Asianet Suvarna News Asianet Suvarna News

ಆಪರೇಷನ್‌ ಗಂಗಾ ಯಶಸ್ವಿ: ಕನ್ನಡಿಗರ ಪರವಾಗಿ ಮೋದಿಗೆ ತೇಜಸ್ವಿ ಸೂರ್ಯ ಧನ್ಯವಾದ!

*ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಸಂಸದ ತೇಜಸ್ವಿ ಕಿವಿಮಾತು
*ಆಪರೇಷನ್‌ ಗಂಗಾ ಯಶಸ್ವಿ: ಕನ್ನಡಿಗರ ಪರವಾಗಿ ಮೋದಿಗೆ ಧನ್ಯವಾದ
 

If no work was done would it be possible for students to come back MP Tejasvi Surya mnj
Author
Bengaluru, First Published Mar 13, 2022, 7:34 AM IST

ಬೆಂಗಳೂರು (ಮಾ. 13): ಕೇಂದ್ರ ಸರ್ಕಾರದ ಏನೂ ಕೆಲಸ ಮಾಡದೇ ಕುಳಿತಿದ್ದರೆ ಇಷ್ಟೊಂದು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಿಂದ ಆಗಮಿಸುತ್ತಲೇ ಇರಲಿಲ್ಲ. ಪ್ರಧಾನಿ ಮತ್ತು ಕೇಂದ್ರ ಸಚಿವರ ಶ್ರಮದಿಂದ ಆಪರೇಷನ್‌ ಗಂಗಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,‘ಕೆಲ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಏನು ಕೆಲಸ ಮಾಡಿಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಅವರು ತಮ್ಮ ಮೊಬೈಲ್‌ನಲ್ಲಿ ವಿಮಾನ ಟಿಕೆಟ್‌ ಬುಕ್‌ ಮಾಡಿಕೊಂಡು ಬಂದಿದ್ದಾರೋ? ಅಥವಾ ನಮ್ಮ ದೇಶ ಕಳಿಸಿದ ವಿಮಾನದಲ್ಲಿ ಬಂದಿದ್ದಾರೋ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.

ಕೇಂದ್ರ ಸರ್ಕಾರ ಏನೂ ಕೆಲಸ ಮಾಡದೆ ಇದ್ದಿದ್ದರೆ ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್‌ನಿಂದ ಬರುತ್ತಲೇ ಇರಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ರೀತಿ ಸುಳ್ಳು ಹೇಳಬಾರದು ಎಂದು ಉಕ್ರೇನ್‌ನಿಂದ ಬಂದು ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ: Operation Ganga: ಕಾರ್ಯಾಚರಣೆಗೆ ತೆರೆ, ತಾಯ್ನಾಡಿಗೆ ವಾಪಸ್ಸಾದ ವಿದ್ಯಾರ್ಥಿಗಳಲ್ಲಿ ಸಂತಸ

ಆಪರೇಶನ್‌ ಗಂಗಾ ಕಾರ್ಯಾಚರಣೆ ಯಶಸ್ವಿ: ಮೂರು ವಾರಗಳು ಆಪರೇಶನ್‌ ಗಂಗಾ ಕಾರ್ಯಾಚರಣೆ ನಡೆದಿದ್ದು, 19,448 ಭಾರತೀಯರನ್ನು ಉಕ್ರೇನ್‌ನ ವಿವಿಧ ಭಾಗಗಳಿಂದ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಸುಮಾರು 16 ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 633 ಕನ್ನಡಿಗ ವಿದ್ಯಾರ್ಥಿಗಳಿದ್ದಾರೆ. ಸಂಪೂರ್ಣ ಆಪರೇಶನ್‌ ಗಂಗಾ ಸಾಕಷ್ಟುಜಟಿಲವಾಗಿತ್ತು. 

