Asianet Suvarna News Asianet Suvarna News

ಘನ ಡೀಸೆಲ್ ವಾಹನ ದೆಹಲಿ ಪ್ರವೇಶ ನಿಷೇಧ, ಟ್ರೆಡರ್ಸ್‌ನಿಂದ ತುರ್ತು ಸಭೆ!

  • ಜುಲೈ 1 ರಿಂದ ಘನ ಡೀಸೆಲ್ ವಾಹನ ದೆಹಲಿ ಪ್ರವೇಶಿಸುವಂತಿಲ್ಲ
  • ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರದಿಂದ ಮಹತ್ವದ ನಿರ್ಧಾರ
  • ನಿರ್ಧಾರದ ವಿರುದ್ಧ ಟ್ರೇಡರ್ಸ್ ಆಕ್ರೋಶ, ಮಹತ್ವದ ಸಭೆ
Delhi traders oppose government decision to ban entry of diesel vehicles from July 1 ckm
Author
Bengaluru, First Published Jun 29, 2022, 5:02 PM IST

ನವದೆಹಲಿ(ಜೂ.29): ದೆಹಲಿ ಮಾಲಿನ್ಯ ತಗ್ಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಜುಲೈ 1 ರಿಂದ ಘನ ಡೀಸೆಲ್ ವಾಹನಗಳು ದೆಹಲಿ ಪ್ರವೇಶಕ್ಕೆ ನಿರ್ಬಂಧ ಹೇರುವ ನಿರ್ಧಾರ ಕೈಗೊಂಡಿದೆ. ಇದು ಟ್ರೇಡರ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ತುರ್ತು ಸಭೆ ನಡೆಸಿದೆ. ಆಲ್ ಇಂಡಿಯಾ ಟ್ರೇಡರ್ಸ್(CAIT) ಹಾಗೂ ದೆಹಲಿ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ವ್ಯಾಪಾರ ವಹಿವಾಟಿನ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಜುಲೈ 1 , 2022ರಿಂದ  ಫೆಬ್ರವರಿ 28 , 2023ರ ವರೆಗೆ ದೆಹಲಿಯೊಳಗೆ ಘನ ಡೀಸೆಲ್ ವಾಹನಗಳು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿರ್ಧಾರದಿಂದ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ. ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ದೆಹಲಿಯಿಂದಲೇ ಸಾಮಾಗ್ರಿಗಳ ವಿತರಣೆಯಾಗುತ್ತಿದೆ. ಆದರೆ ಇದೀಗ ಡೀಸೆಲ್ ವಾಹನಕ್ಕೆ ನಿರ್ಬಂಧ ಹೇರಿದರೆ ಇಡೀ ವ್ಯವಸ್ಥೆ ಬುಡಮೇಲಾಗಲಿದೆ.

ವಾಯುಮಾಲಿನ್ಯ: ಭಾರತೀಯರ ಜೀವಿತಾವಧಿ 5 ವರ್ಷ ಇಳಿಕೆ

ದಿಢೀರ್ ಎಂದು ಯಾವುದೇ ಪರ್ಯಾಯ ಮಾರ್ಗ ಆರಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಸಮಯದ ಅವಶ್ಯಕತೆ ಇದೆ. ಆದರೆ ಭಾರತದಲ್ಲಿ ಡೀಸೆಲ್ ವಾಹನ ಹೊರತು ಪಡಿಸಿ ಸಾಮಾಗ್ರಿ, ಉತ್ಪನ್ನಗಳನ್ನು ಸಾಗಿಸಲು ಇತರ ಯಾವುದೇ ಎಲೆಕ್ಟ್ರಿಕ್ ವಾಹನಗಳಿಲ್ಲ.ಹೀಗಾಗಿ ಏಕಾಏಕಿನ ಡೀಸೆಲ್ ವಾಹನಕ್ಕೆ ನಿಷೇಧ ಹೇರಿರುವ ನಿರ್ಧಾರ ಸಮಂಜಸವಲ್ಲ ಎಂದು ಟ್ರೇಡರ್ಸ್ ಹೇಳಿದ್ದಾರೆ.

