ಭಾರತದ ಗಡಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಬದಲಾವಣೆಗಳ ಕುರಿತು ವಿವರವಾದ ಅಧ್ಯಯನ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಮಿತಿಗೆ ನಿರ್ದೇಶನ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶರ ನೇತೃತ್ವದ ಈ ಸಮಿತಿಯು, ಅಕ್ರಮ ವಲಸೆಯಂತಹ ಅಂಶಗಳ ಬಗ್ಗೆಯೂ ತನಿಖೆ ನಡೆಸಲಿದೆ.

ನವದೆಹಲಿ (ಜೂ.14): ಭಾರತದ ಗಡಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಬದಲಾವಣೆಗಳ ಕುರಿತು ಕ್ಷೇತ್ರಕಾರ್ಯ ನಡೆಸಿ ವಿವರವಾದ ಅಧ್ಯಯನ ಕೈಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಮಿತಿಗೆ ಶನಿವಾರ ನಿರ್ದೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೃಹ ವ್ಯವಹಾರಗಳ ಸಚಿವಾಲಯ ಸ್ಥಾಪಿಸಿದ ಉನ್ನತ ಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿ ಜಿಲ್ಲೆಗಳು, ಮಹಾನಗರ ಕೇಂದ್ರಗಳು ಹಾಗೂ ಕೈಗಾರಿಕಾ ನಗರಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜನಸಂಖ್ಯಾ ಬದಲಾವಣೆಗೆ ಕಾರಣವಾಗಿರುವ ಅಕ್ರಮ ವಲಸೆಯಂತಹ ಅಸ್ವಾಭಾವಿಕ ಅಂಶಗಳ ಕುರಿತಾಗಿಯೂ ವಿಶೇಷ ತನಿಖೆ ಮಾಡುವಂತೆ ನಿರ್ದೇಶಿಸಿದ್ದಾರೆ.

ಈ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್‌ ಮಾಜಿ ನ್ಯಾ. ಪ್ರಕಾಶ್‌ ಪ್ರಭಾಕರ್ ನೋಲೇಕರ್‌ ವಹಿಸಿದ್ದಾರೆ. ಜನಗಣತಿ ಆಯುಕ್ತ ಮೃತ್ಯುಂಜಯ್‌ ಕುಮಾರ್‌ ನಾರಾಯಣ ಹಾಗೂ ಹಲವು ಮಾಜಿ ಐಎಎಸ್‌, ಐಪಿಎಸ್ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಘೋಷಿಸಿದ ಸುಮಾರು ಒಂದು ವರ್ಷದ ನಂತರ, ಮೇ 26 ರಂದು ಸಮಿತಿಯನ್ನು ಔಪಚಾರಿಕವಾಗಿ ರಚಿಸಲಾಯಿತು ಮತ್ತು ಜೂನ್ 2 ರಂದು ತನ್ನ ಮೊದಲ ಸಭೆಯನ್ನು ನಡೆಸಿತು. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಪ್ರಕಾಶ್ ಪ್ರಭಾಕರ್ ನವೋಲೇಕರ್ ನೇತೃತ್ವದ ಈ ಸಮಿತಿಯು, ವಿಶೇಷವಾಗಿ ಅಕ್ರಮ ವಲಸೆಯಿಂದ ಉಂಟಾದ ಜನಸಂಖ್ಯಾ ಬದಲಾವಣೆಗಳನ್ನು ಅಧ್ಯಯನ ಮಾಡಲು ಗಡಿ ಜಿಲ್ಲೆಗಳು, ಮಹಾನಗರ ಪ್ರದೇಶಗಳು ಮತ್ತು ಕೈಗಾರಿಕಾ ಪಟ್ಟಣಗಳಿಗೆ ಭೇಟಿ ನೀಡಲಿದೆ.