ಗಲ್ವಾನ್ ಘರ್ಷೆಣೆಯಲ್ಲಿ ಭಾರತಕ್ಕೆ ನೆರವಾಗಿದ್ದು 1948ರಲ್ಲಿ ನಿರ್ಮಾಣವಾದ ಏರ್ಸ್ಟ್ರಿಪ್!
ಅತೀ ಎತ್ತರದ ಯುದ್ಧಭೂಮಿ ಎಂದೇ ಗುರುತಿಸಿಕೊಂಡಿರುವ ಲಡಾಖ್ನಲ್ಲಿ ಕೇವಲ 26 ದಿನದಲ್ಲಿ ವಾಯುಸೇನೆಯ ಯುದ್ಧವಿಮಾನಕ್ಕಾಗಿ ರನ್ವೇ ನಿರ್ಮಾಣವಾಗಿತ್ತು. 1948ರಲ್ಲಿ ನಿರ್ಮಿಸಿದ ಇದೇ ಏರ್ಸ್ಟ್ರಿಪ್ 2020ರಲ್ಲಿ ಚೀನಾ ವಿರುದ್ದ ಗಲ್ವಾನ್ ಘರ್ಷಣೆಯಲ್ಲಿ ಭಾರತಕ್ಕೆ ನೆರವಾಗಿತ್ತು. ಈ ರೋಚಕ ಇತಿಹಾಸ ಇಲ್ಲಿದೆ.
ನವದೆಹಲಿ(ಆ.03): ಅತೀ ಎತ್ತರದ ಯುದ್ಧಭೂಮಿ ಲಡಾಖ್ನಲ್ಲಿ ಸಣ್ಣ ರಸ್ತೆ ನಿರ್ಮಾಣವೂ ಅತ್ಯಂತ ಸವಾಲು. ಹೀಗಿರುವಾಗ 1948ರ ಪರಿಸ್ಥಿತಿ ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. ಆದರೆ ಅಂದು ಅಸಾಧ್ಯ ಎಂದುಕೊಂಡಿದ್ದ ಸಮಯದಲ್ಲಿ ಅತೀ ಎತ್ತರ ಪ್ರದೇಶದಲ್ಲಿ ಯುದ್ಧವಿಮಾನಕ್ಕಾಗಿ ರನ್ವೇ ನಿರ್ಮಾಣವಾಗಿತ್ತು. ಕೇವಲ 26 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಇಷ್ಟೇ ಅಲ್ಲ 10 ಸಾವಿರ ರೂಪಾಯಿಯಲ್ಲಿ ಈ ಏರ್ಸ್ಟ್ರಿಪ್ ನಿರ್ಮಾಣಗೊಂಡಿತ್ತು. ಅಂದು ನಿರ್ಮಾಣವಾದ ರನ್ವೇ ಪ್ರಾಮುಖ್ಯತೆ ಏಷ್ಟಿತ್ತು ಅನ್ನೋದು 2020ರ ಚೀನಾ ವಿರುದ್ಧದ ಗಲ್ವಾನ್ ಘರ್ಷಣೆಯಲ್ಲಿ ಎಲ್ಲರಿಗೂ ಅರಿವಿಗೆ ಬಂದಿದೆ. ಕಾರಣ ಚೀನಾ ವಿರುದ್ಧ ಗಲ್ವಾನ್ ಘರ್ಷಣೆಯಲ್ಲಿ ಭಾರತೀಯ ಸೇನೆಗೆ ನೆರವಾಗಿದ್ದು ಇದೇ ಎರ್ಸ್ಟ್ರಿಪ್. ಭಾರತದ ಗಡಿಯಲ್ಲಿ ಎದುರಾಗವ ಅಪಾಯಕ್ಕೆ ಮನಗಂಡು 74 ವರ್ಷಗಳ ಹಿಂದೆ ಏರ್ಸ್ಟ್ರಿಪ್ ನಿರ್ಮಾಣ ಮಾಡಿದ ಕೀರ್ತಿ ಲಡಾಖ್ನ ಮೊದಲ ಎಂಜಿನೀಯರ್ ಸೋನಮ್ ನೊರ್ಬುಗೆ ಸೇರಿದ.
