ಕೇರಳದಲ್ಲಿ ಅತ್ಯಾಚಾರದ ಆರೋಪ ಹೊತ್ತಿರುವ ಸರ್ಕಾರಿ ವಕೀಲರೊಬ್ಬರು ಸಂತ್ರಸ್ತೆಯ ಕುಟುಂಬಕ್ಕೆ ಕರೆ ಮಾಡಿ ತಮ್ಮ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಮನವಿ ಮಾಡಿರುವ ಘಟನೆ ನಡೆದಿದೆ.

ಕೊಚ್ಚಿ: ಅತ್ಯಾಚಾರ ಆರೋಪ ಹೊತ್ತಿರುವ ಕೇರಳ ಹೈಕೋರ್ಟ್‌ನ ಸರ್ಕಾರಿ ವಕೀಲರೊಬ್ಬರು, ಸಂತ್ರಸ್ತೆಯ ಕುಟುಂಬದ ಬಳಿ ಕೇಸ್ ಹಿಂಪಡೆಯುವಂತೆ ಮನವಿ ಮಾಡಿಕೊಂಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.‘ನಾನು ನ್ಯಾಯಾಧೀಶನಾಗಿ ಆಯ್ಕೆಯಾಗಲಿದ್ದೇನೆ. ದಯವಿಟ್ಟು ನನ್ನ ಜೀವನವನ್ನು ಹಾಳು ಮಾಡಬೇಡಿ. ಅತ್ಯಾಚಾರ ಪ್ರಕರಣವನ್ನು ಹಿಂಪಡೆದುಕೊಳ್ಳಿ. ನೀವೇನು ಹೇಳಿದರೂ ನಾನು ಮಾಡುತ್ತೇನೆ’ ಎಂದು ತಮ್ಮ ವಿರುದ್ಧ ದೂರು ನೀಡಿರುವ ಸಂತ್ರಸ್ತೆಯ ಕುಟುಂಬದ ಬಳಿ ಸರ್ಕಾರಿ ವಕೀಲ ಕಣ್ಣೀರು ಹಾಕುತ್ತ ಅಂಗಲಾಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

Add Asianetnews Kannada as a Preferred SourcegooglePreferred

ತಮ್ಮ ಬಳಿ ಕಾನೂನು ಸಲಹೆ ಕೇಳಲು ಬಂದ ಮಹಿಳೆಯ (Woman) ಮೇಲೆ ತನ್ನ ಕಚೇರಿಯಲ್ಲೇ ಅತ್ಯಾಚಾರ ಮಾಡಿದ ಹಾಗೂ ಸಂತ್ರಸ್ತೆಯ ಮನೆಯಲ್ಲೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಕೀಲ ಪಿಜಿ ಮನು ಎಂಬುವವರ ಮೇಲೆ ಎರ್ನಾಕುಲಂ ಪೊಲೀಸರು ಪ್ರಕರಣ (Case) ದಾಖಲಿಸಿದ್ದರು. ಅಲ್ಲದೇ ಮನು, ತನಗೆ ಬೆದರಿಕೆ ಹಾಕಿದ್ದಾಗಿ ಹಾಗೂ ತನ್ನ ಅನುಮತಿ ಇಲ್ಲದೇ ತನ್ನ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ (Complaint) ತಿಳಿಸಿದ್ದಳು.

'ಹೆಣ್ಮಕ್ಕಳ ಮೇಲೆ ರೇಪ್‌ ಕೇಸ್‌ ದಾಖಲಿಸಬಹುದೇ..?' ಐಪಿಸಿ 375 ಪರಿಶೀಲನೆಗೆ ಮುಂದಾದ ಸುಪ್ರೀಂ ಕೋರ್ಟ್‌!

ಇದೀಗ ಸಂತ್ರಸ್ತೆಯ ಸೋದರ ಸಂಬಂಧಿಯೊಬ್ಬರಿಗೆ ಕರೆ ಮಾಡಿದ ಮನು, 'ನಾನು ನಿಮ್ಮ ಕಾಲಿಗೆ ಬೀಳುತ್ತೇನೆ. ನನ್ನ ಜೀವನವನ್ನು ಹಾಳು ಮಾಡಬೇಡಿ. ನಾನು ನ್ಯಾಯಾಧೀಶರ ಸಮಿತಿಗೆ ಆಯ್ಕೆಯಾಗಲಿದ್ದೇನೆ. ನಾನು ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ. ನೀವು ಏನು ಹೇಳಿದರೂ ಮಾಡುತ್ತೇನೆ' ಎಂದಿದ್ದಾರೆ. ಆದರೆ ಮನು ಮಾತಿಗೆ ಸಂತ್ರಸ್ಥೆಯ ಕುಟುಂಬದವರು ಒಪ್ಪಿಲ್ಲ.