Jack Dorsey ಅವಧಿಯಲ್ಲಿ ಅಮೆರಿಕಾಗೆ ಬೆಣ್ಣೆ ಭಾರತಕ್ಕೆ ಸುಣ್ಣ ನೀಡ್ತಿದ್ದ ಟ್ವಿಟ್ಟರ್: ಏನಿದು ವಿವಾದ?
ಆಗಿನ ಟ್ವಿಟ್ಟರ್ ಇಂಡಿಯಾದ ಸಿಇಒ ಆಗಿದ್ದ ಜಾಕ್ ಡೋರ್ಸೆ ಗಂಭೀರ ಆರೋಪವೊಂದನ್ನು ಮಾಡಿದ್ದು, ಹೊಸ ವಿವಾದ ಸೃಷ್ಟಿಸಿದೆ.
ಕಳೆದ ವರ್ಷ ಕೇಂದ್ರದ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ನಲ್ಲಿ ನಕಲಿ ವಿಡಿಯೋಗಳು ಸುದ್ದಿಗಳು ಪ್ರಸಾರವಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜಾಗಿತ್ತು. ಪ್ರತಿಭಟನಾ ನಿರತ ರೈತರರಿಗೆ ವಿದೇಶದಿಂದ ಟೂಲ್ಕಿಟ್ ರವಾನೆಯಾಗಿತ್ತು. ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಸ್ವೀಡನ್ನ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ವಿವಾದಿತವಾಗಿ ಟ್ವಿಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿ ವಿಚಾರಣೆಯನ್ನು ನಡೆಸಿದ್ದರು. ನಂತರ ಮೂಲಗಳ ಪ್ರಕಾರ, ಪೀಸ್ ಫಾರ್ ಜಸ್ಟೀಸ್ ಸಂಘಟನೆಯನ್ನು ಸ್ಥಾಪಿಸಿದ್ದ ಎಂ ಒ ಧಾಲಿವಾಲ್ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಗ್ರೆಟಾ ಥನ್ ಬರ್ಗ್ ಗೆ ಟೂಲ್ ಕಿಟ್ ರಚಿಸಿ ನೀಡಿದ ಮಾಹಿತಿ ಲಭ್ಯವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾದ ಮುಖ್ಯಸ್ಥನಾಗಿರುವ ಮನೀಶ್ ಮಹೇಶ್ವರಿಯವರನ್ನುಕೂಡ ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದರು.
ಆದರೆ ಈಗ ಆಗಿನ ಟ್ವಿಟ್ಟರ್ ಇಂಡಿಯಾದ ಸಿಇಒ ಆಗಿದ್ದ ಜಾಕ್ ಡೋರ್ಸೆ ಗಂಭೀರ ಆರೋಪವೊಂದನ್ನು ಮಾಡಿದ್ದು, ಹೊಸ ವಿವಾದ ಸೃಷ್ಟಿಸಿದೆ. ದೆಹಲಿಯಲ್ಲಿ ಕಳೆದ ವರ್ಷ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಭಾರತ ಸರ್ಕಾರವು ನಮ್ಮ ಮೇಲೆ (ಟ್ವಿಟರ್) ಒತ್ತಡ ಹೇರಿತು, ನೀವು ನಮ್ಮ ಮಾತನ್ನು ಕೇಳದಿದ್ದರೆ ನಾವು ಭಾರತದಲ್ಲಿ ಟ್ವಿಟರ್ ಅನ್ನು ಮುಚ್ಚುತ್ತೇವೆ, ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿದರು ಎಂದು ಮಾಜಿ ಟ್ವಿಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಆರೋಪಿಸಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರತದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವರಾಗಿರುವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ಜಾಕ್ ಹೇಳುತ್ತಿರುವುದು ಸಂಪೂರ್ಣ ಸುಳ್ಳು, ಬಹುಶಃ ಈತ ಟ್ವಿಟರ್ ಇತಿಹಾಸದ ಅತ್ಯಂತ ಸಂಶಯಾಸ್ಪದ ಅವಧಿಯನ್ನು ತೊಳೆದು ಹಾಕಲು ಪ್ರಯತ್ನಿಸುತ್ತಿದ್ದಾನೆ ಎಂದು ತಿರುಗೇಟು ನೀಡಿದ್ದಾರೆ.
