Asianet Suvarna News Asianet Suvarna News

ಕೇಜ್ರಿವಾಲ್ ಇಡಿ ಕಸ್ಟಡಿ ಅಂತ್ಯ: ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ದೆಹಲಿ ಸಿಎಂ

 ಅಬಕಾರಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಡಿ ಕಸ್ಟಡಿ ಅಂತ್ಯಗೊಂಡಿದ್ದು, ನ್ಯಾಯಾಲಯವೂ ಅವರಿಗೆ ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. 

Delhi Excise scam Arvind Kejriwal ED custody ends Delhi CM to judicial custody till April 15 akb
Author
First Published Apr 1, 2024, 12:36 PM IST

ನವದೆಹಲಿ:  ಅಬಕಾರಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಡಿ ಕಸ್ಟಡಿ ಅಂತ್ಯಗೊಂಡಿದ್ದು, ನ್ಯಾಯಾಲಯವೂ ಅವರಿಗೆ ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. 

ದೆಹಲಿ ಅಬಕಾರಿ ಲೈಸೆನ್ಸ್‌ ಹಂಚಿಕೆಯಲ್ಲಿ ಗರಿಷ್ಠ ಲಾಭ ಪಡೆಯುವ ಸಲುವಾಗಿ ತೆಲಂಗಾಣದ ಬಿಆರ್‌ಎಸ್‌ ನಾಯಕಿ ಕವಿತಾ ರೆಡ್ಡಿ ನೇತೃತ್ವದಲ್ಲಿ ದಕ್ಷಿಣ ಭಾರತದ ವಿವಿಧ ಉದ್ಯಮಿಗಳು ರಚಿಸಿಕೊಂಡಿದ್ದ ‘ಸೌತ್‌ ಗ್ರೂಪ್‌’ನಿಂದ ಹಲವಾರು ಕೋಟಿ ರು.ಗಳನ್ನು ಕೇಜ್ರಿವಾಲ್‌ ಅವರು ಲಂಚವಾಗಿ ಪಡೆದಿದ್ದರು ಎಂದು ಇಡಿ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿವೆ. 

ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಸೌತ್‌ ಗ್ರೂಪ್‌ನ ಕೆಲವು ಸದಸ್ಯರಿಂದ 100 ಕೋಟಿ ರು. ಹಣವನ್ನು ಕೇಜ್ರಿವಾಲ್‌ ಕೇಳಿದ್ದರು. ಕೇಜ್ರಿವಾಲ್‌ ಪಡೆದ ಲಂಚದ ಹಣದ ಪೈಕಿ 45 ಕೋಟಿ ರು. ಗೋವಾ ಚುನಾವಣೆಯಲ್ಲಿ ಬಳಕೆಯಾಗಿದೆ. ಅದನ್ನು ಹವಾಲಾ ಮೂಲಕ ಸಾಗಿಸಲಾಗಿದೆ ಎಂದು ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರು ದೂರಿದ್ದರು. ಆಪ್‌ ಎಂಬುದು ವ್ಯಕ್ತಿಯಲ್ಲ. ಅದು ಒಂದು ಕಂಪನಿ. ಒಂದು ಕಂಪನಿಯ ನಡವಳಿಕೆಗೆ ಅದರಲ್ಲಿರುವ ಎಲ್ಲ ವ್ಯಕ್ತಿಗಳೂ ಹೊಣೆಗಾರರಾಗಿರುತ್ತಾರೆ ಎಂದು ಅವರು ನ್ಯಾಯಾಲಯಕ್ಕೆ ಹೇಳಿದರು.

ಕೇಜ್ರಿವಾಲ್‌ ಸಿಂಹ ಇದ್ದಂತೆ, ಜಾಸ್ತಿ ದಿನ ಅವರನ್ನ ಜೈಲಿನಲ್ಲಿ ಇರಿಸಲಾಗದು: ಸುನಿತಾ ಕೇಜ್ರಿವಾಲ್‌!

