ಕಟ್ಟುವೆವು ಹೊಸ ನಾಡೊಂದನ್ನು: ಚರ್ಚ್ ದುರಸ್ತಿಗೆ ದಾನ ನೀಡಿದ ಹಿಂದೂ!
ಚರ್ಚ್ ದುರಸ್ತಿ ಕಾರ್ಯಕ್ಕೆ 5 ಲಕ್ಷ ರೂ. ದಾನ| ಜಾತ್ಯಾತೀತ ತತ್ವ ಮೆರೆದ ಹಿಂದೂ ಯುವಕ| ಸಿಕಂದರಾಬಾದ್ ಸೇಂಟ್ ಮೇರಿ ಬಾಸಿಲಿಕಾ ಚರ್ಚ್| ಅಮೆರಿಕದಲ್ಲಿ ಕೆಲಸ ಸಿಗಲಿ ಎಂದು ಹರಕೆ ಹೊತ್ತಿದ್ದ ಮುತಿಯಾಲ ದಿನೇಶ್ ಕುಮಾರ್| ಕೆಲಸ ಸಿಕ್ಕ ಬಳಿಕ ಮೊದಲ ತಿಂಗಳ ವೇತನ ದಾನ ಮಾಡಿದ ದಿನೇಶ್|
ಸಿಕಂದರಾಬಾದ್(ಡಿ.14): ಧರ್ಮದ ಆಧಾರದ ಮೇಲೆ ನಮ್ಮ ಸಮಾಜ ವಿಭಜನೆಯಾಗುತ್ತಿದೆ ಎಂದು ಕೆಲವರು ಬಾಯಿ ಬಡಿದುಕೊಳ್ಳುತ್ತಿರುತ್ತಾರೆ.
ಆದರೆ ನಾವು ಸಾಮಾಜಿಕವಾಗಿಯೇ ಜಾತ್ಯಾತೀತರು ಎಂಬುದನ್ನು ನಮ್ಮದೇ ಸಮಾಜದ ಸಾಮಾನ್ಯ ಜನ ಆಗಾಗ ಸಾಬೀತು ಮಾಡುತ್ತಲೇ ಇರುತ್ತಾರೆ.
ನಂಬಿಕೆ, ಆಚಾರ ವಿಚಾರಗಳಲ್ಲಿ ಭಿನ್ನತೆಯಿದ್ದರೂ, ಸಾಮಾಜಿಕವಾಗಿ ನಾವೆಲ್ಲರೂ ಒಂದು ಎಂಬುದನ್ನು ಭಾರತೀಯ ಸಮಾಜ ಜಗತ್ತಿಗೆ ಹೇಳುತ್ತಲೇ ಇರುತ್ತದೆ.
ಅದರಂತೆ ಚರ್ಚ್’ವೊಂದರ ದುರಸ್ತಿ ಕಾರ್ಯಕ್ಕೆ ಹಿಂದೂ ವ್ಯಕ್ತಿಒಯೋರ್ವರು 5 ಲಕ್ಷ ರೂ. ದಾನ ಮಾಡಿ ಈ ವಾದಕ್ಕೆ ಪುಷ್ಠಿ ನೀಡಿದ್ದಾರೆ.
ಮಸೀದಿಗೆ ಜಾಗ ಕೊಟ್ಟ ಸಿಖ್: ಸೌಹಾರ್ದತೆ ಕಟ್ಟುತ್ತೇವೆ ಎಂದ ಮುಸ್ಲಿಂ ಬಾಂಧವರು!
ಸಿಕಂದರಾಬಾದ್’ನ ಮುತಿಯಾಲ ದಿನೇಶ್ ಕುಮಾರ್, ಸರೋಜಿನಿ ದೇವಿ ರಸ್ತೆಯಲ್ಲಿರುವ ಸೇಂಟ್ ಮೇರಿ ಬಾಸಿಲಿಕಾ ಚರ್ಚ್’ಗೆ 5 ಲಕ್ಷ ರೂ. ದಾನ ಮಾಡಿದ್ದಾರೆ.
ತಮಗೆ ಅಮೆರಿಕದಲ್ಲಿ ಕೆಲಸ ಸಿಕ್ಕರೆ ಮೊದಲ ತಿಂಗಳ ವೇತನವನ್ನು ಚರ್ಚ್ ದುರಸ್ತಿ ಕಾರ್ಯಕ್ಕೆ ದಾನ ನೀಡುವುದಾಗಿ ದಿನೇಶ್ ಕುಮಾರ್ ಹರಕೆ ಹೊತ್ತಿದ್ದರು.
ಅದರಂತೆ ದಿನೇಶ್ ಅವರಿಗೆ ಅಮೆರಿಕದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದ್ದು, ಹರಕೆಯಂತೆ ತಮ್ಮ ಮೊದಲ ವೇತನವನ್ನು ಚರ್ಚ್ ದುರಸ್ತಿ ಕಾರ್ಯಕ್ಕೆ ದಾನವಾಗಿ ನೀಡಿದ್ದಾರೆ.
ಕ್ರಿಸ್’ಮಸ್ ಹಾಗೂ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಸೇಂಟ್ ಮೇರಿ ಬಾಸಿಲಿಕಾ ಚರ್ಚ್ ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ದಿನೇಶ್ ಕುಮಾರ್ ದುರಸ್ತಿ ಕಾರ್ಯಕ್ಕೆ 5 ಲಕ್ಷ ರೂ. ದಾನ ನೀಡಿದ್ದಾರೆ.