ಮದ್ಯಪಾನ ಮಾಡಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ತಡೆದಿದ್ದಾರೆ. ಆದರೆ, ತುರ್ತು ಪರಿಸ್ಥಿತಿಯನ್ನು ಅರಿತ ಪೊಲೀಸ್ ಅಧಿಕಾರಿಯೊಬ್ಬರು, ತಾವೇ ಕಾರು ಚಲಾಯಿಸಿ ದಂಪತಿಯನ್ನು ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. 

ನವದೆಹಲಿ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡೋದು ತಪ್ಪು. ಈ ಕಾನೂನಿನ ಅರಿವು ಇದ್ರೂ ಎಷ್ಟೋ ಜನರು ಕುಡಿದು ವಾಹನ ಚಲಾಯಿಸಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಒಂದು ವೇಳೆ ಪೊಲೀಸರ ಕೈಗೆ ತಗ್ಲಾಕೊಂಡ್ರೆ ದಂಡ ಪಾವತಿಸಬೇಕಾಗುತ್ತದೆ. ಇದೀಗ ವ್ಯಕ್ತಿಯೊಬ್ಬ ನಶೆಯಲ್ಲಿದ್ದು, ಕಾರ್‌ನಲ್ಲಿ ಗರ್ಭಿಣಿಯನ್ನು ಆಸ್ಪತ್ರೆಯನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಮಾರ್ಗ ಮಧ್ಯೆ ಪೊಲೀಸರು ಕಾರ್ ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಚಾಲಕ ಮದ್ಯ ಸೇವಿಸಿರೋದು ಸಾಬೀತಾಗಿದೆ. ಕಾರ್‌ನಲ್ಲಿ ತುಂಬು ಗರ್ಭಿಣಿಯಿದ್ರೂ ಪೊಲೀಸ್ ಅಧಿಕಾರಿ ಮಾತ್ರ ವ್ಯಕ್ತಿಗೆ ವಾಹನ ಚಾಲನೆ ಮಾಡದಂತೆ ತಡೆದಿದ್ದಾರೆ.

ಆಸ್ಪತ್ರೆಗೆ ಹೊರಟಿದ್ದ ಜೋಡಿ!

ಪೊಲೀಸ್ ಅಧಿಕಾರಿ ನಮಗೆ ಆಸ್ಪತ್ರೆಗೆ ತೆರಳಲು ಬಿಡುತ್ತಿಲ್ಲ ಎಂದು ವ್ಯಕ್ತಿ ವಿಡಿಯೋ ಮಾಡಲು ಶುರು ಮಾಡಿದ್ದಾರೆ. ನಾನು ಸ್ವಲ್ಪ ನಶೆಯಲ್ಲಿರೋದು ನಿಜ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇಲ್ಲಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಆಸ್ಪತ್ರೆಗೆ ಹೋಗಬೇಕಿದೆ. ಆದ್ರೆ ಪೊಲೀಸರು ಈ ತುರ್ತು ಸಂದರ್ಭದಲ್ಲಿ ನಮಗೆ ತೆರಳಲು ಅನುಮತಿ ನೀಡುತ್ತಿಲ್ಲ ಎಂದು ವ್ಯಕ್ತಿ ಹೇಳುತ್ತಾರೆ. ಇದೇ ವೇಳೆ ಮಹಿಳೆ ಸಹ ದಯವಿಟ್ಟು ನಮ್ಮನ್ನು ಆಸ್ಪತ್ರೆಗೆ ತೆರಳಲು ಬಿಡಿ ಎಂದು ಪೊಲೀಸ್ ಅಧಿಕಾರಿ ಬಳಿ ಮನವಿ ಮಾಡಿಕೊಳ್ಳುತ್ತಾರೆ.

ವಿಡಿಯೋ ಚಿತ್ರೀಕರಿಸುತ್ತಲೇ ಮನವಿ!

ಕಾರ್‌ನಲ್ಲಿದ್ದ ವ್ಯಕ್ತಿ ಮತ್ತು ಮಹಿಳೆ ಮನವಿ ಮಾಡಿಕೊಂಡ್ರು ಕೇಳದ ಪೊಲೀಸ್ ಅಧಿಕಾರಿ, ನೀವು ನಶೆಯಲ್ಲಿರೋದರಿಂದ ಒಂದು ಹೆಜ್ಜೆಯೂ ಮುಂದೆ ಹೋಗಲು ನಿಮಗೆ ಅನುಮತಿ ನೀಡಲ್ಲ. ಮೊದಲು ಕಾರ್‌ನಿಂದ ಕೆಳಗೆ ಇಳಿಯುವಂತೆ ಹೇಳುತ್ತಾರೆ. ನಂತರ ಮಹಿಳೆ ವಿಡಿಯೋ ಮಾಡುತ್ತಲೇ ಆಸ್ಪತ್ರೆಗೆ ಹೋಗಲು ಅನುಮತಿ ಕೇಳುತ್ತಾರೆ. ಇದಾದ ಬಳಿಕ ಪೊಲೀಸ್ ಅಧಿಕಾರಿ ಮಾಡಿದ ಕೆಲಸ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಅಧಿಕಾರಿ ಮಾಡಿದ್ದೇನು?

ವ್ಯಕ್ತಿಯನ್ನು ಕಾರ್‌ನಿಂದ ಕೆಳಗೆ ಇಳಿಸಿದ ಪೊಲೀಸ್ ಅಧಿಕಾರಿ, ಆತನನ್ನು ಹಿಂಬದಿ ಸೀಟ್‌ನಲ್ಲಿ ಕುಳಿತುಕೊಳ್ಳುವಂತೆ ಸೂಚಿಸುತ್ತಾರೆ. ನಂತರ ಚಾಲಕನ ಸೀಟ್‌ನಲ್ಲಿ ಕುಳಿತುಕೊಳ್ಳುವ ಪೊಲೀಸ್ ಅಧಿಕಾರಿ, ವಿಡಿಯೋ ಮಾಡ್ತೀರಾ ಮಾಡಿಕೊಳ್ಳಿ. ಜನಕ್ಕೆ ದೆಹಲಿ ಪೊಲೀಸರು ಹೇಗೆ ಕೆಲಸ ಮಾಡ್ತಾರೆ ಅಂತ ಗೊತ್ತಾಗಲಿ. ಸಾರ್ವಜನಿಕರ ಸೇವೆಗಾಗಿ ನಾವಿರೋದು ಎಂದು ಹೇಳುತ್ತಾರೆ. ನಂತರ ತಾವೇ ಕಾರ್ ಚಲಾಯಿಸಿಕೊಂಡು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ಅಧಿಕಾರಿ ಕರ್ತವ್ಯದ ಪಾಲನೆ ಜೊತೆಯಲ್ಲಿ ಮಾನವೀಯತೆಯನ್ನು ತೋರಿ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್

ಈ ವಿಡಿಯೋವನ್ನು Vinay Sharma ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈವರೆಗೆ ವಿಡಿಯೋಗೆ 36 ಸಾವಿರಕ್ಕೂ ಅಧಿಕ ವ್ಯೂವ್ ಬಂದಿದ್ದು, ನೆಟ್ಟಿಗರು ಪೊಲೀಸ್ ಅಧಿಕಾರಿ ಸಮಯಪ್ರಜ್ಞೆ ಮತ್ತು ಮಾನವೀಯತೆಯ ಹೃದಯಕ್ಕೆ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ದೆಹಲಿಯ ಸಿಟಿ ರಿಂಗ್ ರೋಡ್ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು

View post on Instagram