NEET-PG Counselling Crisis: ಪ್ರತಿಭಟನೆಯ ರೂಪುರೇಷೆ ಬಗ್ಗೆ ಚರ್ಚಿಸಲು ಕಿರಿಯ ವೈದ್ಯರ ಸಭೆ
- NEET PG ಕೌನ್ಸ್ಲಿಂಗ್ ತಡೆ ಹಿಡಿರುವುದಕ್ಕೆ ವೈದ್ಯರ ಆಕ್ರೋಶ
- ವೈದ್ಯಕೀಯ ಸೇವೆ ಸಂಪೂರ್ಣ ಸ್ಥಗಿತದ ಎಚ್ಚರಿಕೆ ನೀಡಿದ ವೈದ್ಯರು
- ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ವೈದ್ಯರ ಸಭೆ
ನವದೆಹಲಿ(ಡಿ.28): ಹೆಚ್ಚುತ್ತಿರುವ ಕೋವಿಡ್ ಪ್ರಕರಣ ಹಾಗೂ ಒಮಿಕ್ರಾನ್ ರೂಪಾಂತರಿಯಿಂದಾಗಿ ವೈದ್ಯಕೀಯ ಸೇವಾ ವಲಯದಲ್ಲಿ ಒತ್ತಡ ಹೆಚ್ಚಾಗಿದೆ.
ಈ ಮಧ್ಯೆ ಸುಪ್ರೀಂಕೋರ್ಟ್ನ ಕಾನೂನು ಅಡೆತಡೆಗಳಿಂದಾಗಿ ಎನ್ಇಇಟಿ ಪಿಜಿ (NEET PG) ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ಕಾಲೇಜು ಹಂಚಿಕೆಗಾಗಿ ನಡೆಸುವ ಕೌನ್ಸೆಲಿಂಗ್ನ್ನು ತಡೆ ಹಿಡಿಯಲಾಗಿದೆ. ಇದರ ಪರಿಣಾಮ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉಂಟಾಗಿದ್ದು, ಈ ಸವಾಲುಗಳನ್ನು ಎದುರಿಸುವ ಸಲುವಾಗಿ ಹೊಸ ವೈದ್ಯರನ್ನು ಸೇವೆಗೆ ತೆಗೆದುಕೊಳ್ಳದೇ ಹೋದಲ್ಲಿ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಕಿರಿಯ ವೈದ್ಯರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗ ವೈದ್ಯರು ದೆಹಲಿಯಲ್ಲಿ ಸಭೆ ನಡೆಸುತ್ತಿದ್ದಾರೆ, ಎನ್ಇಇಟಿ ಪಿಜಿ ಕೌನ್ಸೆಲಿಂಗ್ ತಡೆ ಹಿಡಿದಿರುವುದರಿಂದ ದೇಶದಲ್ಲಿ 45000 ವೈದ್ಯರ ಕೊರತೆ ಉಂಟಾಗಿದೆ. ಈ ವಿಚಾರವಾಗಿ ಜನವರಿ 6ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಬೇಕೇ ಅಥವಾ ಹಿಂಪಡೆಯಬೇಕೇ ಎಂಬ ಬಗ್ಗೆ ಈ ಸಭೆಯಲ್ಲಿ ಕಿರಿಯ ವೈದ್ಯರು ನಿರ್ಧರಿಸಲಿದ್ದಾರೆ.
ಈ ವೈದ್ಯರ ಹೋರಾಟದ ಮುಖ್ಯ ಅಂಶಗಳು
ಆಸ್ಪತ್ರೆಗಳು ಮತ್ತು ವೈದ್ಯಕೀಯ ವೃತ್ತಿಪರರ ಮೇಲೆ ಭಾರಿ ಒತ್ತಡವನ್ನು ಸೃಷ್ಟಿಸಿರುವ ಕೋವಿಡ್ ಪರಿಸ್ಥಿತಿ ಮತ್ತು ಒಮಿಕ್ರಾನ್ನ ಸವಾಲುಗಳನ್ನು ನಿಭಾಯಿಸುವ ವಿಚಾರ ಸೂಚಿಸುತ್ತಾ, ಕಿರಿಯ ವೈದ್ಯರು ಹೊಸ ವೈದ್ಯರ ನೇಮಕವಾಗದಿದ್ದರೆ ವೈದ್ಯಕೀಯ ಸೇವೆಗಳ ಸಂಪೂರ್ಣ ಸ್ಥಗಿತದ ಬೆದರಿಕೆ ಹಾಕಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ನಂತರ ಕೌನ್ಸೆಲಿಂಗ್ ಮತ್ತು ಕಾಲೇಜು ಹಂಚಿಕೆಯಲ್ಲಿ ವಿಳಂಬವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಪ್ರತಿಭಟನಾನಿರತ ವೈದ್ಯರು ಪ್ರತಿಪಾದಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಪೊಲೀಸರ ದಬ್ಬಾಳಿಕೆಯನ್ನು ಎದುರಿಸುತ್ತಿರುವುದರ ಜೊತೆ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಅಲ್ಲದೇ ಪ್ರಕರಣ ಬಾಕಿ ಉಳಿದಿರುವ ಸುಪ್ರೀಂಕೋರ್ಟ್ನತ್ತ ಇಂದು ವೈದ್ಯರು ಮೆರವಣಿಗೆ ನಡೆಸಲು ನಿರ್ಧರಿಸಿದ್ದರು. ಆದರೆ ಇದನ್ನು ಕೂಡ ತಡೆಯಲಾಯಿತು.
