ರಾಷ್ಟ್ರ ರಾಜಧಾನಿ ದೆಹಲಿ ಜಿ20 ಸಭಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಭದ್ರತಾ ಆತಂಕಗಳು ಎದುರಾಗಿದೆ. ಹೊಟೆಲ್‌ಗಳಲ್ಲಿ ಅಂತಾರಾಷ್ಟ್ರೀಯ ತಂಗಲಿರುವ ಗಣ್ಯರನ್ನು ಉಗ್ರರು ಒತ್ತೆಯಾಳಾಗಿಟ್ಟುಕೊಳ್ಳುವ ಪರಿಸ್ಥಿತಿ, ದಾಳಿಗಳನ್ನು ತಪ್ಪಿಸಲು  HIT ಭದ್ರತಾ ತಂಡ ಅಖಾಡಕ್ಕಿಳಿದಿದೆ. ಮತ್ತೊಂದು ಎಚ್ಚರಿಕೆ ಎಂದರೆ ಈ ತಂಡಕ್ಕೆ ಶೂಟ್ ಅಟ್ ಸೈಟ್ ಆರ್ಡರ್ ನೀಡಲಾಗಿದೆ.

ನವದೆಹಲಿ(ಆ.29) ಜಿ20 ಅಧ್ಯಕ್ಷತೆ ವಹಿಸಿರುವ ಭಾರತ ಈಗಾಗಲೇ ದೇಶದ ಹಲವು ಭಾಗದಲ್ಲಿ ಜಿ20 ಶೃಂಗಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದೀಗ ರಾಜಧಾನಿ ದೆಹಲಿಯಲ್ಲಿ ಸೆ.9,10 ರಂದು ಜಿ20 ಸಭೆ ಆಯೋಜಿಸಿದೆ. ಅಂತಾರಾಷ್ಟ್ರೀಯ ಗಣ್ಯರು ದೆಹಲಿಯತ್ತ ಮುಖಮಮಾಡಿದ್ದಾರೆ. ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ಹಲವು ದೇಶಗಳ ಗಣ್ಯರು ದೆಹಲಿಗೆ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಭದ್ರತಾ ಆತಂಕ ಎದುರಾಗಿದೆ. ಗಣ್ಯರು ಉಳಿದುಕೊಳ್ಳುವ ಹೊಟೆಲ್ ಮೇಲೆ ಉಗ್ರರು ದಾಳಿ ನಡೆಸುವ, ಅತಿಥಿಗಳನ್ನು ಒತ್ತೆಯಾಳಾಗಿಟ್ಟುಕೊಳ್ಳುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಎಚ್ಚರಿಸಿದೆ. ಇದರ ಬೆನ್ನಲ್ಲೇ ಹೌಸ್ ಇಂಟರ್‌ವೆನ್ಶನ್ ಟೀಮ್(HIT) ಅಖಾಡಕ್ಕಿಳಿದಿದೆ. ಈ ತಂಡ ಗಣ್ಯರು ತಂಗಲಿರುವ ಹೊಟೆಲ್‌ನಲ್ಲೇ ಗಸ್ತು ತಿರುಗಲಿದೆ. ಇಷ್ಟೇ ಅಲ್ಲ ಈ ತಂಡಕ್ಕೆ ಈಗಾಗಲೇ ಶೂಟ್ ಅಟ್ ಸೈಟ್ ಆರ್ಡರ್ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಜಿ20 ಶೃಂಗಸಭೆಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. HIT ಭದ್ರತಾ ಪಡೆಗಳಿಗೆ ಅನುಮಾನ ಬಂದರೆ, ಭದ್ರತಾ ನಿಯಮ ಉಲ್ಲಂಘನೆ ಮಾಡುವ ಯಾವುದೇ ವ್ಯಕ್ತಿಗಳ ಮೇಲೆ ಸ್ಥಳದಲ್ಲೇ ಗುಂಡು ಹಾರಿಸಲು ಅಧಿಕಾರ ನೀಡಲಾಗಿದೆ. ದೆಹಲಿಗೆ ಆಗಮಿಸುವ ಅಂತಾರಾಷ್ಟ್ರೀಯ ಹಾಗೂ ದೇಶದ ಅತಿಥಿಗಳಿಗೆ ಸಂಪೂರ್ಣ ಭದ್ರತೆ ಒದಗಿಸಲು NSG ತಂಡ ಸಜ್ಜಾಗಿದೆ. ಇದರ ಜೊತೆಗೆ ಸ್ಪೆಷಲ್ ವೆಪನ್ಸ್ ಆ್ಯಂಡ್ ಟಾಕ್‌ಟಿಕ್ಸ್ ಟೀಮ್(SWAT) ಗಣ್ಯರು ತಂಗಲಿರುವ ಹೊಟೆಲ್ ಹೊರಗಡೆ ಭದ್ರತೆ ನೀಡಲಿದೆ.

