Misleading Report: ಭಜನೆ, ಭಕ್ತಿಗೀತೆ ಹಾಡೋದ್ರಿಂದ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿಲ್ಲ!
ಪ್ರಧಾನಿ ನರೇಂದ್ರ ಮೋದಿ ಭಜನೆ, ಭಕ್ತಿಗೀತೆಗಳನ್ನು ಮಾಡೋದ್ರಿಂದ ಅಪೌಷ್ಠಿಕತೆಯ ಹೊರೆಯನ್ನು ಕಡಿಮೆ ಮಾಡಬಹುದು ಎಂದು ಮನ್ ಕಿ ಬಾತ್ನಲ್ಲಿ ಹೇಳಿದ್ದಾರೆ ಎಂದು ಖಾಸಗಿ ವೆಬ್ಸೈಟ್ವೊಂದು ವರದಿ ಮಾಡಿತ್ತು. ಆದರೆ, ಅಸಲಿ ವಿಚಾರವೇನೆಂದರೆ, ಈ ವರದಿಯನ್ನು ಬರೆದ ವ್ಯಕ್ತಿ, ಪ್ರಧಾನಿ ಹೇಳಿದ ಮಾತನ್ನೇ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಎಲ್ಲಿಯೂ ಭಜನೆ, ಭಕ್ತಿಗೀತೆಯಿಂದ ಅಪೌಷ್ಠಿಕತೆಯ ಹೊರೆ ಕಡಿಮೆ ಮಾಡಬಹುದು ಎಂದು ಹೇಳಿರಲಿಲ್ಲ.
ನವದೆಹಲಿ(ಸೆ.1): "ಭಜನೆಗಳು" ಅಥವಾ ಭಕ್ತಿಗೀತೆಗಳನ್ನು ಹಾಡುವುದು ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದೇ? ಸಾಮಾಜಿಕ ಮಾಧ್ಯಮವನ್ನು ನಂಬುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮವಾದ "ಮನ್ ಕಿ ಬಾತ್" ನಲ್ಲಿ ಈ ಮಾತನ್ನು ಹೇಳಿದ್ದಾರೆ ಎಂದು ಬರೆಯಲಾಗಿದೆ. ನಿಜವಾದ ವಿಚಾರವೆಂದರೆ, ಪ್ರಧಾನಿ ಮೋದಿ ಪ್ರಸ್ತಾಪಿಸಿದ ವಿಚಾರವನ್ನು ಖಾಸಗಿ ವೆಬ್ಸೈಟ್ನ ವರದಿಯಲ್ಲಿ ಸಂಪೂರ್ಣವಾಗಿ ತಿರುಚಿ ಬರೆಯಲಾಗಿದೆ. ಈ ವರದಿಯ ಬೆನ್ನಲ್ಲಿಯೇ, ಪ್ರಧಾನಿ ಮೋದಿ ಅವರ ವಿರುದ್ಧ ಟೀಕಾಪ್ರಹಾರ ಆರಂಭವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಮೋದಿ ಅವರು ಹೇಳಿದ್ದಾರೆನ್ನುವ ಈ ಮಾತನ್ನು ಇಟ್ಟುಕೊಂಡು ಪ್ರಧಾನಿ ಮೋದಿಯನ್ನು ಕುಹಕ ಮಾಡಲಾಗಿತ್ತು. ಅಂಥದ್ದೇ ಒಂದು ಟ್ವೀಟ್ನಲ್ಲಿ, “ಭಾರತದ ಪ್ರಧಾನ ಮಂತ್ರಿ "ಮನ್ ಕಿ ಬಾತ್" ನಲ್ಲಿ ಭಜನೆ ಹಾಡುವುದರಿಂದ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ! ಅತಿಯಾದ ಅಪೌಷ್ಟಿಕತೆ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರಿದಾಗ ಇದು ಸಂಭವಿಸುತ್ತದೆ' ಎಂದು ಬರೆದಿದ್ದು. ಸ್ವೀಡನ್ನ ಉಪ್ಸಲಾ ವಿಶ್ವವಿದ್ಯಾನಿಲಯದ ಶಾಂತಿ ಮತ್ತು ಸಂಘರ್ಷ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಅಶೋಕ್ ಸ್ವೈನ್ ಟ್ವೀಟ್ ಮಾಡಿ, “ಭಜನ್ (ಹಿಂದೂ ಭಕ್ತಿಗೀತೆ) ಹಾಡುವುದರಿಂದ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಮೋದಿ ಹೇಳುತ್ತಾರೆ. ಪುಣ್ಯವಶಾತ್ ನೆಹರೂ ಈ ಮೂರ್ಖತನಕ್ಕೆ ಸಾಕ್ಷಿಯಾಗಲು ಜೀವಂತವಾಗಿಲ್ಲ!' ಎಂದು ಬರೆದಿದ್ದರು.
