ಬೂಟು ತೆಗೆದು ಧೋತಿ ಧರಿಸಿದ ಹರಿಯಾಣ ಕಾಂಗ್ರೆಸ್ ಶಾಸಕ ನೀರಜ್ ಶರ್ಮಾ ಫರಿದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ನಲ್ಲಿ ಹಗರಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಸಕರ ವಿನೂತನ ಪ್ರತಿಭಟನೆ
ಚಂಡಿಗಡ (ಮಾ.22): ಫರಿದಾಬಾದ್ ನಗರದ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ನಡೆದ ಹಗರಣಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಫರಿದಾಬಾದ್ ಕಾಂಗ್ರೆಸ್ ಶಾಸಕ ನೀರಜ್ ಶರ್ಮಾ(Neeraj Sharma) ಅವರು ಪಂಚೆ ಧರಿಸಿ ಬರಿಗಾಲಲ್ಲಿ ಮಂಗಳವಾರ ವಿಧಾನಸಭೆಯೊಳಗೆ ಆಗಮಿಸಿದ್ದರು. 2014 ರಿಂದ 2021 ರವರೆಗೆ ನಗರದ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ನಡೆದ ಹಗರಣಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಸಕ ನೀರಜ್ ಶರ್ಮಾ ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕನಿಷ್ಠ ಒಬ್ಬ ತಪ್ಪಿತಸ್ಥ ಅಧಿಕಾರಿಯನ್ನು ಶಿಕ್ಷಿಸುವವರೆಗೂ ತಾನು ಹೊಲಿಗೆ ಹಾಕಿದ ಬಟ್ಟೆ ಮತ್ತು ಬೂಟುಗಳನ್ನು ಧರಿಸುವುದಿಲ್ಲ ಎಂದು ಶರ್ಮಾ ಪ್ರತಿಜ್ಞೆ ಮಾಡಿದ್ದಾರೆ.
ರಾಜ್ಯ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಲಾಪದಿಂದ ಹೊರಗೆ ಹೋಗುವ ವೇಳೆ ಶಾಸಕ ಶರ್ಮಾ ತಮ್ಮ ಬೂಟುಗಳನ್ನು ತೆಗೆದು ಬಿಳಿ ಬಣ್ಣದ ಪಂಚೆ ಮತ್ತು ಬಿಳಿ ಬಣ್ಣದ ಹತ್ತಿ ಬಟ್ಟೆಯನ್ನು ತಮ್ಮ ಮೈಮೇಲೆ ಸುತ್ತಿಕೊಂಡಿದ್ದರು. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ನೀರಜ್ ಶರ್ಮಾ, 2014 ರಿಂದ 2021 ರವರೆಗೆ ಫರಿದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಬಯಲಾದ ವಂಚನೆ ಮತ್ತು ಇದರ ತನಿಖೆಗಾಗಿ ವಿಜಿಲೆನ್ಸ್ ಇಲಾಖೆಗೆ ಹಸ್ತಾಂತರಿಸಲಾದ ವಂಚನೆ ಪ್ರಕರಣಗಳ ಒಟ್ಟು ಸಂಖ್ಯೆಯನ್ನು ತಿಳಿಯಲು ಕೋರಿ ಪ್ರಶ್ನೆಯನ್ನು ಎತ್ತಿದ್ದರು.
