ಓಡಿಹೋದ ಪತ್ನಿ: ಪುಟ್ಟ ಕಂದನ ಹೆಗಲಲ್ಲಿರಿಸಿಕೊಂಡು ಸೈಕಲ್ ರಿಕ್ಷಾ ಓಡಿಸ್ತಿರುವ ಅಪ್ಪ
ಸಾಮಾನ್ಯವಾಗಿ ತಂದೆ ದುಡಿಮೆಗೆ ಹೋದರೆ ತಾಯಿ ಎಳೆಗೂಸನ್ನು ನೋಡಿಕೊಳ್ಳುತ್ತಾಳೆ. ಆದರೆ ಇಲ್ಲೊಂದು ಕಡೆ ತಂದೆಯೊಬ್ಬರು ಹೆಗಲ ಮೇಲೆ ಎಳೆಗೂಸನ್ನು ಮಲಗಿಸಿಕೊಂಡು ಹೊಟ್ಟೆಪಾಡಿಗಾಗಿ ಸೈಕಲ್ ರಿಕ್ಷಾ ತುಳಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಾಲಿ ಹೊಟ್ಟೆ ಹಾಗೂ ಖಾಲಿ ಜೇಬು ಬದುಕಿನಲ್ಲಿ ಹಲವು ಪಾಠಗಳನ್ನು ಕಲಿಸುತ್ತದೆ ಎಂಬುದು ಅನೇಕರ ಅನುಭವದ ಮಾತು. ಶ್ರೀಮಂತರಿಗೊಂದು ಚಿಂತೆ ಆದರೆ ಬಡವನಿಗೆ ಮತ್ತೊಂದು ಚಿಂತೆ.
ದಿನದ ತುತ್ತಿನ ಚೀಲ ತುಂಬಿಸಲು ಅನೇಕರು ಅನೇಕ ರೀತಿಯಲ್ಲಿ ಕಷ್ಟ ಪಡುತ್ತಾರೆ. ಸಾಮಾನ್ಯವಾಗಿ ತಂದೆ ದುಡಿಮೆಗೆ ಹೋದರೆ ತಾಯಿ ಎಳೆಗೂಸನ್ನು ನೋಡಿಕೊಳ್ಳುತ್ತಾಳೆ. ಆದರೆ ಇಲ್ಲೊಂದು ಕಡೆ ತಂದೆಯೊಬ್ಬರು ಹೆಗಲ ಮೇಲೆ ಎಳೆಗೂಸನ್ನು ಮಲಗಿಸಿಕೊಂಡು ಹೊಟ್ಟೆಪಾಡಿಗಾಗಿ ಸೈಕಲ್ ರಿಕ್ಷಾ ತುಳಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿ ಸೆರೆಯಾದ ವಿಡಿಯೋ ಇದಾಗಿದ್ದು, ಈ ವ್ಯಕ್ತಿ ಕೆಲಸ ಅರಸಿ ಬಿಹಾರದಿಂದ ಮಧ್ಯಪ್ರದೇಶದ ಜಬಲ್ಪುರಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಈ ವ್ಯಕ್ತಿಯ ಹೆಸರು ರಾಜೇಶ್ ಎಂಬುದಾಗಿದ್ದು, ಇವರು ಕೆಲಸ ಅರಸಿ ಬಿಹಾರದಿಂದ ವಲಸೆ ಬಂದಿದ್ದರು. ಇಲ್ಲಿ ಸೈಕಲ್ ರಿಕ್ಷಾ ಚಲಾಯಿಸುತ್ತಾ ಅವರು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ರಾಜೇಶ್ ಅವರು ತಮ್ಮ ಪುಟ್ಟ ಕಂದನನ್ನು ಹೆಗಲ ಮೇಲೆ ಹಾಕಿಕೊಂಡು ಸೈಕಲ್ ತುಳಿಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಮಗುವಿನ ಮೈಯ್ಯಲ್ಲಿ ಒಂದೇ ಒಂದು ತುಂಡು ಬಟ್ಟೆಯೂ ಇಲ್ಲ. ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಸೈಕಲ್ನ್ನು ಬ್ಯಾಲೆನ್ಸ್ (Cycle Balance) ಮಾಡಿಕೊಂಡು ಈತ ಬದುಕಿನ ಬಂಡಿಯನ್ನು ತಳ್ಳುತ್ತಿದ್ದಾನೆ.
