Asianet Suvarna News Asianet Suvarna News

Farmer Protest Issues: ಪ್ರಧಾನಿ ಕ್ಷಮೆ ಯಾಚಿಸುವುದನ್ನು ರೈತರು ಬಯಸುವುದಿಲ್ಲ : ರಾಕೇಶ್‌ ಟಿಕಾಯತ್‌

  • ಪ್ರಧಾನಿ ಕ್ಷಮೆ ಯಾಚಿಸುವುದನ್ನು ರೈತರು ಬಯಸುವುದಿಲ್ಲ
  • ವಿದೇಶದಲ್ಲಿ ಪ್ರಧಾನಿ ಘನತೆ ಹಾಳು ಮಾಡಲು ಬಯಸುವುದಿಲ್ಲ
  • ರೈತ ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿಕೆ
Dont Want PM To Apologise and Tarnish His Reputation Abroad Rakesh Tikait akb
Author
Bangalore, First Published Dec 27, 2021, 11:52 AM IST

ನವದೆಹಲಿ(ಡಿ.27): ರೈತರು ಪ್ರಧಾನಿಯವರಿಂದ ಕ್ಷಮೆ ಯಾಚನೆಯನ್ನು ಬಯಸುವುದಿಲ್ಲ. ಹಾಗೆಯೇ ವಿದೇಶದಲ್ಲಿ ಅವರ ಘನತೆಯನ್ನು ಹಾಳು ಮಾಡಲು ಬಯಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್‌ ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳನ್ನು ವಿರೋಧಿಸಿ ಸುಮಾರು ಒಂದು ವರ್ಷಗಳ ಕಾಲ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ಆದಾದ ಬಳಿಕ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಈ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಾಪಸ್‌ ಪಡೆದಿತ್ತು.

ಪ್ರಧಾನಿ ಕ್ಷಮೆ ಯಾಚಿಸುವುದು ನಮಗೆ ಇಷ್ಟವಿಲ್ಲ, ವಿದೇಶದಲ್ಲಿ ಅವರ ಹೆಸರು ಕೆಡಿಸಲು ನಾವು ಬಯಸುವುದಿಲ್ಲ, ಯಾವುದೇ ನಿರ್ಧಾರ ತೆಗೆದುಕೊಂಡರು ರೈತರ ಒಪ್ಪಿಗೆಯಿಲ್ಲದೆ ಅದನ್ನು ಮಾಡಲಾಗುವುದಿಲ್ಲ, ನಾವು ಪ್ರಾಮಾಣಿಕವಾಗಿ ಹೊಲಗಳನ್ನು ಬೆಳೆಸಿದ್ದೇವೆ ಆದರೆ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ಗಮನ ಕೊಡಲಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌  ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಈ ಹಿಂದೆ ನಾಗಪುರದಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ನಾವು ಕೃಷಿ ಕಾನೂನುಗಳನ್ನು ತಂದಿದ್ದೆವು. ಕೆಲವರು ಅದನ್ನು ಇಷ್ಟಪಡಲಿಲ್ಲ. ಆದರೆ ಸರ್ಕಾರವು ನಿರಾಶೆಗೊಂಡಿಲ್ಲ. ನಾವು ಒಂದು ಹೆಜ್ಜೆ ಹಿಂದೆ ಸರಿದಿದ್ದೇವೆ ಮತ್ತು ನಾವು ಮತ್ತೆ ಮುಂದುವರಿಯುತ್ತೇವೆ ಏಕೆಂದರೆ ರೈತರು ಭಾರತದ ಬೆನ್ನೆಲುಬು ಮತ್ತು ಬೆನ್ನೆಲುಬು ಗಟ್ಟಿಯಾದರೆ ದೇಶ ಬಲಿಷ್ಠವಾಗುತ್ತದೆ ಎಂಬ ಹೇಳಿಕೆ ನೀಡಿದ್ದರು. ಆದಾಗ್ಯೂ, ಕೃಷಿ ಕಾನೂನುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಕೇಂದ್ರಕ್ಕೆ ಇಲ್ಲ ಎಂದು ಸಚಿವರು ನಂತರ ಸ್ಪಷ್ಟಪಡಿಸಿದರು, ಕಾರ್ಯಕ್ರಮವೊಂದರಲ್ಲಿ ಅವರು ನೀಡಿದ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಸಮರ್ಥನೆ ನೀಡಿದ್ದರು.

ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾ​ಯ​ತ್‌

ಆದರೆ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಕಾಯತ್, ಈ ಹೇಳಿಕೆಯು ರೈತರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿದೆ ಮತ್ತು ಪ್ರಧಾನಿಯನ್ನು ಅವಮಾನಿಸುತ್ತದೆ ಎಂದು ಹೇಳಿದರು. ಕೃಷಿ ಕಾನೂನುಗಳನ್ನು ಕೇಂದ್ರವು ಪುನಃ ಪರಿಚಯಿಸಿದರೆ  ಮತ್ತೆ ಹೋರಾಟ ಪುನರಾರಂಭಿಸುವುದಾಗಿ ಟಿಕಾಯತ್‌ ಬೆದರಿಕೆ ಹಾಕಿದ್ದಾರೆ. ನವೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದರು. ನವೆಂಬರ್ 23 ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಇದಾದ ಬಳಿಕ ಮೂರು ದೆಹಲಿಯ ಗಡಿಯಲ್ಲಿ ಸುಮಾರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ತಮ್ಮ ಹೋರಾಟ ಸ್ಥಗಿತಗೊಳಿಸಿ ತಮ್ಮ ಮನೆಗಳಿಗೆ ಮರಳಿದ್ದರು.

ರಾಜಕೀಯ ಪ್ರವೇಶ ಇಲ್ಲ:

ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್‌ನ 22 ರೈತ ಸಂಘಟನೆಗಳು ಸಂಯುಕ್ತ ಸಮಾಜ್‌ ಮೋರ್ಚಾ ಹೆಸರಿನಲ್ಲಿ ಪಂಜಾಬ್‌ ಚುನಾವಣೆ ಅಖಾಡಕ್ಕೆ ಧುಮುಕುವ ಘೋಷಣೆ ಮಾಡಿದ ಬೆನ್ನಲ್ಲೇ, ತಮಗೂ ಈ ಘೋಷಣೆಗೂ ಸಂಬಂಧವಿಲ್ಲ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ರಾಕೇಶ್‌ ಟಿಕಾಯತ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಯುಕ್ತ ಕಿಸಾನ್‌ ಮೋರ್ಚಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ರಾಜಕೀಯ ಸೇರುವುದಿಲ್ಲ ಎಂದರು. ಆದರೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ, ನೀತಿ ಸಂಹಿತೆ ಜಾರಿಯಾದ ಬಳಿಕ ಈ ಬಗ್ಗೆ ಮಾತನಾಡುವೆ. ರೈತರು ಆ ಚುನಾವಣೆಯಲ್ಲಿ ಕಿಂಗ್‌ಮೇಕರ್‌ ಪಾತ್ರ ವಹಿಸಲಿದ್ದಾರೆ ಎಂದರು.

ರೈತರ ಒಕ್ಕಲೆಬ್ಬಿಸಿದರೆ ಕಚೇರಿಗಳಿಗೆ ನುಗ್ಗುತ್ತೇವೆ: ಟಿಕಾಯತ್‌ ಎಚ್ಚರಿಕೆ!

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಕ್ಕೂ ಅಧಿಕ ಅವಧಿ  ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದ ರೈತ ಸಂಘಟನೆಗಳು ಮುಂಬರುವ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕಲು ನಿರ್ಧರಿಸಿವೆ. ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್‌ನ 32 ರೈತ ಸಂಘಟನೆಗಳ ಪೈಕಿ 22 ಸಂಘಟನೆಗಳು ಒಗ್ಗೂಡಿ ಸಂಯುಕ್ತ ಸಮಾಜ್‌ ಮೋರ್ಚಾ (ಎಸ್‌ಎಸ್‌ಎಂ) ಎಂಬ ರಂಗದ ಹೆಸರಿನಲ್ಲಿ ಎಲ್ಲ 117 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡುವುದಾಗಿ ಶನಿವಾರ ಘೋಷಣೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಟಿಕಾಯತ್‌ ರಾಜಕೀಯ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Follow Us:
Download App:
  • android
  • ios