡಾಕ್ಕೆ ಕಳುಹಿಸಿಕೊಟ್ಟಿದೆ.

India Canada Diplomatic conflict after Diplomatic immunity revoked by India 41 Canadian ambassadors sent home akb
Author
First Published Oct 21, 2023, 9:11 AM IST

ಟೊರಂಟೊ: ಅ.20ರ ಶುಕ್ರವಾರದೊಳಗೆ ಹೆಚ್ಚುವರಿ ರಾಯಭಾರ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಳ್ಳದೇ ಇದ್ದರೆ, ಅವರಿಗೆ ನೀಡಲಾಗಿರುವ ರಾಜತಾಂತ್ರಿಕ ವಿನಾಯಿತಿ ರದ್ದುಗೊಳಿಸಲಾಗುವುದು ಎಂಬ ಭಾರತದ ಎಚ್ಚರಿಕೆಗೆ ಬೆದರಿರುವ ಕೆನಡಾ ಸರ್ಕಾರ, ಬೆಂಗಳೂರು ಸೇರಿದಂತೆ ಮೂರು ನಗರಗಳಲ್ಲಿನ ದೂತಾವಾಸ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದೆ. ಜೊತೆಗೆ ಹೆಚ್ಚುವರಿಯಾಗಿದ್ದ 41 ರಾಯಭಾರ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರನ್ನು ಕೆನಡಾಕ್ಕೆ ಕಳುಹಿಸಿಕೊಟ್ಟಿದೆ.

ಈ ಕುರಿತು ಕೆನಡಾದ ಒಟ್ಟಾವದಲ್ಲಿ ಮಾಹಿತಿ ನೀಡಿರುವ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ(Foreign Minister Melanie Joly), ‘ ರಾಜತಾಂತ್ರಿಕ ವಿನಾಯಿತಿ (diplomatic immunity) ರದ್ದು ಮಾಡುವಂಥ ಏಕಪಕ್ಷೀಯ ಕ್ರಮಗಳನ್ನು ಭಾರತ ಪ್ರಕಟಿಸಿದೆ. ಇದು ಅಂತಾರಾಷ್ಟ್ರೀಯ ನಿಯಮಗಳಿಗೆ ವಿರುದ್ಧ. ಜೊತೆಗೆ ಇಂಥ ಕ್ರಮದ ಬೆದರಿಕೆ ಸ್ವೀಹಾರಾರ್ಹವಲ್ಲದ್ದು ಮತ್ತು ಸಂಘರ್ಷಕ್ಕೆ ಮತ್ತಷ್ಟು ಪ್ರಚೋದನೆ ನೀಡುವಂಥದ್ದು. ವಿನಾಯಿತಿ ರದ್ದು ಮಾಡುತ್ತಾ ಹೋದಲ್ಲಿ, ಎಲ್ಲಿಯೂ ಯಾವುದೇ ರಾಜತಾಂತ್ರಿಕರೂ ಇರುವುದು ಸಾಧ್ಯವಿಲ್ಲ’ ಎಂದಿದ್ದಾರೆ.

ಜೊತೆಗೆ ‘21 ರಾಯಭಾರಿಗಳು ಮತ್ತು ಅವರ ಕುಟುಂಬದವರಿಗೆ ಮಾತ್ರ ಇರಲು ಅವಕಾಶ ನೀಡುವ ಭಾರತದ ಹೇಳಿಕೆ ಅಸಮಂಜಸವಾಗಿದೆ. ಇತರ 41 ರಾಜತಾಂತ್ರಿಕರು ಮತ್ತು ಅವರ ಕುಟುಂಬದವರ ಸ್ಥಿತಿ ವಿಷಮವಾಗಿದೆ. ದೇಶದ ರಾಜತಾಂತ್ರಿಕರ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ. ಭಾರತದಿಂದ ಅವರ ಸುರಕ್ಷತೆಯ ನಿರ್ಗಮನಕ್ಕಾಗಿ ನಾವು ಕ್ರಮ ಕೈಗೊಳ್ಳುತ್ತೇವೆ. ಅದರರ್ಥ 41 ಜನರು ಈಗಾಗಲೇ ಕೆನಡಾಕ್ಕೆ ಮರಳಿದ್ದಾರೆ ಎಂದು ಜೋಲಿ ಒಟ್ಟಾವಾದ (Ottawa) ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುಖೋಯ್‌ ಯುದ್ಧ ವಿಮಾನದ ರಾಡಾರ್‌ಗೆ ಹಂಪಿ ವಿರೂಪಾಕ್ಷನ ಹೆಸರು