ಟ್ವಿಟರ್ನಲ್ಲಿ ಬ್ಲ್ಯೂಟಿಕ್ ಕಟ್ಟುನಿಟ್ಟಾದ ಬೆನ್ನಲ್ಲೇ, 'ಬ್ಲ್ಯೂಸ್ಕೈ' ಅನಾವರಣ ಮಾಡಿದ ಟ್ವಿಟರ್ ಮಾಜಿ ಸಿಇಒ!
ಜಾಕ್ ಡೋರ್ಸೆ ಟ್ವಿಟ್ಟರ್ ಸಿಇಒ ಆಗಿದ್ದ ಸಮಯದಲ್ಲಿ ಅವರು ಭಾರತದ ನೆಲದ ಕಾನೂನುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಾ ಬಂದಿದ್ದರು. 2020 ರಿಂದ 2022 ರವರೆಗೆ ಪದೇ ಪದೇ ಕಾನೂನನ್ನು ಉಲ್ಲಂಘನೆ ಮಾಡಿದ್ದು, ಅಂತಿಮವಾಗಿ ಜೂನ್ 2022 ರಲ್ಲಿ ಮಾತ್ರ ಅವರು ಕಾನೂನಿನ ಪಾಲನೆ ಮಾಡಿದರು. ಅವರ ಆರೋಪದಂತೆ ಯಾರೂ ಜೈಲಿಗೆ ಹೋಗಲಿಲ್ಲ ಅಥವಾ ಟ್ವಿಟ್ಟರ್ ಅನ್ನು ಭಾರತದಲ್ಲಿ ಸ್ಥಗಿತಗೊಳಿಸಲಿಲ್ಲ. ಜಾಕ್ ಡೋರ್ಸೆ ಆಡಳಿತಕ್ಕೆ ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವುದಕ್ಕೆ ಸಮಸ್ಯೆಯಾಗಿತ್ತು. ಅವರ ಅವಧಿಯಲ್ಲಿ ಭಾರತದ ಕಾನೂನು ತನಗೆ ಅನ್ವಯಿಸುವುದಿಲ್ಲ ಎಂಬಂತೆ ಟ್ವಿಟ್ಟರ್ ವರ್ತಿಸಿತು. ಭಾರತವು ಸಾರ್ವಭೌಮ ರಾಷ್ಟ್ರವಾಗಿದ್ದು, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಂಪನಿಗಳು ತನ್ನ ನೆಲದ ಕಾನೂನುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ದೇಶ ಹೊಂದಿದೆ.
ಜನವರಿ 2021 ರಲ್ಲಿ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಗಳ ಸಮಯದಲ್ಲಿ, ಟ್ವಿಟ್ಟರ್ನಲ್ಲಿ ಪ್ರಸಾರವಾದ ಸಾಕಷ್ಟು ತಪ್ಪು ಮಾಹಿತಿಗಳು ಮತ್ತು ನರಮೇಧದ ವರದಿಗಳು ನಕಲಿಯಾಗಿದ್ದವು. ಟ್ವಿಟ್ಟರ್ ಫ್ಲಾಟ್ಫಾರ್ಮ್ನಿಂದ ತಪ್ಪು ಮಾಹಿತಿಯನ್ನು ತೆಗೆದುಹಾಕಲು ಭಾರತ ಸರ್ಕಾರ ಬದ್ಧವಾಗಿದೆ. ಏಕೆಂದರೆ ಸಾಮಾಜಿಕ ಜಾಲತಾಣ ನಕಲಿ ಸುದ್ದಿಗಳ ಆಧಾರದ ಮೇಲೆ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಅದಾನಿ ಆಯ್ತು,ಈಗ ಟ್ವಿಟ್ಟರ್ ಮಾಜಿ ಸಿಇಒ ಮೇಲೆ ಹಿಂಡೆನ್ ಬರ್ಗ್ ಕೆಂಗಣ್ಣು;ಡೋರ್ಸೆ ಮೇಲಿನ ಆರೋಪಗಳೇನು?
