- 2 ದಿನಗಳ ಸಮೀಕ್ಷೆ ನಮ್ಮ ವಾದ ದೃಢೀಕರಿಸುತ್ತಿದೆ: ವಕೀಲ- ಮಸೀದಿಯು ಈ ಮುಂಚೆ ಮಂದಿರವಾಗಿತ್ತು , ಸಿಕ್ಕಿದೆ ಹಲವು ಸಾಕ್ಷ್ಯ- ಸಮೀಕ್ಷೆಯ 4 ತಾಸಿನ ಸಂದರ್ಭದಲ್ಲಿ ಬಿಗಿ ಭದ್ರತೆ  

ವಾರಾಣಸಿ(ಮೇ.16): ಮುಘಲ್‌ ದೊರೆ ಔರಂಗಜೇಬ್‌ ಕಾಶಿ ವಿಶ್ವನಾಥ ಮಂದಿರದ ಭಾಗವೊಂದನ್ನು ಕೆಡವಿ ನಿರ್ಮಿಸಿದ್ದ ಎನ್ನಲಾದ ಗ್ಯಾನವಾಪಿ ಮಸೀದಿಯಲ್ಲಿ ನಡೆಸಲಾದ ವಿಡಿಯೋ ಚಿತ್ರೀಕರಣವು ‘ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ತಮ್ಮ ವಾದವನ್ನು ಮತ್ತಷ್ಟುದೃಢೀಕರಿಸುತ್ತಿದೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.

ಭಾನುವಾರ ಸಮೀಕ್ಷೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಅರ್ಜಿದಾರರ ಪರ ವಕೀಲ ಹರಿಶಂಕರ ಜೈನ್‌, ‘ಮಸೀದಿಯ ಒಳಗೆ 2 ದಿನದಿಂದ ನಡೆಸಲಾದ ಸಮೀಕ್ಷೆಯು ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ವಾದ ದೃಢೀಕರಿಸುತ್ತಿದೆ’ ಎಂದಿದ್ದಾರೆ. ಇನ್ನೊಬ್ಬ ಹಿಂದೂಪರ ವಕೀಲ ಮದನ್‌ಮೋಹನ್‌ ಯಾದವ್‌ ಮಾತನಾಡಿ, ‘ಶೇ.65ರಷ್ಟುಸಮೀಕ್ಷೆ ಮುಗಿದಿದೆ. ಉಳಿದ ಸಮೀಕ್ಷೆಗೆ ಸೋಮವಾರ 2 ತಾಸು ಹಿಡಿಯಬಹುದು. ಮಂಗಳವಾರದೊಳಗೆ ಕೋರ್ಚ್‌ ಸೂಚನೆಯಂತೆ ಸಮೀಕ್ಷೆ ಮುಗಿಯಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಕೋರ್ಟ್‌ ಆದೇಶದಂತೆ ಭದ್ರತೆ ನಡುವೆ ಜ್ಞಾನವ್ಯಾಪಿ ಮಸೀದಿ ಸಮೀಕ್ಷೆ

2ನೇ ದಿನವೂ ಸುಸೂತ್ರ:
‘ಅಡ್ವೋಕೇಟ್‌ ಕಮಿಷ್ನರ್‌ ಅಜಯ್‌ ಕುಮಾರ್‌ ಮಿಶ್ರಾ ನೇತೃತ್ವದ ತಂಡ ಸತತ 2ನೇ ದಿನವಾದ ಭಾನುವಾರವೂ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಸೀದಿಯ ಹಲವು ಭಾಗಗಳ ವಿಡಿಯೋ ಚಿತ್ರೀಕರಣ ನಡೆಸಿತು. ಈ ವೇಳೆ ಪ್ರಕರಣದ ಉಭಯ ಪಕ್ಷಗಾರರು, ವಾರ್ತಾ ಇಲಾಖೆಯ ವಿಡಿಯೋಗ್ರಾಫರ್‌ಗಳು, ಫೋಟೋಗ್ರಾಫರ್‌ಗಳು ಹಾಗೂ ಡ್ರಾಫ್‌್ಟಮನ್‌ಗಳು ಸೇರಿ ಅನೇಕರು ಉಪಸ್ಥಿತರಿದ್ದರು. ಸಮೀಕ್ಷೆ ಸುಸೂತ್ರವಾಗಿ ನಡೆಯಿತು’ ಎಂದು ವಾರಾಣಸಿ ಜಿಲ್ಲಾಧಿಕಾರಿ ಕೌಶಲ್‌ ರಾಜ್‌ ಶರ್ಮಾ ಹೇಳಿದ್ದಾರೆ.

