ಮಕರಸಂಕ್ರಾತಿಗೆ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ಕಾಲ್ತುಳಿತ ಸಂಭವಿಸಿದೆ. ಇದರ ಪರಿಣಾಮ ಇಬ್ಬರು ಮೃತಪಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಕಟಕ್(ಜ.14): ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗಿದೆ. ಮಕರ ಸಂಕ್ರಾಂತಿ, ಲೊಹ್ರಿ, ಪೊಂಗಲ್ ಸೇರಿದಂತೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡು ಸಂಕ್ರಾಂತಿ ಹಬ್ಬ ಸೂರ್ಯರಾಧನೆಯಾಗಿದೆ. ಹೀಗಾಗಿ ಇದು ಅತ್ಯಂತ ಪವಿತ್ರ ಹಾಗೂ ಮಹತ್ವದ್ದಾಗಿದೆ. ಮಕರಸಂಕ್ರಾಂತಿಗೆ ಒಡಿಶಾದ ಸಿಂಘನಾಥ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬಂದಿದೆ. ಈ ವೇಳೆ ಸಂಭವಿಸಿದ ಕಾಲ್ತುಳಿತಕಕ್ಕೆ ಇಬ್ಬರು ಭಕ್ತರು ಮೃತಪಟ್ಟಿದ್ದಾರೆ. ಮಹಳಿಯರು, ಮಕ್ಕಳು ಸೇರಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ 

Add Asianetnews Kannada as a Preferred SourcegooglePreferred

ಕಟಕ್ ಜಿಲ್ಲೆ ಮಹಂದಿ ದ್ವೀಪದಲ್ಲಿರುವ ಸಿಂಘನಾಥ ದೇವಸ್ಥಾನ ಅತ್ಯಂತ ಪ್ರಸಿದ್ಧಿ ದೇವಾಲಯವಾಗಿದೆ. ಈ ದೇವಸ್ಥಾನಕ್ಕೆ ತೆರಳು ಅತೀ ಉದ್ದನೆಯ ಸೇತುವೆ ಇದೆ. 3.4 ಕೀಲೋಮೀಟರ್ ಉದ್ದದ ಸೇತುವೆ ಮೂಲಕ ದೇವಸ್ಥಾನಕ್ಕೆ ತೆರಳಬೇಕು. ಆದರೆ ಬರೋಬ್ಬರಿ 2 ಲಕ್ಷ ಮಂದಿ ಭಕ್ತರು ಆಗಮಿಸಿದ ಕಾರಣ ಸೇತುವೆ ಕಿಕ್ಕಿರಿದು ತುಂಬಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. 

ಪಾಕ್‌ನಲ್ಲಿ 1 ಕೆಜಿಗೆ ಗೋಧಿಹಿಟ್ಟಿಗೆ 1500 ರುಪಾಯಿ: ಅಗ್ಗದ ಗೋಧಿಹಿಟ್ಟು ವಿತರಣೆ ವೇಳೆ ಕಾಲ್ತುಳಿತಕ್ಕೆ ನಾಲ್ವರ ಬಲಿ

ಭಕ್ತರಿಂದ ಕಿಕ್ಕಿರಿದು ತುಂಬಿದ್ದ ಸೇತುವೆಯಲ್ಲಿ ಕಾಲ್ತುಳಿತ ಸಂಭವಿಸಿದ ಕಾರಣ ಜನರಿಗೆ ಹೊರ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಕಾಲ್ತುಳಿತದ ಪರಿಣಾಮವೂ ತೀವ್ರವಾಗಿದೆ. ನಿರೀಕ್ಷೆಗೂ ಮೀರಿದ ಭಕ್ತರು ಸಿಂಘನಾಥ ದೇವಸ್ಥಾನಕ್ಕೆ ಆಗಮಿಸಿದ್ದರು. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಆಡಳಿತ ಮಂಡಳಿ, ಪೊಲೀಸರು ಹರಸಾಹಸ ಪಡಬೇಕಾಯಿತು. ಇದೇ ವೇಳೆ ಸೇತುವೆ ಮೇಲೆ ಕಾಲ್ತುಳಿತ ಸಂಭವಿಸಿದೆ.

ಕಾಲ್ತುಳಿತಕ್ಕೆ ಇಬ್ಬರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡವರನ್ನು ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಮಹಿಳೆಯರು, ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಚಂದ್ರಬಾಬು ನಾಯ್ಡು ರೋಡ್‌ಶೋದಲ್ಲಿ ಭೀಕರ ಕಾಲ್ತುಳಿತ, 8 ಸಾವು ಹಲವರು ಗಂಭೀರ!

ಜನ್ಮಾಷ್ಟಮಿಯ ಆಚರಣೆ ವೇಳೆ ಮಥುರಾದಲ್ಲಿ ಸಂಭವಿಸಿತ್ತು ಕಾಲ್ತುಳಿತ
ಜನ್ಮಾಷ್ಟಮಿಯ ಆಚರಣೆಯ ವೇಳೆಯಲ್ಲಿ ಮಥುರಾದ ಪ್ರಸಿದ್ಧ ಬಂಕೆ ಬಿಹಾರಿ ದೇವಾಲಯದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 2 ಭಕ್ತರು ಮೃತಪಪಟ್ಟಿದ್ದರು. ಮಂಗಳಾರತಿಯ ಬೇಳೆ ಭಾರೀ ಜನರು ನೆರೆದಿದ್ದು, ಉಸಿರುಗಟ್ಟುವಿಕೆ ವಾತವಾರಣ ನಿರ್ಮಾಣವಾಗಿತ್ತು. ನೋಯ್ಡಾದ 55 ವರ್ಷದ ಮಹಿಳೆ ಹಾಗೂ ಜಬಲ್ಪುರದ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದರು. ಭಾರೀ ಪ್ರಮಾಣದಲ್ಲಿ ನೆರೆದ ಭಕ್ತರ ನಡುವೆ ಕಾಲ್ತುಳಿತದಂತಹ ಸನ್ನಿವೇಶ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಮಧ್ಯಪ್ರವೇಶ ಮಾಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಹಲವರ ಪ್ರಾಣ ಉಳಿಸಿದ್ದಾರೆ.

ಜನಸಂದಣಿ ಹೆಚ್ಚಿರುವ ಕಡೆಗಳಲ್ಲಿ ಕಾಲ್ತುಳಿತದ ಅಪಾಯ ಹೆಚ್ಚಿರುವ ಕಾರಣ ಕೆಲ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸೇಕು. ಆದರೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಕಾರಣ ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಇತ್ತೀಚೆಗೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಕಾಲ್ತುಳಿತ ಸಂಭವಿಸಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪಡಿತರ ಚೀಲಗಳನ್ನು ವಿತರಿಸುವ ಕಾರ್ಯಕ್ರಮವನ್ನು ಟಿಡಿಪಿ ಆಯೋಜಿಸಿತ್ತು. ಇದನ್ನು ಪಡೆದುಕೊಳ್ಳಲು ಜನ ಒಂದೇ ಬಾರಿಗೆ ಧಾವಿಸಿದ ಕಾರಣ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಸಿಕ್ಕಿ ಮೂವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮೊದಲು ನಾಯ್ಡು ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 8 ಮಂದಿ ಮೃತಪಟ್ಟಿದ್ದರು.