ಇಂದು ಸಂಜೆ(ಡಿ.28) ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (Federation of Resident Doctors Association) ಅಥವಾ ಫೋರ್ಡಾ(FORDA) ಜೊತೆಗೆ ನಡೆದ ಸಂಧಾನ ಸಭೆಯಲ್ಲಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandavia) ಅವರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ವೈದ್ಯರ ಬಳಿ ಕೇಳಿಕೊಂಡರು.
NEET-PG Counselling Crisis: ಪ್ರಧಾನಿ ಮಧ್ಯಪ್ರವೇಶಿಸಲು ಭಾರತೀಯ ವೈದ್ಯಕೀಯ ಸಂಘ ಪತ್ರ
ಈ ಸಂದರ್ಭದಲ್ಲಿ EWS ಕೋಟಾವನ್ನು ಪರಿಶೀಲಿಸಲು ರಚಿಸಲಾದ ಮೂರು ಸದಸ್ಯರ ಸಮಿತಿಯ ವರದಿಯನ್ನು ಜನವರಿ 6 ರ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ಸಚಿವಾಲಯ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ದೆಹಲಿ ಪೊಲೀಸರು ಮತ್ತು ನಿವಾಸಿ ವೈದ್ಯರ ನಡುವೆ ನಿನ್ನೆ ನಡೆದ ಘರ್ಷಣೆಯ ಬಗ್ಗೆ ಆರೋಗ್ಯ ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ, ದೇಶದ ವೈದ್ಯರ ಉನ್ನತ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಘವೂ ಈ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು.
NEET-PG ಪರೀಕ್ಷೆಯು ಜನವರಿ 2021 ರಲ್ಲಿ ನಡೆಯದ ಪರಿಣಾಮ ಕೋವಿಡ್ ಎರಡನೇ ತರಂಗವು ಜನರನ್ನು ಬಾಧಿಸುತ್ತಿದ್ದ ಸಂದರ್ಭದಲ್ಲಿ ಕೇವಲ ಸೀಮಿತ ವೈದ್ಯರಿಂದ ಪರಿಸ್ಥಿಯನ್ನು ನಿಭಾಯಿಸಲಾಯಿತು. ಈ ಸಂದರ್ಭದಲ್ಲಿ 2,000ಕ್ಕೂ ಹೆಚ್ಚು ಉದಾತ ವೃತ್ತಿಪರರಾಗಿದ್ದ ವೈದ್ಯರನ್ನು ದೇಶ ಕಳೆದುಕೊಂಡಿದೆ. ಈ ಸಂದರ್ಭದಲ್ಲಿ 1,60,000 ವೈದ್ಯರು ಪರೀಕ್ಷೆ ಬರೆಯುವುದಕ್ಕಾಗಿ ಕಾಯುತ್ತಿದ್ದರು ಎಂದು ಐಎಂಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
NEET Counselling 2021: ನೀಟ್ ಕೌನ್ಸೆಲಿಂಗ್ ನಲ್ಲಿ ಮಹತ್ವದ ಬದಲಾವಣೆ ಮಾಡಿದ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ
NEET ಪ್ರವೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತರಿಗೆ 10 ಪ್ರತಿಶತ ಕೋಟಾವನ್ನು ಒದಗಿಸುವ ಸರ್ಕಾರದ ನಿರ್ಧಾರದ ವಿರುದ್ಧ ಅರ್ಜಿ ಸಲ್ಲಿಸಲಾಗಿದ್ದು, ಸುಪ್ರೀಂಕೋರ್ಟ್ ಇದರ ವಿಚಾರಣೆ ನಡೆಸುತ್ತಿದೆ. 2019 ರ ಕಾನೂನಿನ ಅಡಿಯಲ್ಲಿ, ವಾರ್ಷಿಕವಾಗಿ 8 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಸಾಮಾನ್ಯ ವರ್ಗದ ವಿದ್ಯಾರ್ಥಿಯು ಈ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಈ ಕೋಟಾದ ಮಾನದಂಡಗಳನ್ನು ಪರಿಶೀಲಿಸುವುದಾಗಿ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದ್ದು, ಜನವರಿ 6 ರಂದು ಮುಂದಿನ ವಿಚಾರಣೆ ನಡೆಯಲಿದೆ.