Hariyana: ಸೋನಿಪತ್ ಜಿಲ್ಲೆಯಲ್ಲಿ ಮಾರುತಿಯ ಮತ್ತೊಂದು ಹೊಸ ಫ್ಯಾಕ್ಟರಿ
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳ ಜೊತೆಗೆ ಈ ಹಗರಣಗಳ ವಿಚಾರಣೆಯಲ್ಲಿ ವಿಜಿಲೆನ್ಸ್ ಇಲಾಖೆ ಮಾಡಿದ ಶಿಫಾರಸುಗಳ ವಿವರಗಳನ್ನು ತಿಳಿಸುವಂತೆ ಶಾಸಕರು ಆಗ್ರಹಿಸಿದರು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಸಚಿವ ಕಮಲ್ ಗುಪ್ತಾ (Kamal Gupta) ತಪ್ಪಿತಸ್ಥರೆಂದು ಕಂಡುಬಂದ ಯಾರನ್ನೂ ಬಿಡಲಾಗುವುದಿಲ್ಲ ಎಂದು ಭರವಸೆ ನೀಡಿದ ನಂತರವೂ ಶರ್ಮಾ ಅವರು ಕನಿಷ್ಠ ಒಬ್ಬ ತಪ್ಪಿತಸ್ಥ ಅಧಿಕಾರಿಯನ್ನು ಶಿಕ್ಷಿಸುವವರೆಗೂ ತಾನು ಹೊಲಿಗೆ ಹಾಕಿದ ಬಟ್ಟೆ ಮತ್ತು ಬೂಟುಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ಮುಖ್ಯಮಂತ್ರಿ (Chief Minister) ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು ತಪ್ಪಿತಸ್ಥರೆಂದು ಕಂಡುಬಂದ ಯಾರನ್ನೂ ಬಿಡಲಾಗುವುದಿಲ್ಲ ಮತ್ತು ಸಮಯಕ್ಕೆ ಅನುಗುಣವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಟ್ಟರ್, ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ.
ರೈತರಿಂದ ಒತ್ತಡಕ್ಕೆ ಸಿಲುಕಿದ ಶಾಸಕರು: ಸರ್ಕಾರ ಉಳಿಸುವ ಯತ್ನದಲ್ಲಿ ಮುಖ್ಯಮಂತ್ರಿ!
ಸದನದಲ್ಲಿ ಕಾಂಗ್ರೆಸ್ ಸದಸ್ಯರು ಕೇಳಿದ ಫರಿದಾಬಾದ್ (Faridabad) ಮುನ್ಸಿಪಲ್ ಕಾರ್ಪೋರೇಷನ್ಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ತಪ್ಪಿತಸ್ಥರು ಹಿರಿಯ ಅಧಿಕಾರಿಯೇ ಆಗಿದ್ದರೂ ಯಾರನ್ನು ಸುಮ್ಮನೆ ಬಿಡದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಹಾನಗರ ಪಾಲಿಕೆಯಲ್ಲಿನ (Municipal Corporation) ಭ್ರಷ್ಟಾಚಾರದ ಆರೋಪದ ಕುರಿತುಒಂಬತ್ತು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಪೊಲೀಸರು ಅಥವಾ ವಿಜಿಲೆನ್ಸ್ನಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು (chief minister) ಹೇಳಿದರು. ಅಲ್ಲದೇ ಈ ಬಗ್ಗೆ ಸರಕಾರ ಕಟ್ಟುನಿಟ್ಟಿನ ನಿಗಾ ಇರಿಸಿದೆ ಎಂದರು.
ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವಿದ್ದು, ಇದು ತನ್ನ ಸಾಧನೆ ಹಾಗೂ ಯೋಜನೆಗಳನ್ನು ಜನರಿಗೆ ತಿಳಿಸುವ ಸಲುವಾಗಿ 2015 ರಿಂದೀಚೆಗೆ 700 ಕೋಟಿಗೂ ಅಧಿಕ ಹಣವನ್ನು ಜಾಹೀರಾತಿಗಾಗಿ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ವಿಧಾನಸಭೆ ಪ್ರಶ್ನೋತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಅಲ್ತಾಫ್ ಅಹ್ಮದ್ ಕೇಳಿದ ಪ್ರಶ್ನೆಗೆ ರಾಜ್ಯ ವಿಧಾನಸಭೆ ಲಿಖಿತ ಉತ್ತರ ನೀಡಿದೆ. ಇದರಿಂದ ಪ್ರಚಾರಕ್ಕೆ ಇಷ್ಟೊಂದು ಕೋಟಿ ಖರ್ಚು ಮಾಡಿರುವುದು ತಿಳಿದು ಬಂದಿದೆ.