ಬಿಜೆಪಿ ಬಂದರೆ ಮೀನು ಮಾಂಸ ತಿನ್ನಲು ಬಿಡಲ್ಲ, ವಿವಾದ ಸೃಷ್ಟಿಸಿದ ಸಿಎಂ ಮಮತಾ ಹೇಳಿಕೆ, ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಜನರು ಮೀನು ತಿನ್ನಲು ಬಿಡುವುದಿಲ್ಲ ಎಂದಿರುವ ಮಮತಾ ಬ್ಯಾನರ್ಜಿ ಇದೀಗ ಪೇಚಿಗೆ ಸಿಲುಕಿದ್ದಾರೆ.

ಕೋಲ್ಕತಾ (ಮಾ.29) ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಾವೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೆ ಗುರಿಯಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಜನರು ಮೀನು ಮಾಂಸ ತಿನ್ನಬೇಕು ಎಂದರೆ ಟಿಎಂಸಿಕೆ ಮತ ಹಾಕಬೇಕು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಮೀನು ಮಾಂಸ ತಿನ್ನಲು ಬಿಡುವುದಿಲ್ಲ ಎಂದಿದ್ದಾರೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಮೀನು ತಿನ್ನುವುದು ನಿಷೇಧ ಎಂದಿದ್ದಾರೆ. ಮತದಾರರ ಒಲೈಕೆಗೆ ನೀಡಿದ ಹೇಳಿಕೆಯಿಂದ ಮಮತಾ ಬ್ಯಾನರ್ಜಿ ಟ್ರೋಲ್ ಆಗುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಆಹಾರ ಹಕ್ಕು ಕಸಿದುಕೊಳ್ಳುತ್ತೆ ಬಿಜೆಪಿ, ಮಮತಾ ಆರೋಪ

ಪುರುಲಿಯಾದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಆಹಾರ ಪದ್ಧತಿ, ಸಂಸ್ಕೃತಿಯನ್ನು ಬಿಜೆಪಿ ಮುಗಿಸುತ್ತದೆ. ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಜನರು ಮೀನು, ಮಾಂಸ, ಮೊಟ್ಟೆ ತಿನ್ನುವುದನ್ನು ನಿಷೇಧಿಸುತ್ತಾರೆ. ನಿಮ್ಮ ಆಹಾರದ ಹಕ್ಕನ್ನು ಕಸಿದುಕೊಳ್ಳುತ್ತಾರೆ. ಕಾರಣ ಅವರಿಗೆ ಬೇರೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ. ಬಿಜೆಪಿಗೆ ಗೊತ್ತಿರುವುದು ಗಲಭೆ ಮಾತ್ರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಿಜೆಪಿ ಆಡಳಿತ ಮಾಡುವ ರಾಜ್ಯಗಳಲ್ಲಿ ಜನರು ಮೀನು ತಿನ್ನಲು ಆಗುತ್ತಿಲ್ಲ ಎಂದಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳ ಜನರು ಮೀನು, ಮಾಂಸ ತಿನ್ನಬೇಕು ಎಂದರೆ ಟಿಎಂಸಿಗೆ ಮತ ಹಾಕಬೇಕು ಎಂದು ಪರೋಕ್ಷವಾಗಿ ಜನರನ್ನು ಬೆದರಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಗಲಭೆಗೆ ಪ್ರಚೋದನೆ ನೀಡುತ್ತಾರೆ. ಅವರ ಕೆಲಸವೇ ಅದು ಎಂದಿದ್ದಾರೆ.

ಬಿಜೆಪಿ ಆಡಳಿತದ ರಾಜ್ಯದಲ್ಲಿ ಮಹಿಳೆಯರು ಮಾತನಾಡುವಂತಿಲ್ಲ. ಮಹಿಳೆಯರ ಮೇಲೆ ದಾಳಿಗಳು ನಡೆಯುತ್ತಿದೆ. ಪಶ್ಚಿಮ ಬಂಗಾಳ ಶಾಂತಿಯುತ ರಾಜ್ಯ. ಇಲ್ಲಿ ಟಿಎಂಸಿ ಆಡಳಿತದಲ್ಲಿ ಶಾಂತಿ ನೆಲೆಸಿದೆ. ಅದು ಬಿಜೆಪಿಯಿಂದ ಸಾಧ್ಯವಿಲ್ಲ ಎಂದಿದ್ದಾರೆ. ದೊಂಬಿ ಎಬ್ಬಿಸಿ ಮುಗ್ದ ಜನರ ಮೇಲೆ ದಾಳಿ ಮಾಡುತ್ತಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಧರ್ಮದವರಿದ್ದಾರೆ. ಬಿಜೆಪಿಗೆ ಒಂದು ಧರ್ಮ ಮಾತ್ರ ಸಾಕು. ಬೇರೆ ಧರ್ಮಗಳಲ್ಲಿ ಅವರಿಗೆ ನಂಬಿಕೆ ಇಲ್ಲ. ಬಿಜೆಯಿಂದ ಪಶ್ಚಿಮ ಬಂಗಾಳದ ಜನರು ಹೈರಾಣಾಗಲಿದ್ದಾರೆ ಎಂದಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ

ಪಶ್ಚಿಮ ಬಂಗಾಳದ ವಿಧಾನಭೆ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಎಪ್ರಿಲ್ 23 ಹಾಗೂ ಎರಡನೇ ಹಂತ ಎಪ್ರಿಲ್ 29ರಂದು ನಡೆಯಲಿದೆ. ಫಲಿತಾಂಶ ಮೇ 4 ರಂದು ಘೋಷಣೆಯಾಗಲಿದೆ.