ಉತ್ತರಾಖಂಡದ ರುದ್ರಪ್ರಯಾಗದ ಗೌರಿಕುಂಡ್‌ನಲ್ಲಿ ಹೆಲಿಕಾಪ್ಟರ್ ಪತನವಾಗಿ ಏಳು ಮಂದಿ ಸಾವನ್ನಪ್ಪಿದ್ದಾರೆ.

ಕೇದಾರನಾಥ್: ಇಂದು ಬೆಳಗ್ಗೆ ಸುಮಾರು 5.30ರ ವೇಳೆಗೆ ಉತ್ತರಾಖಂಡದ ರುದ್ರಪ್ರಯಾಗದ ಗೌರಿಕುಂಡ್ ಪ್ರದೇಶದಲ್ಲಿ ಹೆಲಿಕಾಫ್ಟರ್ ಪತನವಾಗಿದ್ದು, 23 ತಿಂಗಳ ಮಗು ಸೇರಿದಂತೆ ಏಳು ಜನರು ಮೃತರಾಗಿದ್ದಾರೆ. ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ NDRF ಮತ್ತು SDRF ತಂಡಗಳು ತೆರಳುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗೌರಿಕುಂಡ್ ಪ್ರದೇಶದಲ್ಲಿ ಆರ್ಯನ್ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಪತನಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ನೋಡಲ್ ಅಧಿಕಾರಿ ರಾಹುಲ್ ಚೌಬೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ಹೆಲಿಕಾಪ್ಟರ್ ಪತನವನ್ನು ದೃಢಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಹೆಲಿಕಾಪ್ಟರ್ ಪತನವನ್ನು ರೈತ ಮಹಿಳೆ ನೋಡಿದ್ದು, ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ಬೆಳಗಿನ ಜಾವ ತನ್ನ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಗೌರಿಕುಂಡ್ ಪ್ರದೇಶಕ್ಕೆ ತೆರಳದ್ದರು.

ವರದಿಯ ಪ್ರಕಾರ, ಈ ಪತನದಲ್ಲಿ ಏಳು ಜನರು ಮೃತರಾಗಿದ್ದಾರೆ. ಮಹಾರಾಷ್ಟ್ರ ಮೂಲದ ಜೈಸ್ವಾಲ್ ದಂಪತಿ ತಮ್ಮ 23 ತಿಂಗಳ ಮಗುವಿನೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರು ಸ್ಥಳೀಯರು ವಿನೋದ್ ನೇಗಿ ಮತ್ತು ವಿಕ್ರಮ್ ಸಿಂಗ್ ರಾವತ್ ಹೆಲಿಕಾಫ್ಟರ್‌ನಲ್ಲಿದ್ದರು. ವಿಕ್ರಮ್ ಸಿಂಗ್ ರಾವತ್ ಬಿಕೆಟಿಸಿಯ ಉದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ. ಎಲ್ಲಾ ಮೃತದೇಹಗಳು ಸುಟ್ಟು ಕರಕಲಾಗಿವೆ ಎಂದು ವರದಿಯಾಗಿದೆ. ಮೃತರನ್ನು ರಾಜ್‌ಕುಮಾರ್ ಜೈಸ್ವಾಲ್, ಶ್ರದ್ಧಾ ಜೈಸ್ವಾಲ್, ಕಾಶಿ ಜೈಸ್ವಾಲ್, ತುಸ್ತಿ ಸಿಂಗ್, ವಿನೋದ್, ವಿಕ್ರಮ್ ಸಿಂಗ್ ಮತ್ತು ಕ್ಯಾಪ್ಟನ್ ರಾಜೀವ್ ಎಂದು ಗುರುತಿಸಲಾಗಿದೆ.

Scroll to load tweet…

Scroll to load tweet…

ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್

ಜೂನ್ 7ರಂದು ಕೇದಾರಘಾಟಿಯ ಬಡಾಸು ಹೆಲಿಪ್ಯಾಡ್‌ನಿಂದ ಕೇದಾರನಾಥಕ್ಕೆ ಹೊರಟಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಪೈಲಟ್ ರುದ್ರಪ್ರಯಾಗ್-ಗೌರಿಕುಂಡ್ ಹೆದ್ದಾರಿಯಲ್ಲಿಯೇ ಹೆಲಿಕಾಪ್ಟರ್‌ನ್ನು ಲ್ಯಾಂಡ್ ಮಾಡಿದ್ದರು. ಈ ವೇಳೆ ಪೈಲಟ್ ಬೆನ್ನಿಗೆ ಗಾಯ ಹೊರತುಪಡಿಸಿಲ್ಲ, ಹೆಲಿಕಾಪ್ಟರ್‌ನಲ್ಲಿದ್ದ ಐವರು ಪ್ರಯಾಣಿಕರು ಸುರಕ್ಷಿತವಾಗಿದ್ದರು.

ಜೂನ್ 7ರ ಮಧ್ಯಾಹ್ನ 1.02ಕ್ಕೆ ಕ್ರಿಸ್ಟಲ್ ಕಂಪನಿಯ ಹೆಲಿಕಾಪ್ಟರ್ ಐವರು ಪ್ರಯಾಣಿಕರೊಂದಿಗೆ ಕೇದಾರನಾಥ್‌ಕ್ಕೆ ಹೊರಟಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದಿರಂದ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಗಿತ್ತು. ಈ ವೇಳೆ ಕಾಪ್ಟರ್ ಟೇಲ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿತು. ಹಾಗೆಯೆ ರಸ್ತೆ ಬದಿಯಲ್ಲಿದ್ದ ಅಂಗಡಿಗಳಿಗೆ ಹೆಲಿಕಾಪ್ಟರ್‌ ರೆಕ್ಕೆಗಳು ತಾಗಿದ್ದರಿಂದ ಹಾನಿಯುಂಟಾಗಿತ್ತು. ಕೆಲ ಸಮಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮೇ 8ರಂದು ಪತನ

ಇದೇ ಮೇ 8ರಂದು ಉತ್ತರಕಾಶಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು. ಈ ದುರಂತದಲ್ಲಿ ಪೈಲಟ್ ಸೇರಿದಂತೆ ಆರು ಜನರು ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡಿದ್ದ ಓರ್ವನನ್ನು ಏಮ್ಸ್ ರಿಷಿಕೇಶಕ್ಕೆ ಶಿಫ್ಟ್ ಮಾಡಲಾಗಿತ್ತು. ಈ ಹೆಲಿಕಾಪ್ಟರ್ ಸಹಸ್ರಧಾರ ಹೆಲಿಪ್ಯಾಡ್‌ನಿಂದ ಹರ್ಷಿಲ್‌ಗೆ ಹೊರಟಿತ್ತು. ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಪ್ರಯಾಣಿಕರು ಮುಂಬೈ ಮೂಲದವರು ಮತ್ತು ಇಬ್ಬರು ಆಂಧ್ರಪ್ರದೇಶದವರು ಎಂದು ವರದಿಯಾಗಿದೆ.