ದಿವಂಗತ ಭೂಗತ ದೊರೆ ಹಾಜಿ ಮಸ್ತಾನ್ ಅವರ ಪುತ್ರಿ ಹಸೀನ್ ಮಸ್ತಾನ್ ಮಿರ್ಜಾ, ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗ ಲೈಂಗಿಕ ದೌರ್ಜನ್ಯ, ಬಲವಂತದ ಮದುವೆ ಹಾಗೂ ಆಸ್ತಿ ಕಬಳಿಕೆಯಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಡಲು, ಪ್ರಧಾನಿ ಮೋದಿಗೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಮುಂಬೈ: ಬಲವಂತದ ಮದುವೆ, ಲೈಂಗಿಕ ದೌರ್ಜನ್ಯ, ಕೊಲೆ ಯತ್ನ ಹಾಗೂ ಆಸ್ತಿ ಕಬಳಿಕೆ ಆರೋಪಗಳ ಮೂಲಕ ಇತ್ತೀಚೆಗೆ ಸುದ್ದಿಯಲ್ಲಿರುವ, ದಿವಂಗತ ಭೂಗತ ಲೋಕದ ದೊರೆ ಹಾಜಿ ಮಸ್ತಾನ್ ಅವರ ಪುತ್ರಿ ಹಸೀನ್ ಮಸ್ತಾನ್ ಮಿರ್ಜಾ, ತನಗೆ ನ್ಯಾಯ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗಲೇ ತನ್ನ ಮೇಲೆ ಅತ್ಯಾ*ಚಾರ ನಡೆದಿದೆ, ಬಲವಂತವಾಗಿ ಮದುವೆ ಮಾಡಲಾಯಿತು ಹಾಗೂ ತನ್ನ ಗುರುತನ್ನು ದುರುಪಯೋಗಪಡಿಸಿಕೊಂಡು ಆಸ್ತಿಯನ್ನು ಕಬಳಿಸಲಾಗಿದೆ ಎಂದು ಹಸೀನ್ ಗಂಭೀರ ಆರೋಪ ಮಾಡಿದ್ದಾರೆ.
12ರ ಹರೆಯದಲ್ಲಿದ್ದಾಗಲೇ ಲೈಂಗಿಕ ದೌರ್ಜನ್ಯ
ಮಾಧ್ಯಮವೊಂದರಲ್ಲಿ ಮಾತನಾಡಿದ ಹಸೀನ್, 1996ರಲ್ಲಿ ತಾನು ಕೇವಲ 12 ವರ್ಷದವಳಾಗಿದ್ದಾಗ, ತನ್ನ ಮಾವನ ಮಗ ನಾಸೀರ್ ಹುಸೇನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ. ನಂತರ ಆತನಿಂದಲೇ ತಾನು ಬಲವಂತವಾಗಿ ಮದುವೆಯಾಗಬೇಕಾಯಿತು ಎಂದು ಆರೋಪಿಸಿದ್ದಾರೆ. ಆ ಸಮಯದಲ್ಲಿ ತಾನು ಅಪ್ರಾಪ್ತ ವಯಸ್ಕಳಾಗಿದ್ದರೂ, ತನ್ನ ರಕ್ಷಣೆಗೆ ಯಾರೂ ಮುಂದಾಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ತಂದೆ ಬದುಕಿದ್ದಾಗ ಈ ಎಲ್ಲವೂ ನಡೆದಿರಲಿಲ್ಲ
ತಾನು ಅನುಭವಿಸಿದ ದುಃಖಗಳು ತನ್ನ ತಂದೆ ಹಾಜಿ ಮಸ್ತಾನ್ ಅವರ ಜೀವಿತಾವಧಿಯಲ್ಲಿ ನಡೆದಿಲ್ಲ ಎಂದು ಹಸೀನ್ ಹೇಳಿದ್ದು, ನನ್ನ ತಂದೆ ನಿಧನರಾದ ಬಳಿಕವೇ ಈ ಎಲ್ಲ ಸಮಸ್ಯೆಗಳು ಆರಂಭವಾದವು. ನನ್ನನ್ನು ಹಾಜಿ ಮಸ್ತಾನ್ ಅವರ ಮಗಳು ಎಂಬ ಕಾರಣಕ್ಕೆ ಗುರಿಯಾಗಿಸಲಾಯಿತು ಎಂದು ಅವರು ಹೇಳಿದ್ದಾರೆ.
ಆಸ್ತಿಗಾಗಿ ನಡೆದ ಅಪರಾಧ
ತನ್ನ ಮೇಲೆ ನಡೆದ ಅತ್ಯಾ*ಚಾರ, ದೌರ್ಜನ್ಯ ಮತ್ತು ಬಲವಂತದ ಮದುವೆಯ ಹಿಂದೆ ಆಸ್ತಿ ಮತ್ತು ಹಣದ ಲಾಲಸೆ ಕಾರಣವಾಗಿದೆ ಎಂದು ಹಸೀನ್ ಆರೋಪಿಸಿದ್ದಾರೆ. ನಾನು ಹಾಜಿ ಮಸ್ತಾನ್ ಅವರ ಮಗಳಾಗಿ ಹುಟ್ಟದೇ ಇದ್ದಿದ್ದರೆ, ಈ ಎಲ್ಲವನ್ನು ಅನುಭವಿಸಬೇಕಾಗಿರಲಿಲ್ಲ. ನನ್ನ ತಂದೆ ನಿಧನರಾದ ಬಳಿಕ, ಅವರು ನಮ್ಮ ಆಸ್ತಿಯನ್ನು ಕಬಳಿಸಬಹುದು ಎಂದು ಭಾವಿಸಿದರು. ಹಣವೇ ಈ ಎಲ್ಲ ಅಪರಾಧಗಳ ಮೂಲ ಕಾರಣ ಎಂದಿದ್ದಾರೆ.