ಜೈಲಿಂದಲೇ ಕೇಜ್ರಿವಾಲ್‌ 6 ಚುನಾವಣಾ ಗ್ಯಾರಂಟಿ ಘೋಷಣೆ
ದೆಹಲಿ ಲಿಕ್ಕರ್‌ ಹಗರಣದಲ್ಲಿ ಜೈಲುಪಾಲಾದ ಬಳಿಕವೂ ಅಲ್ಲಿಂದಲೇ ಸರ್ಕಾರಿ ಆದೇಶ ಹೊರಡಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಇದೀಗ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ 6 ಗ್ಯಾರಂಟಿಗಳನ್ನೂ ಜೈಲಿಂದಲೇ ಘೋಷಿಸಿದ್ದಾರೆ. ಕೇಜ್ರಿವಾಲ್‌ ಅವರು ಈ ಸಂಬಂಧ ನೀಡಿರುವ ಭರವಸೆಗಳನ್ನು ಅವರ ಪತ್ನಿ ಸುನಿತಾ, ಭಾನುವಾರ ಇಲ್ಲಿ ಆಯೋಜನೆಗೊಂಡಿದ್ದ ಇಂಡಿಯಾ ಕೂಟದ ಸಮಾವೇಶದಲ್ಲಿ ಘೋಷಿಸಿದರು. ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ. ದೇಶದ ಎಲ್ಲರಿಗೂ ಉಚಿತ ಆರೋಗ್ಯ ಸೇವೆ- ಇವು ಕೇಜ್ರಿವಾಲ್‌ ಅವರ ಕೆಲವು ಪ್ರಮುಖ ಉದ್ದೇಶಗಳಾಗಿವೆ ಎಂದು ಸುನಿತಾ ಹೇಳಿದರು ಹಾಗೂ ಕೇಜ್ರಿವಾಲ್‌ ಜೈಲಿಂದಲೇ ನೀಡಿದ ಸಂದೇಶ ಓದಿದರು.

ಲಿಕ್ಕರ್‌ ಕೇಸಲ್ಲಿ ಇ.ಡಿ.ಮುಂದಿನ ಗುರಿ ಆತಿಷಿ?

ನವದೆಹಲಿ: ದೆಹಲಿ ಮದ್ಯ ಲೈಸೆನ್ಸ್‌ ಹಗರಣದಲ್ಲಿ ಮುಂದಿನ ಬಂಧನ, ದೆಹಲಿ ಸರ್ಕಾರದ ಸಚಿವೆ ಆತಿಷಿ ಆಗಿರಬಹುದು ಎನ್ನಲಾಗುತ್ತಿದೆ. ಮದ್ಯ ಲೈಸೆನ್ಸ್‌ ಹಗರಣದ ಮೂಲಕ ಸಂಗ್ರಹಿಸಿದ ಹಣವನ್ನು ಆಮ್‌ಆದ್ಮಿ ಪಕ್ಷ, ಕಳೆದ ಗೋವಾ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಖರ್ಚು ವೆಚ್ಚಗಳಿಗಾಗಿ ಬಳಸಲಾಗಿತ್ತು. ಈ ವೇಳೆ ಗೋವಾದಲ್ಲಿ ಪಕ್ಷದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದು ಸ್ವತಃ ಆತಿಷಿ. ಈಗಾಗಲೇ ಈ ಪ್ರಕರಣದಲ್ಲಿ ಕೋರ್ಟ್‌ಗೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ, ಅಕ್ರಮ ಹಣವನ್ನು ಗೋವಾ ಚುನಾವಣೆಯಲ್ಲಿ ಬಳಸಿರುವ ಮಾಹಿತಿಯನ್ನು ಇ.ಡಿ. ನೀಡಿದೆ. ಹೀಗಾಗಿ ಮುಂದಿನ ಸಮನ್ಸ್ ಅವರಿಗೆ ಆಗಿರಬಹುದು ಎಂದು ಮೂಲಗಳು ಹೇಳಿವೆ.ಈ ಪ್ರಕರಣ ಸಂಬಂಧ ಈಗಾಗಲೇ ಸಚಿವ ಮನೀಶ್‌ ಸಿಸೋಡಿಯಾ, ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಮತ್ತು ಸ್ವತಃ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ.

ದೆಹಲಿ ಸಿಎಂ ಕೇಜ್ರಿವಾಲ್‌ ಬಂಧನಕ್ಕೆ ವಿಶ್ವಸಂಸ್ಥೆ ಆಕ್ಷೇಪ!

Follow Us:
Download App:
  • android
  • ios