ಬಿಗಿ ಭದ್ರತೆ:
ಸಮೀಕ್ಷೆಯ 4 ತಾಸಿನ ಸಂದರ್ಭದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ವಿಶ್ವನಾಥ ಮಂದಿರದ ಗೇಟ್‌ ನಂ.4 ಮುಚ್ಚಿ ಭಕ್ತರಿಗೆ ಅಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಉಳಿದ ದ್ವಾರಗಳಿಂದ ಅವರು ಪ್ರವೇಶಿಸಲು ಅವಕಾಶ ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿ ಶರ್ಮಾ ಹೇಳಿದ್ದಾರೆ.

"ಇನ್ನೊಂದು ಮಸೀದಿ ಕಳೆದುಕೊಳ್ಳಲ್ಲ" ಓವೈಸಿ ಎಚ್ಚರಿಕೆ: ಭಯದ ನಡುವೆಯೇ ಕಾಶಿ ಜ್ಞಾನ​ವಾಪಿ ಸಮೀಕ್ಷೆ!

ವಿವಾದ ಏನು?:
ಕಾಶಿ ವಿಶ್ವನಾಥ ಮಂದಿರದ ಭಾಗವನ್ನು ಕೆಡವಿ ಅಂದಿನ ಮುಘಲ್‌ ದೊರೆ ಔರಂಗಜೇಬ್‌ ಗ್ಯಾನವಾಪಿ ಮಸೀದಿ ಕಟ್ಟಿಸಿದ್ದ. ಈ ಮಸೀದಿಯಲ್ಲಿ ಶೃಂಗಾರ ಗೌರಿ, ಗಣೇಶ ಸೇರಿ ಅನೇಕ ದೇವರ ವಿಗ್ರಹಗಳಿವೆ. ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂಬ ಅರ್ಜಿ ವಾರಾಣಸಿ ಕೋರ್ಚ್‌ ಮುಂದಿದೆ. ಆದರೆ ಮಸೀದಿಯನ್ನು ಅನ್ಯಧರ್ಮದ ಚಟುವಟಿಕೆಗೆ ನೀಡುವುದು ಮಸೀದಿ ಕಮಿಟಿಗೆ ಇಷ್ಟವಿಲ್ಲ. ಇದು ವಿವಾದದ ಮೂಲ. ಆದರೆ, ಮಸೀದಿಯಲ್ಲಿ ನಿಜಕ್ಕೂ ಹಿಂದೂ ವಿಗ್ರಹಗಳು ಹಾಗೂ ಮಂದಿರದ ವಿನ್ಯಾಸಗಳು ಇವೆಯೇ ಎಂಬುದರ ಪತ್ತೆಗಾಗಿ ವಿಡಿಯೋ ಸಮೀಕ್ಷೆಗೆ ಕೋರ್ಚ್‌ ಆದೇಶಿಸಿದೆ.

ಸರ್ವೇ
- 65% ಸಮೀಕ್ಷೆ ಪೂರ್ಣ, ಮಂಗಳವಾರ ಮುಕ್ತಾಯ

- 2ನೇ ದಿನವಾದ ಭಾನುವಾರವೂ ಮುಂದುವರಿದ ಸಮೀಕ್ಷೆ

- ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಸೀದಿಯಲ್ಲಿ ಸರ್ವೇ

- ಮಸೀದಿಯ ಹಲವು ಭಾಗ ವಿಡಿಯೋ ಚಿತ್ರೀಕರಣ ಪ್ರಕ್ರಿಯೆ

- ಉಭಯ ಪಕ್ಷಗಾರರು ಸೇರಿ ಹಲವರು ಈ ವೇಳೆ ಉಪಸ್ಥಿತಿ

- ಮುಂಚೆ ಮಂದಿರವಾಗಿತ್ತು ಎಂಬ ವಾದಕ್ಕೆ ಪುಷ್ಟಿ: ವಕೀಲ