ಗಂಡ ಹೆಂಡತಿಯನ್ನ ಸಾಯಿಸೋದು, ಹೆಂಡತಿ ಗಂಡನ ಸಾಯಿಸೋ ಪ್ರಕರಣಗಳು ಇತ್ತೀಚೆಗೆ ಜೋರಾಗಿ ನಡೆಯುತ್ತಿದೆ. ಸಮಾಜದಲ್ಲಿ ದೊಡ್ಡ ಆತಂಕ ಸೃಷ್ಟಿಯಾಗಿದ್ದು, ಇಲ್ಲಿ ಯಾರನ್ನ ಯಾರು ನಂಬಬೇಕು, ಯಾರನ್ನ ನಂಬಬಾರದು ಎಂಬ ಭಯ ಶುರುವಾಗಿದೆ. ಈ ಮಧ್ಯೆ ಹರಿಯಾಣದಲ್ಲಿ ಘೋರ ಕೃತ್ಯ ನಡೆದಿದೆ.
ಹರಿಯಾಣ: ಮಹಾರಾಷ್ಟ್ರದ ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹರಿಯಾಣದ ಗುರುಗ್ರಾಮದಲ್ಲಿ ಅಂತಹದ್ದೇ ಅಘಾತಕಾರಿ ಘಟನೆ ನಡೆದಿದೆ. ತನ್ನ ಪ್ರೇಯಸಿಯ ಜೊತೆಗಿನ ಅಕ್ರಮ ಸಂಬಂಧ ಮುಂದುವರಿಸಲು ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ, ಮದುವೆಯಾದ ಮೂರೇ ತಿಂಗಳಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಗುಂಡಿಕ್ಕಿ ಜೀವ ತೆಗೆದಿದ್ದಾನೆ.
ಏನಿದು ಪ್ರಕರಣ?
ಗುರುಗ್ರಾಮದ ಮಾನೇಸರ್ ನಿವಾಸಿ 25 ವರ್ಷದ ಅಂಕಿತ್ ಕೃತ್ಯ ಎಸಗಿರುವ ಆರೋಪಿ. ಈತನಿಗೆ 38 ವರ್ಷದ ರಜನಿ ದೇವಿ ಜೊತೆ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದ. ಅಂಕಿತ್ ಮಾನೇಸರ್ನಲ್ಲಿ ತಂಬಾಕು ಅಂಗಡಿ ನಡೆಸುತ್ತಿದ್ದರೆ, ರಜನಿ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದಳು. ರಜನಿ ಜೊತೆ ಸಂಬಂಧದಲ್ಲಿದ್ದರೂ, ಅಂಕಿತ್ ಕಳೆದ ಫೆಬ್ರವರಿಯಲ್ಲಿ 22 ವರ್ಷದ ಯುವತಿ ಜೊತೆ ಏಕಾಏಕಿ ಮದುವೆ ಮಾಡಿಕೊಂಡಿದ್ದ.
ಇತ್ತ ಮದುವೆ ಆಗಿದ್ದರೂ ಅಂಕಿತ್ಗೆ ರಜಿನಿ ಮೇಲಿನ ವ್ಯಾಮೋಹ ಕಡಿಮೆ ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಿ ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗುತ್ತಾಳೆ ಎಂದು ಭಾವಿಸಿದ ಕಿಡಿಗೇಡಿಗಳು ಆಕೆಯನ್ನ ಮುಗಿಸಲು ಸಂಚು ರೂಪಿಸಿದ್ದಾರೆ. ಹತ್ಯೆಗಾಗಿ ಎರಡು ತಿಂಗಳ ಮೊದಲೇ ಉತ್ತರ ಪ್ರದೇಶದಿಂದ ಅಕ್ರಮವಾಗಿ ಪಿಸ್ತೂಲ್ ಖರೀದಿಸಿರೋದು ತನಿಖೆಯಿಂದ ತಿಳಿದುಬಂದಿದೆ.
ಪ್ಲಾನ್ ನಂತೆಯೇ ಮೇ 21 ರಂದು ರಜನಿಯನ್ನ ತಾನಿದ್ದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದ ಅಂಕಿತ್, ಅಲ್ಲಿ ಆಕೆಗೆ ಗುಂಡಿಕ್ಕಿ ಸಾಯಿಸಿದ್ದಾನೆ. ನಂತರ ಯಾರಿಗೂ ಅನುಮಾನ ಬರದಂತೆ ಮೃತದೇಹವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಹರಿದ್ವಾರದ ಮೂಲಕ ನೇಪಾಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು.
ಇತ್ತ ಮೇ 22 ರಂದು ಮೃತಳ ತಾಯಿ ತನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ತನಿಖೆ ನಡೆಸಿದ ಪೊಲೀಸರಿಗೆ ಮಾನೇಸರ್ನ ಕೊಠಡಿಯೊಂದರಲ್ಲಿ ಗುಂಡೇಟಿನಿಂದ ಯುವತಿಯ ಶವ ಪತ್ತೆಯಾಗಿತ್ತು.ಹತ್ಯೆ ಮಾಡಿರೋದು ಅಂಕಿತ್ ಅನ್ನೋದು ತಿಳಿಯುತ್ತಿದ್ದಂತೆಯೇ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಗಳ ಹಡೆಮುರಿ ಕಟ್ಟಲು ಪ್ಲಾನ್ ಮಾಡಿದ್ದರು. ಜೂನ್ 30 ರಂದು ಇಬ್ಬರೂ ಭಾರತಕ್ಕೆ ಮರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಗ್ತಿದ್ದಂತೆಯೇ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧನದ ಬಳಿಕ ಇಬ್ಬರನ್ನೂ ನ್ಯಾಯಾಂಗಕ್ಕೆ ಒಪ್ಪಿಸಿ ಇದೀಗ ಐದು ದಿನಗಳ ಕಾಲ ಪೊಲೀಸರು ತನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮದ್ವೆಯಾದ ಹೊಸತರಲ್ಲಿ ಪತ್ನಿಯ ಮೇಲೆ ಪ್ರೀತಿ ತೋರಬೇಕಾದ ಪತಿ, ತನ್ನ ಹಳೆಯ ಸಂಬಂಧಕ್ಕಾಗಿ ಇಷ್ಟು ಭೀಕರವಾಗಿ ಹತ್ಯೆ ಮಾಡಿರುವುದು ಜನರಲ್ಲಿ ನಡುಕ ಹುಟ್ಟಿಸಿದೆ. ಅಕ್ರಮ ಸಂಬಂಧಗಳು ಹೇಗೆ ಸುಂದರ ಸಂಸಾರವನ್ನು ಬಲಿ ತೆಗೆದುಕೊಳ್ಳುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


