ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ, ಡಿಎಂಕೆ, ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳು ಯಾವುದೇ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಣ್ಣಾಡಿಎಂಕೆ ಈ ನಿರ್ಧಾರ ಕೈಗೊಂಡಿದೆ.

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣರಾದ ಎಐಎಡಿಎಂಕೆ ನಾಯಕಿ ಜಯಲಲಿತಾ ಅಬ್ಬರಿಸುವ ಕಾಲವೊಂದಿತ್ತು. ತಮಿಳುನಾಡಿನಲ್ಲಿ ಬ್ರಾಹ್ಮಣರ ಸಂಖ್ಯೆ ಕೇವಲ ಶೇ.3 ಇದ್ದರೂ ಜಯಾ ಪ್ರಭಾವಿ ಆಗಿದ್ದರು. ಆದರೆ ಅವರದ್ದೇ ಪಕ್ಷ ಎಐಎಡಿಎಂಕೆ, 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯಾವುದೇ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಈ ಸಲ ಟಿಕೆಟ್‌ ಯಾರಿಗೂ ಇಲ್ಲ

ಇನ್ನು ಅಣ್ಣಾಡಿಎಂಕೆ ಮಿತ್ರ ಪಕ್ಷ ಬಿಜೆಪಿ, ತನಗೆ ಹಂಚಿಕೆಯಾದ 27 ಸ್ಥಾನಗಳಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನು ಹೊಂದಿಲ್ಲ. ಡಿಎಂಕೆ ಮತ್ತು ಕಾಂಗ್ರೆಸ್ ಕೂಡ ಬ್ರಾಹ್ಮಣ ಅಭ್ಯರ್ಥಿಯನ್ನು ಹೊಂದಿಲ್ಲ.

ಇದು ಜಯಾ ನಿಧನದ ತರುವಾಯ ಸಮುದಾಯದ ಪ್ರಭಾವ ಕ್ಷೀಣಿಸುತ್ತಿರುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. ಆದರೂ ತಮಿಳುನಾಡು ಬ್ರಾಹ್ಮಣ ಸಂಘದ (ತಾಂಬ್ರಸ್‌) ಬೆಂಬಲವನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಜಯಾ ನಿಧನರಾದ 10 ವರ್ಷಗಳ ನಂತರ, 2021 ರ ಚುನಾವಣೆಯಲ್ಲಿ ಎಐಎಡಿಎಂಕೆ ಆ ಸಮುದಾಯದ ಒಬ್ಬ ಅಭ್ಯರ್ಥಿಯನ್ನು (ನಿವೃತ್ತ ಡಿಜಿಪಿ ಆರ್. ನಟರಾಜ್ ಅವರನ್ನು) ಕಣಕ್ಕಿಳಿಸಿತ್ತು. ಆದರೆ ಈ ಸಲ ಟಿಕೆಟ್‌ ಯಾರಿಗೂ ಇಲ್ಲ.

ಟಿವಿಕೆಯಿಂದ 2 ಬ್ರಾಹ್ಮಣ ಅಭ್ಯರ್ಥಿಗಳು, ಎನ್ ಟಿಕೆಯಿಂದ 6

ಇದಕ್ಕೆ ವ್ಯತಿರಿಕ್ತವಾಗಿ, ನಟ ವಿಜಯ್ ಅವರ ಟಿವಿಕೆ ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳನ್ನು ಮತ್ತು ತಮಿಳು ರಾಷ್ಟ್ರೀಯವಾದಿ ಸೀಮನ್ ಅವರ ಎನ್‌ಟಿಕೆ, 6 ಮಂದಿಯನ್ನು ಕಣಕ್ಕಿಳಿಸಿದೆ. ಎರಡೂ ಪಕ್ಷಗಳು ಗಣನೀಯ ಪ್ರಮಾಣದ ಬ್ರಾಹ್ಮಣ ಮತಗಳನ್ನು ಹೊಂದಿರುವ ಮೈಲಾಪುರ ಮತ್ತು ಶ್ರೀರಂಗಂನಂತಹ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿವೆ.

