ಕೇರಳ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗುಜರಾತಿನ ಅನಕ್ಷರಸ್ಥರನ್ನು ಮೋದಿ ಮೋಸಗೊಳಿಸಿರಬಹುದು ಆದರೆ ಅಕ್ಷರಸ್ಥ ಕೇರಳಿಗರನ್ನು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಗುಜರಾತ್ ಜನರಿಗೆ ಮಾಡಿದ ಅವಮಾನ ಎಂದು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ತಿರುವನಂತಪುರಂ: ‘ಗುಜರಾತ್‌ನ ಅನಕ್ಷರಸ್ಥರನ್ನು ಪ್ರಧಾನಿ ನರೇಂದ್ರ ಮೋದಿ ಮೋಸಗೊಳಿಸಿರಬಹುದು. ಆದರೆ ಅಕ್ಷರಸ್ಥ ಕೇರಳಿಗರನ್ನು ಹಾಗೆ ಮಾಡಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೇರಳದ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ

ಇಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಕೇರಳದ ಜನರನ್ನು ದಾರಿ ತಪ್ಪಿಸಬೇಡಿ. ಅವರು ತುಂಬಾ ಬುದ್ಧಿವಂತರು ಮತ್ತು ವಿದ್ಯಾವಂತರು. ಮೋದೀಜಿ ಮತ್ತು ಮುಖ್ಯಮಂತ್ರಿ ಪಿಣರಾಜಿ ವಿಜಯನ್, ನೀವಿಬ್ಬರೂ ಗುಜರಾತ್ ಅಥವಾ ಇತರ ಸ್ಥಳಗಳ ಅನಕ್ಷರಸ್ಥರನ್ನು ಮೋಸಗೊಳಿಸಬಹುದು. ಆದರೆ ಕೇರಳದ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ’ ಎಂದರು.

‘ಮೋದಿ ಮತ್ತು ವಿಜಯನ್ ಇಬ್ಬರೂ ಒಂದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅವರು ಮುನ್ನಡೆಸುವ ಪಕ್ಷಗಳನ್ನು ಹೊರತುಪಡಿಸಿ ಅವರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ವಿಜಯನ್‌ರನ್ನು ಮೋದಿ ನಿಯಂತ್ರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಖರ್ಗೆ ಹೇಳಿಕೆಗೆ ಬಿಜೆಪಿ ಕಿಡಿ

ಖರ್ಗೆ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ‘ಖರ್ಗೆ ಮತ್ತೊಮ್ಮೆ ಗುಜರಾತ್ ಮತ್ತು ಉತ್ತರ ಭಾರತದ ಜನರ ವಿರುದ್ಧ ಆಘಾತಕಾರಿ ಹೇಳಿಕೆ ನೀಡಿ ಅವರನ್ನು ನಿಂದಿಸಿದ್ದಾರೆ ಮತ್ತು ಕಾಂಗ್ರೆಸ್‌ಗೆ ಮತ ಹಾಕದ ಕಾರಣ ಅವರನ್ನು ಅನಕ್ಷರಸ್ಥರು ಎಂದು ಕರೆದಿದ್ದಾರೆ. ಇದು ಕಾಂಗ್ರೆಸ್‌ನ ಒಡೆದು ಆಳುವ ನೀತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಚುನಾವಣೆಯಲ್ಲಿ ಸೋತಾಗ, ಅದು ಜನರನ್ನು ನಿಂದಿಸುತ್ತದೆ’ ಎಂದು ಕಿಡಿಕಾರಿದ್ದಾರೆ.

Scroll to load tweet…