ಖಲಿಸ್ತಾನಿ ಉಗ್ರ ಹರ್ದೀಪ್‌ ನಿಜ್ಜರ್‌ (Khalistani terrorist Hardeep Nijjar) ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹೇಳಿಕೆಯಿಂದ ಉಭಯ ದೇಶಗಳ ನಡುವೆ ಸಂಘರ್ಷ ಆರಂಭವಾಗಿತ್ತು. ಈ ಆರೋಪದ ಬೆನ್ನಲ್ಲೇ ಹಿರಿಯ ರಾಯಭಾರ ಸಿಬ್ಬಂದಿಯನ್ನು ಕೆನಡಾ ವಜಾ ಮಾಡಿತ್ತು. ಪ್ರತಿಯಾಗಿ ಭಾರತ ಕೂಡಾ ಅದೇ ರೀತಿ ಕ್ರಮ ಕೈಗೊಂಡಿತ್ತು. ಅಲ್ಲದೆ ಕೆನಡಾಕ್ಕೆ ವೀಸಾ ವಿತರಣೆ ಪ್ರಕ್ರಿಯೆ ಸ್ಥಗಿತಗೊಳಿಸಿತ್ತು. ಜೊತೆಗೆ ಕೆನಡಾದಲ್ಲಿ ಭಾರತದ 21 ರಾಯಭಾರ ಸಿಬ್ಬಂದಿ ಇದ್ದು, ಅಷ್ಟೇ ಪ್ರಮಾಣದ ಕೆನಡಾ ಸಿಬ್ಬಂದಿ ಭಾರತದಲ್ಲಿ ಇರಬೇಕು. ಹೆಚ್ಚುವರಿ ಸಿಬ್ಬಂದಿ ಅ.10ರೊಳಗೆ ದೇಶ ತೊರೆಯಬೇಕು ಎಂದು ಸೂಚಿಸಿತ್ತು. ಇದಕ್ಕೂ ಕೆನಡಾ ಬಗ್ಗದ ಹಿನ್ನೆಲೆಯಲ್ಲಿ, ಹೆಚ್ಚುವರಿ ಸಿಬ್ಬಂದಿಗಳು ಶುಕ್ರವಾರದ ಬಳಿಕ ರಾಯಭಾರ ವಿನಾಯ್ತಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ವಿನಾಯತಿ ರದ್ದಾದರೆ, ಯಾವುದೇ ಪ್ರಕರಣದಲ್ಲಿ ಕೆನಡಾ ರಾಯಭಾರ ಸಿಬ್ಬಂದಿಯನ್ನು ಭಾರತ ಬಂಧಿಸಬಹುದಾಗಿರುತ್ತದೆ.

