ನೆಹರು ಸಂಗ್ರಹಾಲಯ ಮರು ನಾಮಕರಣ, ಮೋದಿ ಬೆಂಬಲಿಸಿದ ಮಾಜಿ ಪ್ರಧಾನಿ ದೇವೇಗೌಡ!
ನೆಹರು ಸಂಗ್ರಹಾಲಯವನ್ನು ಪ್ರಧಾನಿ ಸಂಗ್ರಹಾಲಯ ಎಂದು ಬಿಜಿಪಿ ಸರ್ಕಾರ ಮರುನಾಮಕರಣ ಮಾಡಲಾಗಿದೆ. ಈ ನಿರ್ಧಾರಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಆದರೆ ಕೇಂದ್ರ ನಿರ್ಧಾರವನ್ನು ಮಾಜಿ ಪ್ರಧಾನಿ ದೇವೇಗೌಡ ಸ್ವಾಗತಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ನ ಪರಿವಾರ ರಾಜಕೀಯವನ್ನು ಟೀಕಿಸಿದ್ದಾರೆ.
ನವದೆಹಲಿ(ಜೂ.16) ನೆಹರೂ ಸ್ಮಾರಕ ಸಂಗ್ರಹಾಲಯ ಹೆಸರನ್ನು ಕೇಂದ್ರ ಬಿಜೆಪಿ ಸರ್ಕಾರ ಮರುನಾಮಕರಣ ಮಾಡಿದೆ. ಇನ್ನು ಮುಂದೆ ಈ ಸಂಗ್ರಹಾಲಯ ಪ್ರಧಾನಿ ಸ್ಮಾರಕ ಸಂಗ್ರಹಾಲಯ ಎಂದು ಹೆಸರು ಬದಲಾಯಿಸಲಾಗಿದೆ. ಈ ನಡೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಇತಿಹಾಸ ತಿಳಿಯದವರು ಇತಿಹಾಸವನ್ನೇ ಅಳಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದೆ. ಇದು ಆರ್ಎಸ್ಎಸ್ ಮನಸ್ಥಿತಿ, ಮೋದಿಯ ಸಣ್ಣತನ ಎಂದು ಜರಿದಿದೆ. ಆದರೆ ಈ ನಡೆಯನ್ನು ಹಲವರು ಬೆಂಬಲಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಾಜಿ ಪ್ರಧಾನಿ ದೇವೇಗೌಡ ಮರುನಾಮಕರಣವನ್ನು ಬೆಂಬಲಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ಗೆ ಕಪಾಳಮೋಕ್ಷ ಮಾಡಿದ್ದಾರೆ.
ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ರಾಜವಂಶದ ರಾಜಕೀಯದಲ್ಲಿ ಗಾಂಧಿ ಹೊರತುಪಡಿಸಿ ಇನ್ಯಾವುದೇ ವ್ಯಕ್ತಿಗಳ ಹೆಸರು ಉಲ್ಲೇಖಿಸಲು ಕಾಂಗ್ರೆಸ್ ಮುಂದಾಗುವುದಿಲ್ಲ. ಮನ್ಮೋಹನ್ ಸಿಂಗ್ ಪ್ರಧಾನಿಯಾಗಿ 10 ವರ್ಷ ಸೇವೆ ಸಲ್ಲಿಸಿದ್ದಾರೆ. ಮನ್ಮೋಹನ್ ಸಿಂಗ್ ಹೆಸರು ಎಲ್ಲಾದರೂ ಇದೆಯಾ? ಎಲ್ಲಾ ಸರ್ಕಾರಿ ಕಟ್ಟಡ, ಯೋಜನೆ, ಸಾರ್ವಜನಿಕ ಪ್ರದೇಶ ಸೇರಿದಂತೆ ಹಲೆವೆಡೆ ಗಾಂಧಿ ಕುಟುಂಬದ ಹೆಸರನ್ನೇ ಇಡಲಾಗಿದೆ. ಈ ನಡೆಯನ್ನು ಮೋದಿ ಸವಾಲಾಗಿ ಸ್ವೀಕರಿಸಿದ್ದಾರೆ. ನೆಹರೂ ಸ್ಮಾರಕ ಸಂಗ್ರಹಾಲಯ ಹೆಸರನ್ನು ಎಲ್ಲಾ ಪ್ರಧಾನ ಮಂತ್ರಿಗಳ ಸ್ಮಾರಕ ಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ. ಇದು ಉತ್ತಮ ನಡೆ ಎಂದು ದೇವೇಗೌಡ ಹೇಳಿದ್ದಾರೆ.
