ಮೇಘಾಲಯದ ಮಧುಚಂದ್ರದ ಕೊಲೆ ಪ್ರಕರಣದಲ್ಲಿ ಬಳಸಲಾದ ಮಚ್ಚು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ. ಯುಟ್ಯೂಬರ್ ಒಬ್ಬರು ಸೋನಂ ಮತ್ತು ಆಕೆಯ ಪತಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದು ಪೊಲೀಸರ ತನಿಖೆಗೆ ಸಹಾಯಕವಾಗಿದೆ.

ಗುವಾಹಟಿ (ಜೂ.17): ಮೇಘಾಲಯದಲ್ಲಿ ಮಧುಚಂದ್ರಕ್ಕೆ ಪತಿಯ ಕರೆದೊಯ್ದು, ಆತನನ್ನು ಪತ್ನಿಯೇ ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಲಭಿಸಿದ್ದು, ಕೊಲೆಗೆ ಬಳಸಿದ್ದ ಮಚ್ಚು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹತ್ಯೆಯ ರೂವಾರಿ ಸೋನಂಳ ಪ್ರಿಯಕರ ರಾಜ್‌, ಮೊದಲಿಗೆ ಈ ಮಚ್ಚು ಬಳಸಿ ಸೋನಂ ಪತಿ ರಾಜಾ ರಘುವಂಶಿ ಮೇಲೆ ಆಕ್ರಮಣ ಮಾಡಿದ್ದ. ಇದರಿಂದ ಪಾರಾಗಲು ರಘುವಂಶಿ ಯತ್ನಿಸಿದ್ದ. ಆದರೆ ಅದು ವಿಫಲವಾಗಿತ್ತು ಎಂದು ಮೂಲಗಳು ತಿಳಿಸಿವೆ. ಕೊಲೆಗೆ ಬಳಸಿದ ಮಚ್ಚನ್ನು ಅಸ್ಸಾಂನ ಗುವಾಹಟಿ ರೈಲು ನಿಲ್ದಾಣದ ಸಮೀಪ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮತ್ತೊಂದೆಡೆ ರಘುವಂಶಿ ಅವರ ಪೋಷಕರು ಸೋನಂಳ ಮನೆಯವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಕೊಲೆ ಹಿಂದೆ ಹಲವರ ಕೈವಾಡವಿರುವ ಶಂಕೆ ಇದೆ ಎಂದು ಹೇಳಿದ್ದಾರೆ.

ಹತ್ಯೆಯ ಕೊನೆ ವಿಡಿಯೋ ವೈರಲ್!

ನವದೆಹಲಿ: ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಮೇಘಾಲಯದ ‘ಮಧುಚಂದ್ರ ಕೊಲೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್‌ ಒಬ್ಬರು ಸೋನಂ ಮತ್ತು ಆಕೆಯ ಕೊಲೆಯಾದ ಗಂಡ ಮೇಘಾಲಯದ ಕಾಡಿನಲ್ಲಿ ವಿಹರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ದೇವೇಂದ್ರ ಸಿಂಗ್‌ ಎಂಬ ಯೂಟ್ಯೂಬರ್‌ ಸೋನಂ ದಂಪತಿ ಮೇಘಾಲಯದಲ್ಲಿದ್ದ ವೇಳೆಯೇ ಅದೇ ಸ್ಥಳಕ್ಕೆ ತೆರಳಿದ್ದರು. ಮೇಘಾಲಯದ ಚಿರಾಪುಂಜಿ ಸಮೀಪ ಸೇತುವೆ ಬಳಿ ವ್ಲಾಗಿಂಗ್‌ ಮಾಡುವಾಗ ಸೋನಂ ಮತ್ತು ಆಕೆಯ ಪತಿ ರಾಜಾ ರಘುವಂಶಿ ಅವರು ಟ್ರಕಿಂಗ್‌ ಮಾಡುವುದನ್ನು ಆಕಸ್ಮಿಕವಾಗಿ ಸೆರೆ ಹಿಡಿದಿದ್ದಾರೆ. ಘಟನೆಯೆಲ್ಲಾ ಬೆಳಕಿಗೆ ಬಂದ ಬಳಿಕ ದೇವೇಂದ್ರ ಅವರು ತಾವು ತೆಗೆದ ವಿಡಿಯೋವನ್ನು ಪರಾಮರ್ಶಿಸಿ ಮತ್ತೆ ಬಿಡುಗಡೆ ಮಾಡಿದ್ದು, ಇದರಿಂದ ಮೇಘಾಲಯ ಪೊಲೀಸರಿಗೆ ಸಹಾಯವಾಗಬಹುದು ಎಂದಿದ್ದಾರೆ.