'ನಾನೊಬ್ಬ ಹೆಮ್ಮೆಯ ಹಿಂದೂ, ನಾನು ಬೆಳೆದಿದ್ದೂ ಕೂಡ ಅದೇ ರೀತಿ..' ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾತು
ನಾನೊಬ್ಬ ಹೆಮ್ಮೆಯ ಹಿಂದೂ, ನನ್ನ ಹಿಂದೂ ಮೂಲಗಳ ಬಗ್ಗೆ ಅತೀವವಾದ ಹೆಮ್ಮೆ ನನಗಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

ನವದೆಹಲಿ (ಸೆ.8): ದೇಶದಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ಹಾಗೂ ಡಿಎಂಕೆ ಸಂಸದ ಎ.ರಾಜಾ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಜಿ20 ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಮ್ಮ ಹಿಂದೂ ಮೂಲದ ಬಗ್ಗೆ ಅತೀವ ಹೆಮ್ಮೆ ಪಟ್ಟು ಮಾತನಾಡಿದ್ದಾರೆ. ಭಾರತದಲ್ಲಿ ಇರುವ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯ ನನಗೆ ಸಿಗಬಹುದು ಎಂದು ಭಾವಿಸಿದ್ದೇನೆ ಎಂದು ಪತ್ನಿ ಅಕ್ಷತಾ ಮೂರ್ತಿ ಜೊತೆ ಶುಕ್ರವಾರ ಭಾರತಕ್ಕೆ ಆಗಮಿಸಿದ ರಿಷಿ ಸುನಕ್ ಹೇಳಿದ್ದಾರೆ. ಅದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು ಹೇಳಿದ ಅವರು, ಭಾರತದ ಆತಿಥ್ಯದಲ್ಲಿ ನಡೆಯಲಿರುವ ಈ ಜಿ20 ಶೃಂಗಸಭೆಯನ್ನು ದೊಡ್ಡ ಮಟ್ಟದಲ್ಲಿ ಯಶಸ್ಸು ಮಾಡಲು ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಅದರೊಂದಿಗೆ ಇತ್ತೀಚೆಗೆ ತಾವು ರಕ್ಷಾ ಬಂಧನ ಆಚರಣೆ ಮಾಡಿದ ವಿಚಾರವನ್ನೂ ಅವರು ತಿಳಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು, 'ನಾನೊಬ್ಬ ಹೆಮ್ಮೆಯ ಹಿಂದೂ. ನನ್ನನ್ನು ಅದೇ ರೀತಿಯಲ್ಲಿ ಬೆಳೆಸಲಾಗಿದೆ. ಅದರಿಂದಾಗಿ ಇಂದು ನಾನು ಈ ಸ್ಥಾನದಲ್ಲಿದ್ದೇನೆ. ಮುಂದಿನ ಒಂದೆರಡು ದಿನ ನಾನು ಭಾರತದಲ್ಲಿ ಇರುತ್ತೇನೆ. ಈ ಸಮಯದಲ್ಲಿ ನನಗೆ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯ ಸಿಗಬಹುದು ಎಂದು ಭಾವಿಸಿದ್ದೇನೆ. ಇತ್ತೀಚೆಗಷ್ಟೇ ನಾನು ರಕ್ಷಾಬಂಧನವನ್ನು ಆಚರಿಸಿದೆ. ಈ ವೇಳೆ ನನ್ನ ಸಹೋದರಿಯರು ಹಾಗೂ ಸೋದರ ಸಂಬಂಧಿಗಳು ರಾಖಿ ಕಟ್ಟಿದರು. ನನ್ನ ಬಳಿ ಅವರು ಕಟ್ಟಿರುವ ಎಲ್ಲಾ ರಾಖಿಗಳೂ ಇವೆ. ಆದರೆ, ಇತ್ತೀಚೆಗೆ ನಡೆದ ಕೃಷ್ಣಾ ಜನ್ಮಾಷ್ಠಮಿಯನ್ನು ಸರಿಯಾಗಿ ಆಚರಿಸಲು ನನಗೆ ಸಮಯ ಸಿಗಲಿಲ್ಲ. ಆದರೆ, ನಾವು ಈ ಬಾರಿ ಮಂದಿರಕ್ಕೆ ಭೇಟಿ ನೀಡಿದರೆ ಅದನ್ನು ಸರಿದೂಗಿಸಬಹುದು ಎಂದು ನಾನು ಭಾವಿಸುತ್ತೇನೆ. ಇದು ನನಗೆ ಬಹಳ ಮುಖ್ಯವಾಗಿರುವುದು ಕೂಡ. ನನಗೆ ನಂಬಿಕೆ ಎಂಬುದು ಅವರ ಜೀವನದಲ್ಲಿ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲೂ ನನ್ನಂಥ ಒತ್ತಡದ ಕೆಲಸಗಳನ್ನು ಹೊಂದಿರುವಾಗ ನಂಬಿಕೆಗಳೇ ಮುಖ್ಯವಾಗುತ್ತದೆ. ಎಲ್ಲವನ್ನೂ ತಾಳ್ಮೆಯಿಂದ ನೋಡಲು, ನಮ್ಮಲ್ಲೇ ಬಲ ತುಂಬಲು ನಂಬಿಕೆ ಎನ್ನುವುದು ತುಂಬಾ ಪ್ರಮುಖ ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ ರಿಷಿ ಸುನಕ್, ನಾನು ಮೋದಿಜೀ ಅವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದೇನೆ. ಅದರಲ್ಲೂ ನನ್ನ ಜೊತೆ ಅವರು ಬಹಳ ಆತ್ಮೀಯವಾಗಿ ಇರುತ್ತಾರೆ. ಇಬ್ಬರೂ ಕೂಡ ದೇಶಕ್ಕಾಗಿ ತುಂಬಾ ಪರಿಶ್ರಮ ಪಡುತ್ತೇವೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ವಾಣಿಜ್ಯ ಒಪ್ಪಂದವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸುವ ಗುರಿಯನ್ನು ಹೊಂದಿದ್ದೇನೆ. ಎರಡೂ ದೇಶಕ್ಕೂ ಒಳ್ಳೆಯದಾಗುವ ನಿಟ್ಟಿನಲ್ಲಿ ನಾವಿಬ್ಬರೂ ಯೋಚನೆ ಮಾಡುತ್ತಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
ಐತಿಹಾಸಿಕ ಜಿ20 ಶೃಂಗ ಸಭೆಗೆ ಕ್ಷಣಗಣನೆ: ವಿಶ್ವದ ಗಣ್ಯಾತಿಗಣ್ಯರ ಆಗಮನ: ಎಲ್ಲೆಡೆ ಬಿಗಿ ಭದ್ರತೆ
ಇಂಥ ವೇದಿಕೆಗಳಲ್ಲಿ ನಾನು ಪ್ರಧಾನಿ ಮೋದಿ ಅವರಿಗೆ ಅಪಾರವಾಗಿ ಬೆಂಬಲ ನೀಡುತ್ತೇನೆ. ಈ ಬಾರಿಯ ಜಿ20 ಅಪಾರ ಯಶಸ್ಸು ಕಾಣಲಿದೆ ಎನ್ನುವುದು ನನಗೆ ಗೊತ್ತಿದೆ. ಏಕೆಂದರೆ, ಈ ವರ್ಷ ಭಾರತದ ಪಾಲಿಗೆ ಬಹಳ ವಿಶೇಷವಾದುದಾಗಿದೆ ಎಂದು ಅವರು ತಿಳಿಸಿದ್ದಾರೆ. 'ಭಾರತಕ್ಕೆ ಬಂದ ಕೆಲವು ಕ್ಷಣಗಳು ಬಹಳ ಖುಷಿಯಾಗಿದ್ದವು. ಅದರಲ್ಲೂ ಅಕ್ಷತಾ ಜೊತೆ ಇಲ್ಲಿಗೆ ಭೇಟಿ ನೀಡುವುದು ವೈಯಕ್ತಿಕವಾಗಿ ನನಗೆ ಖುಷಿ ನೀಡುತ್ತದೆ. ಇಲ್ಲಿಯವರೆಗಿನ ಭೇಟಿಯ ಎಲ್ಲಾ ಕ್ಷಣಗಳನ್ನೂ ನಾವಿಬ್ಬರೂ ಆನಂದಿಸಿದ್ದೇವೆ' ಎಂದು ರಿಷಿ ಹೇಳಿದ್ದಾರೆ.
ಪತ್ನಿ ಅಕ್ಷತಾ ಹೆಸರಲ್ಲಿ ಇನ್ಫಿ ಷೇರು: ಬ್ರಿಟನ್ ಪ್ರಧಾನಿ ಸುನಕ್ ವಿಚಾರಣೆ?
ನನ್ನ ಪತ್ನಿ ಬೆಂಗಳೂರಿನವಳು ಎನ್ನುವುದು ನಿಮಗೆಲ್ಲರಿಗೂ ಗೊತ್ತಿದೆ. ನಮ್ಮ ಮದುವೆ ಬೆಂಗಳೂರಿನಲ್ಲಿಯೇ ಆಗಿತ್ತು. ದೆಹಲಿಯಲ್ಲಿ ನಮಗೆ ಮೊದಲ ಮಗುವಾಗುವ ಮುನ್ನ ಬೆಂಗಳೂರಿನಲ್ಲಿ ಆತ್ಮೀಯ ಕ್ಷಣಗಳನ್ನು ಕಳೆದಿದ್ದೆವು. ದೆಹಲಿಯಲ್ಲಿ ನಾವು ತಿರುಗಾಡಿದ್ದ ಸಣ್ಣ ಸಣ್ಣ ರೆಸ್ಟೋರೆಂಟ್ಗೆ ಈಗ ಹೋಗಬಹುದಾ ಎನ್ನುವುದನ್ನು ನೋಡುತ್ತೇನೆ ಎಂದಿದ್ದಾರೆ. ಭಾರತಕ್ಕೆ ಬಂದಿರುವುದು ನನಗೆ ಬಹಳ ಸ್ಪೆಷಲ್. ಇಲ್ಲಿಂದಲೇ ನನ್ನ ಕುಟುಂಬ ಬಂದಿದ್ದು. ಆದರೆ, ಇಲ್ಲಿಗೆ ಈಗ ಬಂದಿರುವುದು ಇಂಗ್ಲೆಂಡ್ನ ಪ್ರತಿನಿಧಿಯಾಗಿ. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಇದ್ದಾರೆ.