ಅರಬ್ಬಿ ಸಮುದ್ರದಲ್ಲಿ ತೇಜ್‌ ಚಂಡಮಾರುತ : ಪಥ ಬದಲಿಸಿದರೆ ಭಾರತಕ್ಕೆ ಅಪಾಯ : ಐಎಂಡಿ

ಅಂತಾರಾಷ್ಟ್ರೀಯ ಒಪ್ಪಂದಕ್ಕಿಂತ ಸಮಾನತೆಗೆ ಮೊದಲ ಆದ್ಯತೆ

ನವದೆಹಲಿ: ಅಂತಾರಾಷ್ಟ್ರೀಯ ಒಪ್ಪಂದಕ್ಕಿಂತ ಸಮಾನತೆಯೇ ನಮಗೆ ಮೊದಲ ಆದ್ಯತೆಯಾಗಿ ಪರಿಗಣನೆಯಾಗಲಿದೆ ಎಂದು ರಾಜತಾಂತ್ರಿಕ ಬಿಕ್ಕಟ್ಟಿನ ಕುರಿತ ಕೆನಡಾ ಟೀಕೆಗೆ ಭಾರತ ತಿರುಗೇಟು ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ ‘ಅಗತ್ಯ ಬಿದ್ದಲ್ಲಿ ದೂತಾವಾಸ ಸಿಬ್ಬಂದಿಯನ್ನು ಮಿತಿಗೊಳಿಸಿಕೊಳ್ಳಲು ವಿಯೆನ್ನಾ ಒಪ್ಪಂದದ 11.1ನೇ ಕಾಯ್ದೆ ತಿಳಿಸುತ್ತದೆ. ಅದರ ಅನುಸಾರ ನಾವು ನಡೆದುಕೊಂಡಿದ್ದು ನಾವು ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿರುವುದಿಲ್ಲ. ಒಂದು ವೇಳೆ ಅಂತಹ ಅಂತಾರಾಷ್ಟ್ರೀಯ ನಿಯಮಗಳು ಇದ್ದರೂ ಸಹ ನಾವು ಸಮಾನತೆಗೇ ಮೊದಲ ಆದ್ಯತೆ ಕೊಡುತ್ತೇವೆಯೇ ಹೊರತು ಒಪ್ಪಂದಕ್ಕಲ್ಲ ಎಂದು ಸ್ಪಷ್ಟಪಡಿಸಿದೆ.

ಯುಎಇ ಲಾಟರಿ ಗೆದ್ದ ಭಾರತೀಯ: ಚೆನ್ನೈನ ಮಗೇಶ್‌ಗೆ 16 ಕೋಟಿಯ ಜಾಕ್‌ಪಾಟ್‌

ಮುಂಬೈ, ದೆಹಲಿ, ಚಂಡೀಗಢದಲ್ಲಿ ಎಚ್ಚರವಾಗಿರಲು ಸಲಹೆ

ನವದೆಹಲಿ: ಬೆಂಗಳೂರು, ಚಂಡೀಗಢ, ಮುಂಬೈ ಮತ್ತು ದೆಹಲಿಯಲ್ಲಿ ಸಂಚರಿಸುವ ವೇಳೆ ಎಚ್ಚರದಿಂದ ಇರುವಂತೆ ಕೆನಡಾ ಸರ್ಕಾರ ತನ್ನ ರಾಯಭಾರ ಸಿಬ್ಬಂದಿ ಮತ್ತು ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಈ ಕುರಿತು ಶುಕ್ರವಾರ ಕೆಲ ಸಲಹಾವಳಿಗಳನ್ನು ಬಿಡುಗಡೆ ಮಾಡಿರುವ ಮಾಡಿರುವ ದೆಹಲಿಯಲ್ಲಿನ ಕೆನಡಾ ರಾಯಭಾರ ಕಚೇರಿ, ಕೆನಡಾ ಮತ್ತು ಭಾರತದ ನಡುವಿನ ಇತ್ತೀಚಿನ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೆನಡಿಯನ್ನರ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಅಭಿಪ್ರಾಯಗಳಿವೆ. ಜೊತೆಗೆ ಕೆನಡಾ ವಿರೋಧಿ ಪ್ರತಿಭಟನೆಗೆ ಕರೆ ನೀಡುವ ಮತ್ತು ಕೆನಡಿಯನ್ನರಿಗೆ ಬೆದರಿಕೆ ಹಾಕುವ ಅಥವಾ ತೊಂದರೆ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಅಪರಿಚಿತರ ಜೊತೆ ಅನಗತ್ಯ ಸ್ನೇಹ ಹಾಗೂ ವಿಚಾರ ವಿನಿಮಯ ಮತ್ತು ಮಾಹಿತಿ ಹಂಚಿಕೊಳ್ಳಬಾರದು. ನಾಗರಿಕರಿಗೆ ಯಾವುದೇ ಸಮಸ್ಯೆಯಾದಲ್ಲಿ ಅವರು ತಮ್ಮನ್ನು ದೆಹಲಿಯಲ್ಲಿರುವ ಹೈ ಕಮಿಷನ್‌ ಕಚೇರಿಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದೆ.

Follow Us:
Download App:
  • android
  • ios