ಬ್ರಾಹ್ಮಣರಿಗೆ ಅನ್ಯಾಯ- ಗಣ್ಯರ ಕಿಡಿ

‘ಎಐಎಡಿಎಂಕೆ ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಜಯಾ ಮತ್ತು ಎಂಜಿಆರ್ ಯಾವಾಗಲೂ ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದರು’ ಎಂದು ರಾಜಕೀಯ ವಿಶ್ಲೇಷಕ ರವೀಂದ್ರನ್ ದುರೈಸಾಮಿ ಹೇಳಿದರು.

ಇನ್ನೊಬ್ಬ ರಾಜಕೀಯ ವಿಶ್ಲೇಷಕ ಅರುಣ್ ಕುಮಾರ್ ಪ್ರತಿಕ್ರಿಯಿಸಿ, ‘ಎಐಎಡಿಎಂಕೆ ದಶಕಗಳಿಂದ ಬ್ರಾಹ್ಮಣ ಬೆಂಬಲವನ್ನು ಉಳಿಸಿಕೊಂತ್ತು. ಆದರೆ ಜಯಾ ಮರಣದ ನಂತರ, ಬ್ರಾಹ್ಮಣ ಮತದಾರರು ಬಿಜೆಪಿಯತ್ತ ವಾಲಿದ್ದಾರೆ. ಪರಿಣಾಮವಾಗಿ, ಎಐಎಡಿಎಂಕೆ ಬ್ರಾಹ್ಮಣರ ಪ್ರಾತಿನಿಧ್ಯ ಕಡಿಮೆ ಮಾಡುತ್ತದೆ’ ಎಂದರು.

ಇದನ್ನೂ ಓದಿ: ಗುಜರಾತಿನ ಜನರು ಅನಕ್ಷರಸ್ಥರು, ಕೇರಳಂ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

‘ಪೆರಿಯಾರ್ ವಿರೋಧಿ ನಿಲುವನ್ನು ತೆಗೆದುಕೊಂಡು ಎನ್‌ಟಿಕೆ ಆರು ಬ್ರಾಹ್ಮಣ ಅಭ್ಯರ್ಥಿಗಳನ್ನು ಕಣಕ್ಕಿಸಿದೆ. ಅದರ ನಾಯಕ ಸೀಮನ್‌ ಈ ಹಿಂದೆ ದ್ರಾವಿಡ ತಡೆಗೋಡೆ ಒಡೆವೆ ಎಂದಿದ್ದರು. ಇನ್ನು ಟಿವಿಕೆ, ತಾನು ಬ್ರಾಹ್ಮಣ ವಿರೋಧಿ ಅಲ್ಲ ಎಂದು ಬಿಂಬಿಸಲು 2 ಟಿಕೆಟ್‌ಗಳನ್ನು ಬ್ರಾಹ್ಮಣರಿಗೆ ನೀಡಿರಬಹುದು’ ಎಂದು ವಿಶ್ಲೇಷಕ ರವೀಂದ್ರನ್ ದುರೈಸ್ವಾಮಿ ಹೇಳಿದ್ದಾರೆ.

‘ಡಿಎಂಕೆ ಪಕ್ಷವು ನಾಸ್ತಿಕರಾದರೂ ಬ್ರಾಹ್ಮಣರಾದ ಕಮಲ್ ಹಾಸನ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ, ಆದರೆ ಅವರು ಸ್ವಯಂ ಘೋಷಿತ ನಾಸ್ತಿಕ. ಆದರೆ ಬ್ರಾಹ್ಮಣೇತರ ಸಬಲೀಕರಣವೇ ಡಿಎಂಕೆ ಧ್ಯೇಯವಾಹಿದೆ’ ಎಂದು ವಿಶ್ಲೇಷಕ ಅರುಣ್‌ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಕೇರಳ ವಿಧಾನಸಭಾ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ ಬೆಂಗಳೂರು ಯುವಕ