ಪ್ರಧಾನಿ ನರೇಂದ್ರ ಮೋದದಿ ಮತ್ತು ಕೇಂದ್ರ ಸಚಿವರ ಸತತ ಪ್ರಯತ್ನದಿಂದ ಯಶಸ್ವಿಯಾಗಿದೆ. ಉಕ್ರೇನ್‌ ಮತ್ತು ರಷ್ಯಾ ಅಧ್ಯಕ್ಷರ ಜತೆ ನಿರಂತರವಾಗಿ ಸಂಪರ್ಕ ಮಾಡಿ ಭಾರತೀಯರನ್ನು ಕರೆ ತರುವಲ್ಲಿ ಪ್ರಧಾನಿಗಳು ಯಶಸ್ವಿಯಾಗಿಯಾಗಿದ್ದಾರೆ. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಅವರವರ ಪ್ರಾಣಿಗಳನ್ನು ಕೂಡ ರಕ್ಷಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಪರವಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದರು.

ಉಕ್ರೇನ್‌ನಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗೆ ನನ್ನ ಸಂಸದರ ಕಚೇರಿಯಿಂದಲೂ ಸಾಕಷ್ಟುಕೆಲಸವನ್ನು ಮಾಡಲಾಗಿತ್ತು. 400 ವಿದ್ಯಾರ್ಥಿಗಳ ಪಟ್ಟಿಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಉಕ್ರೇನ್‌ನ ವಿದ್ಯಾರ್ಥಿಗಳನ್ನು ವಾಟ್ಸ್‌ಅಪ್‌ ಗ್ರೂಪ್‌ಗಳಿಗೆ ಸೇರಿಸಿ ನಿರಂತರ ಸಂಪರ್ಕ ಹೊಂದಲಾಗಿತ್ತು ಎಂದರು.

ಇದನ್ನೂ ಓದಿ: Russia Ukraine War: ಒಂದ್ಹೊತ್ತು ಊಟ..! ಕುಡಿಯೋಕೆ ಮಂಜುಗಡ್ಡೆ ನೀರು..!: ಸುಮಿಯಿಂದ ಮರಳಿದ ಕನ್ನಡಿಗರ ಅನುಭವ!

ನವೀನ್‌ ಮೃತದೇಹ ತರುವ ಭರವಸೆ ಇರಲಿ: ನವೀನ್‌ ಮೃತದೇಹ ತರುವ ವಿಚಾರವಾಗಿ ಮಾತನಾಡಿದ ಸಂಸದರು, ಉಕ್ರೇನ್‌ನ ಭಾರತೀಯ ರಾಯಭಾರಿ ಕಚೇರಿಯು ಮೃತದೇಹ ಪತ್ತೆ ಮಾಡಿದೆ. ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡುತ್ತಿದೆ. 

ಜನರಲ್‌ ಬಿಪಿನ್‌ ರಾವತ್‌ ಮರಣ ಸಂದರ್ಭದಲ್ಲೂ ದೇಹವನ್ನು ಗುರುತಿಸುವಲ್ಲಿ ತಡವಾಗಿತ್ತು. ಈ ಬಗ್ಗೆ ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ನವೀನ್‌ ಮೃತದೇಹ ಶೀಘ್ರ ಬರುತ್ತದೆ ಎಂಬ ಭರವಸೆ ಇಟ್ಟುಕೊಳ್ಳೋಣ ಎಂದು ಹೇಳಿದರು.

ವೈದ್ಯಕೀಯ ಸೀಟ್‌ಗಳು ಹೆಚ್ಚಳ: 2014ಕ್ಕೆ ಮೊದಲು ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ 54 ಸಾವಿರ ಸೀಟ್‌ಗಳಿದ್ದವು. ಸದ್ಯ ಮೋದಿಜೀ ಅಧಿಕಾರಕ್ಕೆ ಬಂದ ಬಳಿಕ 86,648ಕ್ಕೆ ಹೆಚ್ಚಳವಾಗಿವೆ. ಅಂದರೆ ಶೇ. 55ರಷ್ಟುಏರಿಕೆಯಾಗಿದೆ. ವೈದ್ಯಕೀಯ ಸ್ನಾತಕಪದವಿ (ಪಿಜಿ) ಸೀಟ್‌ಗಳು 24 ಸಾವಿರ ಇದ್ದು, ಸದ್ಯ ಅವುಗಳ ಪ್ರಮಾಣ ಶೇ.73 ರಷ್ಟುಹೆಚ್ಚಳವಾಗಿದೆ. 

ಉಕ್ರೇನ್‌ನಿಂದ ಕರೆತಂದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಸದ್ಯದಲ್ಲಿಯೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

Follow Us:
Download App:
  • android
  • ios