ಕೋಲ್ಕತಾ ಆರ್‌ಜಿ ಕರ್ ವೈದ್ಯೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದ ಕೋರ್ಟ್ ಇಂದು ಶಿಕ್ಷೆ ಪ್ರಕಟಿಸಿದೆ. ಆದರೆ ಈ ವೇಳೆ ಹಾಜರಿದ್ದ ಸಂತ್ರಸ್ತ ವೈದ್ಯೆ ಪೋಷಕರು ಜಡ್ಜ್ ಮುಂದೆ ಕಣ್ಣೀರಿಟ್ಟಿದ್ದಾರೆ. ನಮಗೆ 17 ಲಕ್ಷ ರೂಪಾಯಿ ಪರಿಹಾರ ಬೇಡ, ನಮಗೆ ಬೇಕಿರುವುದು ಏನು ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾರೆ.

ಕೋಲ್ಕತಾ(ಜ.20) ಕೋಲ್ಕತಾದ ಆರ್‌ಜಿ ಕರ್ ವೈದ್ಯೆ ಪ್ರಕರಣ ದೇಶಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ವೈದ್ಯೆ ಮೇಲೆ ರಾತ್ರಿ ನಡೆದ ಭೀಕರ ಘಟನೆ ಸಂಬಂಧ ಇದೀಗ ಸೆಲ್ಡಾ ಕೋರ್ಟ್ ಅಪರಾಧಿ ಸಂಜಯ್ ರಾಯ್‌ಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಮೊನ್ನೆಯಷ್ಟೇ ಪ್ರಕರಣದಲ್ಲಿ ಸಂಜಯ್ ರಾಯ್ ತಪ್ಪತಸ್ಥ ಎಂದು ತೀರ್ಪು ನೀಡಿತ್ತು. ಬಳಿಕ ಶಿಕ್ಷೆ ಪ್ರಮಾಣವನ್ನು ಸೋಮವಾರ ಪ್ರಕಟಿಸುವುದಾಗಿ ಹೇಳಿತ್ತು. ಇದೀಗ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಇತ್ತ ಸಂತ್ರಸ್ತೆ ಪೋಷಕರಿಗೆ 17 ಲಕ್ಷ ರೂಪಾಯಿ ಪರಿಹಾರವನ್ನು ಪಶ್ಚಿಮ ಬಂಗಾಳ ಸರ್ಕಾರ ನೀಡಬೇಕು ಎಂದು ಸೂಚಿಸಿದೆ. ಆದರೆ ಜಡ್ಜ್ ಶಿಕ್ಷೆ ಪ್ರಮಾಣ ಪ್ರಕಟಿಸುತ್ತಿದ್ದಂತೆ 34 ವರ್ಷದ ಸಂತ್ರಸ್ತ ವೈದ್ಯೆ ಪೋಷಕರು ಕಣ್ಣೀರಿಟ್ಟಿದ್ದಾರೆ. ನಮಗೆ ಬೇಕಿರುವುದು 17 ಲಕ್ಷ ರೂಪಾಯಿ ಪರಿಹಾರವಲ್ಲ, ನ್ಯಾಯ ಮಾತ್ರ. ನಮ್ಮ ಮಗಳಿಗೆ ಬದುಕು ಕಟ್ಟಿಕೊಡಲು ನಮಗೆ ಸಾಧ್ಯವಾಗಲಿಲ್ಲ. ಇದೀಗ ಅವಳ ಆತ್ಮಕ್ಕೆ ಶಾಂತಿ ಸಿಗಲು ನ್ಯಾಯ ಮಾತ್ರ ಸಾಕು ಎಂದು ಕಣ್ಮೀರಿಟ್ಟಿದ್ದಾರೆ.

ಪೋಷಕರ ಕಣ್ಣೀರಿಗೆ ಉತ್ತರಿಸಿದ ಜಡ್ಜ್, ಕೋರ್ಟ್ ತೀರ್ಪು ನೀಡಿದೆ. ಈ ಮೊತ್ತ ಬಳಸಲು ನೀವು ಸ್ವತಂತ್ರರು. ಈ ಮೊತ್ತವನ್ನು ಪರಿಹಾರ ಎಂದು ಪರಿಗಣಿಸಬೇಡಿ. ಇದು ಕಾನೂನಿನ ಅಡಿಯಲ್ಲಿ ನಿಮಗೆ ಒದಗಿಸಿರುವ ನಿಬಂಧನೆ ಎಂದು ಜಡ್ಜ್ ಅನಿರ್ಬಾನ್ ದಾಸ್ ಹೇಳಿದ್ದಾರೆ. ಇತ್ತ ಕಣ್ಣೀರಿಡುತ್ತಲೆ ಮನವಿ ಮಾಡಿದ ಸಂತ್ರಸ್ತೆ ಪೋಷಕರು, ಈ ಪರಿಹಾರ ಹಣ ನಮಗೆ ಬೇಡ. ಈಕೃತ್ಯ ಸಂಜಯ್ ರಾಯ್ ಒಬ್ಬನೇ ಮಾಡಿಲ್ಲ ಅನ್ನೋದು ನಮ್ಮ ದೃಢವಾದ ನಂಬಿಕೆ. ನಮ್ಮ ಮಗಳ ಮೇಲೆ ಏರಗಿದ ಎಲ್ಲರಿಗೂ ಶಿಕ್ಷೆಯಾಗಬೇಕು. ಎಲ್ಲರಿಗೂ ಗಲ್ಲು ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದಾರೆ. 