ಭಾರತ ಸ್ವತಂತ್ರ್ಯ ಗೊಂಡ 4 ತಿಂಗಳ ಬಳಿಕ ಅಂದರೆ 1947 ಡಿಸೆಂಬರ್ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನದ(India-Pakistan) ವೈರತ್ವ ಮತ್ತಷ್ಟು ಹೆಚ್ಚಾಗಿತ್ತು. ಭಾರತ ಕಾಲು ಕೆರೆದು ಪಾಕಿಸ್ತಾನ ಗಡಿ ಪ್ರದೇಶಕ್ಕೆ ನುಗ್ಗುವ ಪ್ರಯತ್ನ ಎಂದೂ ಮಾಡಿಲ್ಲ. ಆದರೆ ಪಾಕಿಸ್ತಾನ ತನ್ನ ಸೇನೆಯನ್ನು ಕಾಶ್ಮೀರ ಹಾಗೂ ಲಡಾಖ್ ಗಡಿಯತ್ತ ನುಗ್ಗಿಸುತ್ತಲೇ ಇತ್ತು. ಇತ್ತ ಚೀನಾ ಕೂಡ ಲಡಾಖ್ ಆಕ್ರಮಿಸಲು ಹಾತೊರೆಯುತ್ತಿತ್ತು. ಲಡಾಖ್(leh ladakh) ಸಂಪೂರ್ಣ ಭಾಗವನ್ನು 33 ಯೋಧರ ಪಡೆ ಕಾವಲು ಕಾಯುತ್ತಿತ್ತು. ಲೇಹ್ ಹಾಗೂ ಲಡಾಖ್ ಸಂಪೂರ್ಣ ಕಾವಲು ಕಾಯಲು ಈ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಭದ್ರತಾ ಪಡೆಯನ್ನು ಬಲಪಡಿಸಲು 2 ಡೋಗ್ರಾ ಪಡೆ ಶ್ರೀನಗರದಿಂದ ಲಡಾಖ್ಗೆ ಹೊರಟಿತು. ಫೆಬ್ರವರಿ 16, 1948ರಲ್ಲಿ ಈ ಪಡೆ ಕಾಲ್ನಡಿಗೆಯಲ್ಲಿ ಜೋಜಿಲಾ ಮೂಲಕ ಹೊರಟಿತ್ತು. ಸರಿಸುಮಾರು 400 ಕಿ.ಮೀ ಅಂತರದ ಪಯಣ ಇದಾಗಿತ್ತು. ಕಾರಣ ಲೇಹ್ ಹಾಗೂ ಲಡಾಖ್ಗೆ ತೆರಳಲು ರಸ್ತೆಯಾಗಲಿ ಅಥವಾ ವಿಮಾನ ಲ್ಯಾಂಡ್ ಆಗಲು ಯಾವುದೇ ವ್ಯವಸ್ತೆ ಇರಲಿಲ್ಲ. ಸುದೀರ್ಘ ಅವದಿಯ ಬಳಿಕ 2 ಡೋಗ್ರಾ ಪಡೆ ಲಡಾಖ್ ತಲುಪಿತು. ಈ ಪಡೆಯಲ್ಲಿ ಎಂಜಿಯನ್ ಸೋನಮ್ ನೊರ್ಬು(Sonam Norbu) ಕೂಡ ಇದ್ದರು.
ಯೋಧರ ಸಾಹಸ ನೆನಪಿಸುವ ‘ಕಾರ್ಗಿಲ್ ವಿಜಯ ದಿವಸ್’
ಭಾರತೀಯ ಸೇನೆ(Indian Army) ಎದುರಿಸುತ್ತಿರುವ ಸವಾಲು ಜೊತೆಗೆ ಲೇಹ್, ಲಡಾಖ್ ಸೇರಿದಂತೆ ಗಡಿ ಪ್ರದೇಶದಲ್ಲಿನ ಸಮಸ್ಯೆಗಳನ್ನು ಅರಿತ ಸೋನಮ್ ನೋರ್ಬು 13,000 ರೂಪಾಯಿ ಮಂಜೂರು ಮಾಡಿಸಿಕೊಂಡು ಲೇಹ್ನಲ್ಲಿ ಯುದ್ಧವಿಮಾನ ಬಂದಿಳಿಯಲು, ಟೇಕ್ ಆಫ್ ಪಡೆಯಲು ಏರ್ಸ್ಟ್ರಿಪ್(Aerodrome) ನಿರ್ಮಿಸಲು ಮುಂದಾದರು. ಸಿಂಧೂ ನದಿಯ ತಳ ಮತ್ತು ಪಣ್ಣದ ನಡುವೆ ಏರ್ಸ್ಟ್ರಿಪ್ ನಿರ್ಮಾಣ ಮಾರ್ಚ್ 12, 1948ರಲ್ಲಿ ಆರಂಭಗೊಂಡಿತು. 2,300 ಯಾರ್ಡ್ಗಳ ಉದ್ದದ ತಾತ್ಕಾಲಿಕ ಏರ್ಸ್ಟ್ರಿಪ್ ಎಪ್ರಿಲ್ 6, 1948ಕ್ಕೆ ಸಿದ್ದಗೊಂಡಿತು. ಅಂದರೆ 26 ದಿನಗಳಲ್ಲಿ ರನ್ವೇ ಸಂಪೂರ್ಣಗೊಂಡಿತ್ತು.