ತಂದೆಯ ಹೆಸರಿಗೆ ಕಳಂಕ ಬಾರದಂತೆ ಮನವಿ
ತನ್ನ ತಂದೆಯ ಹೆಸರನ್ನು ವಿವಾದಗಳಲ್ಲಿ ಎಳೆಯಬಾರದು ಎಂದು ಹಸೀನ್ ಮನವಿ ಮಾಡಿದ್ದು, ನನ್ನ ತಂದೆ ತಮ್ಮ ಜೀವನದಲ್ಲಿ ಅನೇಕರಿಗೆ ಸಹಾಯ ಮಾಡಿದ್ದರು. ಅವರ ಹೆಸರಿಗೆ ಕಳಂಕ ಬರಬಾರದು. ನಾನು ಅವರ ಮಗಳಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಾನು ಹೋರಾಡುತ್ತಿರುವುದು ಅವರ ಹೆಸರಿಗಾಗಿ ಅಲ್ಲ, ನನ್ನ ನ್ಯಾಯಕ್ಕಾಗಿ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ, ಅಮಿತ್ ಶಾಗೆ ಮನವಿ
ತಾನು ಅನುಭವಿಸಿದ ದುಃಖದ ಹಿನ್ನೆಲೆಯಲ್ಲಿ, ದೇಶದಲ್ಲಿ ಅಪರಾಧಿಗಳನ್ನು ಹೆದರಿಸುವಂತೆ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಹಸೀನ್ ಒತ್ತಾಯಿಸಿದ್ದು, ನನ್ನ ಮೇಲೆ ಅತ್ಯಾ*ಚಾರ ನಡೆಯಿತು, ನನ್ನನ್ನು ಕೊಲ್ಲಲು ಯತ್ನಿಸಲಾಯಿತು, ನನ್ನ ಗರ್ಭದಲ್ಲಿದ್ದ ಮಗುವನ್ನು ಕಳೆದುಕೊಂಡೆ, ನಂತರ ಬೀದಿಯಲ್ಲಿ ಬಿಟ್ಟುಹೋಗಲಾಯಿತು. ನನ್ನ ಬಳಿ ಹಣವೂ ಇರಲಿಲ್ಲ, ಬೆಂಬಲವೂ ಇರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
2013ರಿಂದ ನ್ಯಾಯಕ್ಕಾಗಿ ಹೋರಾಟ, ಪೊಲೀಸರಿಂದ ನಿರ್ಲಕ್ಷ್ಯ ಆರೋಪ
2013ರಿಂದಲೇ ಈ ಪ್ರಕರಣಕ್ಕಾಗಿ ಹೋರಾಡುತ್ತಿರುವುದಾಗಿ ಹಸೀನ್ ತಿಳಿಸಿದ್ದು, ಆರ್ಥಿಕ ಸಂಕಷ್ಟಗಳಿಂದಾಗಿ ಹೋರಾಟವನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗಲಿಲ್ಲ . ಪೊಲೀಸರು ನನಗೆ ಯಾವುದೇ ಸಹಾಯ ಮಾಡಲಿಲ್ಲ. ಸಹಾಯ ಮಾಡಿದ್ದರೆ, ನನ್ನ ತಾಯಿ ಬದುಕಿದ್ದಾಗಲೇ ನನಗೆ ನ್ಯಾಯ ಸಿಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಸಾಯಲು ಮುಂದಾಗಿದ್ದೆ, ಮಾನಸಿಕ ಹಿಂಸೆ
2010ರಲ್ಲಿ ವಿಚ್ಛೇದನದ ನಂತರ ಉಂಟಾದ ನಿರಂತರ ಹಿಂಸೆಯಿಂದಾಗಿ ತಾನು ಮೂರು ಬಾರಿ ಸಾಯಲು ಯತ್ನಿಸಿದ್ದಾಗಿ ಹಸೀನ್ ಹೇಳಿಕೊಂಡಿದ್ದು, ಬಿಗ್ ಬಾಸ್ ರಿಯಾಲಿಟಿ ಶೋಗೆ ಆಹ್ವಾನ ಬಂದಿದ್ದರೂ, ಮಾನಸಿಕ ಆರೋಗ್ಯದ ಕಾರಣದಿಂದಾಗಿ ಅದನ್ನು ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.
ರಾಜಕೀಯ ಪ್ರವೇಶದ ಊಹಾಪೋಹಕ್ಕೆ ತೆರೆ
ರಾಜಕೀಯ ಪ್ರವೇಶಿಸುವ ಯಾವುದೇ ಆಸೆ ಇಲ್ಲ. ನನಗೆ ರಾಜಕೀಯ ಅರ್ಥವಾಗುವುದಿಲ್ಲ. ಈಗ ಅಧಿಕಾರದಲ್ಲಿರುವವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಹಸೀನ್ ಸ್ಪಷ್ಟಪಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ಕ್ರಮಕ್ಕೆ ಬೆಂಬಲ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಟ್ಟುನಿಟ್ಟಿನ ಆಡಳಿತವನ್ನು ಹಸೀನ್ ಬೆಂಬಲಿಸಿದ್ದು, ಅವರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ. ಅವರ ಆಡಳಿತದಲ್ಲಿ ಬಲಿಪಶುಗಳಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ.