ಬರೀ ಇಷ್ಟೇ ಅಲ್ಲ ಜಾಕ್ ಡೋರ್ಸೆ ಆಡಳಿತದಲ್ಲಿ ಪಕ್ಷಪಾತದ ನಡವಳಿಕೆಯ ಮಟ್ಟವು ಹೇಗಿತ್ತು ಎಂದರೆ ಅಮೆರಿಕಾದಲ್ಲಿ ಇಂತಹ ಘಟನೆ ನಡೆದಾಗ ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣದ ಪೇಜ್ನಿಂದ ಇಂತಹ ಗಲಭೆ ಉಲ್ಭಣಗೊಳಿಸುವ ಸುದ್ದಿಯನ್ನು ತೆಗೆದು ಹಾಕಿದ್ದರು. ಆದರೆ ಅದೇ ರೀತಿ ಭಾರತದಲ್ಲಿ ಆದಾಗ ತಮ್ಮ ಸಾಮಾಜಿಕ ಜಾಲತಾಣದಿಂದ ಅದನ್ನು ಅಳಿಸಿ ಹಾಕುವುದಕ್ಕೆ ಅವರಿಗೆ ತೊಂದರೆಯಾಗಿತ್ತು.
ದಾಖಲೆಯನ್ನು ಸರಿಪಡಿಸುವ ಸಲುವಾಗಿ ಯಾರೂ ಟ್ವಿಟ್ಟರ್ ಕಚೇರಿ ಮೇಲೆ ದಾಳಿ ಮಾಡಿಲ್ಲ, ಅಥವಾ ಅವರನ್ನು ಜೈಲಿಗೆ ಕಳುಹಿಸಿಲ್ಲ, ನಮ್ಮ ಗಮನವು ಸಂಸ್ಥೆ ಭಾರತೀಯ ಕಾನೂನುಗಳನ್ನು ಪಾಲಿಸುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಮಾತ್ರ ಇತ್ತು. ಜಾಕ್ ಡೋರ್ಸೆ ಅವಧಿಯಲ್ಲಿ ಟ್ವಿಟ್ಟರ್ನ ಅನಿಯಂತ್ರಿತವಾದ, ಹಾಗೂ ಸ್ಪಷ್ಟವಾದ ಪಕ್ಷಪಾತ ತಾರತಮ್ಯದ ನಡವಳಿಕೆ ಮತ್ತು ಟ್ವಿಟ್ಟರ್ನ ಅಧಿಕಾರದ ದುರುಪಯೋಗದ ಬಗ್ಗೆ ಸಾರ್ವಜನಿಕ ಡೊಮೇನ್ನಲ್ಲಿ ಈಗ ಸಾಕಷ್ಟು ಸಾಕ್ಷ್ಯಾಗಳಿವೆ.
ಜಾಕ್ ಡೋರ್ಸೆ ಅವಧಿಯಲ್ಲಿ ಟ್ವಿಟರ್ ಕೇವಲ ಭಾರತೀಯ ಕಾನೂನನ್ನು ಉಲ್ಲಂಘಿಸಿದ್ದು ಮಾತ್ರವಲ್ಲ, ಅದು ಹೇಗೆ ಪಕ್ಷಪಾತಿಯಾಗಿತ್ತು ಮತ್ತು ನಮ್ಮ ಸಂವಿಧಾನದ ವಿಧಿ 14,19 ಅನ್ನು ಉಲ್ಲಂಘಿಸಿ ದುರ್ಬಳಕೆ ಮಾಡಿತ್ತು ಹಾಗೂ ತಪ್ಪುಮಾಹಿತಿಯನ್ನು ಪ್ರಸಾರ ಮಾಡಿತ್ತು ಎಂಬುದು ಸಾಬೀತಾಗಿದೆ. ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮಧ್ಯವರ್ತಿಗಳಿಗೆ, ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ನಮ್ಮ ಸರ್ಕಾರದ ನೀತಿಗಳು ಸ್ಪಷ್ಟವಾಗಿ ಒಂದೇ ಆಗಿವೆ. ಸುರಕ್ಷಿತ ಇಂಟರ್ನೆಟ್ ಹಾಗೂ ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಭಾರತದ ಕಾನೂನು ಪಾಲನೆ ಮಾಡುವುದು ಅಗತ್ಯ ಎಂದು ಸಂಸದ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಡೋರ್ಸೆ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.