ನೆಹರೂ ಮೆಮೋರಿಯಲ್ ಮ್ಯೂಸಿಯಂ ಮರುನಾಮಕರಣ; ಇದು ಸಣ್ಣತನ: ಕಾಂಗ್ರೆಸ್ ಟೀಕೆ
ಈ ದೇಶದ ಇತಿಹಾಸ ಕೇವಲ ಗಾಂಧಿ ಕುಟುಂಬದಿಂದ ಆರಂಭಗೊಂಡು, ಗಾಂಧಿ ಕುಟುಂಬಕ್ಕೆ ಅಂತ್ಯಗೊಳ್ಳುತ್ತಿಲ್ಲ. ಹಲವರ ತ್ಯಾಗ ಪರಿಶ್ರಮವಿದೆ. ಪ್ರಧಾನಿಯಾಗಿ ಹಲವರು ಸೇವೆ ಸಲ್ಲಿಸಿದ್ದಾರೆ. ಅವರಿಗೂ ಗೌರವ ಸಿಗಬೇಕಿದೆ. ಇದನ್ನು ಮೋದಿ ಮಾಡಿದ್ದಾರೆ. ನೆಹರೂ ಹಾಗೂ ಗಾಂಧಿ ಕುಟುಂಬದ ಬಗ್ಗೆ ಅತ್ಯಂತ ಗೌರವವಿದೆ. ಅವರ ಕೂಡುಗೆಯೂ ಈ ದೇಶಕ್ಕಿದೆ ಎಂದು ದೇವೇಗೌಡ ಹೇಳಿದ್ದಾರೆ.
ತೀನ್ ಮೂರ್ತಿ ಭವನದಲ್ಲಿರುವ ನೆಹರೂ ಸ್ಮಾರಕ ಸಂಗ್ರಹಾಲಯ ಹಾಗೂ ಲೈಬ್ರರಿ ಹೆಸರನ್ನು ಪ್ರಧಾನಿ ಸ್ಮಾರಕ ಸಂಗ್ರಹಾಲಯ ಎಂದು ಮರುನಾಮಕರಣ ಮಾಡಲಾಗಿದೆ. ನೆಹರೂ ಹೆಸರನ್ನು ತೆಗೆದು ಪ್ರಧಾನಿ ಸಂಗ್ರಹಾಲಯ ಎಂದು ಮಾಡಲಾಗಿದೆ. ದೇಶದ ಮೊದಲ ಪ್ರಧಾನಿಯಿಂದ ಇದೀಗ ಮೋದಿ ವರೆಗಿನ ಎಲ್ಲಾ ಪ್ರಧಾನಿಗಳ ಕೊಡುಗೆಯ ಸ್ಮಾರಕ ಸಂಗ್ರಹಾಲಯ ಇದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಕ್ಕಿ ಕೊಡದೆ ಬಿಜೆಪಿ ದ್ವೇಷ, ಪ್ರಧಾನಿ ಮೋದಿ ಶತೃತ್ವ ನೀತಿ ಬಯಲು: ಸುರ್ಜೇವಾಲಾ
ಈ ಸ್ಮಾರಕ ಸಂಗ್ರಹಾಲಯದಲ್ಲಿ ಎಲ್ಲಾ ಪ್ರಧಾನಿಗಳ ಕೊಡುಗೆಯನ್ನು ಪರಿಗಣಿಸಲಾಗುತ್ತದೆ. ಇದು ಪ್ರಧಾನಿಗಳ ಸ್ಮಾರಕ ಸಂಗ್ರಹಾಲಯ ಒಬ್ಬರಿಗೆ ಸೀಮಿತವಾಗಿಲ್ಲ ಎಂದಿದ್ದಾರೆ. ಇದೇ ವೇಳೆ ಈ ನಿರ್ಧಾರವನ್ನು ಕಾಂಗ್ರೆಸ್ ಹೊರತುಪಡಿಸಿ ಇತರರು ಸ್ವಾಗತಿಸಿದ್ದಾರೆ. ಆದರೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸ್ಮಾರಕ, ಕಟ್ಟಡಗಳಿಂದ ನೆಹರೂ ಹೆಸರು ತೆಗೆದರೆ ಅವರ ಪರಂಪರೆ ಕೊಡುಗೆಯನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಇದು ಸೇಡಿನ ರಾಜಕಾರಣ. ಸಣ್ಣತನದ ನಡೆ ಎಂದು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.