ಏರ್ಸ್ಟ್ರಿಪ್ ನಿರ್ಮಾಣಕ್ಕೆ 10,891 ರೂಪಾಯಿ ಖರ್ಚಾಗಿತ್ತು. ಇನ್ನುಳಿದ 2,109 ರೂಪಾಯಿಗಳನ್ನು ಸೋನಮ್ ಖಜಾನೆಗೆ ಜಮಾ ಮಾಡಿದ್ದರು. ಎಪ್ರಿಲ್ 6, 1948ರಂದು ಸೋನಮ್ ನೋರ್ಬು ಯುದ್ಧ ವಿಮಾನ ಲಡಾಖ್ ಏರ್ಸ್ಟ್ರಿಪ್ನಲ್ಲಿ ಲ್ಯಾಂಡ್ ಮಾಡುವಂತೆ ವೈರ್ಲೆಸ್ ಸಂದೇಶವನ್ನು ಭಾರತೀಯ ಸೇನೆಗೆ ಕಳುಹಿಸಿದ್ದರು. ಈ ಮನವಿ ಸ್ವೀಕರಿಸಿದ ಸೇನೆ ಏರ್ ಕಮಾಂಡರ್ ಮೆಹರ್ ಸಿಂಗ್ 11,000 ಅಡಿ ಎತ್ತರ ಲೇಹ್ ಏರ್ಫೀಲ್ಡ್ನಲ್ಲಿ ಪಿಸ್ಟನ್ ಎಂಜಿನ್ ಹೊಂದಿರುವ ಡಕೋಟಾ ವಿಮಾನ ಇಳಿಸಿದರು. ಇಷ್ಟೇ ಭಾರತೀಯ ವಾಯು ಸೇನಾ ವಿಮಾನ ಲಡಾಖ್ನಲ್ಲಿ ಇಳಿಯುತ್ತಿದ್ದಂತೆ ಪಾಕಿಸ್ತಾನ ಹಾಗೂ ಚೀನಾ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಿತ್ತು. 1948ರಲ್ಲಿ ನಿರ್ಮಾಣವಾದ ಇದೇ ಏರ್ಸ್ಟ್ರಿಪ್ ಗಲ್ವಾನ್ನಲ್ಲಿ ಚೀನಾ ವಿರುದ್ಧ ಭಾರತೀಯ ಸೇನೆ ಘರ್ಷಣೆ ವೇಳೆಯೂ ಭಾರತಕ್ಕೆ ನೆರವಾಗಿತ್ತು. 7 ದಶಕಗಳ ಹಿಂದೆ ಭಾರತದ ಗಡಿ ಸಮಸ್ಯೆ ಅರಿತಿದ್ದ ಸೋನಮ್ ನೋರ್ಬು ಭಾರತೀಯ ಸೇನಾ ಪಡೆಯ ಬಲವರ್ಧಿಸಿ ಲಡಾಖ್ ಉಳಿಸಿದ ಮಹಾನ್ ಯೋಧ.
Made In India| ಶತ್ರು ದೇಶದ ರಾಡಾರ್ ಕಣ್ಣಿಗೆ ಬೀಳಲ್ಲ: ಭಾರತದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನ!
ಲಡಾಖ್ನ ಮೊದಲ ಎಂಜಿನಿಯರ್ ಎಂದೇ ಗುರುತಿಸಿಕೊಂಡಿದ್ದ ಸೋನಮ್, ಬಳಿಕ ಜಮ್ಮು ಮತ್ತು ಕಾಶ್ಮೀರದ ಲೋಕೋಪಯೋಗಿ ಇಲಾಖೆ ಸೇರಿಕೊಂಡರು. ಬಳಿಕ ಸೇನೆಯ ಬಾರ್ಡರ್ ರೋಡ್ ಆರ್ಗನೈಸೇಶನ್ ಸಂಸ್ಥೆಯಲ್ಲಿ ಮುಖ್ಯ ಎಂಜಿನಿಯರ್ ಆಗಿ ಶ್ರೀನಗರ-ಲೇಹ ರಸ್ತೆಯಲ್ಲಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.