ಡೀಸೆಲ್ ವಾಹನಗಳ ನಿರ್ಬಂಧದಿಂದ ಉತ್ಪನ್ನಗಳು ಸಾಗಾಟ ಕೊರತೆಯಾಗಲಿದೆ. ಇದರಿಂದ ಬೆಲೆ ದುಪ್ಪಟ್ಟಾಗಲಿದೆ. ಇದರಿಂದ ಸಾಮಾನ್ಯ ಜನತೆ ತೀವ್ರ ಸಮಸ್ಯೆಗೆ ಒಳಗಾಗಲಿದ್ದಾರೆ. ಸಣ್ಣ ವ್ಯಾಪಾರಿಗಳು ಸೇರಿದಂತೆ ಈ ಉದ್ಯಮದಲ್ಲಿ ಬರವು ಎಲ್ಲರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಟ್ರೇಡರ್ಸ್ ನಾಯಕರು ಹೇಳಿದ್ದಾರೆ.

ದೆಹಲಿ ಮಾಲಿನ್ಯ ತಡೆಯಲು ಇದೊಂದೆ ಮಾರ್ಗವಲ್ಲ, ಇದರಿಂದ ಮಾಲಿನ್ಯ ಪ್ರಮಾಣ ತಗ್ಗುವ ಸಾಧ್ಯತೆಗಳೂ ಇಲ್ಲ. ಆದರೆ ವ್ಯಾಪಾರ ವಹಿವಾಟು, ಉತ್ಪನ್ನಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ. ಹೀಗಾಗಿ ಘನ ಡೀಸೆಲ್ ವಾಹನ ದೆಹಲಿ ಪ್ರವೇಶ ನಿರ್ಬಂಧ ನಿರ್ಧಾರ ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Air Pollution: ಬೆಂಗ್ಳೂರಲ್ಲಿ ವಾಹನಗಳಿಂದಲೇ ಹೆಚ್ಚು ವಾಯು ಮಾಲಿನ್ಯ..!

ದೆಹಲಿ-ಎನ್‌ಸಿಆರ್‌ ಪ್ರದೇಶದ ವಾಯುಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಹಾಗೂ ತಜ್ಞರ ಸಲಹೆಯನ್ನು ಆಹ್ವಾನಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಇದರಂತೆ ದೆಹಲಿ ಸರ್ಕಾರ ತಜ್ಞರ ಸಲಹೆ ಪಡೆದಿತ್ತು. ತಜ್ಞರು ನೀಡಿದ ಹಲವು ಸಲಹೆಗಳ ಪೈಕಿ ಡೀಸೆಲ್ ಘನ ವಾಹನಗಳ ಪ್ರವೇಶ ನಿರ್ಬಂಧವೂ ಸೇರಿದೆ.

ಇದರ ಜೊತೆಗೆ ದೆಹಲಿಯಲ್ಲಿ ಬದಲಾವಣೆಗಳನ್ನು ಮಾಡಿದೆ. ಡೈರಿ ಉತ್ಪನ್ನಗಳು, ಔಷಧಿ, ವೈದ್ಯಕೀಯ ಉಪಕರಣಗಳ ತಯಾರಿಕಾ ಘಟಕಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಕಾರ್ಖಾನೆಗಳಿಗೆ 8 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ದಿನವಿಡೀ ಕಾರ್ಯನಿರ್ವಹಿಸುವ ಕಾರ್ಖಾನೆಗಳಿಗೆ ವಾರದಲ್ಲಿ ಕೇವಲ 5 ದಿನಗಳು ತೆರೆಯಲು ಸೂಚಿಸಲಾಗಿದೆ. ಥರ್ಮಲ್‌ ಶಕ್ತಿ ಉತ್ಪಾದನಾ ಕಾರ್ಖಾನೆಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ. ನಿರ್ಮಾಣ ಚಟುವಟಿಕೆಗಳ ಆರಂಭದ ಕುರಿತು ಶುಕ್ರವಾರ ನಿರ್ಣಯ ತೆಗೆದುಕೊಳ್ಳಲಾಗುವುದು. ಇವೆಲ್ಲ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ತಾತ್ಕಾಲಿಕ ಕ್ರಮಗಳಾಗಿದ್ದು, ಶೀಘ್ರದಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಸುಪ್ರೀಂಕೋರ್ಟ್‌ ಆಯೋಗಕ್ಕೆ ನಿರ್ದೇಶಿಸಿದೆ.

Follow Us:
Download App:
  • android
  • ios