* ಕೊರೋನಾ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ರೋಗಿಗಳ ನೆರವಿಗೆ ಧಾವಿಸಿದ್ದ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್* ಗಂಬೀರ್‌ಗೆ ಉರುಳಾಯ್ತು ಕೊರೋನಾ ಔಷಧಿ ವಿತರಣೆ* ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ಅತ್ಯಾವಶ್ಯಕ Fabiflu ಮಾತ್ರೆ ಅಕ್ರಮ ದಾಸ್ತಾನು, ಗೌತಮ್  ಗಂಭೀರ್ ಫೌಂಡೇಷನ್ ದೋಷಿ

ನವದೆಹಲಿ(ಜೂ.03): ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಬಳಸಲಾಗುವ ಅತ್ಯಾವಶ್ಯಕ ಔಷಧಿಗಳಲ್ಲೊಂದಾದ Fabiflu ಮಾತ್ರೆಗಳ ಅನಧಿಕೃತ ದಾಸ್ತಾನು ಹಾಗೂ ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ಫೌಂಡೇಷನ್‌ ಅಪರಾಧ ಸಾಬೀತಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಆಮ್‌ ಆದ್ಮಿ ಪಕ್ಷದ ಶಾಸಕ ಪ್ರವೀಣ್‌ ಕುಮಾರ್‌ರನ್ನೂ ದೋಷಿ ಎಂದು ಕೋರ್ಟ್‌ ಘೋಷಿಸಿದೆ.

Add Asianetnews Kannada as a Preferred SourcegooglePreferred

ಹೌದು ಕೊರೋನಾ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ರೋಗಿಗಳ ನೆರವಿಗೆ ಧಾವಿಸಿ, ಕೊರೋನಾ ಔಷಧಿ ವಿತರಿಸಿದ್ದ ಗೌತಮ್ ಗಂಭೀರ್ ಪ್ರತಿಷ್ಠಾನ ತಪ್ಪಿತಸ್ಥರೆಂದು ದೆಹಲಿ ಹೈಕೋರ್ಟ್‌ ಹೇಳಿದೆ. ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ಅತ್ಯಾವಶ್ಯಕ Fabiflu ಮಾತ್ರೆಗಳನ್ನು ಗೌತಮ್ ಗಂಭೀರ್ ಫೌಂಡೇಷನ್ ಈ ವೇಳೆ ವಿತರಿಸಿತ್ತು ಎಂಬುವುದು ಉಲ್ಲೇಖನೀಯ.

ಗಂಭೀರ್ ಉಚಿತ ಔಷಧಿ ಘೋಷಣೆಗೆ ದೆಹಲಿ ಹೈಕೋರ್ಟ್ ಗರಂ; ಇದು ಹೇಗೆ ಸಾಧ್ಯ?

ಈ ವಿಚಾರವನ್ನು ಗಮಭೀರವಾಗಿ ಪರಿಗಣಿಸಿದ್ದ ದೆಹಲಿ ಹೈಕೋರ್ಟ್ ದೇಶಾದ್ಯಂತ ವ್ಯಾಪಕ ಕೊರತೆ ಇದ್ದಂತಹ ಸಂದರ್ಭದಲ್ಲಿ ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ಯಥೇಚ್ಛವಾಗಿ ಈ ಔಷಧಿ ಸಂಗ್ರಹಿಸಿದ್ದು ಹೇಗೆ..? ಇದಕ್ಕೆ ಯಾವ ಅಧಿಕಾರಿಗಳು ಸಹಕರಿಸಿದ್ದಾರೆ? ದೆಹಲಿ ಹೈಕೋರ್ಟ್ ದೆಹಲಿಯ ಔಷಧ ನಿಯಂತ್ರಕರನ್ನು ಪ್ರಶ್ನಿಸಿತ್ತು. ಈ ಸಂಬಂಧ ಕೋರ್ಟ್ ಗೆ ವರದಿ ನೀಡಿದ್ದ ದೆಹಲಿಯ ಔಷಧ ನಿಯಂತ್ರಕ ಇಲಾಖೆ, ಗೌತಮ್ ಗಂಭೀರ್ ಫೌಂಡೇಷನ್ ಅಕ್ರಮವಾಗಿ ಕೋವಿಡ್-19 ಔಷಧಿಗಳನ್ನು ಸಂಗ್ರಹಿಸಿ ವಿತರಣೆ ಮಾಡಿತ್ತು. ಹೀಗಾಗಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಅಲ್ಲದೆ ಇಂತಹ ಪ್ರಕರಣಗಳು ಕಂಡುಬಂದರೆ ಮಾಹಿತಿ ನೀಡುವಂತೆ ಔಷಧ ಡೀಲರ್ ಗಳಿಗೆ ಸೂಚಿಸಲಾಗಿದೆ ಎಂದು ಹೇಳಿದೆ.

ಈ ವಿಚಾರ ಈಗ ಗೌತಮ್‌ ಗಂಭೀರ್ ಫೌಂಡೇಷನ್‌ಗೆ ಉರುಳಾಗಿ ಪರಿಣಮಿಸಿದೆ. ಪ್ರಕರಣದ ವಿಚಾರಣೆಯಲ್ಲಿ ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಅಲ್ಲದೇ ಆಪ್‌ ಶಾಸಕ ಪ್ರವೀಣ್ ಕುಮಾರ್ ಅವರನ್ನೂ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ತಪ್ಪಿತಸ್ಥ ಎಂದು ಘೋಷಿಸಿದೆ. ಜೊತೆಗೆ ಅಂತೆಯೇ ಮುಂದಿನ ಆರು ವಾರದಲ್ಲಿ ಈ ಪ್ರಕರಣದ ಹೆಚ್ಚಿನ ಪ್ರಗತಿಯ ಕುರಿತು ಸ್ಥಿತಿ ವರದಿ ಸಲ್ಲಿಸಲು ನ್ಯಾಯಾಲಯ ಔಷಧ ನಿಯಂತ್ರಕ ಪ್ರಾಧಿಕಾರವನ್ನು ಕೇಳಿದೆ ಹಾಗೂ ಜುಲೈ 29ಕ್ಕೆ ವಿಚಾರಣೆಯನ್ನು ಮುಂದೂಡಿದೆ.