ಆದರೆ, ಮೋದಿ ಇದನ್ನು ನಿಜವಾಗಿಯೂ ಹೇಳಿದ್ದರೇ ಎನ್ನುವುದು ಈಗ ಪ್ರಶ್ನೆ. ಈ ಕುರಿತಂತೆ ಹಲವು ಮಾಧ್ಯಮಗಳು ಫ್ಯಾಕ್ಟ್ಚೆಕ್ಅನ್ನೂ ಮಾಡಿದ್ದು, ಇನ್ನೂ ಕೆಲವು ಮಾಧ್ಯಮಗಳು ಮೋದಿ ಮಾತನಾಡಿದ ಮನ್ ಕಿ ಬಾತ್ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆಲಿಸಿ ವರದಿ ಮಾಡಿವೆ. ಇದು ಸುಳ್ಳು ಮಾತ್ರವಲ್ಲ ಸಂಪೂರ್ಣವಾಗಿ ದಾರಿ ತಪ್ಪಿಸುವ ವರದಿ ಆಗಿದ್ದವು. ಮೋದಿ ಹೇಳಿದ್ದ ಮಾತನ್ನು ಅರ್ಥಮಾಡಿಕೊಳ್ಳದೇ ಮಾಡಿರುವ ವರದಿಯಾಗಿತ್ತು.
ಮನ್ ಕೀ ಬಾತ್ನ 92ನೇ ಎಪಿಸೋಡ್ ಆಗಸ್ಟ್ 28 ರಂದು ನಡೆದಿತ್ತು. ಅದರಲ್ಲಿ ಪ್ರಧಾನಿ ಮೋದಿ (Prime Minister Narendra Modi) ಆರಂಭದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ (Azadi Ka Amrit Mahotsav) ಬಗ್ಗೆ ಮಾತನಾಡಿದ್ದರು. ಭಾಷಣ ಆರಂಭವಾದ 12 ನಿಮಿಷದ ಬಳಿಕ, ಅವರು ಅಪೌಷ್ಠಿಕತೆ ( malnutrition ) ವಿಚಾರದ ಬಗ್ಗೆ ಮಾತನಾಡುತ್ತಾರೆ.
"ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಭಕ್ತಿಗೀತೆಗಳನ್ನು ಬಳಸಬಹುದು ಎಂದು ನೀವು ನಂಬುತ್ತೀರಾ? ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ, 'ಮೇರಾ ಬಚ್ಚಾ ಅಭಿಯಾನ' ಅಡಿಯಲ್ಲಿ, ಇದನ್ನು ಯಶಸ್ವಿಯಾಗಿ ಮಾಡಲಾಗಿದೆ. 'ಪೋಶನ್ ಗುರುಗಳು' ಎಂದು ಕರೆಯಲ್ಪಡುವ ಶಿಕ್ಷಕರಿರುವ ಜಿಲ್ಲೆಯಲ್ಲಿ 'ಭಜನ' ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಿಳೆಯರು ತಮ್ಮ ಅಂಗನವಾಡಿ ಕೇಂದ್ರಗಳಿಗೆ ಮುಷ್ಟಿ ಧಾನ್ಯಗಳನ್ನು ತಂದು ಶನಿವಾರದ ಬಾಲ ಭೋಜ್ ಅಡುಗೆ ಮಾಡಲು ಮಟ್ಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಇದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ."
