ಮಾವನ ಮನೆಯಲ್ಲಿ ವಾಸವಿದ್ದ ಅಳಿಯನಿಗೆ ಆಸ್ತಿಯಲ್ಲಿ ಪಾಲು ಇಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಮಗಳ ಮರಣಾನಂತರ ಪುನರ್ವಿವಾಹವಾದ ಅಳಿಯ, ಮಾವನನ್ನು ನಿರ್ಲಕ್ಷಿಸಿದ್ದರಿಂದ 'ಪೋಷಕರ ನಿರ್ವಹಣೆ ಕಾಯ್ದೆ'ಯಡಿ ಮನೆ ಖಾಲಿ ಮಾಡುವಂತೆ ಆದೇಶಿಸಲಾಗಿದೆ. ಅಳಿಯನ ಹಣಕಾಸಿನ ನೆರವು, ಆಸ್ತಿ ವರ್ಗಾವಣೆ ದಾಖಲೆಗಳಿಲ್ಲದ ಕಾರಣ ಹಕ್ಕು ನಿರಾಕರಿಸಲಾಗಿದೆ.

ಹೆಣ್ಣುಮಕ್ಕಳಿಗೂ ತವರಿನ ಆಸ್ತಿಯಲ್ಲಿ ಹಕ್ಕು ಇದೆ. ಹಾಗಿದ್ದರೆ ಅಳಿಯನಿಗೂ ಮಾವನ ಆಸ್ತಿಯಲ್ಲಿ ಹಕ್ಕು ಇದೆಯಾ? ಮಾವನ ಮನೆಯಲ್ಲಿ ಇರುವ ಅಳಿಯ ಆ ಆಸ್ತಿಯಲ್ಲಿ ಪಾಲು ಕೇಳಬಹುದಾ? ಮಾವನ ಆಸ್ತಿಯೂ ನನ್ನದೇ ಎನ್ನಬಹುದಾ? ಮಗಳಿಗೆ ಹಕ್ಕು ಇರುವಾಗ ಆಕೆಯ ಅಪ್ಪನ ಆಸ್ತಿಯಲ್ಲಿ ಮಗಳ ಗಂಡನಿಗೂ ಪಾಲು ಇದೆಯಾ ಎಂಬೆಲ್ಲಾ ಪ್ರಶ್ನೆಗಳು ಹಲವರನ್ನು ಕಾಡುವುದು ಇದೆ. ಇದಾಗಲೇ ಈ ಬಗ್ಗೆ ಕೆಲವು ಹೈಕೋರ್ಟ್​ಗಳು ತೀರ್ಪು ನೀಡಿವೆ. ಇದೀಗ ಮಧ್ಯಪ್ರದೇಶದ ಹೈಕೋರ್ಟ್​ ಒಂದು ಮಹತ್ವದ ತೀರ್ಪು ನೀಡುವ ಮೂಲಕ, ಅಳಿಯನಿಗೆ ಮಗಳ ಅಪ್ಪನ ಅಂದರೆ ಮಾವನ ಆಸ್ತಿಯಲ್ಲಿ ಪಾಲು, ಹಕ್ಕು ಇದಯೋ, ಇಲ್ಲವೋ ಎನ್ನುವುದು ತಿಳಿಸಿದೆ. 

ಈ ಪ್ರಕರಣದಲ್ಲಿ, ಭೋಪಾಲ್ ನಿವಾಸಿ ದಿಲೀಪ್ ಮರ್ಮತ್ ಎಂಬಾತ ತನ್ನ ಮಾವನ ಮನೆಯಲ್ಲಿ ಇದ್ದ. ಮಾವ ತಮ್ಮ ಮಗಳು ಜ್ಯೋತಿ ಮತ್ತು ಅಳಿಯ ದಿಲೀಪ್ ಮರ್ಮತ್ ಅವರನ್ನು ತಮ್ಮ ಮನೆಯಲ್ಲಿ ವಾಸಿಸಲು ಅನುಮತಿಸಿದ್ದರು. ಪ್ರತಿಯಾಗಿ, ಅವರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಮಾವನನ್ನು ನೋಡಿಕೊಳ್ಳಲು ಒಪ್ಪಿಕೊಂಡಿದ್ದರು. ಇದರ ನಂತರ, ಮಗಳು 2018 ರಲ್ಲಿ ಅಪಘಾತದಲ್ಲಿ ನಿಧನರಾದರು. ಮಗಳ ಮರಣದ ನಂತರ, ಅಳಿಯ ಮತ್ತೆ ವಿವಾಹವಾದ. ಎರಡನೇ ಮದುವೆಯ ನಂತರ, ಅಳಿಯ ತನ್ನ ವೃದ್ಧ ಮಾವನಿಗೆ ಆಹಾರ ಮತ್ತು ಹಣವನ್ನು ನೀಡುವುದನ್ನು ನಿಲ್ಲಿಸಿದ. ಆದರೆ ಮಾವನ ಆಸ್ತಿಯಲ್ಲಿ ತನಗೆ ಅಧಿಕಾರ ಇರುವ ಕಾರಣ, ಮನೆಯಿಂದ ಹೊರಕ್ಕೆ ಹೋಗುವುದಿಲ್ಲ ಎಂದು ಕೋರ್ಟ್​ಗೆ ಹೋದ.

