ಮೇಲ್ಜಾತಿ ಮನೆ ತೋಟದಿಂದ ಹೂ ಕೊಯ್ದ ಬಾಲಕಿ; 40 ದಲಿತ ಕುಟುಂಬಕ್ಕೆ ಬಹಿಷ್ಕಾರ!
ಸ್ವಾತಂತ್ರ್ಯ ಸಿಕ್ಕಿ 74 ವರ್ಷಗಳೇ ಉರುಳಿವೆ. 14 ಪ್ರಧಾನ ಮಂತ್ರಿಗಳು ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ದೇಶ, ರಾಜ್ಯ, ಜಿಲ್ಲೆ, ತಾಲೂಕು, ಪಂಚಾಯಿತಿ ಸೇರಿದಂತೆ ಆಡಳಿತಕ್ಕಾಗಿ ವಿಕೇಂದ್ರೀಕರಣ ಮಾಡಲಾಗಿದೆ. ಹಳ್ಳಿ ಹಳ್ಳಿಗೂ ಆಡಳಿತ ತಲುಪುವ ವ್ಯವಸ್ಥೆ ಇದೆ. ಆದರೆ ಇದುವರೆಗೂ ದೇಶದಲ್ಲಿ ಜಾತಿ ವ್ಯವಸ್ಥೆ, ಶೋಷಣೆ ಸೇರಿದಂತೆ ಹಲವು ಪಿಡುಗುಗಳು ಹಾಗೇ ಇವೆ. ಇದೀಗ ಮೇಲ್ಜಾತಿ ಮನೆ ತೋಟದಿಂದ ಬಾಲಕಿ ಹೂವು ಕಿತ್ತಿದ್ದಾಳೆ ಅಷ್ಟೇ. 40 ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.
ಒಡಿಶಾ(ಆ.24): ಮೇಲ್ಜಾತಿ- ಕೀಳು ಜಾತಿ ಅನ್ನೋ ಶೋಷಣೆ ಇನ್ನು ಜೀವಂತವಾಗಿದೆ ಅನ್ನೋದು ದುರಂತ. ಒಡಿಶಾದ ದೇನ್ಕಲ್ ಗ್ರಾಮ ಈ ದುರಂತದ ಪಟ್ಟಿಗೆ ಸೇರಿಕೊಂಡಿದೆ. 15 ವರ್ಷದ ಬಾಲಕಿ ಮೇಲ್ಜಾತಿಯವರ ಮನೆ ತೋಟದಿಂದ ಹೂವು ಕಿತ್ತಿದ್ದಾಳೆ. ಈ ಕಾರಣನ್ನಿಟ್ಟುಕೊಂಡು ಹಳೇ ದ್ವೇಷಕ್ಕೆ ಎಲ್ಲಾ ಬಡ್ಡಿ ಸೇರಿಸಿ ಗ್ರಾಮದಲ್ಲಿದ್ದ 40 ದಲಿತ ಕುಟುಂಬಕ್ಕೆ ಸಾಮಾಜಿ ಬಹಿಷ್ಕಾರ ಹಾಕಲಾಗಿತ್ತು. ಆದರೆ ಪೊಲೀಸರ ಮಧ್ಯ ಪ್ರವೇಶದಿಂದ ಇದೀಗ ಪರಿಸ್ಥಿತಿ ತಿಳಿಗೊಂಡಿದೆ.
ಜಾತಿ ನಿಂದನೆ: DHO ಸೇರಿ ಇಬ್ಬರ ಬಂಧನಕ್ಕೆ ದಸಂಸ ಆಗ್ರಹ
ದೇನ್ಕಲ್ ಗ್ರಾಮದಲ್ಲಿ ಸುಮಾರು 700 ಕುಟುಂಬಗಳಿವೆ. ಇದರಲ್ಲಿ 40 ದಲಿತ ಕುಟುಂಬಗಳು. ಇಲ್ಲಿ ಮೇಲ್ಜಾತಿ ಕುಟುಂಬಗಳು ಹಾಗೂ ದಲಿತ ಕುಟುಂಬಗಳ ನಡುವೆ ಹಳೇ ದ್ವೇಷವೂ ಈ ಘಟನೆಗೆ ಕಾರಣವಾಗಿದೆ. ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಮೇಲ್ಜಾತಿ ಕುಟುಂಬಗಳಿಗೆ ಹೂವು ಕಿತ್ತ ಘಟನೆ ಮತ್ತಷ್ಟು ಕೆರಳಿಸಿದೆ. 15 ವರ್ಷದ ದಲಿತ ಬಾಲಕಿ ದಾರಿಯತ್ತ ಬಾಗಿದ್ದ ಹೂವನ್ನು ಕಿತ್ತಿದ್ದಾಳೆ. ಈ ಕಾರಣಕ್ಕೆ ಮೇಲ್ಜಾತಿ ಕುಟುಂಬಗಳು ದಲಿತ ಕುಟಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ.
ಯಾವುದೇ ಅಂಗಡಿಯಿಂದ ದಿನಸಿ ಖರೀದಿಸಲು ಅವಕಾಶ ನೀಡಿಲ್ಲ. ದಲಿತ ಕುಟುಂಬದ ಹಿರಿಯರು ಪರಿ ಪರಿಯಾಗಿ ಮನವಿ ಮಾಡಿಕೊಂಡು ಕ್ಷಮೆ ಕೇಳಿದರೂ ಪ್ರಯೋಜವಾಗಿಲ್ಲ. ಕೊನೆಗೆ ದಲಿತ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣ ತಿಳಿಸಿಗೊಳಿಸಿದ್ದಾರೆ. ಇಷ್ಟೇ ಅಲ್ಲ ಮೇಲ್ಜಾತಿ ಕುಟುಂಬ ಮುಂದೆ ಈ ರೀತಿ ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಕೊಟ್ಟಿದ್ದಾರೆ.