ಕೋಲ್ಕತಾ ವೈದ್ಯೆ ಕೇಸ್ ತೀರ್ಪು ಪ್ರಕಟಿಸುತ್ತಿದ್ದಂತೆ ಆರೋಪಿ ಸಂಜಯ್ ರುದ್ರಾಕ್ಷಿ ಧರಿಸುತ್ತೇನೆ ಎಂದಿದ್ಯಾಕೆ?

ಜಡ್ಜ್ ಶಿಕ್ಷೆ ಪ್ರಮಾಣ ಪ್ರಕಟಿಸುವ ಮೊದಲು ಸಂಜಯ್ ರಾಯ್ ವಾದವನ್ನು ಕೋರ್ಟ್ ಆಲಿಸಿತ್ತು. ತನ್ನ ವಾದ ಮುಂದಿಟ್ಟ ಸಂಜಯ್ ರಾಯ್, ನಾನು ಈ ಪ್ರಕರಣದಲ್ಲಿ ತಪ್ಪಿತಸ್ಥನಲ್ಲ. ನನ್ನನ್ನು ಸಿಲುಕಿಸಲಾಗಿದೆ. ಬೇರೆಯವರ ರಕ್ಷಣೆಗಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಜಡ್ಜ್, ಎಲ್ಲಾ ಸಾಕ್ಷ್ಯಗಳು ಸಂಜಯ್ ರಾಯ್ ವಿರುದ್ಧವಾಗಿದೆ. ವಿಚಾರಣೆಯಲ್ಲಿ ಸಂಜಯ್ ರಾಯ್ ತಪ್ಪೆಸಗಿರುವುದು ಸಾಬೀತಾಗಿದೆ ಎಂದಿದ್ದಾರೆ. 

ಆರ್‌ಜಿಕರ್ ಆಸ್ಪತ್ರೆಯಲ್ಲಿ ರಾತ್ರಿಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆ ಮೇಲೆ ಘನಘೋರ ದಾಳಿ ನಡೆದಿತ್ತು. ಈ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ದೇಶಾದ್ಯಂತ ಘಟನೆ ಖಂಡಿಸಿ ಪ್ರತಿಭಟನೆ ನಡೆದಿತ್ತು. ಘಟನೆ ಸಂಬಂಧ ಆರೋಪಿ ಸಂಜಯ್ ರಾವ್ ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಕೋರ್ಟ್, ಶನಿವಾರ ತೀರ್ಪು ಪ್ರಕಟಿಸಿತ್ತು. ಸಾಕ್ಷಿ ಪ್ರಕಾರ ಸಂಜಯ್ ರಾಯ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಇಂದು ಶಿಕ್ಷೆ ಪ್ರಕಟಿಸುವಾಗ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 

ಇದೀಗ ಸಂತ್ರಸ್ತೆ ಪೋಷಕರ ಮನವಿ ಹಾಗೂ ಸಂಜಯ್ ರಾಯ್ ವಾದ ಕೆಲ ಮಹತ್ವದ ಸುಳಿವು ನೀಡುತ್ತಿದೆ. ಸಂತ್ರಸ್ತೆ ಪೋಷಕರು ಈ ಪ್ರಕರಣದಲ್ಲಿ ಸಂಜಯ್ ರಾಯ್ ಮಾತ್ರವಲ್ಲ, ಇನ್ನೂ ಕೆಲವರು ಶಾಮೀಲಾಗಿದ್ದಾರೆ ಎಂದಿದ್ದಾರೆ. ಇತ್ತ ತಪ್ಪಿತಸ್ಥ ಸಂಜಯ್ ರಾಯ್ ತನ್ನ ವಾದ ಮಂಡನೆ ವೇಳೆ, ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದಿದ್ದಾರೆ. ಈ ಎರಡು ಹೇಳಿಕೆಗಳನ್ನು ತಾಳೆ ಹಾಕಿದರೆ ಈ ಪ್ರಕರಣದ ಹಿಂದೆ ಪ್ರಬಲರ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ತೀರ್ಪು ಪ್ರಕಟಗೊಂಡಿದೆ.

ಕೋಲ್ಕತ್ತಾ ವೈದ್ಯೆಯ ರೇಪ್‌ & ಮರ್ಡರ್‌: ದೋಷಿ ಸಂಜಯ್‌ ರಾಯ್‌ಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್‌