ಅಂತಾರಾಷ್ಟ್ರೀಯ ಕೋರ್ಟ್‌ ವಾರಂಟ್‌, ಬಂಧನ ಭೀತಿ : ಜಿ20 ಶೃಂಗಕ್ಕೆ ಬರಲ್ಲ ಪುಟಿನ್

ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಭದ್ರತಾ ಪಡೆಗಳು ಸಂಪೂರ್ಣ ದೆಹಲಿಯ ಭದ್ರತೆಯನ್ನು ನೋಡಿಕೊಳ್ಳಲಿದೆ. ಶೂಟ್ ಅಟ್ ಸೈಟ್(ಸ್ಥಳದಲ್ಲೇ ಗುಂಡಿನ ದಾಳಿ ಮೂಲಕ ಹತ್ಯೆಗೆ ಆದೇಶ) ಆರ್ಡರ್ ಪಡೆದಿರುವ ಕಾರಣ, ಸಣ್ಣ ಅಹಿತಕರ ಘಟನೆ ನಡೆದರು ಗುಂಡಿನ ಮಳೆ ಸುರಿಯಲಿದೆ. ಹೀಗಾಗಿ ಭದ್ರತಾ ಪಡೆಗಳನ್ನು ಸುಖಾಸುಮ್ಮನೆ ಕೆಣಕಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

26/11 ಮುಂಬೈ ದಾಳಿ ಬಳಿ HIT ಭದ್ರತಾ ಪಡೆ ರಚಿಸಲಾಗಿದೆ. ಹೊಟೆಲ್‌ನಲ್ಲಿ ತಂಗುವ ಗಣ್ಯರನ್ನು ಉಗ್ರರು ಒತ್ತೆಯಾಳಾಗಿಟ್ಟುಕೊಳ್ಳುವುದನ್ನು ತಪ್ಪಿಸಲು ಈ ತಂಡ ರಚಿಸಲಾಗಿದೆ. HIT ತಂಡದ ಬಳಿಕ TAR 21 ಅಸಾಲ್ಟ್ ರೈಫಲ್, ಅಮೆರಿಕನ್ ಗ್ಲಾಕ್ 17 ಪಿಸ್ತೂಲ್ ಸೇರಿದಂತೆ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೂಲಕ HIT ತಂಡ ಭದ್ರತೆ ನೀಡಲಿದೆ.

ಇತ್ತೀಚೆಗೆ ಖಲಿಸ್ತಾನ್‌ ಹೋರಾಟಗಾರರು ದೆಹಲಿಯ ಮೆಟ್ರೋ ನಿಲ್ದಾಣಗಳ ಗೋಡೆ ಮೇಲೆ ಖಲಿಸ್ತಾನ್‌ ಪರ ಘೋಷಣೆಗಳನ್ನು ಬರೆದು ಉದ್ಧಟತನ ಮೆರೆದಿದ್ದರು. ಶಂಕಿತ ಸಿಖ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಪ್ರತ್ಯೇಕತಾವಾದಿ ಖಲಿಸ್ತಾನ್‌ ಹೋರಾಟಗಾರರು ಐದಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳ ಮೇಲೆ ‘ದಿಲ್ಲಿ ಬನೇಗಾ ಖಲಿಸ್ತಾನ್‌’ ‘ಖಲಿಸ್ತಾನ್‌ ಜಿಂದಾಬಾದ್‌’ ಮುಂತಾದ ಘೋಷಣೆಗಳನ್ನು ಬರೆದಿದ್ದಾರೆ. ಜಿ20 ಶೃಂಗಸಭೆ ತಯಾರಿಯಲ್ಲಿರುವಾಗಲೇ ದೆಹಲಿಯಲ್ಲಿ ಅಹಿತಕರ ಘಟನೆಗಳಿಗೆ ಉಗ್ರರು ಸಜ್ಜಾಗುತ್ತಿದ್ದಾರೆ. ಹೀಗಾಗಿ ವಿಶೇಷ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಜಿ20 ಶೃಂಗಸಭೆಗೂ ಮುನ್ನ ಪ್ರಧಾನಿ ಮೋದಿ-ವ್ಲಾಡಿಮಿರ್‌ ಪುಟಿನ್‌ ಮಾತುಕತೆ!

ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯು ದೆಹಲಿ ಮೆಟ್ರೋ ನಿಲ್ದಾಣಗಳ ಮೇಲೆ ಖಲಿಸ್ತಾನ್‌ ಪರ ಬರಹಗಳನ್ನು ಬರೆದ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದೆ. ಅದರಲ್ಲಿ ಸಂಘಟನೆಯ ವಕ್ತಾರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌, ‘ಜಿ20 ದೇಶಗಳೇ, ಸೆ.10ರಂದು ನೀವು ದೆಹಲಿಯಲ್ಲಿ ಸಭೆ ನಡೆಸುವ ವೇಳೆ ನಾವು ಕೆನಡಾದಲ್ಲಿ ಖಲಿಸ್ತಾನ್‌ ಪರ ಜನಮತಗಣನೆ ನಡೆಸಲಿದ್ದೇವೆ’ ಎಂದು ಘೋಷಿಸಿದ್ದಾನೆ