ವಕ್ಫ್​ ಆಸ್ತಿ ಕಬಳಿಕೆ ಆರೋಪಕ್ಕೆ 'ಸುಪ್ರೀಂ' ಮಾಸ್ಟರ್​ಸ್ಟ್ರೋಕ್​? ಸ್ಥಿರಾಸ್ತಿ ಮಾಲೀಕತ್ವದ ಕುರಿತು ಮಹತ್ವದ ತೀರ್ಪು

ಕೆಳಹಂತದ ಕೋರ್ಟ್​ಗಳಲ್ಲಿ ಆತನ ವಿರುದ್ಧ ಆದೇಶಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆತ ಹೈಕೋರ್ಟ್​ ಮೊರೆ ಹೋಗಿದ್ದ. ಈಗ ಮತ್ತೊಮ್ಮೆ ಹೈಕೋರ್ಟ್​, ಮಾವನ ಆಸ್ತಿಯಲ್ಲಿ ಅಳಿಯನಿಗೆ ಪಾಲು ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.  'ಪೋಷಕರ ನಿರ್ವಹಣೆ ಕಾಯ್ದೆಯಡಿಯಲ್ಲಿ, ಅಳಿಯನನ್ನು ಮನೆ ಖಾಲಿ ಮಾಡಿಸಿ' ಎಂದು ಅಧಿಕಾರಿಗಳಿಗೆ ಕೋರ್ಟ್​ ನಿರ್ದೇಶನ ನೀಡಿದೆ. ಕಾನೂನಿನ ಅಡಿ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇಲ್ಲ. ಅದೂ ಅಲ್ಲದೇ ಈ ಪ್ರಕರಣದಲ್ಲಿ ಅಳಿಯ ಮತ್ತೊಂದು ಮದುವೆಯಾಗಿದ್ದೂ ಅಲ್ಲದೇ, ಮಾವನನ್ನು ಕೂಡ ನೋಡಿಕೊಳ್ಳುತ್ತಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ವಿವೇಕ್ ಜೈನ್ ಅವರ ಪೀಠವು, 30 ದಿನಗಳ ಒಳಗೆ ಮನೆ ಖಾಲಿ ಮಾಡುವಂತೆ ಅಳಿಯನಿಗೆ ಆದೇಶ ನೀಡಿದೆ.

 

ಈ ಘಟನೆಯಲ್ಲಿ, ಭೋಪಾಲ್ ನಿವಾಸಿ ದಿಲೀಪ್ ಮರ್ಮತ್ ಅವರು ತಮ್ಮ ಮಾವನ ಮನೆ ಖಾಲಿ ಮಾಡುವ ಆದೇಶವನ್ನು ಪ್ರಶ್ನಿಸಿ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಅವರ ಮಾವ ನಾರಾಯಣ್ ವರ್ಮಾ (78) ಅವರು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007 ರ ಅಡಿಯಲ್ಲಿ ಎಸ್‌ಡಿಎಂ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ, ಎಸ್‌ಡಿಎಂ ತನ್ನ ಅಳಿಯನ ಮನೆಯನ್ನು ಖಾಲಿ ಮಾಡುವಂತೆ ಅಳಿಯನಿಗೆ ಆದೇಶಿಸಿತ್ತು. ಆತ ಈಗ ಅದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ.  ಈ ಮನೆಯ ನಿರ್ಮಾಣಕ್ಕೆ ತಾವು 10 ಲಕ್ಷ ರೂಪಾಯಿ ಕೂಡ ನೀಡಿರುವುದಾಗಿ ಅಳಿಯ ವಾದಿಸಿದ್ದ. ಪ್ರಕರಣವನ್ನು ಆಲಿಸಿದ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ, "ಈ ಕಾಯ್ದೆಯಡಿಯಲ್ಲಿ ಅಳಿಯನನ್ನು ಹೊರಕ್ಕೆ ಹಾಕಬಹುದು. ಆಸ್ತಿ ವರ್ಗಾವಣೆ ಕಾಯ್ದೆಯಡಿಯಲ್ಲಿ ಆಸ್ತಿಯನ್ನು ವರ್ಗಾಯಿಸಲಾಗಿಲ್ಲ. ಸಂತ್ರಸ್ತ ಮಾವ ಬಿಎಚ್‌ಇಎಲ್‌ನ ನಿವೃತ್ತ ಉದ್ಯೋಗಿಯಾಗಿದ್ದು, ಭವಿಷ್ಯ ನಿಧಿಯಿಂದ ಅರೆಕಾಲಿಕ ಪಿಂಚಣಿ ಪಡೆಯುತ್ತಿದ್ದಾರೆ. ಅನಾರೋಗ್ಯ ಪೀಡಿತ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಅವರಿಗೆ ಮನೆ ಬೇಕು ಎಂದೂ ಕೋರ್ಟ್​ ಹೇಳಿದೆ.

ಆನ್​ಲೈನ್​ನಲ್ಲಿ ಆಸ್ತಿ ನೋಂದಾಯಿಸುವುದು ಹೇಗೆ? ಶುಲ್ಕವೆಷ್ಟು? ದಾಖಲೆಗಳೇನು ಬೇಕು? ಇಲ್ಲಿದೆ ಫುಲ್​ ಡಿಟೇಲ್ಸ್​