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಭೇಟಿಗೆ ಅವಕಾಶ ಕೋರಿದ ಮುಸ್ಲಿಂ ವೇದಿಕೆ
ಇದರಲ್ಲಿ ಎಲ್ಲೂ ಕೂಡ ಅವರು ಭಕ್ತಿಗೀತೆಯಿಂದ ಅಪೌಷ್ಠಿಕತೆಯನ್ನು ಗುಣ ಮಾಡಬಹುದು ಎಂದು ಪ್ರಧಾನಿ ಹೇಳಿಲ್ಲ. ಬದಲಿಗೆ, ಅಪೌಷ್ಟಿಕತೆಯ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ವಿಧಾನವಾಗಿ ಭಕ್ತಿಗೀತೆಗಳನ್ನು ಹೇಗೆ ಬಳಸಲಾಗಿದೆ ಎಂಬುದರ ಕುರಿತು ಅವರು ಮಾತನಾಡಿದರು.
PM Modi In Mangaluru: ಪ್ರಧಾನಿ ಮೋದಿ ಸಮಾವೇಶದ ವೇಳೆ ಗೊಂದಲ ಸೃಷ್ಟಿಸುವ ಪ್ರಯತ್ನ, 2 ಕೇಸ್ ದಾಖಲು!
ಆದರೆ ಈ ಕಾರ್ಯಕ್ರಮದ ನಂತರ, ದಿ ವೈರ್ ಪ್ರಕಟಿಸಿದ ಲೇಖನವು ಮೋದಿಯವರ ವಿಧಾನವನ್ನು ಟೀಕಿಸಿ ವರದಿ ಮಾಡಿತ್ತು. “ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳು ಹಾನಿಕಾರಕವಲ್ಲ. ಆದರೆ ನಿರ್ಣಾಯಕ ಕಲ್ಯಾಣ ಸಮಸ್ಯೆಗಳಿಗೆ ಪರೀಕ್ಷೆ ಮತ್ತು ಅನುಮೋದಿತ ಪರಿಹಾರಗಳನ್ನು ಬದಿಗಿಡುವ ಅಭ್ಯಾಸಗಳ ಭಾಗವಾಗಿ ಮಾಡುವುದು ಕೆಟ್ಟ ನಂಬಿಕೆಯಾಗಿದೆ' ಎಂದು ಪಂಕಜ್ ಕುಮಾರ್ ಮಿಶ್ರಾ ಅವರು ಬರೆದ ವರದಿಯಲ್ಲಿ ತಿಳಿಸಿತ್ತು. ಇದರ ಬೆನ್ನಲ್ಲಿಯೇ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಆರಂಭವಾಗಿದ್ದವು.
ಇದಕ್ಕೆ ನೇರ ಸಾಕ್ಷ್ ಇರುವ ಕಾರಣ ಭಕ್ತಿಗೀತೆಗಳು ಅಪೌಷ್ಟಿಕತೆಯನ್ನು ಎದುರಿಸಲು ಪರಿಣಾಮಕಾರಿ ಸಾಧನವಾಗಿ ಬಳಸಿಕೊಳ್ಳಬಹುದು, ಆದರೆ ಭಜನೆಗಳನ್ನು ಹಾಡುವುದರಿಂದ ಅದನ್ನು ಪರಿಹರಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಲಿಲ್ಲ ಎಂಬುದು ಸ್ಪಷ್ಟವಾಗಿದೆ.