ಪ್ರೀತಿಗೆ ಬಡತನವಿಲ್ಲ... ಮುಂಬೈ ಲೋಕಲ್ ರೈಲೊಳಗಿನ ಸುಂದರ ದೃಶ್ಯ ವೈರಲ್
ಈ ವಿಡಿಯೋವನ್ನು ಅನುರಾಗ್ ದ್ವಾರಿ ಎಂಬುವವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದಲ್ಲಿ ಬಡವರ (Poverty)ಕಲ್ಯಾಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಕೇವಲ ಒಂದು ಫೋಟೋ ತೋರಿಸುತ್ತಿದೆ. ರಾಜೇಶ್ ತನ್ನ ಐದು ವರ್ಷದ ಕಂದನನ್ನು ಬಸ್ ನಿಲ್ದಾಣದಲ್ಲಿ ಬಿಡುತ್ತಾನೆ. ಹಾಲು ಗಲ್ಲದ ಮಗುವನ್ನು ತನ್ನೊಂದಿಗೆ ಹೆಗಲ ಮೇಲೆ ಕೂರಿಸಿಕೊಂಡು ಸೈಕಲ್ ರಿಕ್ಷಾ (Cycle Riksha) ಚಾಲನೆ ಮಾಡುತ್ತಾನೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ವಿಡಿಯೋವನ್ನು 25 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈತನಿಗೆ ಕ್ರೌಡ್ ಫಂಡಿಂಗ್ (Crowd Funding) ಮೂಲಕ ಏನಾದರು ಸಹಾಯ ಮಾಡೋಣ. ಕನಿಷ್ಠ ಒಂದು ಆಟೋ ರಿಕ್ಷಾವನ್ನು ಈತನಿಗೆ ತೆಗೆಸಿಕೊಡಬೇಕು ಎಂದು ಈ ವಿಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈತನಿಗೆ ಅಗತ್ಯವಾಗಿ ಸಹಾಯದ ಅಗತ್ಯವಿದೆ. ಹೀಗೆ ಹಸುಗೂಸನ್ನು ಎತ್ತಿಕೊಂಡು ರಿಕ್ಷಾ ಚಾಲನೆ ಮಾಡುತ್ತಿರುವುದು ಸುರಕ್ಷಿತವೂ ಅಲ್ಲ, ಜೊತೆಗೆ ಬೇಸರದ ವಿಚಾರ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಾವು ಹೇಗೆ ಆತನಿಗೆ ಸಹಾಯ ಮಾಡಬಹುದು ಎಂದು ಮತ್ತೊಬ್ಬರು ಕೇಳಿದ್ದಾರೆ. ಆದಾಗ್ಯೂ ಇದು ತುಂಬಾ ಬೇಸರ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಬೇಕು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ನೇಪಾಳದಲ್ಲಿ ಸುರಪುರದ ಬಿಲ್ವಿದ್ಯೆ ಪಟುಗಳ ಮಿಂಚು: ಬಡತನದಲ್ಲೆ ಅರಳಿದ ಪ್ರತಿಭೆಗಳಿಗೆ ರಾಜೂಗೌಡ ಶಹಬ್ಬಾಶ್
ಅಂದಹಾಗೆ ಈ ರಾಜೇಶ್ ಅವರು 10 ವರ್ಷಗಳ ಹಿಂದೆ ಬಿಹಾರದಿಂದ ಮಧ್ಯಪ್ರದೇಶದ ಜಬಲ್ಪುರಕ್ಕೆ ವಲಸೆ ಬಂದಿದ್ದರು. ಬಳಿಕ ಮಧ್ಯಪ್ರದೇಶದ (MP) ಸಿನೊಯ್ ಜಿಲ್ಲೆಯ ಕಂಗ್ರಾಗಾವ್ ಗ್ರಾಮದ ಮಹಿಳೆಯೊಬ್ಬರೊಂದಿಗೆ ಪ್ರೀತಿಯಲ್ಲಿ ಬಿದ್ದ ಈತನಿಗೆ ಇಬ್ಬರು ಮಕ್ಕಳಿದ್ದು, ಫುಟ್ಪಾತ್ನಲ್ಲೇ (Footpath) ವಾಸ ಮಾಡುತ್ತಾರೆ. ಈ ನಡುವೆ ಆ ಮಹಿಳೆ ಇನ್ನೊಂದು ವ್ಯಕ್ತಿಯೊಂದಿಗೆ ಓಡಿ ಹೋಗಿದ್ದಳು. ಆಕೆಯನ್ನು ಹುಡುಕಲು ಎಲ್ಲಾ ಪ್ರಯತ್ನ ಮಾಡಿದ ಈಕೆಗೆ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ಎರಡು ಮಕ್ಕಳ ಹೊರೆಯೂ ರಾಜೇಶ್ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಮಕ್ಕಳ ಮೇಲಿನ ಪ್ರೀತಿಯ ವಿಚಾರದಲ್ಲಿ ತಂದೆಗಿಂತ ತಾಯಿಯ ಗುಣಗಾನವೇ ಹೆಚ್ಚು. ತಾಯಿಯ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ ಎಂಬುದು ಜಗಜನಿತವಾದ ಮಾತು ಆದರೆ ಇಲ್ಲಿ ತಾಯಿ ಮಕ್ಕಳನ್ನು ಬಿಟ್ಟು ಓಡಿ ಹೋಗಿದ್ದು, ತಂದೆ ಮಕ್ಕಳ ಆರೈಕೆಗಾಗಿ ಇನ್ನಿಲ್ಲದ ಸಾಹಸ ಮಾಡುತ್ತಿದ್ದಾನೆ.