ನನ್ನ ಮಗನನ್ನು ಗಲ್ಲಿಗೇರಿಸಬೇಕು ಹಾಗೂ ಯಾವುದೇ ವಕೀಲರು ಆತನ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇತ್ತೀಚೆಗೆ ನಡೆದ ಭೀಕರ ಅತ್ಯಾಚಾರ ಪ್ರಕರಣದ ಆರೋಪಿಯ ತಂದೆಯೇ ಸ್ವತ ಮನವಿ ಮಾಡಿದ್ದಾರೆ.

ಉಜ್ಜಯಿನಿ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ನನ್ನ ಮಗನನ್ನು ಗಲ್ಲಿಗೇರಿಸಬೇಕು ಹಾಗೂ ಯಾವುದೇ ವಕೀಲರು ಆತನ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇತ್ತೀಚೆಗೆ ನಡೆದ ಭೀಕರ ಅತ್ಯಾಚಾರ ಪ್ರಕರಣದ ಆರೋಪಿಯ ತಂದೆಯೇ ಸ್ವತ ಮನವಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಉಜ್ಜಯಿನಿಯ ಸಮೀಪದಲ್ಲಿ ಅತ್ಯಾಚಾರಕ್ಕೊಳಗಾದ 12 ವರ್ಷದ ಮಾನಸಿಕ (Mentally unstable) ಅಸ್ವಸ್ಥ ಬಾಲಕಿ (rape victim), ಅರೆಬೆತ್ತಲೆಯಾಗಿ ರಕ್ತಸ್ರಾವದ ಸ್ಥಿತಿಯಲ್ಲೇ ಸುಮಾರು 2.5 ಕಿ.ಮೀ ಸಹಾಯಕ್ಕಾಗಿ ಓಡಾಡಿದ್ದ ಭೀಕರ ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕನಾಗಿರುವ ಆರೋಪಿ ಭರತ್‌ ಸೋನಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

12ರ ಬಾಲೆಯನ್ನು ರೇಪ್​ ಮಾಡಿ ರಸ್ತೆಗೆಸೆದ ದುರುಳರು: ಕಣ್ಣೀರಿಡುತ್ತ 8 ಕಿಮೀ ನಡೆದ ಹುಡುಗಿ

ಭರತ್‌ ತಂದೆ ಈ ಬಗ್ಗೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಇದು ನಾಚಿಕೆಗೇಡಿನ ಕೃತ್ಯ. ನಾನು ನನ್ನ ಮಗನನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿಲ್ಲ. ಪೊಲೀಸ್‌ ಠಾಣೆ ಅಥವಾ ನ್ಯಾಯಾಲಯಕ್ಕೆ ಹೋಗುವುದಿಲ್ಲ. ನನ್ನ ಮಗ ಅಪರಾಧ ಮಾಡಿದ್ದಾನೆ. ಹೀಗಾಗಿ ಅವನನ್ನು ಗಲ್ಲಿಗೇರಿಸಬೇಕು’ ಎಂದಿದ್ದಾರೆ. ಇನ್ನು ಆರೋಪಿಯ ಪ್ರಕರಣವನ್ನು ಕೈಗೆತ್ತಿಕೊಳ್ಳದಂತೆ ನಮ್ಮ ವಕೀಲರಿಗೆ ಮನವಿ ಮಾಡುತ್ತಿದ್ದೇವೆ ಎಂದು ಉಜ್ಜಯಿನಿ ಬಾರ್‌ ಕೌನ್ಸಿಲ್‌ (ವಕೀಲರ ಸಂಘ) ಅಧ್ಯಕ್ಷ ಅಶೋಕ್‌ ಯಾದವ್‌ (Ashok Yadav) ತಿಳಿಸಿದ್ದಾರೆ.

Watch: 12 ವರ್ಷದ ಬಾಲಕಿಯ ರೇಪ್‌, ಬೆತ್ತಲೆಯಾಗಿ ನಡೆದುಬಂದ ಬಾಲಕಿಗೆ ಸಹಾಯ ಮಾಡಲು ನಿರಾಕರಿಸಿದ ಜನ!

ಇನ್ನು ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು ಸಾಬೀತಾಗಿದೆ. ತನ್ನ ಹೆಸರು, ಊರು ಮತ್ತು ಕುಟುಂಬದ ಕುರಿತು ಯಾವುದೇ ಮಾಹಿತಿ ನೀಡಲು ಬಾಲಕಿಗೆ ಸಾಧ್ಯವಾಗಿಲ್ಲ. ರಾಜ್ಯದ ಸತ್ನಾ ಜಿಲ್ಲೆಯಲ್ಲಿ ಇದೇ ವಯಸ್ಸಿನ ಬಾಲಕಿಯೋರ್ವಳು ಕಾಣೆಯಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನು ಕೃತ್ಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್‌ ಶಾ, ಸ್ಮ್ರತಿ ಇರಾನಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳ ಟೀಕೆ ಮುಂದುವರೆದಿದೆ.